ಚಿನ್ನ ಕಳ್ಳಸಾಗಣೆಗೆ ಆಫ್ರಿಕಾ ನಂಟು ಶಂಕೆ: ಆಫ್ರಿಕಾದಿಂದ ದುಬೈ ಮೂಲಕ ಭಾರತಕ್ಕೆ ಸಾಗಣೆ; ಇಂಟರ್ ಪೋಲ್ ನಿಂದ ಮಾಹಿತಿ ಕೇಳಿದ ಸಿಬಿಐ
ನಟಿ ರನ್ಯಾ ರಾವ್ ಮಾತ್ರವಲ್ಲದೆ ಇತರರೂ ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗುತ್ತಿದೆ. ಕಳ್ಳ ಸಾಗಣೆ ಮಾಡುವವರು ಆಫ್ರಿಕಾ ದೇಶಗಳಿಂದ ದುಬೈ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಶಂಕೆ ಉಂಟಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ. ನಟಿ ರನ್ಯಾ ರಾವ್ ಮಾತ್ರವಲ್ಲದೆ ಇತರರೂ ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಿರುವ ಮಾಹಿತಿ ಲಭ್ಯವಾಗುತ್ತಿದೆ. ಕಳ್ಳ ಸಾಗಣೆ ಮಾಡುವವರು ಆಫ್ರಿಕಾ ದೇಶಗಳಿಂದ ದುಬೈ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಶಂಕೆ ಉಂಟಾಗಿದೆ. ರನ್ಯಾ ರಾವ್ ಮಾದರಿಯಲ್ಲೇ ಚಿನ್ನ ಕಳ್ಳ ಸಾಗಣೆ ಮಾಡಲು ಯತ್ನಿಸಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಜಾಂಬಿಯಾ ದೇಶದಿಂದ ದುಬೈ ಮೂಲಕ ಬೆಂಗಳೂರಿಗೆ 7 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು, ಜಾಂಬಿಯಾ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಇಂಟರ್ ಪೋಲ್ಗೆ ಸಿಬಿಐ ಪತ್ರ ಬರೆದಿದೆ.
ಜಾಂಬಿಯಾದ ರಾಜಧಾನಿ ಲೂಸಾಕದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಏಪ್ರಿಲ್ 19ರಂದು 27 ವರ್ಷದ ಭಾರತೀಯನನ್ನು ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಭಾರತೀಯನಿಂದ ತಲಾ 1 ಕೆ.ಜಿ ತೂಕದ ಏಳು ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ವ್ಯಕ್ತಿ ಲೂಸಾಕದಿಂದ ದುಬೈಗೆ ವಿಮಾನಯಾನ ಟಿಕೆಟ್ ಖರೀದಿಸಿದ್ದು, ಅಲ್ಲಿಂದ ಬೆಂಗಳೂರಿಗೆ ಟಿಕೆಟ್ ಕಾಯ್ದಿರಿಸಿದ್ದ. ಈತನ ಹಿಂದೆ ದೊಡ್ಡ ಕಳ್ಳಸಾಗಣೆ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆಯನ್ನು ಕೈಗೊಳ್ಳಲು ಇಂಟರ್ಪೋಲ್ನ ನೆರವು ಕೇಳಲಾಗಿದೆ ಎಂದು ಜಾಂಬಿಯಾ ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾಂಬಿಯಾದಲ್ಲಿ ಬಂಧಿಸಲ್ಪಟ್ಟಿರುವ ಭಾರತೀಯ ಮೂಲದ ವ್ಯಕ್ತಿ, ಆತನ ವಿವಿರ ಮತ್ತು ವಿಮಾನ ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವಂತೆ ಇಂಟರ್ ಪೋಲ್ಗೆ ಮನವಿ ಸಲ್ಲಿಸಲಾಗಿದೆ. ಜಾಂಬಿಯಾ ಕಸ್ಟಮ್ಸ್ ಅಧಿಕಾರಿಗಳು ಆ ವ್ಯಕ್ತಿಯ ವಿವರಗಳನ್ನು ಈಗಾಗಲೇ ಇಂಟರ್ ಪೋಲ್ ಜತೆಗೆ ಹಂಚಿಕೊಂಡಿದೆ. ಆ ಮಹಿತಿಗಳೆಲ್ಲವೂ ಶೀಘ್ರವೇ ಸಿಬಿಐ ಅಧಿಕಾರಿಗಳ ಕೈ ತಲುಪಲಿದೆ ಎಂದು ಮೂಲಗಳು ಹೇಳಿವೆ. ಚಿನ್ನ ಕಳ್ಳಸಾಗಣೆ ಆರೋಪದಡಿಯಲ್ಲಿ ಬೆಂಗಳೂರಿನಲ್ಲಿ ನಟಿ ರನ್ಯಾ ರಾವ್ ಮತ್ತು ಮುಂಬೈನಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಚಿನ್ನವನ್ನು ಆಫ್ರಿಕಾದಿಂದ ದುಬೈಗೆ ಸಾಗಿಸಿ ಅಲ್ಲಿಂದ ಭಾರತಕ್ಕೆ ಸಾಗಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಜಾಂಬಿಯಾದಲ್ಲಿ ದಾಖಲಾದ ಪ್ರಕರಣಕ್ಕೂ, ರನ್ಯಾ ರಾವ್ ಮತ್ತಿತರ ಪ್ರಕರಣಗಳಿಗೂ ಸಂಬಂಧ ಇದೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾರ್ಚ್ ತಿಂಗಳಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರನ್ಯಾ ರಾವ್ರನ್ನು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಬಂಧಿಸಿತ್ತು. ಫೆಬ್ರುವರಿ ಕೊನೆಯ ವಾರದಲ್ಲಿ ಅದೇ ರೀತಿ ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಡಿಆರ್ಐ ಬಂಧಿಸಿತ್ತು. ಈ ಎರಡೂ ಪ್ರಕರಣದಲ್ಲಿ ತನಿಖೆಗೆ ನೆರವು ನೀಡುವಂತೆ ಡಿಆರ್ಐ ಸಿಬಿಐಗೆ ಪತ್ರ ಬರೆದಿತ್ತು. ಕಳ್ಳಸಾಗಣೆಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಕಸ್ಟಮ್ಸ್ ಅಧಿಕಾರಿಗಳ ಪಾತ್ರವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಕೈಗೊಂಡಿತ್ತು. ಅನುಮಾನದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಮತ್ತು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಕಸ್ಟಮ್ಸ್ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಆಫ್ರಿಕಾದಲ್ಲಿ ಚಿನ್ನ ಖರೀದಿಸಿ, ದುಬೈ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಸಾಧ್ಯತೆಗಳೇ ಹೆಚ್ಚು ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ
ಚಿನ್ನ ಕಳ್ಳ ಸಾಗಣೆ: ರನ್ಯಾ ರಾವ್ ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ದುಬೈನಿಂದ ಭಾರತಕ್ಕೆ ನಿರಂತರವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ನಟಿ ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಅವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ರನ್ಯಾ ರಾವ್ ಮತ್ತು ತರುಣ್ ರಾಜ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. ರನ್ಯಾ ರಾವ್ ವಿರುದ್ಧ ಸೀಮಾ ಶುಲ್ಕ ಕಾಯ್ದೆ–1962ರ ಕಲಂ 135 (1) (ಎ) ಮತ್ತು 135(1) (ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯಗಳು ಮಾರ್ಚ್ 14 ಮತ್ತು 27 ರಂದು ಕ್ರಮವಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು. ನಂತರ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ರನ್ಯಾ ಅವರನ್ನು ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ಆಕೆಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ರನ್ಯಾ ನಿವಾಸದಿಂದ 2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ.ನಗದು ಜಪ್ತಿ ಮಾಡಲಾಗಿತ್ತು. ರನ್ಯಾ ಅಪಾರ ಪ್ರಮಾಣದ ಚಿನ್ನವನ್ನು ಕಳ್ಳ ಸಾಗಣೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ವರದಿ: ಎಚ್. ಮಾರುತಿ, ಬೆಂಗಳೂರು