Congress sparks row: ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಭೂಮಿ ಕೊಟ್ಟದ್ದು ನಿಜವಾ? ಯಾರು ಏನು ಹೇಳಿದ್ದಾರೆ?
Explainer Congress sparks row: ಉಡುಪಿ ಕೃಷ್ಣಮಠಕ್ಕೆ ಮುಸ್ಲಿಂ ರಾಜ ಜಮೀನು ಕೊಟ್ಟಿದ್ದ ಎಂಬ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಭೂಮಿ ಕೊಟ್ಟದ್ದು ನಿಜವಾ? ಯಾರು ಏನು ಹೇಳಿದ್ದಾರೆ? ಏನಿದು ವಿವಾದ- ಇಲ್ಲಿದೆ ವಿವರ.
ಉಡುಪಿ ಕೃಷ್ಣಮಠಕ್ಕೆ ಮುಸ್ಲಿಂ ರಾಜ ಜಮೀನು ಕೊಟ್ಟಿದ್ದ ಎಂಬ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿಕೆ ವಿವಾದಕ್ಕೀಡಾಗಿದ್ದು, ರಾಜ್ಯದ ಗಮನಸೆಳೆದಿದೆ. ಈ ವಿಚಾರವಾಗಿ ಪ್ರತಿ ಹೇಳಿಕೆಗಳು, ಸ್ಪಷ್ಟೀಕರಣವೂ ಬಂದಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡುತ್ತ, ಉಡುಪಿ ಕೃಷ್ಣಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು ಎಂದು ಹೇಳಿದ್ದರು. ಅದರ ವಿಡಿಯೋ ವೈರಲ್ ಆಗಿದ್ದು, ವಾಟ್ಸ್ಆಪ್ಗಳಲ್ಲಿ ಹರಿದಾಡುತ್ತಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂಡಬಿದಿರೆಯ ನೂರಾನಿ ನವೀಕೃತ ಮಸೀದಿಯಲ್ಲಿ ಫೆ.26ರಂದು ಆಯೋಜಿಸಿದ್ದ 'ನಮ್ಮೂರ ಮಸೀದಿ ನೋಡ ಬನ್ನಿ' ಕಾರ್ಯಕ್ರಮದಲ್ಲಿ ಮಿಥನ್ ರೈ ಸೌಹಾರ್ದದ ವಿಚಾರ ಪ್ರಸ್ತಾಪಿಸುತ್ತ ಈ ಮಾತುಗಳನ್ನಾಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದದ ಇತಿಹಾಸ ಹೊಂದಿದೆ. ಬಪ್ಪನಾಡು ಕ್ಷೇತ್ರದ ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತ್ತಾರಿನಲ್ಲಿನ ಕೊರಗಜ್ಜನ ಕಟ್ಟೆಗೆ ಅರ್ಚಕ ಮುಸ್ಲಿಂ ಸಮುದಾಯದವರು, ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಸರ್ವಧರ್ಮದವರು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿದ್ದರು.
ಮಿಥುನ್ ರೈ ಅವರ ಭಾಷಣದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೇ ಅಲ್ಲ, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.
ಮಿಥುನ್ ರೈ ಅವರ ವಿಡಿಯೋ ತುಣುಕು ವೈರಲ್ ಆದ ಬಳಿಕ ಉಡುಪಿ ಶಾಸಕ ರಘುಪತಿ ಭಟ್ ಟ್ವೀಟ್ ಮಾಡಿ ಮಿಥುನ್ ರೈ ಅವರನ್ನು ಪ್ರಶ್ನಿಸಿದ್ದು ಹೀಗೆ..
ಮಠ ಕಟ್ಟಲು ಜಾಗ ಕೊಟ್ಟಿದ್ದು, ಮುಸ್ಲಿಂ ರಾಜು ಎನ್ನುವ ಪೇಜಾವರ ಮಠದ ಈಗಿನ ಶ್ರೀಗಳ ಗುರುಗಳು ನೀಡಿದ ಹೇಳಿಕೆಯ ಪತ್ರಿಕಾ ವರದಿಯೊಂದರ ತುಣುಕು ಕೂಡ ವೈರಲ್ ಆಗಿದೆ. ಆ ವರದಿಯ ತುಣುಕಿನ ಹೆಡ್ಡಿಂಗ್ ಮಾತ್ರ “ಮಠ ಕಟ್ಟಲು ಜಾಗಕೊಟ್ಟದ್ದು ಮುಸ್ಲಿಂ ರಾಜ” ಎಂಬ ಉಲ್ಲೇಖ ಬಿಟ್ಟರೆ ವರದಿಯ ಮೊದಲ ಭಾಗದಲ್ಲಿ ಆ ಕುರಿತು ವಿವರ ಇಲ್ಲ. ವರದಿಯ ಮುಂದುವರಿದ ಭಾಗದಲ್ಲಿ ಏನಿದೆ? ಯಾವ ಪತ್ರಿಕೆಯ ವರದಿ ಎಂಬಿತ್ಯಾದ ವಿವರ ಲಭ್ಯವಾಗಿಲ್ಲ.
ಮಠದ ದಾಖಲೆಗಳ ಪ್ರಕಾರ ಪೇಜಾವರ ಶ್ರೀಗಳು ನೀಡಿದ ಸ್ಪಷ್ಟೀಕರಣ ಏನು?
ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಪೂಜೆ ನೆರವೇರಿಸುವ ಹಕ್ಕು ಹೊಂದಿರುವ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ಮಿಥುನ್ ರೈ ಯಾವ ಮುಸ್ಲಿಂ ರಾಜನನ್ನು ಉಲ್ಲೇಖಿಸಿದ್ದಾರೋ ತಿಳಿಯದು. ರಾಮಭೋಜ ಎಂಬ ಅರಸನು ಉಡುಪಿಯ ಅನಂತೇಶ್ವರ ಹಾಗೂ ಕೃಷ್ಣ ಮಠದ ಸನ್ನಿಧಾನಕ್ಕೆ ಭೂಮಿ ನೀಡಿರುವುದಕ್ಕೆ ಆಧಾರಗಳಿವೆ.
ಹಿಂದೊಮ್ಮೆ ಮಧ್ವಾಚಾರ್ಯರು ಶಿಷ್ಯರೊಡನೆ ಬದ್ರಿ ಯಾತ್ರೆಗೆ ಹೊರಟಿದ್ದರು. ಆ ಸಂದರ್ಭದಲ್ಲಿ ಗಂಗಾನದಿ ದಾಟುವಾಗ ಮುಸ್ಲಿಂ ರಾಜನೊಬ್ಬನ ಸೈನಿಕರು ಇವರತ್ತ ಓಡಿಬಂದಾಗ ಮಧ್ವಾಚಾರ್ಯರು ಸ್ವಲ್ಪವೂ ಅಳುಕಿರಲಿಲ್ಲ. ಹೆದರದೇ ಆ ಮುಸ್ಲಿಂ ರಾಜನ ಸೈನಿಕರಿಗೆ ತಿಳಿವಳಿಕೆ ನೀಡಿದ್ದರು. ಆಗ ಆಚಾರ್ಯರ ವ್ಯಕ್ತಿತ್ವ ಕಂಡು ಆ ಮುಸ್ಲಿಂ ರಾಜ ಅಲ್ಲಿನ ಅರ್ಧ ರಾಜ್ಯ ದಾನ ಮಾಡುತ್ತಾನೆ. ಅದನ್ನು ನಮ್ಮ ಗುರುಗಳು ಉಲ್ಲೇಖ ಮಾಡಿದ್ದಾರೆಯೇ ಹೊರತು, ಉಡುಪಿ ಮಠದ ಜಾಗವನ್ನು ಮುಸ್ಲಿಂ ರಾಜ ನೀಡಿದ್ದು ಎಂದು ಹೇಳಿದ್ದಲ್ಲ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.