ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ
ಕನ್ನಡ ಸುದ್ದಿ  /  ಕರ್ನಾಟಕ  /  ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ

ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್;‌ ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆ, ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ

ಜಾತಿಗಣತಿ ಎಂಬ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಲುಕಿದ್ದು, ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆಗೆ ಒಳಗಾಗುವ ಭೀತಿ. ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕ. ಹಾಗಾದರೆ ಅವರ ನಡೆ ಏನು ಎಂಬ ಕುತೂಹಲ ಸದ್ಯ ಕಾಡಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಾತಿಗಣತಿ ಎಂಬ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆಗೆ ಒಳಗಾಗುವ ಭೀತಿ. ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕದ ಸವಾಲು ಎದುರಾಗಿದೆ. (ಕಡತ ಚಿತ್ರ)
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಾತಿಗಣತಿ ಎಂಬ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ವಿರೋಧಿಸಿದರೆ ರಾಹುಲ್‌ ಗಾಂಧಿ ಅವಕೃಪೆಗೆ ಒಳಗಾಗುವ ಭೀತಿ. ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕದ ಸವಾಲು ಎದುರಾಗಿದೆ. (ಕಡತ ಚಿತ್ರ)

ಬೆಂಗಳೂರು: ಜಾತಿ ಗಣತಿ ವರದಿಯಿಂದ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರಿಗಿಂತ ಅತಿ ಹೆಚ್ಚು ಬೆದರಿರುವುದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಂದು ರಾಜಕೀಯ ವಲಯಗಳಲ್ಲಿ ಬಲವಾಗಿ ಚರ್ಚೆಯಾಗುತ್ತಿದೆ. ಈ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದಾಗಿನಿಂದ ಅವರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ ಮತ್ತು ಪ್ರತಿಯೊಂದು ಪದವನ್ನೂ ಅಳೆದೂ ತೂಗಿ ಪ್ರತಿಕ್ರಿಯಿಸುತ್ತಿದ್ದಾರೆ. ಶಿವಕುಮಾರ್‌ ಅವರ ಒಂದು ತಪ್ಪು ಹೆಜ್ಜೆ ಒಕ್ಕಲಿಗರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಇಲ್ಲವೇ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಅವರ ರಾಜಕೀಯ ಭವಿಷ್ಯವೂ ಮುಸುಕಾಗುವುದರಲ್ಲಿ ಸಂಶಯವೇ ಇಲ್ಲ.

ಜಾತಿಗಣತಿ ಅಡಕತ್ತರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್

ಈ ಹಿಂದೆ ಶಿವಕುಮಾರ್‌ ಅವರು ಜಾತಿ ಗಣತಿ ವರದಿ ಜಾರಿಯಾದರೆ ಒಕ್ಕಲಿಗರಿಗೆ ಬಾರಿ ಅನ್ಯಾಯವಾಗಲಿದೆ ಎಂದು ಕಿಡಿ ಕಾರುತ್ತಿದ್ದರು. ಸಮೀಕ್ಷೆ ನಡೆಸಿದ ಎಚ್.‌ ಕಾಂತರಾಜು ವರದಿಯನ್ನು ಕಟುವಾಗಿ ಟೀಕಿಸಿದ್ದರು. ಆದರೆ ಈಗ ಸಂಪುಟದಲ್ಲಿ ಮಂಡನೆಯಾಗಿ ಜಾರಿ ಕುರಿತು ಚರ್ಚೆ ನಡೆಯುತ್ತಿದ್ದರೂ ಒಕ್ಕಲಿಗರ ಪರವಾಗಿ ಧ್ವನಿಯೇ ಎತ್ತುತ್ತಿಲ್ಲ. ಬದಲಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ, ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ತುಂಬಾ ಸರಳವಾಗಿ ಮಾತನಾಡುತ್ತಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಶಿವಕುಮಾರ್‌ ಅವರು ವರದಿಯನ್ನು ಬಹಿರಂಗವಾಗಿ ವಿರೋಧಿಸುವಂತಿಲ್ಲ. ಒಂದು ವೇಳೆ ಜಾತಿಗಣತಿ ವರದಿಯನ್ನು ವಿರೋಧಿಸಿದರೆ ರಾಹುಲ್‌ ಗಾಂಧಿ ಅವರ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ. ಏಕೆಂದರೆ ಈ ವರದಿಯನ್ನು ಜಾರಿಗೊಳಿಸುವಂತೆ ಆಜ್ಞೆ ನೀಡಿರುವುದೇ ಅವರು. ಮತ್ತೊಂದು ಕಡೆ ವರದಿಯನ್ನು ವಿರೋಧಿಸದಿದ್ದರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬಕ್ಕೆ ಸೆಡ್ಡು ಹೊಡೆದು ಒಕ್ಕಲಿಗರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವುದು ಕಳೆದ ವಿಧಾನಸಭೆ ಚುನಾವನಣೆಯಲ್ಲಿ ವ್ಯಕ್ತವಾಗಿದೆ. ವರದಿ ಬೆಂಬಲಿಸಿದರೆ ನಿಶ್ಚಿತವಾಗಿ ಒಕ್ಕಲಿಗ ಸಮುದಾಯ ಶಿವಕುಮಾರ್‌ ಅವರಿಂದ ದೂರ ಸರಿಯುವುದರಲ್ಲಿ ಸಂಶಯವೇ ಇಲ್ಲ.

ಸಿಎಂ ಹುದ್ದೆಗೆ ಸಂಚಕಾರ?

ಅಹಮದಾಬಾದ್‌ ನಲ್ಲಿ ಇತ್ತೀಚೆಗೆ ನಡೆದ ಎಐಸಿಸಿ ಅಧಿವೇಶನ ಸಂದರ್ಭದಲ್ಲಿ ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಹುಲ್‌ ಅವರ ಒಪ್ಪಿಗೆ ಪಡೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ಹಸಿರು ನಿಶಾನೆ ಸಿಗುತ್ತಿದ್ದಂತೆ ಇಲ್ಲಿ ಸರ್ಕಾರ ತ್ವರಿತವಾಗಿ ವರದಿಯನ್ನು ಮಂಡಿಸಿದೆ. ಇಲ್ಲಿ ಸಿದ್ದರಾಮಯ್ಯ ಅವರ ಚಾಣಾಕ್ಷತನವೂ ಅಡಗಿದೆ. ಒಂದೇ ಏಟಿಗೆ ಹಿಂದುಳಿದ ವರ್ಗಗಳ ನಾಯಕ ಎಂಬ ಪಟ್ಟವನ್ನು ಉಳಿಸಿಕೊಳ್ಳುವುದರ ಜತೆಗೆ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ದೂರ ಉಳಿಯುವಂತೆ ಮಾಡುವ ತಂತ್ರವೂ ಅಡಗಿದೆ.

ಈ ಮೂಲಕ ಸಿಎಂ ಪಟ್ಟವನ್ನು ಭದ್ರಪಡಿಸಿಕೊಳ್ಳುವುದರ ಜತೆಗೆ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರೂ ಬಹಿರಂಗವಾಗಿ ವರದಿ ವಿರುದ್ಧ ತುಟಿ ಬಿಚ್ಚದಂತೆ ತಂತ್ರ ಹೆಣೆದಿರುವುದು ಗೋಚರಿಸುತ್ತಿದೆ. ಎಲ್ಲಿ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಯೋ ಎಂದು ವರದಿ ಕುರಿತು ಲಿಂಗಾಯತ ಒಕ್ಕಲಿಗ ಸಚಿವ ಶಾಸಕರು ಅಡಕತ್ತರಿಯಲ್ಲಿ ಸಿಲುಕಿದಂತೆ ಪ್ರತಿಕ್ರಿಯೆ ನೀಡುತ್ತಿರುವುದನ್ನು ಗಮನಸಬಹುದು. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗುವ ಪ್ರಬಲ ಆಕಾಂಕ್ಷೆ ಹೊಂದಿದ್ದಾರೆ. ಈ ಹುದ್ದೆಗೆ ಏರಬೇಕಾದರೆ ರಾಹುಲ್‌ ಗಾಂಧಿ ಅವರ ಕೃಪಾಕಟಾಕ್ಷ ಬೇಕೇಬೇಕು.

ನೆರಳಿನಂತೆ ಕಾಡುತ್ತಿರುವ ಕುಮಾರಸ್ವಾಮಿ

ಶಿವಕುಮಾರ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಮಾತ್ರ ಸಂಕಷ್ಟ ಎದುರಾಗುತ್ತಿಲ್ಲ. ತಮ್ಮ ರಾಜಕೀಯ ಎದುರಾಳಿ ಜೆಡಿಎಸ್‌ ವರಿಷ್ಠ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಹೋದಲ್ಲಿ ಬಂದಲ್ಲಿ ಕುಮಾರಸ್ವಾಮಿ ಮತ್ತಿತರ ಮುಖಂಡರು ಜಾತಿ ಗಣತಿ ವರದಿ ಮತ್ತು ಒಕ್ಕಲಿಗರ ಅಭ್ಯುದಯ ಕುರಿತು ನಿಲುವು ಪ್ರಕಟಿಸುವಂತೆ ಶಿವಕುಮಾರ್‌ ಅವರಿಗೆ ಸವಾಲು ಹಾಕುತ್ತಿದ್ದಾರೆ.

ಶಿವಕುಮಾರ್‌ ಅವರು ಇಕ್ಕಟ್ಟಿನಲ್ಲಿರುವುದನ್ನು ಅವರ ಬೆಂಬಲಿಗರು ಒಪ್ಪಿಕೊಳ್ಳುತ್ತಾರೆ. ಕಾಂತರಾಜು ಆಯೋಗವನ್ನು ರಚಿಸಿದ್ದೇ ಕಾಂಗ್ರೆಸ್‌ ಸರಕಾರ. ಈಗ ವರದಿಯನ್ನು ಜಾರಿಗೊಳಿಸುತ್ತಿರುವುದೂ ಅವರದ್ದೇ ಸರ್ಕಾರವಾಗಿರುವಾಗ ವಿರೋಧಕ್ಕೆ ಆಸ್ಪದ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಶಿವಕುಮಾರ್‌ ಅವರಿಗೆ ಸಿಗಬೇಕಾದ ಸಿಂಹಪಾಲು ಸಿಗುವುದೇ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಡಿಕೆಶಿ ಅವರನ್ನು ಖೆಡ್ಡಾಗೆ ಕೆಡವಿ ಅವರ ಒಕ್ಕಲಿಗ ನಾಯಕ ಎಂಬ ಪಟ್ಟವನ್ನು ತಪ್ಪಿಸುವುದರ ಜತೆಗೆ ಸಿಎಂ ಪದವಿಯಿಂದಲೂ ದೂರ ಉಳಿಯುವಂತೆ ಮಾಡುವ ಅವಕಾಶವನ್ನು ಕುಮಾರಸ್ವಾಮಿ ಬಿಟ್ಟಾರೆಯೇ? 2023ರ ಚುನಾವಣೆಯಲ್ಲಿ ನನಗೂ ಪೆನ್ನು ಮತ್ತು ಪೇಪರ್‌ ಕೊಡಿ ಎಂದು ಬೇಡುವ ಮೂಲಕ ವಿಶ್ವಾಸವನ್ನು ಗಿಟ್ಟಿಸಿಕೊಂಡಿದ್ದನ್ನು ಕುಮಾರಸ್ವಾಮಿ ನೆನಪಿಸುವ ಮೂಲಕ ಶಿವಕುಮಾರ್‌ ವಿರುದ್ಧ ಒಕ್ಕಲಿಗರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಶಿವಕುಮಾರ್‌ ಅವರು ಕಾಂಗ್ರೆಸ್‌ ನ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರಾದರೂ ಮಹತ್ವದ ಬೆಳವಣಿಗೆಯೇನೂ ಆದಂತಿಲ್ಲ. ಒಂದು ರೀತಿ ಕಾಂಗ್ರೆಸ್‌ ಸಭೆಯ ರೀತಿ ಮುಗಿದು ಹೋಗಿದೆ. ನಿಜ! ಬೃಹತ್‌ ಪ್ರತಿಭಟನೆ ಅಥವಾ ಆಕ್ರೋಶ ವ್ಯಕ್ತಪಡಿಸುವ ಹಂತ ತಲುಪಿಲ್ಲ. ಒಂದು ವೇಳೆ ತಲುಪಿದರೂ ಡಿಕೆ ಶಿವಕುಮಾರ್‌ ಅವರು ಭಾಗವಹಿಸುವಂತೆಯೂ ಇಲ್ಲ.

(ವರದಿ- ಎಚ್.ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.