ಕರ್ನಾಟಕದ 775 ಕೇಂದ್ರಗಳಲ್ಲಿ ಇಂದು, ನಾಳೆ ಸಿಇಟಿ ಪರೀಕ್ಷೆ, 3.31 ಲಕ್ಷ ಪರೀಕ್ಷಾರ್ಥಿಗಳು, ವಸ್ತ್ರಸಂಹಿತೆ ನೆನಪಿರಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 775 ಕೇಂದ್ರಗಳಲ್ಲಿ ಇಂದು, ನಾಳೆ ಸಿಇಟಿ ಪರೀಕ್ಷೆ, 3.31 ಲಕ್ಷ ಪರೀಕ್ಷಾರ್ಥಿಗಳು, ವಸ್ತ್ರಸಂಹಿತೆ ನೆನಪಿರಲಿ

ಕರ್ನಾಟಕದ 775 ಕೇಂದ್ರಗಳಲ್ಲಿ ಇಂದು, ನಾಳೆ ಸಿಇಟಿ ಪರೀಕ್ಷೆ, 3.31 ಲಕ್ಷ ಪರೀಕ್ಷಾರ್ಥಿಗಳು, ವಸ್ತ್ರಸಂಹಿತೆ ನೆನಪಿರಲಿ

ಸಿಇಟಿ ಪರೀಕ್ಷಾರ್ಥಿಗಳ ಗಮನಕ್ಕೆ- ಕರ್ನಾಟಕದಲ್ಲಿ ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ.16 ಮತ್ತು 17 ರಂದು ನಡೆಯಲಿದೆ. ವಸ್ತ್ರಸಂಹಿತೆ ಸೇರಿ ನೆನಪಿರಬೇಕಾದ ವಿಷಯಗಳಿವು.

ಕರ್ನಾಟಕದ 775 ಕೇಂದ್ರಗಳಲ್ಲಿ ಇಂದು, ನಾಳೆ ಸಿಇಟಿ ಪರೀಕ್ಷೆ ನಡೆಯಲಿದ್ದು, 3.31 ಲಕ್ಷ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. (ಸಾಂಕೇತಿಕ ಚಿತ್ರ)
ಕರ್ನಾಟಕದ 775 ಕೇಂದ್ರಗಳಲ್ಲಿ ಇಂದು, ನಾಳೆ ಸಿಇಟಿ ಪರೀಕ್ಷೆ ನಡೆಯಲಿದ್ದು, 3.31 ಲಕ್ಷ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. (ಸಾಂಕೇತಿಕ ಚಿತ್ರ)

Karnataka CET 2025: ಕರ್ನಾಟಕದಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಸೇರಿ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಕರ್ನಾಟಕ ಸಿಇಟಿ 2025 ಇಂದು (ಏಪ್ರಿಲ್ 16) ಮತ್ತು ನಾಳೆ (ಏಪ್ರಿಲ್ 17) ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದನ್ನು ನಡೆಸುತ್ತಿದ್ದು, ಬೆಂಗಳೂರು ಸೇರಿ ಕರ್ನಾಟಕದ 775 ಕೇಂದ್ರಗಳಲ್ಲಿ ಸಿಇಟಿ ನಡೆಯಲಿದೆ. ಸಿಇಟಿಗೆ ಪೂರ್ವಭಾವಿಯಾಗಿ ಏಪ್ರಿಲ್ 15 ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಿತು. ಈ ಬಾರಿ ವೆಬ್‌ಕಾಸ್ಟಿಂಗ್ ನಿಗಾದಲ್ಲಿ ಏ.16 ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ಏ.17ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿದೆ.

ಸಿಇಟಿ 2025: ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್‌

ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೇಮಕಾತಿ ಪರೀಕ್ಷಾ ನಿಯಮಗಳ ಹಾಗೆ ಈ ಪರೀಕ್ಷೆಗೂ ಸಿಸಿ ಕ್ಯಾಮೆರಾ ಕಣ್ಣಾವಲು ಇರುತ್ತದೆ. ವೆಬ್‌ಕಾಸ್ಟಿಂಗ್ ಮೂಲಕ ಎಲ್ಲ 775 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವಸ್ತ್ರ ಸಂಹಿತೆ ಇದೆ ಎಂಬುದು ನೆನಪಿರಲಿ

ಪುರುಷ ಮತ್ತು ಮಹಿಳಾ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಮಾಡಿದ್ದು, ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಪುರುಷ, ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲ‌ರ್‌ ಇಲ್ಲದಿರುವ ಉಡುಪು ಹಾಕಿಕೊಂಡು ಬಂದರೆ `ಉತ್ತಮ. ಪುರುಷರು, ಜೇಬು ಇಲ್ಲದ ಶರ್ಟ್‌, ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್‌ಗಳಿಗೆ ಅವಕಾಶ ಇರುವುದಿಲ್ಲ. ಶೂ ಕೂಡ ನಿಷೇಧಿಸಲಾಗಿದೆ. ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಪರೀಕ್ಷಾ ಕೇಂದ್ರಕ್ಕೆ ಒಂದೂವರೆಗೆ ಗಂಟೆ ಮೊದಲು ತಲುಪಿ

ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದೂವರೆ ಗಂಟೆ ಮೊದಲೇ ತಲುಪಬೇಕು. ಪೊಲೀಸ್, ಗೃಹ ರಕ್ಷಕ ದಳದ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ತಪಾಸಣೆಗೊಳಪಡಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಿದ್ದಾರೆ. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಯಾರದ್ದೋ ಪರೀಕ್ಷೆಯನ್ನು ಬೇರೆ ಯಾರೋ ಬರೆಯುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ಪ್ರವೇಶ ಆಗುವ ಸಂದರ್ಭದಲ್ಲಿ ಕೂಡ ಅಭ್ಯರ್ಥಿಯ ಭಾವಚಿತ್ರವನ್ನು ಹೋಲಿಕೆ ಮಾಡಿಯೇ ಪ್ರವೇಶ ನೀಡುವ ವ್ಯವಸ್ಥೆ ಮಾಡಿದ್ದು, ನಕಲಿ ಅಭ್ಯರ್ಥಿಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.

ಪಿಯು ಅನುತ್ತೀರ್ಣರಾದವರಿಗೆ ಅವಕಾಶ

ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಆದ್ದರಿಂದ ಯಾರೆಲ್ಲ ಸಿಇಟಿ ಶುಲ್ಕ ಪಾವತಿಸಿದ್ದೀರೋ ಅವರೆಲ್ಲರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆ ಬರೆಯಬಹುದು. ದ್ವಿತೀಯ ಪಿಯುಸಿಯ 3ನೇ ಪರೀಕ್ಷೆಯ ಅಂಕಗಳನ್ನು ಪಡೆದು ರ‍್ಯಾಂಕ್ ಕೊಡುವ ವ್ಯವಸ್ಥೆ ಕೂಡ ಇದ್ದು, ಯಾರೂ ಇದರಿಂದ ಅವಕಾಶ ವಂಚಿತರಾಗಬಾರದು ಎಂದು ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner