ರಾಹುಲ್ಗಾಂಧಿ ಸೂಚನೆಗೂ ಇಲ್ಲ ಬೆಲೆ; ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರ ಅಳಲು ಸಿದ್ದರಾಮಯ್ಯ ಕೇಳದ್ದಕ್ಕೆ ಆಕ್ರೋಶ
ಚಾಮರಾಜನಗರ ಜಿಲ್ಲೆಯ ಕೋವಿಡ್ ಕಾಲದ ಆಕ್ಸಿಜನ್ ದುರಂತದ ಸಂತ್ರಸ್ತರು ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ವರ್ತನೆಯಿಂದ ಬೇಸರವಾಗಿ ಹೋರಾಟದ ಮಾರ್ಗ ಬದಲಿಸಲು ಮುಂದಾಗಿದ್ದಾರೆ.

ಚಾಮರಾಜನಗರ: ನಾಲ್ಕು ವರ್ಷದ ಹಿಂದೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಿತ್ತಾಟದಿಂದ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟು, ಹಲವರು ತೊಂದರೆಗೆ ಒಳಗಾದ ಪ್ರಕರಣದ ನೋವು ಇನ್ನೂ ಮಾಸಿಲ್ಲ. ಅಧಿಕಾರಕ್ಕೆ ಬಂದರೆ ಮೃತಪಟ್ಟವರ ಕುಟುಂಬಗಳಿಗೆ ಕಾಯಂ ಉದ್ಯೋಗದ ಭರವಸೆ ನೀಡಿದ್ದ ಕಾಂಗ್ರೆಸ್ ತನ್ನ ಭರವಸೆಯನ್ನೇ ಮರೆತಿದೆ. ಅದರಲ್ಲೂ ಭಾರತ್ ಜೋಡೋ ಯಾತ್ರೆ ವೇಳೆ ಬಂದಿದ್ದ ಪಕ್ಷದ ನಾಯಕ ರಾಹುಲ್ಗಾಂಧಿ ಸೂಚನೆ ಕೊಟ್ಟರೂ ಸಂತ್ರಸ್ತ ಕುಟುಂಬಗಳನ್ನು ಕೈ ಹಿಡಿಯುವಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ. ಈ ವಿಚಾರವಾಗಿಯೇ ಚಾಮರಾಜನಗರದಲ್ಲಿ ಹೋರಾಟ ಮಾಡುತ್ತಿರುವ ಸಂತ್ರಸ್ತ ಕುಟುಂಬಸ್ಥರು ಈಗ ಹೊಸ ಮಾರ್ಗ ಹಿಡಿಯಲು ಮುಂದಾಗಿದ್ದಾರೆ.
ಬಿಜೆಪಿ ಸರ್ಕಾರ ಆಕ್ಸಿಜನ್ ನೀಡದೇ ನನ್ನ ಗಂಡನ ಸಾವಿಗೆ ಕಾರಣವಾಗಿದೆ. ಈ ಸರ್ಕಾರ ನನ್ನ ಸಾವಿಗೆ ಕಾರಣವಾಗುತ್ತದೆ.ನಾಲ್ಕು ವರ್ಷಗಳಿಂದ ತಿರುಗಿ ತಿರುಗಿ ಸಾಕಾಗಿದೆ. ನಾವೆಲ್ಲ ಸಾಯುವುದಕ್ಕೆ ಸಿದ್ದರಾಗಿದ್ದೇವೆ. ಇವತ್ತು ಮನವಿ ಕೊಡಲು ಹೋದರೆ ಮುಖ್ಯಮಂತ್ರಿಯವರು ಏತಕ್ಕೆ ಬಂದಿದ್ದೀರಾ ಎಂದೂ ಕೇಳಲಿಲ್ಲ. ಮೇ 2 ರ ನಂತರ ನನ್ನ ಸಾವಿಗೆ ಸಿದ್ದರಾಮಯ್ಯನವರೇ ಕಾರಣ ಎಂದು ಬರೆದಿಟ್ಟು ಸಾಯುವುದಂತೂ ಸತ್ಯ ಎಂದು ಆಕ್ಸಿಜನ್ ದುರಂತ ಸಂತ್ರಸ್ತೆ ನಾಗರತ್ನ ಹೀಗೆಂದು ಹೇಳುವಾಗ ತಮ್ಮದಲ್ಲದ ತಪ್ಪಿಗೆ ಕುಟುಂಬ ತೊಂದರೆ ಒಳಗಾಗಿರುವ ಬಗ್ಗೆ ಆಕ್ರೋಶ ಇರುವುದು ಕಂಡು ಬಂದಿತು. ಅಷ್ಟೇ ಅಲ್ಲದೇ ಅಧಿಕಾರಸ್ಥರು ಹೇಗೆ ಬದಲಾಗುತ್ತಾರೆ ಎನ್ನುವುದನ್ನೂ ಅವರ ಮಾತು ಧ್ವನಿಸುತ್ತಿತ್ತು.
ಒಂದೆಡೆ ಬಿಜೆಪಿ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡದೇ,ಪರಿಹಾರವನ್ನೂ ನೀಡದೇ ನಮ್ಮ ಕುಟುಂಬದ 36 ಜನರ ಸಾವಿಗೆ ಕಾರಣವಾಯಿತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್ನವರು ನಾವು ಅಧಿಕಾರಕ್ಕೆ ಬಂದರೆ ನಿಮಗೆಲ್ಲ ನ್ಯಾಯ ಕೊಡಿಸುವುದಾಗಿ ಹೇಳಿ ಇವರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ನ್ಯಾಯ ದೊರಕುವ ಭರವಸೆಯೇ ಇಲ್ಲವಾಗಿದೆ ಎಂದು ನೇರವಾಗಿಯೇ ಅಸಮಾಧಾನವನ್ನು ಸಂತ್ರಸ್ತರು ಹೊರ ಹಾಕಿದ್ದಾರೆ.
2021ರ ಮೇ 1 ರ ಮಧ್ಯರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ದುರಂತ ಸಂಭವಿಸಿ 36 ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದರು. ಅಂದಿನ ಬಿಜೆಪಿ ಸರ್ಕಾರ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಸೂಕ್ತ ಪರಿಹಾರವನ್ನೂ ಕೊಡಲಿಲ್ಲ. 13 ಮಂದಿ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದರೆ, 11 ಮಂದಿಗೆ ತಲಾ 2 ಲಕ್ಷ ಪರಿಹಾರ ನೀಡಲಾಗಿದೆ. ಇನ್ನು 12 ಸಂತ್ರಸ್ತರಿಗೆ ಒಂದು ಪೈಸೆ ಪರಿಹಾರವನ್ನೂ ನೀಡಿಲ್ಲ. ಗಲಭೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ನಮಗೇಕೇ ತಾರತಮ್ಯ ಎಂದು ಸಂತ್ರಸ್ತರು ಪ್ರಶ್ನೆ ಮಾಡುತ್ತಿದ್ದಾರೆ.
ನಮಗೆ ನ್ಯಾಯಯುತ ಪರಿಹಾರವನ್ನೂ ನೀಡಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಲಿಲ್ಲ. ಸರ್ಕಾರಿ ಉದ್ಯೋಗವನ್ನೂ ನೀಡಲಿಲ್ಲ. ಅಂದು ರಾಹುಲ್ಗಾಂಧಿ ಡಿ.ಕೆ. ಶಿವಕುಮಾರ್ ಕೇವಲ ಮೊಸಳೆ ಕಣ್ಣೀರು ಹಾಕಿದರು. ಡಿ.ಕೆ. ಶಿವಕುಮಾರ್ ನೀಡಿದ 1 ಲಕ್ಷ ಪರಿಹಾರದ ಹಣ ವಾಪಸ್ ಮಾಡುತ್ತೇವೆ ಎಂದು ನಲ್ಲೂರು ಗ್ರಾಮದ ಸಂತ್ರಸ್ತ ಮಂಜುನಾಥ್ ಬೇಸರದಿಂದಲೇ ಹೇಳುತ್ತಾರೆ.
ಹಿಂದೆ ಚಾಮರಾಜನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ವೇಳೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ. ಮಹದೇವಪ್ಪ ಭರವಸೆ ಕೊಟ್ಟಿದ್ದರು. ಗುರುವಾರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರ ನೆರವಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬಹುದು. ಸರ್ಕಾರಿ ಉದ್ಯೋಗ ನೀಡಲು ವಿಶೇಷ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. 3647 ಕೋಟಿ ರೂ. ಯೋಜನೆಗಳನ್ನು ಪ್ರಕಟಿಸಿದ ಸರ್ಕಾರ 36 ಮಂದಿ ಆಕ್ಸಿಜನ್ ದುರಂತ ಸಂತ್ರಸ್ತರ ನೋವಿಗೆ ಸ್ಪಂದಿಸದೇ ಇರುವುದು ಜಿಲ್ಲೆಗೆ ಬಂದರೂ ಈ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಬೇಸರ ಹೆಚ್ಚಲು ಕಾರಣವಾಗಿದೆ.