ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ: ಬೆಳಗಾವಿಯ ಗೋಕಾಕ್ನ ಕರ್ನಲ್ ತಾಜುದ್ದೀನ್ ಬಾಗೇವಾಡಿಯವರ ಪತ್ನಿ
ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಜಗತ್ತಿನ ಗಮನ ಸೆಳೆದಿದ್ದಾರೆ. ಈ ಪೈಕಿ ಕರ್ನಲ್ ಸೋಫಿಯಾ ಖುರೇಷಿ ನಮ್ಮ ರಾಜ್ಯದ ಸೊಸೆಯೂ ಹೌದು.

ಬೆಂಗಳೂರು: ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಕೈಗೊಂಡ ಉಗ್ರ ನಿಗ್ರಹ ಕಾರ್ಯಾಚರಣೆ ಆಪರೇಷನ್ ಸಿಂದೂರ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಆಪರೇಷನ್ ಸಿಂಧೂರ್ ವಿವರಗಳನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ ಕರ್ನಲ್ ಸೋಫಿಯಾ ಖುರೇಷಿ ಅವರು ಕರ್ನಾಟಕ ಬೆಳಗಾವಿಯ ಸೊಸೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿಯ ಗೋಕಾಕ್ ತಾಲ್ಲೂಕಿನ ಕೊಣ್ಣೂರು ಪಟ್ಟಣದವರು. ಅವರು ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಇವರಿಬ್ಬರೂ 2015 ರಲ್ಲಿ ವಿವಾಹವಾದರು. ಸೋಫಿಯಾ ಖುರೇಷಿ ಅವರು ಗುಜರಾತ್ನ ಬರೋಡಾದವರಾಗಿದ್ದು, ಗೋಕಾಕ್ನ ತಾಜುದ್ದೀನ್ ಅವರನ್ನು ವಿವಾಹವಾಗಿರುವುದರಿಂದ ಅವರು ಬೆಳಗಾವಿಯ, ನಮ್ಮ ರಾಜ್ಯದ ಹೆಮ್ಮೆಯ ಸೊಸೆಯಾಗಿದ್ದಾರೆ.
ಸೇನಾ ಕಾರ್ಯಾಚರಣೆಯ ಯಶಸ್ಸಿನ ಬಳಿಕ, ಬುಧವಾರ ನವದೆಹಲಿಯಲ್ಲಿ ನಡೆದ ಮಾಧ್ಯಮ ಸಭೆಯಲ್ಲಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜತೆ ಕರ್ನಲ್ ಸೋಫಿಯಾ ಖುರೇಷಿ ಅವರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾದ ಆಪರೇಷನ್ ಸಿಂದೂರ್ನ ವಿವಿಧ ಹಂತದ ವಿವರಗಳನ್ನು ಹಂಚಿಕೊಂಡಿದ್ದರು.
ಸೋಫಿಯಾ ಖುರೇಷಿ ಅವರು ಈ ಮೊದಲು ಕಂಗೋಲಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜತೆಗೆ ಪಂಜಾಬ್ನ ಗಡಿಗಳಲ್ಲಿ ಮತ್ತು ಈಶಾನ್ಯ ಭಾರತದಲ್ಲಿನ ಪ್ರವಾಹದ ಸಮಯದಲ್ಲಿ ಅವರು ಮಾಡಿದ ಕೆಲಸಕ್ಕಾಗಿ ಜನರಲ್ ಆಫೀಸರ್ ಕಮಾಂಡಿಂಗ್ನಿಂದ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ಸೋಫಿಯಾ ಖುರೇಷಿ ಅವರನ್ನು ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿಯವರು ಝಾನ್ಶಿಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.