DK Shivakumar: ಸಂಪುಟ ಸೇರುವ ಮುನ್ನ ಗಂಗಾಧರ ಅಜ್ಜಯ್ಯನ ನೆನೆದ ಡಿಕೆಶಿ; ಯಾವುದೀ ಮಠ, ಅಜ್ಜಯ್ಯನ ಮಹತ್ವವಾದರು ಏನು?
ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ನೊಣವಿನಕೆರೆ ಗಂಗಾಧರ ಅಜ್ಜಯ್ಯ ಅವರನ್ನು ನೆನೆದಿದ್ದಾರೆ. ಆ ಸ್ವಾಮೀಜಿ ಕುರಿತ ಬರಹ ಇಲ್ಲಿದೆ.
DK Shivakumar: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನವನ್ನು ಸ್ವೀಕರಿಸಿದ್ದು ಗಂಗಾಧರ ಅಜ್ಜಯ್ಯನ ಹೆಸರಲ್ಲಿ. ಯಾರು ಈ ಅಜ್ಜಯ್ಯ?
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮಿ ದೂರದಲ್ಲಿದೆ ನೊಣವಿಕೆರೆ ಎಂಬ ಗ್ರಾಮ. ಈ ಗ್ರಾಮದ ಕಾಡಸಿದ್ದೇಶ್ವರ ಮಠ ಪುರಾತನವಾದದ್ದು. ಈ ಮಠಕ್ಕೆ ಅಂದಾಜು 800 ವರ್ಷಗಳಿಗ ಮಿಗಿಲಾದ ಇತಿಹಾಸವಿದೆ. ಗ್ರಾಮದಲ್ಲಿಯೇ ಅಜ್ಜಯ್ಯನ ಗದ್ದುಗೆ, ದೇವಸ್ಥಾನ, ಗೋಶಾಲೆ ಇದೆ. ಸದ್ಯ ಈ ಮಠದ ಪೀಠಾಧಿಪತಿ 70 ವರ್ಷ ಆಸುಪಾಸಿನ ಶ್ರೀ ವೃಷಭ ದೇಶಿಕೇಂದ್ರ ಸ್ವಾಮೀಜಿ. ತುಮಕೂರು ಜಿಲ್ಲೆಯ ಬಹುಪಾಲು ರಾಜಕಾರಣಿಗಳು ಭೇಟಿ ನೀಡಿ ಸ್ವಾಮೀಜಿ ಅವರ ಆಶಿರ್ವಾದ ಪಡೆಯುತ್ತಾರೆ.
ಈ ಹಿಂದೆ ಎಸ್.ಎಂ.ಕೃಷ್ಣ ಮಹಾರಾಷ್ಟ್ರ ಸಿಎಂ ರಾಜ್ಯಪಾಲರಾಗಿದ್ದಾಗ ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಅವರು ಹೇಳುವ ಭವಿಷ್ಯವನ್ನು ಎಲ್ಲರು ನಂಬುತ್ತಾರೆ. ಆದರೆ ಕಾಂಗ್ರೆಸ್ನ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಕೂಡ ಹಲವು ವರ್ಷಗಳಿಂದ ಈ ಮಠಕ್ಕೆ ಭೇಟಿ ನೀಡುತ್ತ ಬಂದಿದ್ದಾರೆ. ಯಾವುದೇ ಶುಭ ಚಟುವಟಿಕೆಗೂ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸುವುದನ್ನೂ ಮುಂದುವರೆಸಿಕೊಂಡು ಬಂದಿದ್ದಾರೆ ಡಿಕೆಶಿ.
ಮೂರು ವರ್ಷದ ಹಿಂದೆ ಐಟಿ, ಇಡಿ ದಾಳಿಗೊಳಗಾಗಿ ಬಂಧನಕ್ಕೂ ಒಳಗಾದ ಡಿ.ಕೆ. ಶಿವಕುಮಾರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬಿಡುಗಡೆಯಾದ ನಂತರ ಅವರು ಆಗಮಿಸಿದ್ದು ಈ ಮಠಕ್ಕೆ. ಬಂಡೆಯಂತೆ ಕಷ್ಟಗಳು ಕರಗಿ ಮುಖ್ಯಮಂತ್ರಿಯೂ ಆಗುತ್ತೀರಿ ಎಂದು ಸ್ವಾಮೀಜಿ ಡಿಕೆಶಿಗೆ ಅಭಯ ನೀಡಿದ್ದರು. ಇದಾದ ಬಳಿಕ ಮಗಳ ಮದುವೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೂ ಮುನ್ನ ಅವರು ಸ್ವಾಮೀಜಿಯನ್ನು ಭೇಟಿ ಮಾಡಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಭಾರೀ ಬಹುಮತ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿತು. ತಾವು ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಹಠಕ್ಕೆ ಬಿದ್ದ ಡಿಕೆಶಿ ರಾಜಕೀಯ ಪ್ರಯತ್ನಗಳನ್ನೆಲ್ಲಾ ಮಾಡಿದರು. ಈ ವೇಳೆ ಅವರು ಮೊರೆ ಹೋಗಿದ್ದು ಗಂಗಾಧರ ಅಜ್ಜಯ್ಯನಿಗೆ. ನೊಣವಿನಕೆರೆಗೆ ಭೇಟಿ ನೀಡಿ ಅಜ್ಜಯ್ಯನ ಪೀಠಕ್ಕೆ ನಮಸ್ಕರಿಸಿ ಸ್ವಾಮೀಜಿ ಅವರೊಂದಿಗೆ ಬಹಳ ಹೊತ್ತು ಚರ್ಚಿಸಿಯೂ ಬಂದಿದ್ದರು. ನನಗೆ ಅಜ್ಜಯ್ಯನ ಮೇಲೆ ನಂಬಿಕೆ. ಖಂಡಿತಾ ಒಳ್ಳೆಯಾಗುತ್ತದೆ ಎಂದು ಡಿಕೆಶಿ ಹೇಳಿದ್ದರು.
ಸ್ವಾಮೀಜಿ ಅವರೂ, ನಿಮಗೆ ಉತ್ತಮ ಸ್ಥಾನ ದೊರೆಯಲಿದೆ ಎನ್ನುವ ಅಭಯವನ್ನೂ ನೀಡಿದ್ದರು. ಅದರಂತೆ ಈಗ ಡಿಕೆಶಿ ಡಿಸಿಎಂ. ಈ ನಂಟು, ಅಭಯದ ಕಾರಣಕ್ಕೆ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಿದ್ದು ಅಜ್ಜನ ಹೆಸರಿನಲ್ಲಿ!