ಕೇಂದ್ರ ಬಜೆಟ್​ಗೂ ಮುನ್ನ ನಿರ್ಮಲಾ ಸೀತರಾಮನ್​ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರ ಬಜೆಟ್​ಗೂ ಮುನ್ನ ನಿರ್ಮಲಾ ಸೀತರಾಮನ್​ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?

ಕೇಂದ್ರ ಬಜೆಟ್​ಗೂ ಮುನ್ನ ನಿರ್ಮಲಾ ಸೀತರಾಮನ್​ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?

DK Shivakumar: ಮುಂಬರುವ ಕೇಂದ್ರ ಬಜೆಟ್​ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್​ಗೂ ಮುನ್ನ ನಿರ್ಮಲಾ ಸೀತರಾಮನ್​ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?
ಕೇಂದ್ರ ಬಜೆಟ್​ಗೂ ಮುನ್ನ ನಿರ್ಮಲಾ ಸೀತರಾಮನ್​ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?

ಬೆಂಗಳೂರು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಪಿಆರ್​ಆರ್ ಬಿಸಿನೆಸ್ ಕಾರಿಡಾರ್, ನೀರು ಸರಬರಾಜು ಸೇರಿ ಅನೇಕ ಪ್ರಮಖ ಯೋಜನೆ ಕೈಗೊಂಡಿದ್ದು, ಈ ಯೋಜನೆಗಳಿಗೆ 2025-26ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ (Union Budget) ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಗೆ ಪತ್ರ ಬರೆದಿದ್ದಾರೆ. ಮುಂಬರುವ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಆಯವ್ಯಯದಲ್ಲಿ ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

‘ಬೆಂಗಳೂರು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಪ್ರಗತಿ ಹಾಗೂ ಬಂಡವಾಳ ಹೂಡಿಕೆ ಆಕರ್ಷಣೆಯ ತಾಣವಾಗಿ ಬೆಳೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಬೆಂಗಳೂರು ಜಾಗತಿಕ ನಗರವಾಗಿ ರೂಪುಗೊಂಡಿದೆ. ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸಿ, ಆರ್ಥಿಕ ಪ್ರಗತಿಗೆ ನೆರವಾಗಿದೆ. ಬೆಂಗಳೂರು ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಪರಿಣಾಮ, ನಗರದ ಜನಸಂಖ್ಯೆ 1.50 ಕೋಟಿ ಸನಿಹದಲ್ಲಿದೆ. ಹೀಗಾಗಿ ಮೂಲಸೌಕರ್ಯ ಅಭಿವೃದ್ಧಿ ಮಾಡಿ ನಗರವನ್ನು ದೇಶದ ಸಿಲಿಕಾನ್ ವ್ಯಾಲಿ ಎಂಬ ಹಿರಿಮೆ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದ್ದು, ಮುಂಬರುವ ಬಜೆಟ್​ನಲ್ಲಿ ಈ ಯೋಜನೆಗಳಿಗೆ ಪೂರಕವಾಗಿ ಅನುದಾನ ನೀಡಬೇಕು’ ಎಂದು ಕೋರಿದ್ದಾರೆ.

ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ

‘ಭೂಮಿಯ ಕೊರತೆಯಿಂದಾಗಿ ಬೆಂಗಳೂರಿನಲ್ಲಿರುವ ಹಾಲಿ ರಸ್ತೆಗಳ ಅಗಲೀಕರಣ ಕಷ್ಟವಾಗಿದೆ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್​​ನಿಂದ ಹೆಚ್​ಎಸ್​ಆರ್ ಲೇಔಟ್​ನ ಸಿಲ್ಕ್ ಬೋರ್ಡ್ ಜಂಕ್ಷನ್​ವರೆಗೂ ಉತ್ತರ-ದಕ್ಷಿಣ 18.5 ಕಿಮೀ ಟನಲ್ ರಸ್ತೆ ನಿರ್ಮಾಣಕ್ಕೆ 15 ಸಾವಿರ ಕೋಟಿ ವೆಚ್ಚವಾಗಲಿದೆ. ಕೆಆರ್​ ಪುರ ಸರ್ಕಲ್​ನಿಂದ ನಾಯಂಡನಹಳ್ಳಿ ಜಂಕ್ಷನ್​​​ ತನಕ 28.5 ಕಿಮೀ ಟನಲ್ ರಸ್ತೆ ನಿರ್ಮಾಣಕ್ಕೆ 25 ಸಾವಿರ ಕೋಟಿ ವೆಚ್ಚವಾಗಲಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ 19 ಸಾವಿರ ಕೋಟಿ ಮೌಲ್ಯದ ಡಿಪಿಆರ್ ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಿದೆ’ ಎಂದು ತಿಳಿಸಿದ್ದಾರೆ.

ಮೆಟ್ರೋ ಸೇರಿದಂತೆ ಎಲಿವೆಟೆಡ್ ಕಾರಿಡಾರ್ (ಡಬಲ್ ಡೆಕ್ಕರ್ ಮೇಲ್ಸೇತುವೆ)

‘ನಮ್ಮ ಮೆಟ್ರೋದ ಮೂರನೇ ಹಂತದ ಹಳದಿ ಮಾರ್ಗದಲ್ಲಿ ರಾಗಿ ಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್​ವರೆಗೂ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಮೇಲ್ಸೇತುವೆ ಯಶಸ್ವಿ ಹಿನ್ನೆಲೆಯಲ್ಲಿ ಮೆಟ್ರೋ 4ನೇ ಹಂತದ ಯೋಜನೆಯನ್ನು ಡಬಲ್ ಡೆಕ್ಕರ್ ಮೂಲಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಜೆಪಿ ನಗರದಿಂದ ಹೆಬ್ಬಾಳದ ತನಕ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೂ 45 ಕಿಮೀ ಉದ್ದದ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ 8916 ಕೋಟಿ ರೂಪಾಯಿ ಅಗತ್ಯವಿದೆ’ ಎಂದು ಡಿಕೆಶಿ ತಿಳಿಸಿದ್ದಾರೆ.

17 ಮೇಲ್ಸೇತುವೆ, 300 ಕಿಮೀ ಬಫರ್ ವಲಯ ರಸ್ತೆ

‘ಇವುಗಳ ಜತೆಗೆ ನಗರದ ಸಂಚಾರಿ ದಟ್ಟಣೆ ಇರುವ 11 ಜಂಕ್ಷನ್​​ಗಳಲ್ಲಿ 99.50 ಕಿಮೀ ನಷ್ಟು 17 ಮೇಲ್ಸೇತುವೆ ನಿರ್ಮಾಣ ಅಗತ್ಯವಿದ್ದು, ಇದಕ್ಕಾಗಿ 12 ಸಾವಿರ ಕೋಟಿ ಹಣ ಬೇಕಾಗಿದೆ. ಪ್ರಮುಖ ನದಿ ಹಾಗೂ ದೊಡ್ಡ ಕೆರೆಗಳು ಹಾಗೂ ರಾಜಕಾಲುವೆ ಪಕ್ಕದ ಬಫರ್ ಪ್ರದೇಶಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಈ ಬಫರ್ ವಲಯದಲ್ಲಿ 300 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 3000 ಕೋಟಿ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಪಿಆರ್​​ಆರ್ ಹಾಗೂ ನೀರು ಸರಬರಾಜು ಯೋಜನೆ

ಬೆಂಗಳೂರಿನ ದಟ್ಟಣೆ ನಿಯಂತ್ರಿಸಲು ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 8 ಪಥಗಳ, 73.04 ಕಿಮೀ ಉದ್ದದ ಬಿಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯಲ್ಲಿ 21 ಸಾವಿರ ಕೋಟಿ ಭೂಸ್ವಾಧೀನ ಹಾಗೂ 6 ಸಾವಿರ ಕೋಟಿ ರಸ್ತೆ ನಿರ್ಮಾಣಕ್ಕೆ ಸೇರಿ ಒಟ್ಟು 27 ಸಾವಿರ ಕೋಟಿ ಅಗತ್ಯವಿದೆ. ಇನ್ನು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಮೂಲಕ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆ ಪೂರ್ಣಗೊಳಿಸಲಾಗಿದ್ದು, ಹೆಚ್ಚುವರಿ ಬೇಡಿಕೆ ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಮೂಲಕ 2028ರ ವೇಳೆಗೆ 500 ಎಂಎಲ್​ಡಿ ನೀರು ಪೂರೈಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಾವುಗಳು ಬೆಂಗಳೂರಿನ ಈ ಪ್ರಮುಖ ಯೋಜನೆಗಳಿಗೆ ಬಜೆಟ್​ನಲ್ಲಿ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Whats_app_banner