ಎಚ್ಎಎಲ್ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್
ಎಚ್ಎಎಲ್ ಉತ್ಪಾದನಾ ಘಟಕವನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸುವ ಅಲ್ಲಿನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಪ್ರಸ್ತಾಪಕ್ಕೆ, ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಉತ್ಪಾದನಾ ಘಟಕಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಅನುಮತಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಎಚ್ಎಎಲ್ನ ಸುಧಾರಿತ ಉತ್ಪಾದನಾ ಸೌಲಭ್ಯಗಳನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪ್ರಸ್ತಾಪಕ್ಕೆ ಡಿಸಿಎಂ ಪ್ರತಿಕ್ರಿಯಿ ನೀಡಿದ್ದಾರೆ.
"ಆಂಧ್ರ ಪ್ರದೇಶ ಸಿಎಂ ಏನು ಬೇಡಿಕೆ ಇಟ್ಟರೂ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಸಂಸತ್ ಸದಸ್ಯರು ಮತ್ತು ಕೇಂದ್ರ ಸಚಿವರು ಇದಕ್ಕೆ ಪ್ರತಿಕ್ರಿಯಿಸಬೇಕೆಂದು ನಾನು ಬಯಸುತ್ತೇನೆ, ಆದರೆ ಸರ್ಕಾರವಾಗಿ ನಾವು ಯಾವುದನ್ನೂ ಸ್ಥಳಾಂತರಿಸಲು ಅನುಮತಿಸುವುದಿಲ್ಲ. ಕೇಂದ್ರ ಸರ್ಕಾರ, ಎಚ್ಎಎಲ್ ಅನ್ನು ವಿಸ್ತರಿಸಲು ಬಯಸಿದರೆ ನಾವು ಭೂಮಿಯನ್ನು ನೀಡುತ್ತೇವೆ ಎಂದು ಶಿವಕುಮಾರ್ ಹೇಳಿದ್ದಾರೆ.
ಹೊಸ ಯೋಜನೆಗಳನ್ನು ಅವರು ಪಡೆದುಕೊಂಡರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿಂದ ಸ್ಥಳಾಂತರ ಮಾಡುವುದಕ್ಕೆ ನಮ್ಮ ಸಮ್ಮತಿ ಇಲ್ಲ. ಇಲ್ಲಿ ಅಗತ್ಯ ಸೌಲಭ್ಯ ಮತ್ತು ಭೂಮಿ ಬೇಕಾಗಿದ್ದರೆ ಅದನ್ನು ರಾಜ್ಯ ಸರ್ಕಾರ ಕೊಡಲಿದೆ. ಎಚ್ಎಎಲ್ ಎನ್ನುವುದು ನಮ್ಮ ರಾಜ್ಯದ ಹೆಮ್ಮೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.