ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು
ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎಎಂಸಿ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಮುದ್ರಕ್ಕಿಳಿದು ನೀರುಪಾಲಾಗಿದ್ದಾರೆ. ಸುರತ್ಕಲ್ ಹೊಸಬೆಟ್ಟು ಬೀಚ್ ಬಳಿ ಕಡಲಿಗಿಳಿದ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳೂರು : ನಗರದ ಹೊರವಲಯದ ಸುರತ್ಕಲ್ನ ಹೊಸಬೆಟ್ಟು ಎಂಬಲ್ಲಿ ಕಡಲ ಕಿನಾರೆಗೆ ವಿಹಾರಕ್ಕೆಂದು ಬಂದ ಬೆಂಗಳೂರಿನ ಮೂವರು ಪ್ರವಾಸಿಗರು ಸಮುದ್ರ ಪಾಲಾಗಿದ್ದಾರೆ. ಬುಧವಾರ (ಜನವರಿ 8)ರಂದು ಮಧ್ಯಾಹ್ನ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಪರಮೇಶ್ವರ್, ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿಯ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ಎಂಬವರು ಈಜಾಡಲು ನೀರಿಗೆ ಇಳಿದಿದ್ದಾರೆ. ಆ ಸಂದರ್ಭದಲ್ಲಿ ಮಂಜುನಾಥ್, ಶಿವಕುಮಾರ್ ಹಾಗೂ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಶಿವಕುಮಾರ್ ಮತ್ತು ಸತ್ಯವೇಲು ಎಂಬವರ ಮೃತದೇಹ ದೊರಕಿದ್ದು, ಮಂಜುನಾಥ್ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿದೆ.ಇದೇ ವೇಳೆ ಪರಮೇಶ್ವರ್ ಅವರನ್ನು ರಕ್ಷಿಸಿರುವ ಸ್ಥಳೀಯ ಮೀನುಗಾರರು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರೆಲ್ಲರೂ ಬೆಂಗಳೂರಿನ ಎಎಂಸಿ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಮಂಗಳೂರು ಸಮೀಪ ಸುರತ್ಕಲ್ನ ಹೊಸಬೆಟ್ಟು ಬೀಚ್ ಬಳಿ ಪ್ರವಾಸಕ್ಕೆಂದು ಆಗಮಿಸಿದ ಪ್ರವಾಸಿಗರು, ನೀರಿನ ಆಳ ತಿಳಿಯದೆ ಕೊಚ್ಚಿಹೋಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.
ಮಂಗಳೂರಿನ ಹೊಟೇಲ್ವೊಂದರಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ, ಮಧ್ಯಾಹ್ನದ ವೇಳೆಗೆ ಸುರತ್ಕಲ್ ಬಳಿ ಬಂದಿದ್ದಾರೆ. ಸಮುದ್ರಕ್ಕೆ ಇಳಿದು ಆಡುತ್ತಿದ್ದ ಸಂದರ್ಭ ನಾಲ್ವರು ವಿದ್ಯಾರ್ಥಿಗಳು ಕೂಡಾ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ಮೀನುಗಾರರು ನಾಲ್ವರ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲೇ ಮೂವರು ಯುವಕರು ನೀರು ಪಾಲಾಗಿದ್ದರು. ಒಬ್ಬರನ್ನು ಮಾತ್ರವೇ ರಕ್ಷಿಸಲು ಸಾಧ್ಯವಾಗಿದೆ.
ಮಂಗಳವಾರವೇ ಬೆಂಗಳೂರಿನಿಂದ ಬಂದಿದ್ದರು
ಪ್ರವಾಸಿಗರು ಕಾರಿನಲ್ಲಿ ಕಳೆದ ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಬಂದಿದ್ದರು. ಬುಧವಾರ ಸುಮಾರು 12.30ರ ವೇಳೆಗೆ ಸುರತ್ಕಲ್ ಹೊಸಬೆಟ್ಟು ಬೀಚ್ ಬಳಿ ಆಗಮಿಸಿದ್ದಾರೆ. ಅಲ್ಲಿನ ಜೆಟ್ಟಿ ಬಳಿ ಇರುವ ಬೀಚ್ಗೆ ಬಂದಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಸಿ ಸ್ಥಳದಲ್ಲಿ ಸಮುದ್ರ ಅಥವಾ ನೀರಿಗಿಳಿಯುವಾಗ ಎಚ್ಚರ ವಹಿಸುವುದು ಮುಖ್ಯ. ನೀರಿನ ಆಳ ಅರಿಯದೆ ಈಜು ಬಂದರೂ ನೀರಿಗಿಳಿಯುವುದು ಸುರಕ್ಷಿತವಲ್ಲ. ಅದರಲ್ಲೂ ಕಡಲಿಗೆ ಇಳಿಯುವ ಮುನ್ನ, ಆ ಪ್ರದೇಶದ ಸೂಚನೆಗಳನ್ನು ಓದಿಕೊಂಡು ಅದರಂತೆ ನಡೆದುಕೊಳ್ಳಬೇಕು.