ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಗೀತಾ ಶಿವರಾಜ್ಕುಮಾರ್ಗೆ ಟಿಕೆಟ್, ವಯನಾಡ್ನಿಂದ ರಾಹುಲ್ ಗಾಂಧಿ ಮತ್ತೆ ಸ್ಪರ್ಧೆ
ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ನಟ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ವಯನಾಡ್ನಿಂದ ಮತ್ತೊಮ್ಮೆ ಸ್ಪರ್ದಿಸಲಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೆನ್ನಲ್ಲೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಶುಕ್ರವಾರ (ಮಾರ್ಚ್ 8) ತಮ್ಮ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ 8 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಕರ್ನಾಟಕದಲ್ಲಿ ಕಣಕ್ಕಿಳಿಯಲಿರುವ 7 ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಗೊಳಿಸಿದ್ದು, ಡಾ. ರಾಜ್ಕುಮಾರ್ ಸೊಸೆ ಗೀತಾ ಶಿವರಾಜ್ಕುಮಾರ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಿವರಾಜ್ಕುಮಾರ್ ಪತ್ನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಪುತ್ರಿಯಾದ ಗೀತಾ ಶಿವರಾಜ್ಕುಮಾರ್ ಅವರು 2023ರ ಏಪ್ರಿಲ್ನಲ್ಲಿ ಕಾಂಗ್ರೆಸ್ ಸೇರಿದ್ದರು.
ವಿಧಾನಸಭೆ ಚುನಾವಣೆಗೂ ಮುನ್ನ ಅಂದು ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು. ಇದೀಗ ಅವರ ತಂದೆಯ ಹಾದಿಯಲ್ಲಿ ಜನರ ಸೇವೆಗೆ ಮುಂದಾಗಿರುವ ಗೀತಾ ಅವರು, ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಮಧು ಬಂಗಾರಪ್ಪ ಪರವಾಗಿ ಸೊರಬ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು.
ಯಾರಿಗೆಲ್ಲಾ ಸಿಕ್ಕಿದೆ ಕಾಂಗ್ರೆಸ್ ಟಿಕೆಟ್?
ಪ್ರಕಟಗೊಂಡ ಪಟ್ಟಿಯಲ್ಲಿ ಕರ್ನಾಟಕದ 7 ಅಭ್ಯರ್ಥಿಗಳ ಹೆಸರು ಬಹಿರಂಗೊಂಡಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಶೀಘ್ರದಲ್ಲೇ ಪ್ರಕಟವಾಗಲಿದೆ. ಬಿಜಾಪುರ (SC) ಕ್ಷೇತ್ರದಿಂದ ಎಚ್ಆರ್ ಅಲ್ಗೂರ್ (ರಾಜು), ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜಕುಮಾರ್, ಹಾಸನದಿಂದ ಎಂ.ಶ್ರೇಯಸ್ ಪಟೇಲ್, ತುಮಕೂರಿಂದ ಎಸ್ಪಿ ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಅವರು ಕಣಕ್ಕಿಳಿಯಲಿದ್ದಾರೆ.
ಯಾರು ಯಾವ ಕ್ಷೇತ್ರದಿಂದ ಕಣಕ್ಕೆ?
ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ನಿಂದ 2ನೇ ಬಾರಿಗೆ ಸ್ಪರ್ಧಿಸಲಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರಾಜ್ಯದ ಆಲಪ್ಪುಳದಿಂದ ಕಣಕ್ಕಿಳಿಯಲಿದ್ದಾರೆ. ಕೇರಳದ ತಿರುವನಂತಪುರಂನಿಂದ ಹಾಲಿ ಸಂಸದ ಶಶಿ ತರೂರ್ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸಲಿದ್ದಾರೆ. ಮಾಜಿ ಕೇಂದ್ರ ಸಚಿವರು 2009 ರಿಂದ ತಿರುವನಂತಪುರಂ ಕ್ಷೇತ್ರವನ್ನು ಗೆಲ್ಲುತ್ತಿದ್ದಾರೆ.
ಪಕ್ಷವು ಛತ್ತೀಸ್ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರನ್ನು ರಾಜನಂದಗಾಂವ್ ಕ್ಷೇತ್ರದಿಂದ ಮತ್ತು ಮಾಜಿ ಸಚಿವ ತಾಮರದ್ವಾಜ್ ಸಾಹು ಅವರನ್ನು ಮಹಾಸಮುಂಡ್ನಿಂದ ಕಣಕ್ಕಿಳಿಸಿದ್ದು, ಜ್ಯೋತ್ಸ್ನಾ ಮಹಂತ್ ಛತ್ತೀಸ್ಗಢದ ಕೊರ್ಬಾದಿಂದ ಸ್ಪರ್ಧಿಸಲಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ 16 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕರ್ನಾಟಕದಲ್ಲಿ 7; ಛತ್ತೀಸ್ಗಢದಲ್ಲಿ 6; ತೆಲಂಗಾಣದಲ್ಲಿ 4; ಮೇಘಾಲಯದಲ್ಲಿ 2; ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದಲ್ಲಿ ತಲಾ 1 ಮತ್ತು ಲಕ್ಷದ್ವೀಪದಲ್ಲಿ ಒಬ್ಬರನ್ನು ಕಣಕ್ಕಿಳಿಸಿದೆ. ಪಟ್ಟಿಯಲ್ಲಿ ಸಾಮಾನ್ಯ ವರ್ಗದ 15 ಅಭ್ಯರ್ಥಿಗಳು ಮತ್ತು 24 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಅಭ್ಯರ್ಥಿಗಳೂ ಇದ್ದಾರೆ.
ಅಭ್ಯರ್ಥಿ | ಕ್ಷೇತ್ರ | ರಾಜ್ಯ |
---|---|---|
ಭೂಪೇಶ್ ಬಘೇಲ್ | ರಾಜನಂದಗಾಂವ್ | ಛತ್ತೀಸ್ಗಢ |
ಶಿವಕುಮಾರ್ ದಹರಿಯಾ | ಜಾಂಗೀರ್-ಚಂಪಾ | ಛತ್ತೀಸ್ಗಢ |
ಜ್ಯೋತ್ಸನಾ ಮಹಂತ್ | ಕೊರ್ಬಾ | ಛತ್ತೀಸ್ಗಢ |
ರಾಜೇಂದ್ರ ಸಾಹು | ದುರ್ಗ್ | ಛತ್ತೀಸ್ಗಢ |
ವಿಕಾಸ್ ಉಪಾಧ್ಯಾಯ | ರಾಯಪುರ | ಛತ್ತೀಸ್ಗಢ |
ತಾಮ್ರಧ್ವಜ ಸಾಹು | ಮಹಾಸುಮುಂದ್ | ಛತ್ತೀಸ್ಗಢ |
ಎಚ್ ಆರ್ ಅಲಗೂರ್ (ರಾಜು) | ಬಿಜಾಪುರ | ಕರ್ನಾಟಕ |
ಗೀತಾ ಶಿವರಾಜಕುಮಾರ್ | ಶಿವಮೊಗ್ಗ | ಕರ್ನಾಟಕ |
ಡಿಕೆ ಸುರೇಶ್ | ಬೆಂಗಳೂರು ಗ್ರಾಮಾಂತರ | ಕರ್ನಾಟಕ |
ಆನಂದಸ್ವಾಮಿ ಗಡ್ಡದೇವರ ಮಠ | ಹಾವೇರಿ | ಕರ್ನಾಟಕ |
ಎಂ ಶ್ರೇಯಸ್ ಪಟೇಲ್ | ಹಾಸನ | ಕರ್ನಾಟಕ |
ಎಸ್ಪಿ ಮುದ್ದಹನುಮೇಗೌಡ | ತುಮಕೂರು | ಕರ್ನಾಟಕ |
ವೆಂಕಟರಾಮೇಗೌಡ (ಸ್ಟಾರ್ ಚಂದ್ರು) | ಮಂಡ್ಯ | ಕರ್ನಾಟಕ |
ರಾಜಮೋಹನ್ ಉನ್ನಿತಾನ್ | ಕಾಸರಗೋಡು | ಕೇರಳ |
ರಾಹುಲ್ ಗಾಂಧಿ | ವಯನಾಡ್ | ಕೇರಳ |
ಕೆ ಸಿ ವೇಣುಗೋಪಾಲ್ | ಆಲಪ್ಪುಳ | ಕೇರಳ |
ಕೆ ಸುಧಾಕರನ್ | ಕಣ್ಣೂರು | ಕೇರಳ |
ಶಶಿ ತರೂರ್ | ತಿರುವನಂತಪುರಂ | ಕೇರಳ |
ಕೆ ಮುರಳೀಧರನ್ | ತ್ರಿಶೂರ್ | ಕೇರಳ |
ಶಾಫಿ ಪರಂಬಿಲ್ | ವಡಕರ | ಕೇರಳ |
ಎಂ ಕೆ ರಾಘವನ್ | ಕೋಝಿಕ್ಕೋಡ್ | ಕೇರಳ |
ವಿಕೆ ಶ್ರೀಕಂದನ್ | ಪಾಲಕ್ಕಾಡ್ | ಕೇರಳ |
ರಮ್ಯಾ ಹರಿದಾಸ್ | ಆಲತ್ತೂರು | ಕೇರಳ |
ಬೆನ್ನಿ ಬೆಹನನ್ | ಚಾಲಕುಡಿ | ಕೇರಳ |
ಹೈಬಿ ಈಡನ್ | ಎರ್ನಾಕುಲಂ | ಕೇರಳ |
ಡೀನ್ ಕುರಿಯಾಕೋಸ್ | ಇಡುಕ್ಕಿ | ಕೇರಳ |
ಕೋಡಿಕುನ್ನಿಲ್ ಸುರೇಶ್ | ಮಾವೇಲಿಕ್ಕರ | ಕೇರಳ |
ಆಂಟೊ ಆಂಟೋನಿ | ಪತ್ತನಂತಿಟ್ಟ | ಕೇರಳ |
ಅಡೂರ್ ಪ್ರಕಾಶ್ | ಅಟ್ಟಿಂಗಲ್ | ಕೇರಳ |
ಮೊಹಮ್ಮದ್ ಹಮ್ದುಲ್ಲಾ ಸಯೀದ್ | ಲಕ್ಷದ್ವೀಪ | ಲಕ್ಷದ್ವೀಪ |
ವಿನ್ಸೆಂಟ್ ಎಚ್ ಪಾಲಾ | ಶಿಲ್ಲಾಂಗ್ | ಮೇಘಾಲಯ |
ಸಲೆಂಗ್ ಎ ಸಂಗ್ಮಾ | ತುರಾ | ಮೇಘಾಲಯ |
ಎಸ್ ಸುಪಾಂಗ್ಮೆರೆನ್ ಜಮೀರ್ | ನಾಗಾಲ್ಯಾಂಡ್ | ನಾಗಾಲ್ಯಾಂಡ್ |
ಗೋಪಾಲ ಚೆಟ್ರಿ | ಸಿಕ್ಕಿಂ | ಸಿಕ್ಕಿಂ |
ಸುರೇಶ್ ಕುಮಾರ್ ಶೆಟ್ಕಾರ್ | ಜಹೀರಾಬಾದ್ | ತೆಲಂಗಾಣ |
ರಘುವೀರ್ ಕುಂದೂರು | ನಲ್ಗೊಂಡ | ತೆಲಂಗಾಣ |
ಚಲ್ಲಾ ವಂಶಿ ಚಂದ್ ರೆಡ್ಡಿ | ಮಹೆಬೂಬ್ನಗರ | ತೆಲಂಗಾಣ |
ಬಲರಾಮ್ ನಾಯ್ಕ ಪೋರಿಕ | ಮಹಬೂಬಾಬಾದ್ | ತೆಲಂಗಾಣ |
ಆಶಿಶ್ ಕುಮಾರ್ ಸಹಾ | ತ್ರಿಪುರ ಪಶ್ಚಿಮ | ತ್ರಿಪುರಾ |
