ಕನ್ನಡ ಸುದ್ದಿ  /  Karnataka  /  Davanagere News: After Exactly 105 Years, Akhil Bharatiya Veerashaiva Mahasabha Mahadiveshan Held On 24 25 And 26 Of December In Davanagere

Davanagere News: ಬರೋಬ್ಬರಿ 105 ವರ್ಷಗಳ ನಂತರ ಬೆಣ್ಣೆದೋಸೆ ನಗರಿಯಲ್ಲಿ ಅಭಾವೀಮ ಮಹಾಧಿವೇಶನ! 3 ದಿನಗಳ ಸಂಭ್ರಮಕ್ಕೆ ಸಿದ್ಧತೆ

Davanagere News: ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಡಿಸೆಂಬರ್‌ 24ರಿಂದ ಮೂರು ದಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನ ನಡೆಯಲಿದೆ.

ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾಧಿವೇಶನದ ಹಿನ್ನೆಲೆಯಲ್ಲಿ ಪೆಂಡಾಲ್ ಅಳವಡಿಸುವ ಕಾರ್ಯಕ್ಕೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಇದೇ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾಧಿವೇಶನದ ಹಿನ್ನೆಲೆಯಲ್ಲಿ ಪೆಂಡಾಲ್ ಅಳವಡಿಸುವ ಕಾರ್ಯಕ್ಕೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಇದೇ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ದಾವಣಗೆರೆ: ಬೆಣ್ಣೆದೋಸೆ ನಗರ ದಾವಣಗೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನಕ್ಕೆ ಆತಿಥ್ಯ ನೀಡಲು ಸಜ್ಜಾಗುತ್ತಿದೆ. ಡಿಸೆಂಬರ್‌ 24ರಿಂದ ಮೂರು ದಿನ ನಗರದ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿಈ ಮಹಾಧಿವೇಶನ ನಡೆಯಲಿದೆ.

ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪ್ರಧಾನಕಾರ್ಯದರ್ಶಿ ಈಶ್ವರ ಖಂಡ್ರೆ ಈ ವಿಚಾರ ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳನ್ನೂ ಒಗ್ಗೂಡಿಸಿ, ಏಕತೆ, ಸಮಗ್ರತೆ ಕಾಪಾಡುವುದರ ಜತೆಗೆ ಸಮಾಜದ ಮು೦ದಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಮಹಾಧಿವೇಶನ ಆಯೋಜಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಹಾಸಭಾಕ್ಕೆ ಶತಮಾನದ ಇತಿಹಾಸ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ 118 ವರ್ಷಗಳ ಇತಿಹಾಸವಿದೆ. 1904ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಯಾಗಿದೆ. ಇದುವರೆಗೆ 22 ಮಹಾಧಿವೇಶನ ನಡೆಸಲ್ಪಟ್ಟಿವೆ. ಇದು 23ನೇ ಮಹಾಧಿವೇಶನ. ಇದುವರೆಗೆ 20 ಅಧ್ಯಕ್ಷರನ್ನು ಮಹಾಸಭಾ ಕಂಡಿದೆ. ಮುಂದಿನ ಮೂರು ಅವಧಿಗೆ ಕೂಡ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಅವರ ನೇತೃತ್ವವೇ ಮಹಾಸಭಾಕ್ಕೆ ಇರಲಿದೆ.

ದಾವಣಗೆರೆಯಲ್ಲಿ ಈ ಹಿಂದೆ 1917ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನ ನಡೆದಿತ್ತು. ಹಾಗೆ 105 ವರ್ಷಗಳ ಬಳಿಕ ಮತ್ತೆ ಮಹಾಸಭಾದ ಮಹಾಧಿವೇಶನಕ್ಕೆ ದಾವಣಗೆರೆ ಸಜ್ಜಾಗುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿ, ಮುಖ್ಯಮಂತ್ರಿ, ಬಿಎಸ್‌ವೈಗೂ ಆಹ್ವಾನ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನದ ಉದ್ಘಾಟನೆ ಡಿ.24ರಂದು ನಡೆಯಲಿದೆ. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಆಹ್ವಾನಿಸಲಾಗುತ್ತಿದೆ. ಡಿ.26ರಂದು ಕೊನೆಯ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿ ಇರಲಿದೆ ಎಂದು ಮಹಾಸಭಾದ ನಾಯಕರು ಹೇಳಿದರು.

ಮೂರು ದಿನಗಳ ಅಧಿವೇಶನದಲ್ಲಿ ನಾಡಿನ ವಿವಿಧ ಮಠಾಧೀಶರು ಹಿರಿಯ ಸಾಹಿತಿಗಳು ಪಾಲ್ಗೊಳ್ಳುವರು. ದೇಶಾದ್ಯಂತ ವಿವಿಧ ರಾಜ್ಯಗಳ ಸಮಾಜದ ಪ್ರತಿನಿಧಿಗಳು ಭಾಗವಹಿಸುವರು. ಉದ್ಯಮ, ಕೈಗಾರಿಕೆ, ಮಹಿಳಾ, ಕೃಷಿ, ಶಿಕ್ಷಣ, ಯುವ ಜನಾಂಗದ ಕುರಿತಂತೆ ಗೋಷ್ಠಿಗಳು ಮಹಾಧಿವೇಶನದ ಪ್ರಮಖ ಹೈಲೈಟ್ಸ್‌ ಆಗಿರಲಿವೆ. ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಹತ್ತು ಹಲವು ಕಾರ್ಯಕ್ರಮ ಮಹಾಧಿವೇಶವನ್ನು ಆಕರ್ಷಣೀಯವಾಗಿಸಲಿದೆ ಎಂದು ತಿಳಿಸಿದರು.

ಲಿಂಗಾಯಿತ ಮೀಸಲಾತಿ ವಿಚಾರ ಮುಖ್ಯಭೂಮಿಕೆಗೆ

ಉತ್ತರ ಮತ್ತು ಮಧ್ಯ ಕರ್ನಾಟಕದ ವೀರಶೈವ ಲಿಂಗಾಯತ ಬಾಂಧವರಲ್ಲಿ ಬಹುತೇಕರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂಥವರು ಕೇಂದ್ರ ಒಬಿಸಿ ಪಟ್ಟಿಯಿಂದ ಹೊರಗಿದ್ದು, ಅವರಿಗೆ ನ್ಯಾಯ ಸಿಗಬೇಕಾಗಿದೆ. ವಿಶ್ವಕ್ಕೆ ಸಾಮಾಜಿಕ ನ್ಯಾಯ ಕೊಟ್ಟ ಸಮಾಜವೇ ಈಗ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿಗೆ ತಲುಪಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಗೆ ಅನುಸಾರವಾಗಿ ಸಿಗಬೇಕಾದ ಮೀಸಲಾತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾಜಕ್ಕೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್‌. ತಿಪ್ಪಣ್ಣ ಪ್ರಭಾಕರ ಕೋರೆ, ಅಥಣಿ ಎಸ್.ವೀರಣ್ಣ ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಮೂರ್ತಿ, ಕೆ.ಜಿ.ಶಿವಕುಮಾರ, ಬಿ.ಜಿ. ರಮೇಶ, ಶಂಭು ಮತ್ತು ಇತರರು ಹಾಜರಿದ್ದರು.

IPL_Entry_Point