ಕನ್ನಡ ಸುದ್ದಿ  /  Karnataka  /  C T Ravi On Bjp State Executive Committee Meeting

Bengaluru: ನಾಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ -ಸಿ ಟಿ ರವಿ

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪ್ರಭಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಸಿಎಂ ಬಿಎಸ್‌ವೈ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಿ ಟಿ ರವಿ ಸುದ್ದಿಗೋಷ್ಠಿ
ಸಿ ಟಿ ರವಿ ಸುದ್ದಿಗೋಷ್ಠಿ

ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ನಾಳೆ ಬೆಳಗ್ಗೆ 10.30 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ. ರವಿ ಅವರು ತಿಳಿಸಿದರು.

ಹಲವಾರು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆಯೂ ನಡೆಯುತ್ತಿದ್ದು, ಈ ನಡುವೆ ಈ ಸಭೆ ಮಹತ್ವ ಪಡೆದುಕೊಂಡಿದೆ.

ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಿದ್ಧತೆಯನ್ನು ಬಿಜೆಪಿ ನಾಯಕರು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಸಿ ಟಿ ರವಿ ಅವರು, ಸಭೆ ಬಗ್ಗೆ ಮಾಹಿತಿ ನೀಡಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪ್ರಭಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಎಲ್ಲ ಕೋರ್ ಕಮಿಟಿ ಸದಸ್ಯರು, ಸಹ ಪ್ರಭಾರಿ ಶ್ರೀಮತಿ ಡಿ ಕೆ ಅರುಣಾ, 592 ಜನ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಹಾಲಿ ಸಂಸದರು, ಹಾಲಿ ಶಾಸಕರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರು, ಜಿಲ್ಲೆ, ವಿಭಾಗಗಳ ಪ್ರಭಾರಿಗಳು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಈ ರಾಜ್ಯ ಕಾರ್ಯಕಾರಿಣಿಯ ಅಪೇಕ್ಷಿತ ಸದಸ್ಯರಾಗಿದ್ದಾರೆ ಎಂದು ವಿವರ ನೀಡಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ರಾಜಕೀಯ ವಿಶ್ಲೇಷಣೆ, ಕೇಂದ್ರ ಸರ್ಕಾರದ ಯೋಜನೆಗಳು, ನಿರ್ಣಯ ಮತ್ತು ಸಮಾರೋಪ ನಡೆಯಲಿದೆ. ಸಶಕ್ತ ಭಾರತ ಎನ್ನುವ ಉದ್ದೇಶ ಇಟ್ಟುಕೊಂಡು ಹೋಗುತ್ತಿದ್ದೇವೆ. ಭಾರತ ಸಶಕ್ತವಾಗಲು ಕರ್ನಾಟಕ ಹಲವು ಕೊಡುಗೆ ನೀಡುತ್ತಾ ಬಂದಿದೆ. ಬಿಜೆಪಿ ಕೂಡ ದೇಶ ಸಶಕ್ತವಾಗಲು ಹಲವು ರೀತಿಯಲ್ಲಿ ಮುಂದಾಗಿದೆ. ಭಾರತದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶ ಹೇಗಿರಬೇಕು ಎನ್ನುವ ರೋಡ್ ಮ್ಯಾಪ್ ಸಿದ್ಧಪಡಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಮೈಸೂರು ದಸರಾ ವೈಭವದಿಂದ ನಡೆದಿದೆ. ನವರಾತ್ರಿ, ವಿಜಯದಶಮಿ ಮತ್ತು ದಸರಾವು ಕೇವಲ ಸಾಂಸ್ಕೃತಿಕ ವೈಭವದ ಪ್ರತೀಕ ಮಾತ್ರವಲ್ಲ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಸಜ್ಜನ ಶಕ್ತಿಗಳಿಗೆ ರಕ್ಷಣೆ ದೊರಕಲಿ ಎಂಬ ಉದ್ದೇಶದಿಂದ ದೇವಿಯ ಆರಾಧನೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

IPL_Entry_Point