Chitradurga News: ಚಿತ್ರದುರ್ಗ ಹಾಯ್ಕಲ್ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರಂಗ ತರಬೇತಿ; ರಾಜ್ಯೋತ್ಸವ ಸಂಭ್ರಮ
Chitradurga News: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಮಂಗಳವಾರ ಒಂದು ದಿನದ ರಂಗ ತರಬೇತಿ ಕಾರ್ಯಕ್ರಮ ನಡೆಯಿತು. ರಾಜ್ಯೋತ್ಸವದ ಸಂಭ್ರಮವೂ ಜತೆಗಿತ್ತು.
ಚಿತ್ರದುರ್ಗ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಚಿತ್ರದುರ್ಗ ತಾಲೂಕು ಹಾಯ್ಕಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾಜ್ಯೋತ್ಸವದ ಸಂಭ್ರಮದ ಜತೆಗೆ ಒಂದು ದಿನದ ರಂಗ ತರಬೇತಿಯ ಖುಷಿಯೂ ಮಕ್ಕಳಿಗೆ ಸಿಕ್ಕಿತು.
ಸರ್ಕಾರಿ ಶಾಲೆಯ ಕಾರ್ಯಕ್ರಮದ ಜತೆಗೆ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ರಂಗ ತರಬೇತಿ ಮೂಲಕ ಕೈ ಜೋಡಿಸಿತ್ತು. ಈ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ. ಲತಾ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಿಂದಲೇ ಕನ್ನಡ ಭಾಷಾಭಿಮಾನ ಮೂಡಿಸುವ ಕೆಲಸವಾಗಬೇಕು. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಭಾಷೆಗೆ ಮಹತ್ವ ನೀಡುವ ಬದಲು ವರ್ಷ ಪೂರ್ತಿ ಕನ್ನಡ ಭಾಷೆ ಬಳಸುವ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಕನ್ನಡ ಭಾಷೆ ನಮ್ಮ ಅನ್ನದ ಭಾಷೆ ಆಗಬೇಕು. ಕನ್ನಡ ಭಾಷೆಯಲ್ಲಿ ಇಂದು ಐಎಎಸ್ ಪರೀಕ್ಷೆ ಬರೆಯಲು ಅವಕಾಶ ಇದೆ. ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಅಂತಹ ಭಾಷೆಯನ್ನು ಬಳಸಲು ಯುವ ಜನಾಂಗ ಹಿಂಜರಿಯುತ್ತಿರುವುದು ವಿಷಾದಕರ. ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಕುವೆಂಪು, ಕಾರಂತರು, ಬೇಂದ್ರೆ ಅವರಂತಹ ಸಾಹಿತಿಗಳ ಸಾಹಿತ್ಯವನ್ನು ಮಕ್ಕಳು ಓದಬೇಕು. ಆಧುನಿಕ ಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕನ್ನಡ ಭಾಷೆ ತನ್ನ ಮಹತ್ವ ಕಳಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮಾತನಾಡಿ, ರಂಗಭೂಮಿಯ ಬೆಳವಣೆಯಲ್ಲಿ ಕನ್ನಡ ಭಾಷೆಯ ಪಾತ್ರ ಮಹತ್ವದ್ದು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಬಳಸಲಾಗುವ ಕನ್ನಡವನ್ನು ಗಮನವಿಟು ಗ್ರಹಿಸಬೇಕು. ಇದರಿಂದ ಭಾಷಾ ಪರಿಚಯವಾಗುತ್ತದೆ. ಶಬ್ಧಗಳ ಉಚ್ಚಾರಣೆಯ ಮಹತ್ವ ತಿಳಿಯುತ್ತದೆ. ನಾಟಕಗಳಿಂದ ಹಳೆಗನ್ನಡ ಹಾಗೂ ಹೊಸಗನ್ನಡ ವ್ಯತ್ಯಾಸ ತಿಳಿದುಕೊಳ್ಳಬಹುದು. ಮಕ್ಕಳಲ್ಲಿ ಅಂತಹ ಆಸಕ್ತಿ ಬೆಳಸುವ ಹೊಣೆಗಾರಿಕೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಇದೆ. ಕರ್ನಾಟದಲ್ಲಿ ಪ್ರತಿ ೨೦ ಕಿ.ಮಿ.ಗೆ ಕನ್ನಡ ಭಾಷೆಯ ಸೊಗಡು ಬದಲಾಗುತ್ತದೆ ಅಂದರೆ ಕನ್ನಡ ಭಾಷೆ ಶಕ್ತಿ ಎಷ್ಟು ಎಂಬುದನ್ನು ಅರ್ಥಮಾಡಬಹುದು ಎಂದರು.
ಇದೇ ಸಂದರ್ಭದಲ್ಲ ಬಾದರದಿನ್ನಿ ಆರ್ಟ್ಸ್ ಅಕಾಡೆಮಿಯ ಪ್ರಕಾಶ್ ಬಾದರದಿನ್ನಿ ಹಾಗೂ ಕಲಾವಿದ ಗುರುಕಿರಣ ಅವರಿಂದ ಶಾಲೆಯ ವಿದ್ಯಾಥಿಗಳಿಗೆ ರಂಗತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ್, ಶ್ರೀನಿವಾಸ, ಸುನಂದಮ್ಮ, ಆಶಾಲತಾ, ಸವಿತಾ, ಮೂಬಿನಾ ಹಾಗೂ ಕಲಾವಿದ ಗುರುಕಿರಣ ಮತ್ತಿತರರು ಇದ್ದರು.