ಕನ್ನಡ ಸುದ್ದಿ  /  Karnataka  /  Dharwad News Groom Ningappa Budappa Navaluru Murdered In Kalaghatai Before His Marriage Crime News Rsm

Dharwad News: ಹಸೆಮಣಿ ಏರಬೇಕಿದ್ದ ಯುವಕ ಮಸಣ ಸೇರಿದ; ಧಾರವಾಡದ ಕಲಘಟಗಿಯಲ್ಲಿ ಖಾರದ ಪುಡಿ ಎರಚಿ ಯುವಕನ ಕೊಲೆ

ನಿಂಗಪ್ಪ ಒಬ್ಬನೇ ಹೊಲದ ಶೆಡ್‌ನಲ್ಲಿ ಮಲಗಲು ಹೋಗುತ್ತಿದ್ದಾ ನೆ ಎಂದು ಮಾಹಿತಿ ತಿಳಿದ ಹಂತಕರು , ಆತ ಬರುವುದನ್ನೇ ಕಾದು ಸಂಚು ರೂಪಿಸಿದ್ದಾರೆ. ನಿಂಗಪ್ಪನಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಕೊಲೆ ಮಾಡಿ ಆತನ ಮೇಲೆ ಬೆಡ್‌ಶೀಟ್‌ ಹೊದಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಧಾರವಾಡದಲ್ಲಿ ಖಾರದ ಪುಡಿ ಎರಚಿ ಯುವಕರನ ಕೊಲೆ
ಧಾರವಾಡದಲ್ಲಿ ಖಾರದ ಪುಡಿ ಎರಚಿ ಯುವಕರನ ಕೊಲೆ

ಧಾರವಾಡ: ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ ಯುವಕನೊಬ್ಬ ಹಸೆಮಣೆ ಏರಲು ಕೆಲವು ದಿನಗಳು ಬಾಕಿ ಇದ್ದಂತೆ ಕೊಲೆಯಾಗಿರುವ ಹೃದಯ ವಿದ್ರಾವಕ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ 33 ವರ್ಷ ವಯಸ್ಸಿನ ನಿಂಗಪ್ಪ ಬೂದಪ್ಪ ನವಲೂರು ಎಂಬಾತನೇ ಕೊಲೆಯಾದ ದುರ್ದೈವಿ.

ಜೂನ್‌ 7 ಕ್ಕೆ ನಿಂಗಪ್ಪ ಅವರ ಮದುವೆ ರೇಣುಕಾ ಎಂಬ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ನಿಂಗಪ್ಪ ಸಹೋದರ ಮಂಜುನಾಥನ ಮದುವೆ ಕೂಡಾ ಅದೇ ದಿನ ಹಾಗೂ ಅದೇ ಸಮಯಕ್ಕೆ ಫಿಕ್ಸ್‌ ಆಗಿತ್ತು. ಬಂಧುಗಳು ವಾರದ ಮುನ್ನವೇ ನಿಂಗಪ್ಪ‌ ಮನೆಗೆ ಆಗಮಿಸಿ ಮದುವೆ ತಯಾರಿ ನಡೆಸಿದ್ದರು. ಕುಲದೇವರ ಪೂಜೆ ಮಾಡಲು ಎಲ್ಲರೂ ಸಿದ್ಧತೆ ನಡೆಸುತ್ತಿದ್ದರು. ಆದರೆ ಬೆಳ್ಳಂ ಬೆಳಗ್ಗೆಯೇ ಬರ ಸಿಡಿಲಿನ ಸುದ್ದಿ ಆ ಮನೆಯವರಿಗೆ ಕಾಯುತ್ತಿತ್ತು. ಹೊಲದಲ್ಲಿರುವ ದನದ ಕೊಟ್ಟಿಗೆಯಲ್ಲಿ ಮಲಗಿ ಬೆಳಗ್ಗೆ ಬರುತ್ತೇನೆ, ಎಲ್ಲರೂ ದೇವರ ಪೂಜೆಗೆ ಹೋಗೋಣ ಸಿದ್ಧರಾಗಿರಿ ಎಂದು ಹೇಳಿ ಹೋದ ಮದು ಮಗ ವಾಪಸ್‌ ಬಂದಿದ್ದು ಮಾತ್ರ ಶವವಾಗಿ.

ಗುರುವಾರ ರಾತ್ರಿ ನಡೆದ ಕೊಲೆ

ಬೆಳಗ್ಗೆ ನಿಂಗಪ್ಪ ಬರುತ್ತಾನೆ. ಎಲ್ಲರೂ ಒಟ್ಟಿಗೆ ಹೋಗಿ ಕುಲದೇವರ ಪೂಜೆ ಮಾಡೋಣ ಎಂದುಕೊಂಡು ಕಾದು ಕುಳಿತಿದ್ದವರಿಗೆ ಕೊಲೆಯ ಸುದ್ದಿ ಬರಸಿಡಿಲಿನಂತೆ ಬಂದು ಬಡಿದಿದೆ. ಹಸೆಮಣೆ ಏರಬೇಕಾದ ನಿಂಗಪ್ಪ ಮಸಣ ಸೇರಿದ್ದ. ಪಾಪಿಗಳು ನಿಂಗಪ್ಪನನ್ನು ಹೊಲದ ಬಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಸುದ್ದಿ ಇಡೀ ಊರನ್ನೇ ತಲ್ಲಣಗೊಳಿಸಿದೆ. ಮನೆಯವರು ಈಗಾಗಲೇ ಬಹುತೇಕ ಸಂಬಂಧಿಕರಿಗೆ ಲಗ್ನ ಪತ್ರಿಕೆ ಹಂಚಿ ಮದುವೆ ಕೆಲಸ ಶುರು ಮಾಡಿಕೊಂಡಿದ್ದರು. ಗುರುವಾರ ರಾತ್ರಿ ಈ ಕೊಲೆ ನಡೆದಿದೆ.

ಕೊಲೆಯಾದ ನಿಂಗಪ್ಪ ಬೂದಪ್ಪ ನವಲೂರು
ಕೊಲೆಯಾದ ನಿಂಗಪ್ಪ ಬೂದಪ್ಪ ನವಲೂರು

ಸಂಭ್ರಮದಿಂದ ಕೂಡಿರಬೇಕಾದ ಮನೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಮದುವೆಯ ಜವಳಿ ವಸ್ತುಗಳು , ದಿಬ್ಬಣಕ್ಕೆ ಸಿದ್ದಪಡಿಸಿದ್ದ ಕಡಬು, ದಿನಸಿ ಪದಾರ್ಥಗಳು ಸೇರಿದಂತೆ ಅನೇಕ ಸಾಮಾನುಗಳು ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಾಳಿ ಬದುಕಬೇಕಿದ್ದ ಮಗನ ಸಾವಿನ ಸುದ್ದಿ ಕೇಳಿ ಕುಟುಂಬದವರು ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತೆ ಇತ್ತು.

ಖಾರದ ಪುಡಿ ಎರಚಿ ನಿಂಗಪ್ಪನನ್ನು ಕೊಲೆ ಮಾಡಿದ ದುಷ್ಕರ್ಮಿಗಳು

ನಿಂಗಪ್ಪ ಒಬ್ಬನೇ ಹೊಲದ ಶೆಡ್‌ನಲ್ಲಿ ಮಲಗಲು ಹೋಗುತ್ತಿದ್ದಾ ನೆ ಎಂದು ಮಾಹಿತಿ ತಿಳಿದ ಹಂತಕರು , ಆತ ಬರುವುದನ್ನೇ ಕಾದು ಸಂಚು ರೂಪಿಸಿದ್ದಾರೆ. ನಿಂಗಪ್ಪನಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಕೊಲೆ ಮಾಡಿ ಆತನ ಮೇಲೆ ಬೆಡ್‌ಶೀಟ್‌ ಹೊದಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ನಿಂಗಪ್ಪ ಇನ್ನೂ ಮನೆಗೆ ಬಂದಿಲ್ಲದಿರುವುದನ್ನು ನೋಡಿ ಅನುಮಾನ ವ್ಯಕ್ತಪಡಿಸಿದ ಕುಟುಂಬದವರು ಸ್ಥಳಕ್ಕೆ ಹೋಗಿ ನೋಡಿದಾಗ ವಿಚಾರ ತಿಳಿದು ಶಾಕ್‌ ಆಗಿದ್ದಾರೆ.

ನಿಂಗಪ್ಪನ ಕೊಲೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕಲಘಟಗಿ ಠಾಣೆ ಪೊಲೀಸರು

ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳವನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್‌ಸ್ಪೆಕ್ಟರ್‌ ಶ್ರೀ ಶೈಲ ಕೌಜಲಗಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕೊಲೆಗಡುಕರ ಪತ್ತೆಗೆ ಬಲೆ ಬೀಸಲಾಗಿದೆ. ಹಂತಕರನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಕುಟುಂಬಸ್ಥರು ಒತ್ತಾ ಯಿಸಿದ್ದಾ ರೆ.

-ವರದಿ: ಪ್ರಹ್ಲಾದಗೌಡ ಬಿ.ಜಿ

IPL_Entry_Point