ದುಪ್ಪಟ್ಟು ಲಾಭದ ಆಸೆ; 20 ಮಂದಿಗೆ 84 ಲಕ್ಷ ರೂ ವಂಚಿಸಿದ ಖದೀಮರು; ದ್ವಿಚಕ್ರ ವಾಹನ ಕಳ್ಳರ ಬಂಧನ; 35 ಲಕ್ಷ ರೂ ಮೌಲ್ಯದ 25 ವಾಹನ ಜಪ್ತಿ
ಕನ್ನಡ ಸುದ್ದಿ  /  ಕರ್ನಾಟಕ  /  ದುಪ್ಪಟ್ಟು ಲಾಭದ ಆಸೆ; 20 ಮಂದಿಗೆ 84 ಲಕ್ಷ ರೂ ವಂಚಿಸಿದ ಖದೀಮರು; ದ್ವಿಚಕ್ರ ವಾಹನ ಕಳ್ಳರ ಬಂಧನ; 35 ಲಕ್ಷ ರೂ ಮೌಲ್ಯದ 25 ವಾಹನ ಜಪ್ತಿ

ದುಪ್ಪಟ್ಟು ಲಾಭದ ಆಸೆ; 20 ಮಂದಿಗೆ 84 ಲಕ್ಷ ರೂ ವಂಚಿಸಿದ ಖದೀಮರು; ದ್ವಿಚಕ್ರ ವಾಹನ ಕಳ್ಳರ ಬಂಧನ; 35 ಲಕ್ಷ ರೂ ಮೌಲ್ಯದ 25 ವಾಹನ ಜಪ್ತಿ

ಮನೆಗಳ ಮುಂಬಾಗದಲ್ಲಿ ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ: ಎಚ್‌. ಮಾರುತಿ, ಬೆಂಗಳೂರು)

ದುಪ್ಪಟ್ಟು ಲಾಭದ ಆಸೆ; 20 ಮಂದಿಗೆ 84 ಲಕ್ಷ ರೂ ವಂಚಿಸಿದ ಖದೀಮರು; ದ್ವಿಚಕ್ರ ವಾಹನ ಕಳ್ಳರ ಬಂಧನ; 35 ಲಕ್ಷ ರೂ ಮೌಲ್ಯದ 25 ವಾಹನ ಜಪ್ತಿ
ದುಪ್ಪಟ್ಟು ಲಾಭದ ಆಸೆ; 20 ಮಂದಿಗೆ 84 ಲಕ್ಷ ರೂ ವಂಚಿಸಿದ ಖದೀಮರು; ದ್ವಿಚಕ್ರ ವಾಹನ ಕಳ್ಳರ ಬಂಧನ; 35 ಲಕ್ಷ ರೂ ಮೌಲ್ಯದ 25 ವಾಹನ ಜಪ್ತಿ

ಬೆಂಗಳೂರು: ದುಪ್ಪಟ್ಟು ಲಾಭ ನೀಡುವುದಾಗಿ ನಂಬಿಸಿ, ಸುಮಾರು 20 ಕ್ಕೂ ಹೆಚ್ಚು ಗ್ರಾಹಕರಿಂದ ಸುಮಾರು ರೂ. 84 ಲಕ್ಷ ಪಡೆದು ವಂಚಿಸಿದ ಆರೋಪದಡಿಯಲ್ಲಿ ಇಬ್ಬರ ವಿರುದ್ಧ ಉತ್ತರ ವಿಭಾಗದ ಸೈಬರ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇವರ ವಿರುದ್ಧ ಹೆಸರಘಟ್ಟ ಮುಖ್ಯ ರಸ್ತೆ ಎಜಿಬಿ ಲೇಔಟ್‌ ನಿವಾಸಿ ಅಶೋಕ್ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪರಂ ಸಕ್ಲೇಜಾ ಮತ್ತು ಲತಾ ಎಂಬುವವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ ಎಸ್‌ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಗುರು ಮಾರ್ಕೆಟಿಂಗ್ ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಅಶೋಕ್ ಗೆ ಆರೋಪಿಗಳ ಪರಿಚಯವಾಗಿದೆ. ಎಸ್‌ಜೆಆರ್‌ಇ ಎಂಬ ಕಂಪನಿ ದುಪ್ಪಟ್ಟು ಲಾಭ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ. ಹಣ ಹೂಡಿಕೆ ಮಾಡಿಸಿದರೆ ಸಂಬಳದ ಜತೆಗೆ ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದಾರೆ. ಇದಕ್ಕೆ ಅಶೋಕ್ ಒಪ್ಪಿಕೊಂಡಿದ್ದಾರೆ. ನಂತರ ಆರೋಪಿಗಳು ಕಂಪನಿಯ ಸ್ಕೀಮ್‌ ಗಳನ್ನು ಕುರಿತು ತಿಳಿಸಿಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಂಪನಿ ಹೆಸರಿನಲ್ಲಿ ಆರೋಪಿಗಳು ನಕಲಿ ಗ್ರೂಪ್ ರಚಿಸಿದ್ದರು. ಅಶೋಕ್, ತನ್ನ ಸ್ನೇಹಿತರು, ಸಹದ್ಯೋಗಿಗಳು ಮತ್ತು ಬಂಧುಗಳಿಗೆ ಸ್ಕೀಂಗಳನ್ನು ಕುರಿತು ಪುಸಲಾಯಿಸಿದ್ದಾರೆ. ಈ ರೀತಿ 20ಕ್ಕೂ ಹೆಚ್ಚು ಮಂದಿಯಿಂದ ಸುಮಾರು ರೂ. 89 ಲಕ್ಷ ಸಂಗ್ರಹಿಸಿ ನಗದು ರೂಪದಲ್ಲಿ ಆರೋಪಿಗಳಿಗೆ ನೀಡಿದ್ದಾರೆ. ಹಣ ಪಡದ ಆರೋಪಿಗಳು ಹಣ ನೀಡದೆ, ಮೊಬೈಲ್ ಕರೆಗೂ ಸಿಗದೆ ಪರಾರಿಯಾಗಿದ್ದಾರೆ ಎಂದು ಅಶೋಕ್‌ ದೂರಿನಲ್ಲಿ ಆರೋಪಿಸಿದ್ದಾರೆ.

ದ್ವಿಚಕ್ರ ವಾಹನ ಕಳ್ಳರ ಬಂಧನ; ರೂ.35 ಲಕ್ಷ ಮೌಲ್ಯದ 25 ವಾಹನ ಜಪ್ತಿ

ಮನೆಗಳ ಮುಂಬಾಗದಲ್ಲಿ ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ಕುಮಾ‌ರ್, ಮೊಹಮ್ಮದ್ ಬಂಧಿತ ಆರೋಪಿಗಳು. ಇವರು ಕಳವು ಮಾಡಿದ್ದ ವಾಹನಗಳನ್ನು ಖರೀದಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ರೂ.35 ಲಕ್ಷ ಮೌಲ್ಯದ 25 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣಾ ವ್ಯಾಪ್ತಿಯ ಉದಯನಗರ ಗ್ರಾಮದ ನಿವಾಸಿಯೊಬ್ಬರು ಮನೆ ಮುಂದೆ ನಿಲ್ಲಿಸಿದ್ದ ವಾಹನ ಕಳವಾಗಿದೆ ಎಂದು ಮಾರ್ಚ್ 6ರಂದು ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರನ್ನೂ ದ್ವಿಚಕ್ರ ವಾಹನ ಸಹಿತ ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ನಗರದ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಕಳವು ಮಾಡಿದ ದ್ವಿಚಕ್ರ ವಾಹನಗಳ ಪೈಕಿ 12 ವಾಹನವನ್ನು ಹಾವೇರಿಯ ಕರ್ಜಗಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಆತನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕಳವು ಮಾಡಿದ ವಾಹನಗಳನ್ನು ಸಿಂಗಯ್ಯನ ಪಾಳ್ಯ ರಸ್ತೆ ಪಕ್ಕದ ಖಾಲಿ ಪ್ರದೇಶ ಹಾಗೂ ಡೀಸೆಲ್ ಶೆಡ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಬಂಧನದಿಂದ ಮಹದೇವಪುರ ಠಾಣೆಯ 6, ಎಚ್‌ ಎಸ್‌ ಆರ್ ಲೇಔಟ್ ಠಾಣೆಯ 3, ವೈಟ್‌ಫೀಲ್ಡ್ ಠಾಣೆಯ 2, ಎಚ್‌ಎಎಲ್ ಠಾಣೆ, ಆನೇಕಲ್ ಠಾಣೆ, ವರ್ತೂರು, ಗೋವಿಂದಪುರ, ಕುಮಾರಸ್ವಾಮಿ ಲೇಔಟ್, ಜೆ.ಪಿ.ನಗರ, ಅವಲಹಳ್ಳಿ, ಬಾಗಲೂರು, ಮಾರತ್‌ ಹಳ್ಳಿ ಪೊಲೀಸ್‌ ಠಾಣೆಗಳ ತಲಾ 1 ಹಾಗೂ ಮೈಸೂರು ನಗರ ಠಾಣೆಯ 1 ಪ್ರಕರಣ ಸೇರಿ 22 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ.

ಕಾಲು ಜಾರಿ ಟೆರೇಸ್‌ ನಿಂದ ಬಿದ್ದು ಅಮೆಜಾನ್‌ ಉದ್ಯೋಗಿ ಸಾವು

ಅಮೆಜಾನ್‌ ಕಂಪನಿಯ ಉದ್ಯೋಗಿಯೊಬ್ಬರು ಮನೆಯ ಟೆರೇಸ್‌ ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ದೇವಸಂದ್ರದ ನೇತ್ರಾವತಿ ಲೇ ಔಟ್‌ ನಲ್ಲಿ ನಡೆದಿದೆ. ದೇವಸಂದ್ರದ ನೇತ್ರಾವತಿ ಲೇಔಟ್ ನಿವಾಸಿ 38 ವರ್ಷದ ಗೋಪಾಲ್ ಸಿಂಗ್ ಮೃತ ದುರ್ದೈವಿ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್ ಅವರು ಕೆ.ಆರ್.ಪುರದ ನೇತ್ರಾವತಿ ಲೇ ಔಟ್‌ನಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರು. ತಡರಾತ್ರಿ ಸಹೋದರಿ ಮತ್ತು ಪಾಲಕರ ಜತೆ ಟೆರೇಸ್ ಮೇಲೆ ಗೋಪಾಲ್ ಸಿಂಗ್ ಮಾತನಾಡುತ್ತಾ ಕುಳಿತಿಕೊಂಡಿದ್ದರು. ಸ್ವಲ್ಪ ಹೊತ್ತಿನ ನಂತರ ಮೇಲಿನ ಬಾಗಿಲು ಹಾಕಿಕೊಂಡು ಬರುತ್ತೇನೆ. ನೀವು ಕೆಳಗೆ ಹೋಗಿ ಮಲಗಿಕೊಳ್ಳಿ ಎಂದು ಪೋಷಕರನ್ನು ಕೆಳಗೆ ಕಳುಹಿಸಿದ್ದರು. ಬಳಿಕ ಟೆರೇಸ್ ಮೇಲೆ ವಾಕಿಂಗ್‌ ಮಾಡುತ್ತಾ ಕಾಲು ಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಗೋಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಅವರ ಕುಟುಂಬದವರೇ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಸಾವಿನ ಬಗ್ಗೆ ತಮಗೆ ಅನುಮಾನಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವರದಿ: ಎಚ್‌. ಮಾರುತಿ, ಬೆಂಗಳೂರು

HT Kannada Desk