ಕನ್ನಡ ಸುದ್ದಿ  /  Karnataka  /  Dharwad News Jp Nadda Road Show For Kalaghatagi Bjp Candidate Nagaraj Chabbi Karnataka Election Mgb

JP Nadda in Kalaghatagi: ಹರ್ಷ, ಪ್ರವೀಣ್​ ನೆಟ್ಟಾರು ಬಲಿದಾನ ವ್ಯರ್ಥ ಆಗಲು ಬಿಡಲ್ಲ; ಜೆಪಿ ನಡ್ಡಾ ವಾಗ್ದಾನ

ಕಲಘಟಗಿ-ಅಳ್ನಾವರ (Kalaghatagi-Alnavara) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ (Nagaraj Chabbi) ಪರ ಕಲಘಟಗಿ ಪಟ್ಟಣದಲ್ಲಿ ಜೆಪಿ ನಡ್ಡಾ (JP Nadda) ರೋಡ್​ ಶೋ ನಡೆಸಿದರು.

ಕಲಘಟಗಿ ಪಟ್ಟಣದಲ್ಲಿ ಜೆಪಿ ನಡ್ಡಾ ರೋಡ್​ ಶೋ
ಕಲಘಟಗಿ ಪಟ್ಟಣದಲ್ಲಿ ಜೆಪಿ ನಡ್ಡಾ ರೋಡ್​ ಶೋ

ಧಾರವಾಡ: ರಾಜ್ಯದಲ್ಲಿ ಹರ್ಷನ ಮತ್ತು ಪ್ರವೀಣ್​​ ನೆಟ್ಟಾರು ಅವರಂತಹ ಕಾರ್ಯಕರ್ತರ ಹತ್ಯೆಗಳಾದವು (Harsha-Praveen Nettaru Murder). ನಾವು ಅವರ ಬಲಿದಾನ ವ್ಯರ್ಥ ಆಗಲು ನಾವು ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ವಾಗ್ದಾನ ಮಾಡಿದ್ದಾರೆ.

ಕಲಘಟಗಿ-ಅಳ್ನಾವರ (Kalaghatagi-Alnavara) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ (Nagaraj Chabbi) ಪರ ಕಲಘಟಗಿ ಪಟ್ಟಣದ ಎಪಿಎಂಸಿಯಿಂದ ಯುವಶಕ್ತಿ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಿದ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರು ಪಿಎಫ್ಐ ಕಾರ್ಯಕರ್ತರ ಮೇಲೆ 170 ಕೇಸ್ ಗಳನ್ನು ಹಾಕಿ 1700 ಜನರನ್ನು ಜೈಲಿಗೆ ಕಳುಹಿಸಿದರು. ಆದರೆ ಸಿದ್ದರಾಮಯ್ಯ ಆಪಾದಿತರನ್ನು ಬಿಡುಗಡೆಗೊಳಿಸಿದರು. ನಂತರ ಮೋದಿ ಸರ್ಕಾರ ಬಲಿಷ್ಠ ಆಧಾರಗಳನ್ನು ಇಟ್ಟಕೊಂಡು ಪಿಎಫ್ಐ ಅನ್ನು ನಿಷೇಧಿಸಿದರು ಎಂದು ಹೇಳಿದರು.

ಡಬಲ್ ಇಂಜಿನ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ

ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ಡಬಲ್ ಇಂಜಿನ್ ಸರ್ಕಾರದಿಂದ ಕೇಂದ್ರದಿಂದ ಬಂದ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲು ಸಹಾಯವಾಗುತ್ತದೆ. ರಾಜ್ಯದ ಅನೇಕ ಜನಪರ ಯೋಜನೆಗಳಿಗೆ ಶಕ್ತಿ ತುಂಬುತ್ತದೆ. ಈ ರೀತಿ ಡಬಲ್ ಇಂಜಿನ ಸರ್ಕಾರ ಕೆಲಸ ಮಾಡಿದರೆ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಕೇಂದ್ರ ಸರ್ಕಾರ ನೀಡಿರುವ ಅನುದಾನ ಸಮರ್ಪಕವಾಗಿ ಬಳಸದೆ ಅದನ್ನು ದುರುಪಯೋಗ ಪಡಿಸಿಕೊಂಡರು ಎಂದು ಆರೋಪಿಸಿದರು.

ಆಯುಷ್ಯಮಾನ ಭಾರತ ಯೋಜನೆ ಅಡಿ ಬಡವರಿಗಾಗಿ ಪ್ರತಿ ವರ್ಷ ಐದು ಲಕ್ಷ ರೂಪಾಯಿ ಯವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದಲಿತರಿಗೆ ಶೇ.2, ಆದಿವಾಸಿಗಳಿಗೆ ಶೇ.4, ಒಕ್ಕಲಿಗರಿಗೆ ಶೇ.2 ಹಾಗೂ ಲಿಂಗಾಯುತರಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಆದರೆ ಕಾಂಗ್ರೆಸ್ಸಿನವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ನಂಬಿಕೆ ಇದೆ. ಜನರು ಕಾಂಗ್ರೆಸ್ ಅನ್ನು ವಾಪಸ್ ಕಳುಹಿಸುತ್ತಾರೆ ಎಂದು ಭವಿಷ್ಯ ನುಡಿದರು.

ಮಲಪ್ರಭಾದ ಯೋಜನೆಯಲ್ಲಿ 400 ಕೋಟಿ ರೂ.ಗಳ ಭ್ರಷ್ಟಾಚಾರವನ್ನು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ನಡೆದಿತ್ತು. ಶಿಕ್ಷಕರ ನೇಮಕಾತಿಯಲ್ಲಿ, ಪೊಲೀಸರ ನೇಮಕಾತಿ, ಅರ್ಕಾವತಿಯಲ್ಲಿ ಅನೇಕ ಭ್ರಷ್ಟಾಚಾರಗಳು ನಡೆದಿದ್ದವು. ಇವೆಲ್ಲ ಸಮಸ್ಯೆ ಪರಿಹರಿಸಲಿಕ್ಕೆ ಕಲಘಟಗಿ ಜನರು ಕಮಲಕ್ಕೆ ಮತ ನೀಡಿ ನಾಗರಾಜ ಛಬ್ಬಿ ಅವರಿಗೆ ಬಹು ಮತಗಳಿಂದ ಗೆಲ್ಲಿಸಿ ಹಾಗೂ ಡಬಲ್ ಇಂಜಿನ್​​ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ರಸ್ತೆ, ಶುದ್ಧ ಕುಡಿಯುವ ನೀರು, ಯುವಕರಿಗೆ ಉದ್ಯೋಗ, ಗುಡಿ ಕೈಗಾರಿಕೆಗೆ, ಎಲ್ಲ ಧರ್ಮಿಯರಿಗೆ ಮೀಸಲಾತಿ, ಬಡಕೂಲಿ ಕಾರ್ಮಿಕ ಅಭಿವೃದ್ಧಿ ಸೇರಿದಂತೆ ಇನ್ನು ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನ ಮಾಡುತ್ತಾ ಬಂದಿದೆ. ಈಗಿರುವ ಶುದ್ಧ ಕುಡಿಯುವ ನೀರಿನ ಯೋಜನೆ ಜೊತೆಗೆ ಇನ್ನು ಒಂದುವರೆ ವರ್ಷದಲ್ಲಿ ಮಲಪ್ರಭಾ ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆ ನಿಮ್ಮ ಮನೆಗೆ ಬಂದು ಸೇರುವಂತ ಕಾರ್ಯವನ್ನ ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡೋವುದು ಖಚಿತ ಎಂದರು.

ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆ ನೀಡುವ ಮೂಲಕ ಮತದಾರರ ದಾರಿ ತಪ್ಪಿಸುವ ಕಾಯಕವನ್ನ ಮಾಡುತ್ತಿದೆ. ಆದ್ದರಿಂದ ಅವರ ಕೊಡುವ ಪ್ರೀ ಡಿಮ್ ಲೈಟ್ ಬಿಟ್ಟು. ಪಕ ಪಕ ಅಂತಾ ಹೊಳೆಯುವ ಲೈಟ್ ಕೊಡುವ ಬಿಜೆಪಿಯನ್ನ ಬೆಂಬಲಿಸಿ ಆಶೀರ್ವದಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಮಾತನಾಡಿ, ನಡ್ಡಾ ಅವರ ಆಗಮನದಿಂದ ತಾಲೂಕಿನ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿದೆ. ನಿಮ್ಮ ಆಶೀರ್ವಾದ ಮುಂದಿನ 5 ವರ್ಷದ ಕಲಘಟಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ಆದ್ದರಿಂದ ಈ ಬಾರಿ ಬಡವರ ಹಾಗೂ ಜನಪರ ಕಾಳಜಿ ಇರುವ ಬಿಜೆಪಿ ಪಕ್ಷವನ್ನ ಗೆಲ್ಲಿಸುವಂತ ನಿರ್ಧಾರವನ್ನ ಮತದಾರರು ಮಾಡಬೇಕು ಎಂದು ಮನವಿ ಮಾಡಿದರು.

IPL_Entry_Point