ಕೇಂದ್ರದ ಜನಗಣತಿಗೆ ಕರ್ನಾಟಕದ ಒಳ ಮೀಸಲಾತಿ ಗಣತಿಯ ಮೊಬೈಲ್ ಆ್ಯಪ್ ಆಧಾರ; ರಾಜ್ಯದ ಮಾದರಿಯಲ್ಲೇ ಜನಗಣತಿ ನಡೆಸಲು ಭಾರತ ಸರ್ಕಾರ ತೀರ್ಮಾನ
ಕೇಂದ್ರ ಸರ್ಕಾರವೂ ಈಗ ಜನಗಣತಿಗೆ ಮುಂದಾಗಿದೆ.ಇದಕ್ಕಾಗಿ ಕರ್ನಾಟಕ ರೂಪಿಸಿರುವ ಒಳ ಮೀಸಲಾತಿ ಗಣತಿಯ ಮೊಬೈಲ್ ಆ್ಯಪ್ ನ ವಿವರವನ್ನು ಕೇಳಿದೆ. ಆ ಮೂಲಕ ಕರ್ನಾಟಕದ ಮಾದರಿ ದೇಶಕ್ಕೆ ವಿಸ್ತರಣೆಯೂ ಆಗುವ ಸಾಧ್ಯತೆಯಿದೆವರದಿ: ಎಚ್.ಮಾರುತಿ.ಬೆಂಗಳೂರು

ಬೆಂಗಳೂರು: ಇಡೀ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ (SC) ಒಳ ಮೀಸಲಾತಿ ಜಾರಿಗೊಳಿಸುವ ಉದ್ದೇಶದಿಂದ ಮೊಬೈಲ್ ಆ್ಯಪ್ ಬಳಸಿ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ಆರಂಭಿಸಿದೆ. ಈ ಸಮೀಕ್ಷೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ದಶಕದ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ತೀರ್ಮಾನಿಸಿರುವುದಾಗಿ ಪ್ರಕಟಿಸಿದ್ದರು. ರಾಜ್ಯ ಸರ್ಕಾರ ಮೊಬೈಲ್ ಆ್ಯಪ್ ಬಳಸಿ ಪರಿಶಿಷ್ಟ ಜಾತಿಯ ಕುಟುಂಬಗಳ ದತ್ತಾಂಶ ಸಂಗ್ರಹಿಸುತ್ತಿದೆ.ಮೊಬೈಲ್ ಆ್ಯಪ್ ಸಮೀಕ್ಷೆ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರಕ್ಕೆ ಮೇ 8ರಂದು ಪತ್ರ ಬರೆದಿದ್ದರು. ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಈಗಾಗಲೇ ಸಮಗ್ರ ಮಾಹಿತಿ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕೇಂದ್ರ ಬಯಸಿರುವ ಮಾಹಿತಿಯೇನು?
ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಯನ್ನು ಯಾವ ರೀತಿ ನಡೆಸಲಾಗುತ್ತಿದೆ, ಸಮೀಕ್ಷೆಯ ಈವರೆಗಿನ ಪ್ರಗತಿ, ಮೊಬೈಲ್ ತಂತ್ರಾಂಶದ ಅಭಿವೃದ್ಧಿ ಸೇರಿದಂತೆ ವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರ ಬಯಸಿದೆ.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದ ಶಿಫಾರಸು, ಅದರ ಆಧಾರದಲ್ಲಿ ಸಮೀಕ್ಷೆ ನಡೆಸಲು ಮೊಬೈಲ್ ತಂತ್ರಾಂಶದ ವಿನ್ಯಾಸ ಹಾಗೂ ಈವರೆಗೆ ಕೈಗೊಂಡ ಕ್ರಮಗಳನ್ನು ಕುರಿತ ಮಾಹಿತಿ, ಗಣತಿದಾರರ ಸಂಖ್ಯೆ, ಪ್ರಶ್ನಾವಳಿಗಳೇನು ಎಂಬೆಲ್ಲಾ ಮಾಹಿತಿಯನ್ನು ರಾಜ್ಯ ಸರ್ಕಾರ ಒದಗಿಸಿದೆ ಎಂದು ತಿಳಿದು ಬಂದಿದೆ.
ಖಾಸಗಿ ಸಂಸ್ಥೆಗಳು ಮೊಬೈಲ್ ಆ್ಯಪ್ ಗಳ ಮೂಲಕ ಈಗಾಗಲೇ ಹಲವು ಮಾದರಿಯ ಸಮೀಕ್ಷೆಗಳನ್ನು ಮಾಡಿವೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರ ಮೊಬೈಲ್ ಆ್ಯಪ್ ಬಳಸಿ ಕುಟುಂಬಗಳ ದತ್ತಾಂಶ ಸಂಗ್ರಹಿಸುತ್ತಿರುವುದು ಇದೇ ಮೊದಲು. ಈ ಸಿದ್ಧ ವ್ಯವಸ್ಥೆಯನ್ನೇ ಮಾದರಿಯಾಗಿ ಇಟ್ಟುಕೊಂಡು ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜನಗಣತಿ ನಡೆಸಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಸಮೀಕ್ಷೆಯ ಪ್ರಗತಿ
ಮೇ 5 ರಿಂದ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಗಣತಿದಾರರು ಈವರೆಗೆ ಪರಿಶಿಷ್ಟ ಜಾತಿಯ 10.04 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೆ, ಪರಿಶಿಷ್ಟ ಜಾತಿಯೇತರ 67.77 ಲಕ್ಷ ಮನೆಗಳಿಗೂ ಭೇಟಿ ನೀಡಿದ್ದಾರೆ. ಈ ಮನೆ ಮನೆ ಸಮೀಕ್ಷೆಯು ಇದೇ 17 ರವರೆಗೆ ನಡೆಯಲಿದೆ.
ಸಮೀಕ್ಷೆ ಹೇಗಿರಲಿದೆ
ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಮತಗಟ್ಟೆ ಮಟ್ಟದಲ್ಲಿ ಮತದಾರರ ಪಟ್ಟಿಯ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿಯವರ ಯಾವುದೇ ಮನೆ ಸಮೀಕ್ಷೆಯಿಂದ ಹೊರಗೆ ಉಳಿಯಬಾರದೆಂಬ ಕಾರಣಕ್ಕೆ ಪ್ರತಿ ಮನೆಗಳಿಗೂ ಗಣತಿದಾರರು ಭೇಟಿ ನೀಡಿ ಆ ಮನೆಯಿಂದ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯೇತರರ ಮನೆಯಾಗಿದ್ದರೆ, ಆ ಮನೆಯಲ್ಲಿರುವ ಒಟ್ಟು ಜನರ ಸಂಖ್ಯೆಯನ್ನು ಮಾತ್ರ ಮೊಬೈಲ್ ಆ್ಯಪ್ ನಲ್ಲಿ ನಮೂದಿಸುತ್ತಾರೆ. ಇದರಿಂದ ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯೂ ಲಭ್ಯವಾಗಲಿದೆ.
2015 ರಲ್ಲಿ ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿಗಣತಿ) ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ 23 ಲಕ್ಷ ಮನೆಗಳಿವೆ ಎಂದು ಗುರುತಿಸಲಾಗಿತ್ತು. ಈಗ ಪರಿಶಿಷ್ಟ ಜಾತಿಯವರ ಕುಟುಂಬಗಳ ಸಂಖ್ಯೆ 2 ಲಕ್ಷ ಹೆಚ್ಚಾಗಿರಬಹುದು ಎಂದು ಅಂದಾಜು ಮಾಡಿಲಾಗಿದೆ.
ಸಮೀಕ್ಷೆಗಾಗಿ ಎಲ್ಲ ಗಣತಿದಾರರು ಏಕಕಾಲಕ್ಕೆ ಮೊಬೈಲ್ ಆ್ಯಪ್ ನಲ್ಲಿ ಲಾಗ್ ಇನ್ ಮಾಡುವುದರಿಂದ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಆಧಾರ್ ಮತ್ತು ಪಡಿತರ ಚೀಟಿಯ ಅಧಿಕೃತತೆಯನ್ನು ವೆಬ್ ಸೈಟ್ನಿಂದ ದೃಢೀಕರಿಸಿಕೊಳ್ಳಬೇಕಿದೆ. ಈ ಸಂದರ್ಭದಲ್ಲಿಯೂ ಒಮ್ಮೊಮ್ಮೆ ತಾಂತ್ರಿಕ ದೋಷಗಳು ಕಂಡುಬಂದಿವೆ. ಸದ್ಯ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಆಯೋಗದ ಮೂಲಗಳು ಖಚಿತಪಡಿಸಿವೆ.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ದಾಖಲಿಸಲು ಪ್ರತ್ಯೇಕ ವೆಬ್ಸೈಟ್ ರೂಪಿಸಲಾಗುತ್ತಿದೆ. ಈ ವೆಬ್ ಸೈಟ್ ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿದಾಗ ಬರುವ ಒಟಿಪಿ ದಾಖಲಿಸಿ, ಪ್ರತಿಯೊಬ್ಬರೂ ಸಮೀಕ್ಷೆಯ ವೇಳೆ ನೀಡಿದ್ದ ತಮ್ಮ ಮಾಹಿತಿಯನ್ನು ವೈಯಕ್ತಿಕವಾಗಿ ಪರಿಶೀಲಿಸಬಹುದು. ಆಕ್ಷೇಪಗಳಿದ್ದರೆ ಸರಿಪಡಿಸಲು ಅರ್ಜಿ ಕೊಡಬಹುದು. ಆ ಮೂಲಕ ತಿದ್ದುಪಡಿಗೂ ಅವಕಾಶ ನೀಡಲಾಗುತ್ತದೆ.
ಎರಡನೇ ಹಂತದ ಸಮೀಕ್ಷೆಯು ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ನಡೆಯಲಿದೆ. ಅಂತಿಮವಾಗಿ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಮೇ 19ರಿಂದ 23ರವರೆಗೆ ಅವಕಾಶ ಇದ್ದೇ ಇರುತ್ತದೆ.
ವರದಿ: ಎಚ್. ಮಾರುತಿ,ಬೆಂಗಳೂರು