ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ: ಗೊಂದಲ ಸೃಷ್ಟಿಯಾಗಿರುವುದೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ: ಗೊಂದಲ ಸೃಷ್ಟಿಯಾಗಿರುವುದೇನು?

ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ: ಗೊಂದಲ ಸೃಷ್ಟಿಯಾಗಿರುವುದೇನು?

ರಾಜ್ಯದಲ್ಲಿ ಜಾತಿ ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲಾತಿ ಕಾರಣಕ್ಕೆ ಸರಕಾರ ಸಮೀಕ್ಷೆ ಆರಂಭಿಸಿದ್ದು, ಸಮೂಹ ಮತ್ತು ಉಪಜಾತಿ ನಡುವೆ ಗೊಂದಲ ಏರ್ಪಟ್ಟಿರುವ ಕಾರಣ ಸಮೀಕ್ಷೆಗೆ ತೆರಳಿರುವ ಶಿಕ್ಷಕರಿಗೂ ಸಮಸ್ಯೆಯಾಗಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲಾತಿ ಕಾರಣಕ್ಕೆ ಸರಕಾರ ಸಮೀಕ್ಷೆ
ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲಾತಿ ಕಾರಣಕ್ಕೆ ಸರಕಾರ ಸಮೀಕ್ಷೆ (Pixabay)

ಮಂಗಳೂರು: ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆ ಆರಂಭಗೊಂಡಿದ್ದು, ಇದೀಗ ಆದಿದ್ರಾವಿಡ ಮತ್ತು ಉಪಜಾತಿಗಳ ನಡುವೆ ಗೊಂದಲಗಳು ಎದ್ದಿವೆ ಎಂದು ಸಮುದಾಯದ ಪ್ರತಿನಿಧಿಗಳು ದೂರಿದ್ದಾರೆ. ಆದರೆ ಇದನ್ನು ಅಧಿಕಾರಿಗಳು ನಿರಾಕರಿಸಿದ್ದು, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದಿದ್ರಾವಿಡ ಮತ್ತು ಉಪಜಾತಿಗಳ ನಡುವೆ ಎದ್ದಿರುವ ಗೊಂದಲ ಸರಿಪಡಿಸಲು ಆಡಳಿತ ಕೂಡಲೇ ಕ್ರಮ ವಹಿಸಬೇಕು. ಆದಿದ್ರಾವಿಡ ಎಂದು ಉಲ್ಲೇಖಿಸಿದರೆ, ಆಪ್ ಪ್ರೊಸೀಡ್ ಆಗುವುದಿಲ್ಲ ಎಂಬ ಮಾಹಿತಿ ಇದೆ. ಇಂಥ ಗೊಂದಲ ನಿವಾರಿಸಬೇಕು ಎಂದು ಸಮುದಾಯದ ಪ್ರತಿನಿಧಿಗಳು ದೂರಿದ್ದಾರೆ.

ಈವರೆಗೆ ಆದಿದ್ರಾವಿಡ ಎಂದು ಹೇಳಿಕೊಂಡು ಜಾತಿ ದೃಢೀಕರಣ ಪತ್ರ ಪಡೆಯುತ್ತಿದ್ದೆವು. ಆದಿದ್ರಾವಿಡ ಜಾತಿಯಲ್ಲ. ಅದೊಂದು ಅನೇಕ ಜಾತಿಗಳ ಸಮೂಹ ಎಂದು ಮಾಧ್ಯಮಗಳಿಗೆ ತಿಳಿಸಿರುವ ಮುಖಂಡ ಮೋಹನಚಂದ್ರ ಕಾಳಾವರ, ಒಳಮೀಸಲಾತಿ ವಿಚಾರ ಬಂದಾಗ ನಾವು ನಮ್ಮ ಮೂಲಜಾತಿಯನ್ನೇ ಉಲ್ಲೇಖಿಸಬೇಕು. 98 ಉಪಜಾತಿಗಳು ಬರುತ್ತವೆ. ಕೇವಲ ಆದಿದ್ರಾವಿಡ ಎಂದು ಹೇಳಿ, ತಮ್ಮ ಉಪಜಾತಿ ಉಲ್ಲೇಖಿಸದೇ ಇದ್ದರೂ ಕಷ್ಟ ಎನ್ನುತ್ತಾರೆ.

ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲಾತಿ ಕಾರಣಕ್ಕೆ ಸರಕಾರ ಸಮೀಕ್ಷೆ ಆರಂಭಿಸಿದ್ದು, ಸಮೂಹ ಮತ್ತು ಉಪಜಾತಿ ನಡುವೆ ಗೊಂದಲ ಏರ್ಪಟ್ಟಿರುವ ಕಾರಣ ಸಮೀಕ್ಷೆಗೆ ತೆರಳಿರುವ ಶಿಕ್ಷಕರೂ ಸಮಸ್ಯೆಗೆ ಒಳಗಾಗಿದ್ದಾರೆ. ಸಮೀಕ್ಷೆ ವೇಳೆ ನಾವು ಸಮೂಹ ಉಲ್ಲೇಖಿಸಬೇಕೇ ಅಥವಾ ಜಾತಿ, ಉಲ್ಲೇಖಿಸಬೇಕೇ ಎಂಬ ಮಾಹಿತಿ ಕೊರತೆ ಸಮುದಾಯದ ಜನರಲ್ಲಿದ್ದು, ಇದನ್ನು ನಿವಾರಿಸಬೇಕು ಎಂದವರು ಒತ್ತಾಇಸಿದ್ದಾರೆ. ಮೇ ತಿಂಗಳ 5ರಿಂದ 17ರವರೆಗೆ ಒಳಮೀಸಲು ಸಮೀಕ್ಷೆಗೆ ಮನೆ ಬಾಗಿಲಿಗೆ ಅಧಿಕಾರಿಗಳು ಬರುತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲೆಯ ಕುಂದಾಪುರದ ಸಹಾಯಕ ಕಮೀಷನರ್ ರಶ್ಮಿ, ಪರಿಶಿಷ್ಟ ಜಾತಿ ಕುಟುಂಬಗಳ ಒಳಮೀಸಲು ಸಮೀಕ್ಷೆಯಲ್ಲಿ ಆದಿದ್ರಾವಿಡ ಸಹಿತ 98 ಉಪಜಾತಿಗಳ ಉಲ್ಲೇಖವಿದೆ. ಸಮೀಕ್ಷೆಗೆ ಬರುವವರಲ್ಲಿ ಆದಿದ್ರಾವಿಡ ಎಂದು ಉಲ್ಲೇಖಿಸಿದರೆ, ಆಪ್ ಪ್ರೊಸೀಡ್ ಆಗುತ್ತದೆ. 98 ಉಪಜಾತಿಗಳ ಪೈಕಿ ಯಾವುದಾದರೂ ಒಂದನ್ನು ಉಲ್ಲೇಖಿಸಿದರೂ ಆದಿದ್ರಾವಿಡಕ್ಕೆ ತೆರೆದುಕೊಳ್ಳುತ್ತದೆ. ಹೀಗಾಗಿ ಯಾವುದೇ ಗೊಂದಲ ಬೇಡ ಎಂದವರು ತಿಳಿಸಿದ್ದಾರೆ.

ಇನ್ನು ಜಾತಿ ಸಮೀಕ್ಷೆ ವೇಳೆ ನಿಷೇಧಿತ ಶಬ್ದಗಳನ್ನು ಉಲ್ಲೇಖಿಸಲಾಗುತ್ತಿದ್ದು, ಇದು ಬಳಕೆಯಲ್ಲಿಲ್ಲದಿದ್ದರೂ ಸಮೀಕ್ಷೆಯಲ್ಲಿ ಅದನ್ನ ಎತ್ತಿಹೇಳುತ್ತಿರುವುದು ಸರಿಯಲ್ಲ ಎಂದು ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in