ಚಿಕ್ಕಬಳ್ಳಾಪುರದಲ್ಲಿ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು; ಹರಿಯಾಣ, ರಾಜಸ್ಥಾನದಲ್ಲಿ ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಬಳ್ಳಾಪುರದಲ್ಲಿ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು; ಹರಿಯಾಣ, ರಾಜಸ್ಥಾನದಲ್ಲಿ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರದಲ್ಲಿ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು; ಹರಿಯಾಣ, ರಾಜಸ್ಥಾನದಲ್ಲಿ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಬರೋಬ್ಬರಿ 4.5 ಕೋಟಿ ಮೌಲ್ಯದ 5,140 ಮೊಬೈಲ್ ಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಹರಿಯಾಣ ಮತ್ತು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ 4.5 ಕೋಟಿ ರೂ ಮೌಲ್ಯದ 5140 ಮೊಬೈಲ್ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ

ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಹಾಗೂ ಜಿಲ್ಲೆಯ ಪೇರಸಂದ್ರ ಠಾಣೆ ಪೊಲೀಸರು ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ 5,140 ಮೊಬೈಲ್ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸಿದ್ದಾರೆ. ಹರಿಯಾಣ ಮತ್ತು ರಾಜಸ್ಥಾನದ ಮೇವಾತ್ ಪ್ರದೇಶದ ನಿವಾಸಿಗಳಾದ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕಳೆದ ನವೆಂಬರ್ ನಲ್ಲಿ ಟ್ರಕ್ ವೊಂದು ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ- 44 ರ ಮೂಲಕ ಬೆಂಗಳೂರಿಗೆ ಆಗಮಿಸುತ್ತಿತ್ತು. ಬೆಂಗಳೂರು ತಲುಪಲು ಕೇವಲ 50 ಕಿಮೀ ಮಾತ್ರ ಬಾಕಿ ಇತ್ತು, ಆದರೆ 24 ಗಂಟೆ ಕಳೆದರೂ ಬೆಂಗಳೂರು ತಲುಪಲೇ ಇಲ್ಲ.

ಕಂಪನಿಯವರು ಜಿಪಿಎಸ್ ಪರಿಶೀಲಿಸಿದಾಗ ಟ್ರಕ್ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಂತಿತ್ತು. ಈ ಟ್ರಕ್‌ ನಲ್ಲಿ 6,640 ಮೊಬೈಲ್ ಗಳನ್ನು ಸಾಗಿಸುತ್ತಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಟ್ರಕ್ ನಿಂತಲ್ಲೇ ನಿಂತಿದೆಯಾದರೂ ಚಾಲಕ ನಾಪತ್ತೆಯಾಗಿದ್ದ. ಚಾಲಕ ಕುಳಿತುಕೊಳ್ಳುವ ಕ್ಯಾಬಿನ್ ನಿಂದ ರಂದ್ರ ಕೊರೆದು ಮೊಬೈಲ್‌ ಗಳನ್ನು ಕಳವು ಮಾಡಿ ಮತ್ತೊಂದು ಟ್ರಕ್ ಗೆ ತುಂಬಿಕೊಂಡು ಹೋಗಿರುವುದು ಪತ್ತೆಯಾಗಿತ್ತು. 6640 ಮೊಬೈಲ್ ಗಳ ಪೈಕಿ 5,140 ಮೊಬೈಲ್ ಗಳು ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ ಗಳು ಟ್ರಕ್ ನಲ್ಲೇ ಉಳಿದುಕೊಂಡಿದ್ದವು. ಸೇಫ್ ಸೀಡ್ ಕ್ಯಾರಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ಪದ್ಮನಾಬ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. 3 ಕೋಟಿ ರೂ. ಮೌಲ್ಯದ ರೆಡ್‌ ಮಿ ಮೊಬೈಲ್ ಗಳ 170 ಬಾಕ್ಸ್‌ಗಳು (ಒಟ್ಟು 3400 ಮೊಬೈಲ್ ಫೋನ್‌) ಮತ್ತು 163 ಬಾಕ್ಸ್‌ಗಳ ಪೊಕೊ ಮೊಬೈಲ್ (ಒಟ್ಟು 3260 ಮೊಬೈಲ್‌ ಫೋನ್) ಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದರು.

ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಹಾಗೂ ಪೇರೇಸಂದ್ರ ಪೊಲೀಸರು ವಿವಿಧ ರಾಜ್ಯಗಳಲ್ಲಿ ತನಿಖೆ ನಡೆಸಿ ಕುಖ್ಯಾತ ಏಳು ಜನ ದರೋಡೆಕೊರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ಸ್‌ಪೆಕ್ಟರ್ ನಯಾಜ್ ಬೇಗ್ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣವನ್ನು ಬೇಧಿಸಿದೆ. ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮಹಮದ್ ಮುಸ್ತಾಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಅವರನ್ನು ಬಂಧಿಸಿದ್ದಾರೆ. ಇವರಿಂದ ಮೊಬೈಲ್ ಸಾಗಿಸಲು ಬಳಸಿದ್ದ ಟ್ರಕ್ ಸೇರಿದಂತೆ ಕಳವು ಮಾಡಿದ್ದ 5,140 ಮೊಬೈಲ್ ಗಳ ಪೈಕಿ 56 ಮೊಬೈಲ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಮೊಬೈಲ್ ಗಳನ್ನು ಕಳ್ಳರು ಆಗಲೇ ದೆಹಲಿಯಲ್ಲಿ ಮಾರಾಟ ಮಾಡಿದ್ದಾರೆ.

4.5 ಕೋಟಿ ಮೌಲ್ಯದ ಮೊಬೈಲ್ ಗಳನ್ನು ಕೇವಲ 90 ಲಕ್ಷ ರೂಗೆ ಮಾರಾಟ

ಈ ಮೊಬೈಲ್ ಗಳು ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗಿವೆ. ಸುಮಾರು 4.5 ಕೋಟಿ ಮೌಲ್ಯದ ಮೊಬೈಲ್ ಗಳನ್ನು ಕಳ್ಳರು ಕೇವಲ 90 ಲಕ್ಷ ರೂ.ಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳ ಖಾತೆಯಲ್ಲಿದ್ದ 20 ಲಕ್ಷ ಹಣವನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹರಿಯಾಣದ ಪಲ್ವಾಲಾ ಜಿಲ್ಲೆಯ ಆಲಿಮಿಯೋ ಗ್ರಾಮದ ಕಳ್ಳರನ್ನು ಬಂಧಿಸಲು ತೆರಳಿದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದರು. ಕೊನೆಗೂ ಹರಸಹಾಸ ಪಟ್ಟು ಕಳ್ಳರನ್ನು ಬಂಧಿಸಿ ಕರೆತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ದರೋಡೆ ಪ್ರಕರಣದ ಪ್ರಮುಖ ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ 9 ಕೋಟಿ ರೂ ಮೌಲ್ಯದ ಐಪೋನ್ ಮೊಬೈಲ್ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರಿಂದ ಪಶ್ಚಿಮ ಬಂಗಾಳದ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಈ ಪ್ರಕರಣವನ್ನು ಬೇಧಿಸಿದ ಕರ್ನಾಟಕದ ಪೊಲೀಸರಿಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ಆರೋಪಿಗಳು ಹರಿಯಾಣ ಮತ್ತು ರಾಜಸ್ಥಾನದ ನಿವಾಸಿಗಳಾಗಿದ್ದರಿಂದ ಈ ಪ್ರಕರಣವನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಮತ್ತು ಸರ್ಕಲ್ ಇನ್‌ ಸ್ಪೆಕ್ಟರ್ ಸೂರ್ಯ ಪ್ರಕಾಶ್ ನೇತೃತ್ವದ ಸಿಇಎನ್ ಪೊಲೀಸ್‌ ತಂಡಕ್ಕೆ ವರ್ಗಾಯಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.