ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ನಿಧನ

ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ನಿಧನ

ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ನಿಧನ
ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ನಿಧನ

ಮಂಗಳೂರು: ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ (62) ಇಂದು (ಜನವರಿ 26) ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಇತ್ತೀಚೆಗೆ ಗಂಭೀರವಾಗಿತ್ತು. ರವಿವಾರ ಅಪರಾಹ್ನ ಬಾಳೇಪುಣಿಯ ಸ್ವಗೃಹದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೇಪುಣಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 26 ವರ್ಷಗಳ ಕಾಲ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಇಷ್ಟೇ ಅಲ್ಲದೆ ಮಂಗಳೂರು ಮಿತ್ರ, ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು.

ಅಕ್ಷರಸಂತ ಎಂದೇ ಪ್ರಖ್ಯಾತರಾದ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕನ್ನಡನಾಡಿಗೆ ಪರಿಚಯಿಸಿದ ಹಿರಿಮೆ ಇವರದ್ದು. ಪತ್ರಿಕಾರಂಗದಲ್ಲಿ ಇವರ ಸೇವೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಹಿರಿಯ ಪತ್ರಕರ್ತನ ಅಗಲಿಕೆಗೆ ಕರಾವಳಿ ಪತ್ರಿಕಾರಂಗದ ಹಲವರು ಸಂತಾಪ ಸೂಚಿಸಿದ್ದಾರೆ.

ಬಾಳೇಪುಣಿ ಅವರ ಕುರಿತು ಮಂಗಳೂರು ವಿವಿ ಪ್ರಸಾರಾಂಗದಲ್ಲಿ ಪ್ರಕಟವಾದ ಸಾಧಕರ ಕುರಿತ ಕೃತಿಯಲ್ಲಿ ಕಂಡುಬಂದ ಲೇಖನ ಇಲ್ಲಿದೆ.

ಇವರು ಬಾಳೇಪುಣಿ ಎಂದೇ ಪ್ರಸಿದ್ಧರು. ಆದರೆ, ಅದು ಅವರ 'ಬೈಲೈನ್'. ಹೆಸರು ಗುರುವಪ್ಪ ಎನ್.ಟಿ.ಬಾಳೇಪುಣಿ. ಹುಟ್ಟಿದ್ದು ಉಳ್ಳಾಲ (ಹಿಂದಿನ ಬಂಟ್ವಾಳ) ತಾಲೂಕಿನ ಬಾಳೇಪುಣಿ ಗ್ರಾಮದಲ್ಲಿ. ಊರಿನ ಹೆಸರೇ ಅವರ ಕಾವ್ಯನಾಮವಾಗಿ ಪ್ರಸಿದ್ಧಿ ಪಡೆದಿದೆ. 1963ರ ಜೂ.1ರಂದು ಜನಿಸಿದ ಬಾಳೇಪುಣಿ ದಿ.ಶ್ರೀ ನಾರ್ಯ ಐತ ಮೊಗೇರ-ದಿ.ಶ್ರೀಮತಿ ದೇಯಿ ದಂಪತಿಯ 9 ಮಂದಿ ಮಕ್ಕಳಲ್ಲಿ ಏಳನೆಯವರು. ಪ್ರಾಥಮಿಕ, ಮಾಧ್ಯಮಿಕ, ಪಿಯುಸಿ ಶಿಕ್ಷಣ ಹುಟ್ಟೂರು ಮುಡಿಪು ಪರಿಸರದಲ್ಲೇ ನಡೆಯಿತು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಪದವಿ (ಅಪೂರ್ಣ) ವ್ಯಾಸಂಗ ಮಾಡಿದರು.

ಕುಗ್ರಾಮವೊಂದರಿಂದ ಬಂದು, ಅಭಿವೃದ್ಧಿ ಪತ್ರಿಕೋದ್ಯಮವನ್ನು ವೃತ್ತಿಯಲ್ಲಿ ಸಾಕಾರಗೊಳಿಸಿ, ಅದೇ ಸಾರ್ಥಕತೆಯಲ್ಲಿ ಸುಮಾರು ಮೂರು ದಶಕವನ್ನು ಪತ್ರಿಕೋದ್ಯಮದಲ್ಲಿ ದಾಟಿ ಬಂದವರು. ಇಂದಿನ ಪೀಳಿಗೆಯ ಯುವ ಪತ್ರಕರ್ತರಿಗೆ ಗ್ರಾಮೀಣ ಪತ್ರಿಕೋದ್ಯಮ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಕುರಿತು ಸಮರ್ಥವಾಗಿ ಮಾರ್ಗದರ್ಶನ ನೀಡಬಲ್ಲ ಹಾಗೂ ಇದಮಿತ್ಥಂ ಎಂಬ ಹಾಗೆ ನಮ್ಮ ನಾಡಿನ ಅಭಿವೃದ್ಧಿ ಪರ ವಿಚಾರಗಳ ಕುರಿತ ಮಾಧ್ಯಮ ಹೊಂದಿರಬೇಕಾದ ದೃಷ್ಟಿಕೋನದ ಕುರಿತು ಖಚಿತವಾಗಿ ಮಾತನಾಡಬಲ್ಲವರು.

ಪತ್ರಿಕೋದ್ಯಮದ ಶಿಕ್ಷಣ ಜನಪ್ರಿಯವಾಗುವುದಕ್ಕೂ ಮೊದಲೇ ಎಳವೆಯಲ್ಲೇ ಪತ್ರಕರ್ತನಾಗುವ ಕನಸು ಕಂಡ ಬಾಳೇಪುಣಿ ಪರಿಶ್ರಮದಿಂದ ಅದನ್ನು ಸಾಧಿಸಿ, ವೃತ್ತಿ ಬದುಕಿನುದ್ದಕ್ಕೂ ಶುದ್ಧಹಸ್ತ ಹಾಗೂ ವಸ್ತುನಿಷ್ಠ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಉತ್ಪ್ರೇಕ್ಷೆಯ ಅಥವಾ ಹೊಗಳಿಕೆಯ ಸಾಲುಗಳಲ್ಲ, ಅವರ ಆಪ್ತ ಪತ್ರಕರ್ತರೆಲ್ಲರಿಗೂ ತಿಳಿದಿರುವ ವಿಚಾರ.

ಕೃಷಿಕರು, ಜನಪರ ಕೆಲಸ ಮಾಡಿದ ಅಧಿಕಾರಿಗಳು, ವ್ಯಸನಮಮುಕ್ತರು, ಸಮಾಜಮುಖಿ ಸಂತರು, ಸಾಧಕ ಗ್ರಾಮೀಣ ಮಹಿಳೆಯರು, ನಿಸ್ವಾರ್ಥಿ ಜನಸೇವಕರ ಕುರಿತು ಅವರು ಮಾಡಿರುವ ವರದಿಗಳು, ವರದಿಗಳ ಹಿನ್ನೆಲೆ ಹಾಗೂ ಅವುಗಳ ತದನಂತರದ ಬೆಳವಣಿಗೆಗಳು ಪತ್ರಿಕೋದ್ಯಮ ಕಲಿಯಬಯಸುವವರಿಗೆ ಅಧ್ಯಯನಯೋಗ್ಯ ಪಠ್ಯಗಳಂತೆಯೇ ಇವೆ. ಅಪರಾಧ, ರಾಜಕೀಯ, ಕ್ರೀಡೆ, ಮನರಂಜನೆ ಮತ್ತಿತರ ವರದಿಗಾರಿಕೆಗಳಲ್ಲಿ ಹೆಸರು ಮಾಡಿದವರು ಸಾಕಷ್ಟು ಮಂದಿ ಮಾಧ್ಯಮ ರಂಗದಲ್ಲಿ ಇದ್ದಾರೆ. ಆದರೆ, ಇವರ ನಡುವೆ ಅಪರೂಪದವರಾಗಿ ಸಾಕಷ್ಟು ಓಡಾಟ ಮತ್ತು ಅಧ್ಯಯನ ಬಯಸುವ ಅಭಿವೃದ್ಧಿ ಪತ್ರಿಕೋದ್ಯಮ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರು ಬಾಳೇಪುಣಿ.

ಬಾಳೇಪುಣಿ ಕಾಲೇಜು ವ್ಯಾಸಂಗದ ಬಳಿಕ ಕೆಲ ದಿನಗಳ ಕಾಲ ಅತಿಥಿ ಶಿಕ್ಷಕರಾಗಿ ವೃತ್ತಿ ಬದುಕು ಶುರು ಮಾಡಿದರು. ಬಳಿಕ ಪ್ರವೇಶಿಸಿದ್ದು ಶಂಕರ ಭಟ್ರ ಸಂಪಾದಕತ್ವದ 'ಅಮೃತ' ಸಾಪ್ತಾಹಿಕಕ್ಕೆ. ತಿಂಗಳಿಗೆ 500 ರು. ಸಂಬಳದಲ್ಲಿ ಶುರುವಾದ ವೃತ್ತಿ ಬದುಕು ನಂತರ 'ಚೇತನಾ', 'ದಿ ಗೋಲ್ಡ್', 'ಸಪ್ತಸಾರ', 'ಸುದ್ದಿ ಬಿಡುಗಡೆ', 'ರಸಸಂಜೆ' ಮತ್ತಿತರ ನಿಯತಕಾಲಿಕಗಳಲ್ಲಿ ಮುಂದುವರಿಯಿತು. ಪತ್ರಿಕೋದ್ಯಮದ ಅ..ಆ..ಇ..ಈ...ಗಳನ್ನು ಅವರು ರೂಢಿಸಿಕೊಂಡು ಪಳಗಲು ನೆರವಾಯಿತು.

ನಂತರ ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಕೆನರಾ ಟೈಂಸ್ ಬಳಗದ ಕರಾವಳಿ ಅಲೆ, ಕನ್ನಡ ಜನ ಅಂತರಂಗ, ಕೆನರಾ ಟೈಂಸ್ ಪತ್ರಿಕೆಗಳಲ್ಲಿ ಉಡುಪಿ, ಮಂಗಳೂರು, ಹುಬ್ಬಳ್ಳಿ ಹಾಗೂ ಬೆಂಗಳೂರು ಭಾಗದಿಂದ ಕರ್ತವ್ಯ ನಿರ್ವಹಿಸಿದರು. ನಂತರ 'ಮಂಗಳೂರು ಮಿತ್ರ' ಸಂಜೆ ಪತ್ರಿಕೆಯ ಉಪಸಂಪಾದಕ-ವರದಿಗಾರ ಹುದ್ದೆ ನಿಭಾಯಿಸಿದರು. ಅಲ್ಪ ಅವಧಿಗೆ 'ಸಂಯುಕ್ತ ಕರ್ನಾಟಕ' ಪತ್ರಿಕೆಗೆ ಮಂಗಳೂರು ವಿಶೇಷ ವರದಿಗಾರರೂ ಆಗಿದ್ದರು.

ಅಸಂಖ್ಯಾತ ವರದಿಗಳ ಕರ್ತೃ

ಪತ್ರಕರ್ತರ ವೃತ್ತಿ ಬದುಕಿನ ಪದಕಗಳೆಂದರೆ ಅವರಿಗೆ ಸಾರ್ಥಕತೆ ತಂದುಕೊಡುವ ವಿಶೇಷ ವರದಿಗಳು, ಅವು ಮೂಡಿಸುವ ಪರಿಣಾಮಗಳು ಹಾಗೂ ಜನಮಾನಸಕ್ಕೆ ಅದರ ತಲುಪುವಿಕೆ. ಬಾಳೇಪುಣಿ ಅವರು ಆರಂಭದ ದಿನಗಳಲ್ಲಿ ಸಿದ್ಧಪಡಿಸಿದ ಉಡುಪಿ ಭೂಹಗರಣ ತನಿಖಾ ವರದಿ, ಕೈದಿ ಭಾಸ್ಕರನ್ ನಾಯರ್ ಜೈಲಿನಿಂದ ಪರಾರಿ ಆಗಬಹುದಾದ ಸಾಧ್ಯತೆ ಕುರಿತು ಪ್ರಕಟಿಸಿದ ಮುನ್ನೆಚ್ಚರಿಕಾ ವರದಿಗಳು ಆ ಕಾಲದಲ್ಲಿ ಇಲಾಖೆ ಹಾಗೂ ಸದನದಲ್ಲಿ ಸದ್ದೆಬ್ಬಿಸಿದ ಭಾರೀ ವರದಿಗಳಾಗಿದ್ದವು. ಅಕ್ಷರ ಸಂತ ಹರೇಕಳ ಹಾಜಬ್ಬ, ಮೈಸೂರು ಪೊಲೀಸ್-ಪಬ್ಲಿಕ್ ಸ್ಕೂಲ್, ಲಾಯಿಲ ನ್ಯಾಪ್ಕಿನ್ ಘಟಕ, ದ.ಕ. ಜಿಲ್ಲಾ ಸಮಗ್ರ ಗಿರಿಜನ ಸಮನ್ವಯ ಯೋಜನೆಯ ಅವ್ಯವಹಾರಗಳ ಕುರಿತ ತನಿಖಾ ವರದಿಗಳು, ಉಡುಪಿ ಮತ್ತು ದ.ಕ. ಜಿಲ್ಲೆಗಳ ಕೆಲವು ಗ್ರಾಮ ಪಂಚಾಯಿತಿಗಳ ಸಾಧನೆಗಳ ಕುರಿತ ಧನಾತ್ಮಕ ವರದಿಗಳು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶೋಗಾಥೆಗಳು, ಸ್ವಚ್ಛತಾ ಆಂದೋಲನದ ವಿಶೇಷ ವರದಿಗಳು, ಎನ್.ಆರ್.ಎಲ್.ಎಂ. ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಯಶೋಗಾಥೆಗಳು, ಕೆಲವು ಮಾದರಿ ಸರ್ಕಾರಿ ಶಾಲೆಗಳ ಪರಿಚಯ ಸೇರಿದಂತೆ ಅಸಂಖ್ಯಾತ ಸರಣಿ ವರದಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. ಸಭೆ ಸಮಾರಂಭಗಳ ಯಾಂತ್ರಿಕ ವರದಿಗಳಿಗೆ ಸೀಮಿತರಾಗದ ಬಾಳೇಪುಣಿ ಅವರಿಗೆ ಜನಪ್ರಿಯತೆ ಕೊಟ್ಟದ್ದು, ಜನಪರವಾದ ಇಂತಹ ವಿಶೇಷ ವರದಿಗಳು.

ಒಬ್ಬ ಪತ್ರಕರ್ತ ಗ್ರಾಮೀಣ ಭಾಗಕ್ಕೆ ತೆರಳಿ ಮೂಲೆಯಲ್ಲಿದ್ದ ಸಾಧಕರನ್ನು ಹುಡುಕಿ ಮಾತನಾಡಿಸಿ ಪತ್ರಿಕೆಯಲ್ಲಿ ವರದಿ ಬರೆದಾಗ ಅದು ಕೇವಲ ರಾಜ್ಯಕ್ಕೆ, ರಾಷ್ಟ್ರಕ್ಕೆ ಅವರನ್ನು ಪರಿಚಯ ಮಾಡಿ ಕೊಡುವುದು ಮಾತ್ರವಲ್ಲ. ಸಾಕಷ್ಟು ಸಲ ಆ ವರದಿ ಅವರ ಬದುಕಿನ ದಾರಿಯನ್ನೇ ಬದಲಾಯಿಸುತ್ತದೆ. ಅವರ ಸ್ಫೂರ್ತಿಗಾಥೆ ಇನ್ನಷ್ಟು ಮಂದಿಯ ಸಾಧನೆಗೆ ಪ್ರೇರಣೆಯಾಗುತ್ತದೆ. ಅಂತಹ ನೂರಾರು ವರದಿಗಳು ಬಾಳೇಪುಣಿ ಲೇಖನಿಯಿಂದ ಪಡಿಮೂಡಿ ಪತ್ರಿಕೆಗಳಲ್ಲಿ ಅಚ್ಚಾಗಿ ಎಷ್ಟೋ ಸಾಧಕರನ್ನು ನಾಡಿಗೆ ಪರಿಚಯಿಸಿವೆ.

ಸುಮತಿ ಇಳಂತಿಲ, ಮಿಯ್ಯಾರಿನ ಮುಂಗುಲಿ ಕೊರಗ, ಮಳಲಿ ಚೀಂಕ್ರ ಪೂಜಾರಿ, ಕೌಕ್ರಾಡಿಯ ಸ್ವರ್ಣಲತಾ ಮತ್ತು ಸುಜಿ, ಇಳಂತಿಲದ ಕೂಸಪ್ಪ, ಮುಚ್ಚೂರಿನ ಸುದರ್ಶನ, ಪುತ್ತೂರಿನ ಬಡಿಲ ಹುಸೈನ್, ಕೊರಗ ಹುಡುಗಿ ಹೂಹಾಕುವಕಲ್ಲಿನ ಸುರೇಖಾ, ಲಾಯಿಲದ ಯಶೋಧಾ, ಅರಳದ ತುಂಗಮ್ಮ, ಮುಂಡರಗಿ ಮುರಡಿ ತಾಂಡಾದ ಶಂಕರ ದಾವಣಗೆರಿ, ಉಬರಡ್ಕ ಮಿತ್ತೂರಿನ ರವಿರಾಜ್, ಮಂಜೇಶ್ವರ ಮಜಿಬೈಲಿನ ಕಿರಣ್, ಇರಾ ತಾಳಿತ್ತಬೆಟ್ಟು ಮಾಯಿಲ, ಕಾಟಿಪಳ್ಳದ ಬರಿಗಾಲ ಸಮಾಜಸೇವಕ ಕೂಸಪ್ಪ ಶೆಟ್ಟಿಗಾರ್, ಮೂಡಬಿದಿರೆಯ ಯಶಸ್ವಿ ಉದ್ಯಮಿ ಗಣೇಶ್ ಕಾಮತ್, ಕಡೇಶಿವಾಲಯದ ಸ್ವಚ್ಛ ವಾಹಿನಿ ಸಾರಥಿ ಲಕ್ಷ್ಮೀ, ಗುತ್ತಿಗಾರಿನ ಕಮ್ಮಾರಿಕೆ ಕೌಶಲಯ ಲೀಲಾವತಿ, ವಿದ್ಯಾರ್ಥಿ ವೇತನ ಮಾಹಿತಿ ದಾಸೋಹದ ಸಿದ್ಧಕಟ್ಟೆ ಕರ್ಪೆಯ ನಾರಾಯಣ ನಾಯಕ್, ಭತ್ತದ ತಳಿ ಸಂರಕ್ಷಕ ಸಾಣೂರಿನ ಅಬೂಬಕರ್, ಆದಿವಾಸಿ ಕೊರಗ ಸಮುದಾಯದ ಮೊದಲ ಡಾಕ್ಟರೇಟ್ ಪದವಿ ಪಡೆದ ಕಲ್ಮಂಜದ ಬಾಬು, ಸಹಾಯಕ ಪ್ರಾಧ್ಯಾಪಿಕೆ ಸಬಿತಾ ಕೊರಗ, ಲಂಚ ವಿರೋಧಿ ಗ್ರಾ.ಪಂ. ಕಾರ್ಯದರ್ಶಿ ನಳಿನಿ ಎ.ಕೆ., ಬೆಟ್ಟಂಪಾಡಿ ಮಧುಪ್ರಪಂಚದ ಮನಮೋಹನ, ಬಾಗಲಕೋಟೆಯ ಪಿಎಸ್ಐ ರವಿ ಪವಾರ್, ಕೃಷಿ ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪಡೆದ ಬೆಂಗಳೂರಿನ ಬಿಎಂಟಿಸಿ ನಿರ್ವಾಹಕ ನರಸಿಂಹ ಗುಂಜಾಲಿ, ಅಕ್ಷರ ಭಗೀರಥ ಹರೇಕಳ ಹಾಜಬ್ಬ, ಸ್ವಚ್ಛ ವಾಹಿನಿ ಸ್ವಯಂಸೇವಕಿ ಸಾರಥಿ ಪೆರುವಾಯಿಯ ನಫೀಸಾ, ಮೀಟರ್ ರಿಪೇರಿಯಿಂದ ಬದುಕು ಕಟ್ಟಿಕೊಂಡ ಪದವೀಧರೆ ಜಯಶೀಲ, ಅಡಿಕೆ ತೋಟದ ಮಾಸ್ಟರ್ ಮೈಂಡ್ ಸಂಜೀವ ನಾಯ್ಕ್, ಅನ್ನದಾತ ಸರ್ಕೀಟ್ ಹೌಸ್ ಕೃಷ್ಣ, ಭತ್ತದ ಕೃಷಿ ತಪಸ್ವಿ ಬಿ.ಕೆ.ದೇವರಾಯ, ಸಾರಾಯಿ ಬಿಟ್ಟು ಮಾದರಿಯಾದ ಸುಬ್ಬ ಪಾಟಾಳಿ, ಹೋಳಿಗೆಯಿಂದ ಏಳಿಗೆಯಾದ ಅಸೈಗೋಳಿಯ ಸುಧಾಕರ ನಾಯಕ್, ಕ್ಯಾನ್ಸರ್ ಜಯಿಸಿದ ಕಾಡೂರು ಗ್ರಾ.ಪಂ. ಅಧ್ಯಕ್ಷ ಪಾಡುರಂಗ ಶೆಟ್ಟಿ, ಮಂಗಳೂರು ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕ ಕೋಡಿಕಲ್ ಅಶೋಕ್ ಶೆಟ್ಟಿ, ಪಾನಿಪೂರಿಯಿಂದ ಆರ್ಥಿಕತೆ ಸುಧಾರಿಸಿದ ಧನ್ಯಾ, ಅಪರೂಪದ ವೈದ್ಯ ಡಾ.ಸತೀಶ್ ಕಲ್ಲಿಮಾರ್, ಹಾಲು ಸೊಸೈಟಿ ಸಿಇಒ ಶಶಿಕಲಾ ಮಂಜನಾಡಿ, ಮಲ್ಲಿಗೆ-ಜೇನು ಕೃಷಿ ಸಾಧಕಿ ಕಕ್ಕೆಪದವಿನ ಗುಲಾಬಿ, ಜನಸ್ನೇಹಿ ಗ್ರಾಮೀಣ ಡಾಕ್ ಸೇವಕಿ ಸುರೇಖಾ, ಸುಸ್ಥಿರ ಬದುಕಿನ ಬಾಳೇಪುಣಿ ಕುಕ್ಕುದಕಟ್ಟೆಯ ಗುರುವ ಕೊರಗ, ರಕ್ತದಾನಿ, ಸಮಾಜಸೇವಕ ಹನುಮಂತ ಕಾಮತ್, ನಿವೃತ್ತ ಸೈನಿಕ, ಸಾಧಕ ಸರ್ಕಾರಿ ಅಧಿಕಾರಿ ಮಂಜುನಾಥ್ ಶಿವಮೊಗ್ಗ ಸಹಿತ ನೂರಾರು ಮಂದಿ ಬೆಳಕಿಗೆ ಬಂದದ್ದು ಬಾಳೇಪುಣಿ ಹೊಸದಿಗಂತ ಪತ್ರಿಕೆಗಾಗಿ ಸಿದ್ಧಪಡಿಸಿದ ವರದಿಗಳಿಂದ.

ಹಾಜಬ್ಬರ ಬೆಳಕಿಗೆ ತಂದ ಬಾಳೇಪುಣಿ

ವೃತ್ತಿ ಬದುಕಿನ ಅಷ್ಟೂ ಅವಧಿಯಲ್ಲಿ ಪತ್ರಕರ್ತರಾಗಿ ಬಾಳೇಪುಣಿ ಅವರಿಗೆ ಅತ್ಯಂತ ಸಾರ್ಥಕತೆ ಕೊಟ್ಟದ್ದು ಹಾಗೂ ಮಂಗಳೂರಿಗೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದುಕೊಟ್ಟದ್ದು ಅಕ್ಷರ ಸಂತ, ಅಕ್ಷರ ಭಗೀರಥ, ಕಿತ್ತಳೆ ಮಾರಿ ಸರ್ಕಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರ ಕುರಿತು ಮಾಡಿದ ವಿಶೇಷ ವರದಿ. ಆ ಒಂದು ವರದಿಯಿಂದ ಆರಂಭವಾದ ಅಭಿಯಾನ ಇಂದು ಅವರನ್ನು ನವದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿ ಪಡೆಯುವಲ್ಲಿ ವರೆಗೆ, ಸಾವಿರಾರು ಮಂದಿ ಹಾಜಬ್ಬರ ಜೊತೆ ಸೆಲ್ಫೀ ತೆಗೆಸಿಕೊಳ್ಳುವಷ್ಟರ ಮಟ್ಟಿಗೆ ಗಣ್ಯರ ಸಾಲಿಗೆ ಹಾಜಬ್ಬರನ್ನು ಸೇರಿಸುವವರೆಗೆ ತಲುಪಿದೆ.

ಸಿಎನ್ ಎನ್ ಐಬಿಎನ್ ರಿಲಯನ್ಸ್ ರಿಯಲ್ ಹೀರೋಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಬ್ಯಾರಿ ಅಕಾಡೆಮಿ ಪ್ರಶಸ್ತಿ, ಕನ್ನಡಪ್ರಭ ವರ್ಷದ ವ್ಯಕ್ತಿ, ಮೈಸೂರಿನ ರಮಾಗೋವಿಂದ ಪ್ರಶಸ್ತಿ, ಗಣರಾಜ್ಯೋತ್ಸವ ಸಂದರ್ಭ ರಾಜ್ಯಪಾಲರ ಚಹಾ ಕೂಟ ಆತಿಥ್ಯ, 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಹಿತ ನೂರಾರು ಗೌರವಗಳು ಅವರನ್ನು ಅರಸಿ ಬಂದಿವೆ. ಹಾಜಬ್ಬರ ಯಶೋಗಾಥೆ ಕರ್ನಾಟಕದ ದಾವಣಗೆರೆ, ಕುವೆಂಪು, ಮಂಗಳೂರು ಹಾಗೂ ತುಮಕೂರು ವಿ.ವಿ.ಗಳಿಗೆ ಹಾಗೂ ಕೇರಳದ ಕನ್ನಡ ಮಾಧ್ಯಮದ 8ನೇ ತರಗತಿಯ ಕನ್ನಡ ಮತ್ತು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪಾಠವಾಗಿ ಸೇರ್ಪಡೆಯಾಗಿತ್ತು. 2017-18ನೇ ಸಾಲಿನಿಂದ ಕರ್ನಾಟಕದಲ್ಲಿ 8ನೇ ತರಗತಿಯ ತುಳು ಐಚ್ಛಿಕ ವಿಷಯಕ್ಕೆ ಹಾಜಬ್ಬರ ಯಶೋಗಾಥೆ ಪಠ್ಯವಾಗಿತ್ತು.

ಹಾಜಬ್ಬರ ಶಾಲೆ ಎಂದು ಗುರುತಿಸಲ್ಪಡುವ ಹರೇಕಳ ನ್ಯೂಪಡ್ಪಿನ ಜಿ.ಪಂ. ಸಂಯುಕ್ತ ಪ್ರೌಢಶಾಲೆಗೆ ಶಿಕ್ಷಣ ಪ್ರೇಮಿಗಳಿಂದ, ಸಂಘ ಸಂಸ್ಥೆಗಳಿಂದ 1.5 ಕೋಟಿ ರು.ಗೂ ಅಧಿಕ ದೇಣಿಗೆ, ಅನುದಾನ ಹರಿದುಬಂದಿದೆ. ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘಟನೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದೆ. ಇವರ ಬಗ್ಗೆ 2012ರಲ್ಲಿ ಬಿಬಿಸಿ ವಿಶೇಷ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ.

ಸಾರ್ವಜನಿಕ ಆಸ್ತಿ ನಿರ್ಮಾಣ:

ಪತ್ರಿಕೋದ್ಯೋಗದ ಆಚೆಗೂ ಬಾಳೇಪುಣಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರು. ಅವರು ಹುಟ್ಟೂರು ಬಾಳೇಪುಣಿಯಲ್ಲಿ ಸಾರ್ವಜನಿಕ ಆಸ್ತಿ ನಿರ್ಮಾಣಕ್ಕೆ ನೇತೃತ್ವ ವಹಿಸಿದ್ದಾರೆ. ತನ್ನ ಗ್ರಾಮದಲ್ಲಿ 2.35 ಎಕರೆ ಜಮೀನು ಖರೀದಿಸಿ ಅದನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಸ್ತಿಯಾಗಿಸಿ ಬಹುಪಯೋಗಿ ಆಟದ ಮೈದಾನವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ್ದಾರೆ. ಕಳೆದ 40 ವರ್ಷಗಳಿಂದ ಯೋಜನೆಯ ಹಿಂದೆ ದುಡಿಯುತ್ತಿದ್ದು ಜನಪ್ರತಿನಿಧಿಗಳಿಂದ 50 ಲಕ್ಷ ರು.ಗೂ ಅಧಿಕ ಅನುದಾನ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಊರ ಜನತೆ ಕೈಜೋಡಿಸಿದೆ. ಪ್ರಸ್ತುತ ಈ ಆಸ್ತಿಯ ಅಂದಾಜು ಮೌಲ್ಯ 2.5 ಕೋಟಿ ರು. ಪತ್ರಕರ್ತರೊಬ್ಬರು ಸ್ವಆಸಕ್ತಿ ವಹಿಸಿ ಸಾರ್ವಜನಿಕ ಆಸ್ತಿ ರೂಪಿಸಿದ ನಿದರ್ಶನ ನಮ್ಮ ಜಿಲ್ಲೆಯಲ್ಲೇ ಮತ್ತೆಲ್ಲೂ ಕಾಣುವುದಿಲ್ಲ.

ಅಪಾರ ಜೀವನೋತ್ಸಾಹಿ ಬಾಳೇಪುಣಿ ಅವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಸಕ್ತಿಯ ವಿಷಯಗಳು. ಅಭಿವೃದ್ಧಿಪರ ಸುದ್ದಿಗಳನ್ನು ಹುಡುಕಿಕೊಂಡು ಹಳ್ಳಿಗಳಿಗೆ ಹೋಗುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡುತ್ತಾರೆ. ಪತ್ರಕರ್ತರಿಗೆ ಇರಬೇಕಾದ ಸಾಮಾನ್ಯ ಜ್ಞಾನ, ಅರ್ಹತೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ತಿಳಿವಳಿಕೆ ನೀಡುವ ಸಾಮರ್ಥ್ಯ ಗಳಿಸಿದ್ದಾರೆ. ಅನೇಕ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಅವಧಿಯಲ್ಲಿ ಇವರಿಂದ ತರಬೇತಿ ಪಡೆದಿದ್ದಾರೆ.

ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿ

ರಾಜ್ಯದಲ್ಲಿ ದಶಕಗಳ ಹಿಂದೆ ನಡೆದ ಸಾಕ್ಷರತಾ ಆಂದೋಲನದಲ್ಲಿ ಮುಖ್ಯ ಸ್ವಯಂಸೇವಕ,ಸಂಪನ್ಮೂಲ ವ್ಯಕ್ತಿಯಾಗಿ ಸಕ್ರಿಯರಾಗಿದ್ದರು. ಅವರು ಪುತ್ತೂರು ಬಾಲವನದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ನವಸಾಕ್ಷರರ ಸಾಹಿತ್ಯ ರಚನಾ ಕಮ್ಮಟ, ನ್ಯಾಷನಲ್ ಬುಕ್ ಟ್ರಸ್ಟ್ ನವದೆಹಲಿ ಮತ್ತು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಇಲಾಖೆ ಹೆಗ್ಗೋಡಿನಲ್ಲಿ ನಡೆಸಿದ 10 ದಿನಗಳ ರಾಜ್ಯಮಟ್ಟದ ಕಾರ್ಯಾಗಾರ, ರಾಜ್ಯಮದ್ಯಪಾನ ಸಂಯಮ ಮಂಡಳಿ ಮಾಧ್ಯಮ ಪ್ರತಿನಿಧಿಗಳಿಗೆ ಬೆಂಗಳೂರಿನಲ್ಲಿ ನಡೆಸಿದ 2 ದಿನಗಳ ಕಮ್ಮಟ, ಕೃಷಿ ಇಲಾಖೆ ಬೆಂಗಳೂರಿನಲ್ಲಿ ನಡೆಸಿದ ಎರಡು ದಿನಗಳ ಸಾವಯವ ಕೃಷಿ ಕಮ್ಮಟ, 2020 ಮಾರ್ಚ್ ನಲ್ಲಿ ಚಿತ್ರದುರ್ಗದ ಹಿರಿಯೂರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಮುದ್ರಣ ಮಾಧ್ಯಮ ಬರಹ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. 2021 ಅಕ್ಟೋಬರಿನಲ್ಲಿ ಸಾಹಿತ್ಯ ಅಕಾಡೆಮಿ ಬೆಂಗಳೂರು ಕಲಾ ಗ್ರಾಮದಲ್ಲಿ ಏರ್ಪಡಿಸಿದ ಐದು ದಿನಗಳ ಮಾಧ್ಯಮ ಪ್ರವೇಶಿಕೆ, ಬರಹ ಮತ್ತು ಸಂವಹನ ಕೌಶಲ ಶಿಬಿರದ ನಿರ್ದೇಶಕರಾಗಿದ್ದರು.

ಪತ್ರಕರ್ತ ವೃತ್ತಿ ಜೊತೆಗೆ ಇಷ್ಟು ವರ್ಷಗಳಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ, ಕೋಶಾಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದಾರೆ. 2021-22ನೇ ಸಾಲಿನಿಂದ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಸಲಹಾ ಸಮಿತಿಗೆ ವಿಶೇಷ ಆಹ್ವಾನಿತರಾಗಿದ್ದಾರೆ.

ಮೂರೂವರೆ ದಶಕಗಳ ಪತ್ರಿಕೋದ್ಯಮ ರಂಗದ ಸಾಧನೆಗೆ ಅನೇಕ ಪ್ರಶಸ್ತಿಗಳು ತಾವಾಗಿ ಬಾಳೇಪುಣಿ ಅವರನ್ನು ಅರಸಿ ಬಂದಿವೆ. ಅತ್ಯುತ್ತಮ ಗ್ರಾಮೀಣ ವರದಿಗಾಗಿ (ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು) 2004ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 2012ರಲ್ಲಿ ಕಾಂತಾವರ ಕನ್ನಡ ಸಂಘದಿಂದ ಕಾಂತಾವರ ಪುರಸ್ಕಾರ, 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2021ನೇ ಸಾಲಿನ ಕರ್ನಾಟಕ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, 2022ರಲ್ಲಿ ವಿಶ್ವ ಸಂವಾದ ಕೇಂದ್ರದಿಂದ ಬೆಸುನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, 2021ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಮಂಗಳೂರು ವಿ.ವಿ.ಯಿಂದ 2022ನೇ ಸಾಲಿನಲ್ಲಿ 43ನೇ ಸಂಸ್ಥಾಪನಾ ದಿನಾಚರಣೆ ಗೌರವಗಳ ಸಹಿತ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.

ಈ ಸಾಧನೆ ಮಾಡಿದ ಏಕೈಕ ಕನ್ನಡ ಪತ್ರಕರ್ತ

ವಿಶೇಷವಾಗಿ ಜಾಗತಿಕ ಸಮಾಜ ಕಾರ್ಯ ಸಂಸ್ಥೆ ಹಂಗರ್ ಪ್ರಾಜೆಕ್ಟ್ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುವ ಮಹಿಳೆ ಮತ್ತು ಪಂಚಾಯತ್ ರಾಜ್ ವಿಷಯಾಧಾರಿತ ಸಕಾರಾತ್ಮಕ ವರದಿಗಾರಿಕೆ ಸ್ಪರ್ಧೆಯ ಪ್ರಾದೇಶಿಕ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ 2011ರಲ್ಲಿ ಅವರಿಗೆ ಸರೋಜಿನಿ ನಾಯ್ಡು ಪ್ರಶಸ್ತಿ ಲಭಿಸಿತು. ಈ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ, ಮೊತ್ತಮೊದಲ ಹಾಗೂ ಏಕೈಕ ಕನ್ನಡ ಪತ್ರಕರ್ತ ಬಾಳೇಪುಣಿ ಅವರು. "ಇಡ್ಕಿದು ಗ್ರಾಮ ಪಂಚಾಯತ್-ಗ್ರಾಮಾಭಿವೃದ್ಧಿಗೊಂದು ಮಾದರಿ" ವರದಿಗೆ ಈ ಪ್ರಶಸ್ತಿ ಲಭಿಸಿದ್ದು, ನವದೆಹಲಿಯ ಲೋಧಿ ಸ್ಟ್ರೀಟ್ ನ ಅಂತಾರಾಷ್ಟ್ರೀಯ ಹೆಬಿಟೇಟ್ ಸೆಂಟರಿನಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.

ಪರಿಶಿಷ್ಟ ಜಾತಿಯ ಮೊಗೇರ ಸಮುದಾಯಕ್ಕೆ ಸೇರಿದ ಬಾಳೇಪುಣಿ ಗ್ರಾಮೀಣ ಭಾಗದ ತಳಮಟ್ಟದ ಸಮಾಜದ ಎಲ್ಲ ಕಷ್ಟಗಳನ್ನು ಅನುಭವಿಸಿ ಬೆಳೆದವರು. ಸಾಕಷ್ಟು ಅಧ್ಯಯನ ನಡೆಸಿ ಸಮಾಜದ ಕೆಳಸ್ತರದವರ ಹಾಗೂ ಬಡವರ ಸೇವೆ, ಪ್ರತಿಭೆಗಳನ್ನು ಹುಡುಕಿ ಬರೆಯುತ್ತಾರೆ. ಸಾಧಕರನ್ನು ಶೋಧಿಸುತ್ತಾರೆ, ಮಾತನಾಡಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ, ಅವರಿಗೆ ಸೂಕ್ತ ಸವಲತ್ತುಗಳು ಸಿಗಲು ಸದ್ದಿಲ್ಲದೆ ಕೆಲಸ ಮಾಡುತ್ತಾರೆ ಅನ್ನುವುದೂ ವಿಶೇಷ.

ಸುಗಮ ಸಂಗೀತ ಆಲಿಸುವುದು, ಯಕ್ಷಗಾನ, ನಾಟಕ ವೀಕ್ಷಣೆ ಅವರ ಆಸಕ್ತಿಯ ಕ್ಷೇತ್ರಗಳು. ಮಂಗಳೂರು ಆಕಾಶವಾಣಿಯ ನಿರಂತರ ಕೇಳುಗರು ಹಾಗೂ ಸಾಕಷ್ಟು ಕಾರ್ಯಕ್ರಮಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ನೀಡಿದ್ದಾರೆ. ಅವರ ಅನೇಕ ಭಾಷಣಗಳು, ಕತೆ ರೇಡಿಯೋದಲ್ಲಿ ಪ್ರಸಾರ ಆಗಿವೆ. ವೃತ್ತಿ ಬದುಕಿಗೋಸ್ಕರ ರೇಮಂಡ್ ಡಿಸೋಜ, ವಿಷ್ಣುವರ್ಧನ್ ಅವರಂತಹ ಸಾಕಷ್ಟು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ, ಮಾತನಾಡಿಸಿದ್ದಾರೆ, ವಿಶೇಷ ವರದಿಗಳು ಪ್ರಕಟವಾಗಿವೆ. ಆದರೆ, ವರದಿಗಳ ಲೆಕ್ಕಾಚಾರ ಅವರ ಬಳಿ ಇಲ್ಲ. ಸಂಖ್ಯೆಗಾಗಿ, ಹೆಗ್ಗಳಿಕೆಗಾಗಿ ವರದಿಗಳನ್ನು ಮಾಡಿದ್ದಲ್ಲ, ಅದರಿಂದ ಯಾರದ್ದಾದರೂ ಬದುಕಿಗೆ ಬೆಳಕು ಕಂಡರೆ, ನಾಲ್ಕು ಮಂದಿಗೆ ಸ್ಫೂರ್ತಿ ಸಿಕ್ಕರೆ ಅದುವೇ ನನಗೆ ಸಾರ್ಥಕತೆ ಅನ್ನುತ್ತಾರೆ.

ಸುದ್ದಿಯ ಗ್ರಹಿಸುವ, ಪ್ರಸ್ತುತಪಡಿಸುವ ಕುಶಲಮತಿ

ನಮ್ಮ ನಡುವೆ ನೂರಾರು ಪತ್ರಕರ್ತರಿದ್ದಾರೆ. ಹಾಗಂತ ಒಬ್ಬೊಬ್ಬರ ಗ್ರಹಿಕೆ, ಬರಹದ ಶೈಲಿ ಭಿನ್ನವಾಗಿರುತ್ತದೆ. ನಮ್ಮೆದುರಿಗೇ ಓರ್ವ ಸುದ್ದಿಯಾಗಬಲ್ಲ ವ್ಯಕ್ತಿ ಹಾದು ಹೋದರೂ ಕೆಲವೊಮ್ಮ ಅದು ನಮ್ಮ ಸುದ್ದಿಗಾರನ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಓರ್ವ ಸೂಕ್ಷ್ಮಮತಿ, ಚತುರ ಪತ್ರಕರ್ತ ಮಾತ್ರ ಹೇಗೆ ಒಂದು ಸಾಧನೆಯನ್ನು, ಅರ್ಹತೆಯನ್ನು ಧನಾತ್ಮಕವಾಗಿ ಓದುಗರ ಎದುರಿಗಿಡಬಹುದು ಅಂತಲೇ ಯೋಚಿಸುತ್ತಾನೆ. ಅದರ ಪರಿಣಾಮವಾಗಿ ಲೇಖನಿ ಮೂಲಕ ಮರುಜನ್ಮ ಪಡೆದ ಹಾಜಬ್ಬರು ಓರ್ವ ಜೀವಂತ ದಂತಕಥೆಯಾಗಿದ್ದಾರೆ. ಇದು ಮಂಗಳೂರಿನ ಪತ್ರಕರ್ತರೆಲ್ಲರಿಗೂ ಹೆಮ್ಮೆಯ ಸಂಗತಿ.

ಸಾಕ್ಷರತಾ ಆಂದೋಲನ ನೀಡಿದ ಅನುಭವ

ಬಾಳೇಪುಣಿ 1990ರ ಹೊತ್ತಿಗೆ ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡು ಸಾಕಷ್ಟು ಓಡಾಡಿದ್ದಾರೆ, ಬೆಟ್ಟ, ಗುಡ್ಡ, ಹಳ್ಳಿಗಳಿಗೆ ತೆರಳಿ ಕ್ಲಾಸ್ ಮಾಡಿದ್ದಾರೆ, ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದ್ದಾರೆ. ಹಗಲು ದುಡಿದು ರಾತ್ರಿ ವಯಸ್ಕರ ಶಿಕ್ಷಣ ತರಗತಿಗಳನ್ನು ನಡೆಸಿದ್ದಾರೆ. ಈ ಸಂದರ್ಭ ಹಲವು ಮಂದಿಯ ಸಂಪರ್ಕ ಬೆಳೆಯಿತು. ಜನಸಾಮಾನ್ಯರ ಬದುಕಿನ ಕಷ್ಟಗಳ ಸಾಕಷ್ಟು ನಿದರ್ಶನಗಳು ಸಿಕ್ಕವು. ಹಾಗಾಗಿ ನೊಂದವರು, ಸೋತವರು, ಕಷ್ಟದಲ್ಲಿದ್ದವರು ಹಠದಿಂದ ಗೆದ್ದು ಬಂದ ವಿಚಾರಗಳನ್ನು ವರದಿಗಳ ಮೂಲಕ ಬೆಳಕಿಗೆ ತರಲು ಬದುಕಿನ ಈ ಹಂತ ಪ್ರೇರಣೆಯಾಯಿತು ಎನ್ನುತ್ತಾರೆ ಬಾಳೇಪುಣಿ.

ವೃತ್ತಿ ಬದುಕಿನ ಬದಲಾವಣೆಯ ನಡುವಿನ ಅವಧಿಗಳಲ್ಲಿ ಹೊಟ್ಟೆಪಾಡಿಗೆ ಬೇರೆ ಬೇರೆ ಕೆಲಸ ಮಾಡಿದ್ದಾರೆ, ಕೂಲಿ ಕೆಲಸಕ್ಕೂ ಹೋಗಿದ್ದಾರೆ, ಕೆಂಪು ಕಲ್ಲಿನ ಕ್ವಾರಿಯಲ್ಲಿ ಕಲ್ಲು ಕಡಿದ ಅನುಭವವೂ ಇದೆ. ಅವರು ಜನಿಸಿದ್ದು ಹಿಂದುಳಿದ ಸಮುದಾಯದಲ್ಲಿ. ಎಳವೆಯಲ್ಲಿ ಕಾಡಿದ ಬಡತನ ಹಾಗೂ ಅಸ್ಪೃಶ್ಯತೆಯ ಸಾಕಷ್ಟು ನೆನಪುಗಳು ಮಾಸದೇ ಉಳಿದಿವೆ. ತಾನು ಅನುಭವಿಸಿದ್ದು, ಕಂಡದ್ದು, ಗ್ರಹಿಸಿದ್ದು ಎಲ್ಲವೂ ಸೇರಿ ಅನುಭವದ ಮೂಸೆಯಾಗಿ ಅದನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸಲು, ನೂರಾರು ಮಂದಿಯಲ್ಲಿ ಜೀವನೋತ್ಸಾಹ ತುಂಬಲು, ಅಸಹಜತೆಗಳಿಂದ ಆಚೆ ಬರುವಂಥ ಧನಾತ್ಮಕ ಚಿಂತನೆಗೆ ಜನರನ್ನು ಹಚ್ಚಲು ಅವರು ಆರಿಸಿದ್ದು ಪತ್ರಿಕೋದ್ಯೋಗದ ದಾರಿ. ಹಾಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಅವರು ಕೊಟ್ಟಂಥಹ ವರದಿಗಳ ಕಣಜವೇ ಸಾಕ್ಷಿಯಾಗಿ ನಿಂತಿವೆ.

ಬದುಕು ಮೊದಲೇ ಬರೆದಿಟ್ಟ ಸಿನಿಮಾ ಚಿತ್ರಕತೆ ಅಲ್ಲ, ಶಾಲೆಯಲ್ಲಿ ಮಾಡಿಡುವ ಟೈಂಟೇಬಲ್ ಸಹ ಅಲ್ಲ. ಎಷ್ಟೋ ಸಾರಿ ಸಿಕ್ಕಿದ ದಾರಿಯಲ್ಲಿ ಹೋಗಬೇಕಾಗುತ್ತದೆ. ಎಷ್ಟೋ ಸಿರಿ ಪರಿಸ್ಥಿತಿಗಳ ಜೊತೆ ರಾಜಿ ಆಗಬೇಕಾಗುತ್ತದೆ, ಯಾರದ್ದೋ ಹಂಗಿನಲ್ಲಿ, ಯಾವುದೋ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವುದಕ್ಕಿಂತಲೂ ರಿಪೇರಿಗಳ ಮೂಲಕವೇ ಬದುಕು ಕುಂಟುತ್ತಾ ಸಾಗುತ್ತದೆ. ಆದರೆ, ಕೆಲವು ಮಂದಿ ಮಾತ್ರ ಬದುಕಿನ ತುಂಬ ಸವಾಲುಗಳು, ಮಸುಕು ಬೆಳಕಿನ ದಾರಿಯನ್ನೂ ಬಲವಾಗಿ ಹಿಡಿದು, ಛಲ ಬಿಡದೆ ಕನಸು ಕಂಡ ಹಾಗೆಯೇ ಬದುಕಿ ತೋರಿಸುತ್ತಾರೆ. ಆ ದಾರಿಯಲ್ಲಿ ಅವರು ತ್ಯಜಿಸಿದ್ದು, ನಿರ್ಲಿಪ್ತವಾಗಿ ನಡೆದದ್ದು, ಕಷ್ಟಗಳ ಬೆವರು ಒರೆಸಿ ಸಾಗಿದ್ದು ಸಮಾಜಕ್ಕೆ ಕಾಣದಿದ್ದರೂ, ಅಂತಿಮವಾಗಿ ಕನಸು ಕಂಡದ್ದನ್ನು ನನಸಾಗಿಸಿ, ಅಂದುಕೊಂಡ ಬದುಕನ್ನು ಯಾರದ್ದೂ ಹಂಗಿಲ್ಲದೆ ಕಟ್ಟಿಕೊಂಡಾಗ ಸಹಜವಾಗಿ ಜನರಿಗೆ ಅವರು ಅನುಕರಣೀಯರಾಗುತ್ತಾರೆ. ಗೆದ್ದ ಮೇಲೆ ಮಾತನಾಡಿಸ್ತಾರೆ, ಸಲಹೆ ಕೇಳ್ತಾರೆ, ಸನ್ಮಾನ ಮಾಡ್ತಾರೆ.

ಅಂಥದ್ದೊಂದು ಸಾಲಿನಲ್ಲಿ ಪತ್ರಕರ್ತರ ಗಢಣದಲ್ಲಿ ತಳಮಟ್ಟದಿಂದ ಬಂದು ತಳಮಟ್ಟದ ಗೆಲವುಗಳಿಗೆ ಅಕ್ಷರಗಳ ಬೆಳಕು ನೀಡಿದ ಅಪರೂಪದ ವ್ಯಕ್ತಿಯಾಗಿ ಗೋಚರಿಸುತ್ತಾರೆ ಬಾಳೇಪುಣಿ. ಬರೆದಂತೇ ಬಾಳಿದ ಬಾಳೇಪುಣಿಯಾಗಿ, ವ್ಯಕ್ತಿತ್ವವನ್ನು ಕುಂದಿಸುವ ಯಾವುದೇ ಋಣಾತ್ಮಕ ಅಂಶಗಳಿಗೆ ತಲೆ ಬಾಗದೆ, ಆಮಿಷಗಳ ಹಿಂದೆ ಹೋಗದೆ, ವೃತ್ತಿಯಲ್ಲಿ ಯಾರಿಗೂ ಸ್ಪರ್ಧೆಗಳನ್ನು ನೀಡುವ ಗೋಜಿಗೆ ಹೋಗದೆ, ಅನ್ಯಾಯಗಳನ್ನು ಕಂಡಾಗ ಸುಮ್ಮನೇ ಕೂರದೆ, ತನ್ನ ಆದರ್ಶಗಳಂತೆಯೇ ವೃತ್ತಿ ಬದುಕು ಸಾಗಿಸಿದ ಕಾರಣಕ್ಕೆ ಸ್ಪಷ್ಟವಾಗಿ ಕಾಣುತ್ತಾರೆ, ಕಾಡುತ್ತಾರೆ. ಅವರ ಮುಂದಿನ ಬದುಕು ಅನುಕರಣೀಯವಾಗಿಯೇ ಇರಲಿ ಹಾಗೂ ಸಶಕ್ತ, ಮಾದರಿ ಬದುಕು ಮುಂದುವರಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ.

  • ಲೇಖನ: ಕೃಷ್ಣಮೋಹನ ಟಿ.

Whats_app_banner