ಕರಾವಳಿ ಇನ್ನೂ ಬೂದಿಮುಚ್ಚಿದ ಕೆಂಡ: ಸೋಶಿಯಲ್ ಮೀಡಿಯಾಗಳಲ್ಲಿ ಮುಂದುವರಿದ ವಾರ್, ಬೆದರಿಕೆ ಸಂದೇಶ
ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಮೇಲ್ನೋಟಕ್ಕೆ ನಿಯಂತ್ರಣಕ್ಕೆ ಬಂದಿರುವಂತೆ ಕಂಡರೂ, ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಮತ್ತೆ ಇಬ್ಬರು ಹಿಂದೂ ಸಂಘಟನೆಯ ಪ್ರಮುಖ ಮುಖಂಡರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಸಂದೇಶಗಳು ಬಂದಿವೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರು: ಮಂಗಳೂರು ಹೊರವಲಯದಲ್ಲಿ ಅಶ್ರಫ್ ಎಂಬಾತನನ್ನು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿದ ಪ್ರಕರಣ, ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದ ಪ್ರಕರಣಗಳು ನಡೆದ ಬಳಿಕ ಮತ್ತೆ ನಾಲ್ವರ ವಿರುದ್ಧ ಹಲ್ಲೆ ನಡೆದ ಘಟನೆಗಳು ನಡೆದಿದ್ದು, ಇದೀಗ ಮತ್ತೆ ಇಬ್ಬರು ಪ್ರಮುಖ ಮುಖಂಡರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆ ಸಂದೇಶಗಳು ಬಂದಿವೆ. ಈತನ್ಮಧ್ಯೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಪರಸ್ಪರ ಅವಹೇಳನಕಾರಿ, ಬೆದರಿಕೆ ಸಂದೇಶಗಳ ವಿನಿಮಯವಾಗುತ್ತಿದ್ದು, ನಕಲಿ ಅಕೌಂಟ್ಗಳ ಮೂಲಕ ಧಮ್ಕಿ ಹಾಕುವ ಕಾರ್ಯಗಳು ನಡೆಯುತ್ತಿರುವುದು ಪೊಲೀಸರಿಗೆ ಸವಾಲಾಗಿದೆ. ಹಿಂದು ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲು ವಿರುದ್ಧ ಹಾಕಿದ ಪೋಸ್ಟ್ ಈಗ ಚರ್ಚೆಗೆ ಗ್ರಾಸವಾಗಿದೆ.
ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ ಸಹಸಂಚಾಲಕ ಶರಣ್ ಪಂಪ್ವೆಲ್, 2017ರಲ್ಲಿ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ ನಡೆದ ಎಸ್.ಡಿ.ಪಿ.ಐ. ಮುಖಂಡ ಆಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಿಕೊಂಡಿದ್ದ ಬಜರಂಗದಳ ಮುಖಂಡ ಭರತ್ ಕುಮ್ಡೇಲು ಎಂಬಿಬ್ಬರಿಗೆ ಜೀವಬೆದರಿಕೆ ಒಡ್ಡುವ ಪೋಸ್ಟ್ಗಳನ್ನು ಹಾಕಲಾಗಿದೆ. ಅಬ್ದುಲ್ ಬಶೀರ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಶ್ರೀಜಿತ್ ಎಂಬಾತನಿಗೂ ಬೆದರಿಕೆ ಹಾಕಲಾಗಿದೆ.
ಭರತ್ ಕುಮ್ಟೇಲುವಿಗೆ ಆನ್ ಫಿಕ್ಸ್ಡ್ ಲೀಡರ್ ಎಂಬ ಪೇಜ್ನಿಂದ ಬೆದರಿಕೆ ಹಾಕಲಾಗಿದ್ದು, ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳಕ್ಕೆ ಬಂದು ಕೊಲ್ಲುತ್ತೇವೆ ಎಂದು ತಿಳಿಸಲಾಗಿದೆ. ಸುದ್ದಿವಾಹಿನಿಯೊಂದರ ಯೂಟ್ಯೂಬ್ ಲೈವ್ನಲ್ಲಿ ಹಾಕಿರುವ ಕಮೆಂಡ್ನಲ್ಲಿ ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ – ಸಾಯಲು ಸಿದ್ಧನಾಗು ಎಂದು ಬರೆಯಲಾಗಿದೆ. ಇನ್ನೊಂದು ಕಮೆಂಟ್ನಲ್ಲಿ ಅಬ್ದುಲ್ ಮುನೀರ್ ಎಂಬ ಹೆಸರಿನ ವ್ಯಕ್ತಿಯೊಬ್ಬ ನೆಕ್ಟ್ ಬುಕಿಂಗ್ ಶರಣ್ ಪಂಪ್ವೆಲ್ ಎಂದು ಕಾಮೆಂಟ್ ಹಾಕಲಾಗಿದೆ.
ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರಚೌಕಿಯಲ್ಲಿ ಅಬ್ದುಲ್ ಬಶೀರ್ ಹತ್ಯೆಯಾಗಿತ್ತು. ಈ ಪ್ರಕರಣದ ಆರೋಪಿ ಶ್ರೀಜಿತ್ಗೂ ಬೆದರಿಕೆ ಹಾಕಲಾಗಿದೆ. ನೆಕ್ಸ್ಟ್ ನೀನೇ ಎಂದು ಅಬುಸಫಿಯಾನ್ ಎಂಬ ಪೇಜ್ನಿಂದ ಬೆದರಿಕೆ ಹಾಕಲಾಗಿದೆ.
ಪೊಲೀಸ್ ಕಮೀಷನರ್ ಏನಂತಾರೆ?
ಜಾಲತಾಣಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ದ್ವೇಷಭಾವನೆ ಹುಟ್ಟುವಂತೆ ಪೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 15 ಪ್ರಕರಣಗಳನ್ನು ನಾನಾ ಠಾಣೆಗಳಲ್ಲಿ ದಾಖಲಿಸಲಾಗಿದೆ. ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಇಂಥ ಕೃತ್ಯಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮೀಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಪೊಲೀಸರು
ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಆನ್ಫಿಕ್ಸ್ಡ್ ಲೀಡರ್ ಎಂಬ ಹೆಸರಿನ ಪೇಜ್ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಹಾಗೂ ಕೋಮು ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಪೋಸ್ಟ್ಗಳನ್ನು ಪ್ರಸಾರ ಮಾಡಲಾಗಿರುವ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಪೇಜ್ನಲ್ಲಿ ಸುಹಾಸ್ ಶೆಟ್ಟಿ ಚಿಹ್ನೆ ಮೇಲೆ ಟಿಕ್ ಮಾರ್ಕ್ ಹಾಕಲಾಗಿದ್ದು, ಪಕ್ಕದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಭರತ್ ಕುಮ್ದೇಲು ಚಿತ್ರದ ಪಕ್ಕ ವೈಟ್ ಎಟ್ ಯುವರ್ ಸ್ಪಾಟ್ ಹಾಗೂ ಕುಮ್ಡೇಲ್ ವಿಲ್ ಬಿ ಸೂನ್ ಎಂದು ಬರೆದಿರುವುದನ್ನು ಗಮನಿಸಿದ ಪೊಲೀಸರು ಸ್ವಯಂಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದೇಶವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೋಸ್ಟ್ ಮಾಡಿದ ವ್ಯಕ್ತಿಯು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ, ಹಿಂದು ಸಮುದಾಯದ ಸಂಘಟನೆಯ ವ್ಯಕ್ತಿಯನ್ನು ಕೆರಳಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರಿಂದ ಸಮಾಜದಲ್ಲಿ ಧರ್ಮ ಧರ್ಮಗಳ ಮಧ್ಯೆ ಕೋಮು ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸಂದೇಶವನ್ನು ಸೃಷ್ಟಿಸಿ ರವಾನಿಸಿರುವ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪ್ರಕರಣ ದಾಖಲಿಸಲಾಗಿದೆ.