ಕನ್ನಡ ಸುದ್ದಿ  /  Karnataka  /  Dk Sivakumar Said He Will Congratulate Amit Shah This Is The Reason

DK Shivakumar on Amit shah: ಈ ವಿಚಾರದಲ್ಲಿ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಡಿಕೆ ಶಿವಕುಮಾರ್

ಬಿಜೆಪಿಯವರು ಹಿಂದೂ ಭಾವನೆ ಮೇಲೆ ಚುನಾವಣೆಗೆ ಹೋದರೆ ನಾವು ಬದುಕಿನ ಮೇಲೆ ಹೋಗುತ್ತೇವೆ. ಭಾವನೆ ಮತ್ತು ಬದುಕಿನ ನಡುವೆ ವ್ಯತ್ಯಾಸವಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಅಮಿತ್ ಶಾ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿ, ರಾಜ್ಯದಲ್ಲಿ ಆಡಳಿತ ಸರಿಯಿಲ್ಲ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ವಹಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಈಗಿರುವ ಮುಖಂಡರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಗೆಲ್ಲಲು ಆಗುವುದಿಲ್ಲ ಎಂಬುದನ್ನು ಒಪ್ಪಿಕೊಂಡು, ಪ್ರಧಾನ ಮಂತ್ರಿಗಳ ಮುಖಂಡತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸುವುದಾಗಿ ಸತ್ಯ ನುಡಿದಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಹರಿಪ್ರಸಾದ್ ಸೇರಿದಂತೆ ಹಲವು ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ನಮ್ಮ ಸಾಮೂಹಿಕ ನಾಯಕತ್ವವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದು ಪ್ರಧಾನಮಂತ್ರಿಗಳ ಹೆಸರನ್ನು ಮುಂಚೂಣಿಗೆ ಇಟ್ಟಿದ್ದಾರೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದ ಆಡಳಿತ ಸಂಪೂರ್ಣ ವಿಫಲ ಆಗಿದೆ ಎಂಬುದಕ್ಕೆ ಅವರ ನುಡಿ ಮುತ್ತುಗಳೇ ಸಾಕ್ಷಿ ಎಂದು ತಿಳಿಸಿದ್ದಾರೆ.

ಬೇರೆ ರಾಜ್ಯಗಳ ಸಂಸ್ಥೆ ಜತೆ ವಿಲೀನ ಮಾಡಿಕೊಳ್ಳುವ ಅಗತ್ಯವಿಲ್ಲ

ಕೆಎಂಎಫ್ ಹಾಗೂ ಅಮೂಲ್ ವಿಲೀನದ ಬಗ್ಗೆ ಕೇಳಿದ ಪ್ರಶ್ನೆಗೆ, ' ಶಾ ಅವರು ಹೇಳಿರುವ ಮಾತನ್ನು ರಾಜ್ಯ ಸಹಕಾರಿ ಸಚಿವ ಸೋಮಶೇಖರ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಿರ್ಣಯದ ಮೂಲಕ ಪ್ರಸ್ತಾಪಿಸಲಿ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ನಾನೂ ಸಹಕಾರ ಸಚಿವನಾಗಿದ್ದೆ. ನಮ್ಮ ಹಾಲು, ನಮ್ಮ ನೀರು, ನಮ್ಮ ಜನ, ನಮ್ಮ ಹಕ್ಕು. ನಮ್ಮ ಕನಕಪುರದಲ್ಲಿ ಅಮೂಲ್ ಕಂಪನಿಗಿಂತ ದೊಡ್ಡ ಹಾಲು ಉತ್ಪಾದನೆ ಘಟಕ ಇದೆ. ಬೆಂಗಳೂರಿನ ಕೆಎಂಎಫ್, ಮಂಡ್ಯ, ಹಾಸನ ಸೇರಿದಂತೆ ಎಲ್ಲ ಕಡೆಗಳಲ್ಲಿ ನಮ್ಮ ರೈತರು ಹಾಲು ಒಕ್ಕೂಟ ಸಂಸ್ಥೆಗಳನ್ನು ಬೆಳೆಸಿದ್ದಾರೆ.

ನಮ್ಮ ಸಂಸ್ಥೆ ಲಾಭದಲ್ಲಿ ನಡೆಯುತ್ತಿದೆ. ನಮ್ಮ ರೈತರನ್ನು ಶಕ್ತಿಶಾಲಿ ಮಾಡಬೇಕು. ನಮಗೆ ಬೇರೆ ರಾಜ್ಯಗಳ ಸಂಸ್ಥೆ ಜತೆ ವಿಲೀನ ಮಾಡಿಕೊಳ್ಳುವ ಅಗತ್ಯವಿಲ್ಲ. ಆ ಸಂಸ್ಥೆ ಕೂಡ ಉತ್ತಮ ಸಂಸ್ಥೆ ಇರಬಹುದು. ಅದರ ಜತೆ ಆರೋಗ್ಯಕರ ಸ್ಪರ್ಧೆ ಮಾಡುತ್ತೇವೆ. ಆ ಶಕ್ತಿ ರಾಜ್ಯದ ಹಾಲು ಉತ್ಪಾದಕರಿಗೆ ಇದೆ ಎಂಬುದನ್ನು ಮುಖ್ಯಮಂತ್ರಿಗೆ ಹೇಳಬಯಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಾ ಅವರು ಬಿಜೆಪಿ ನಾಯಕರಿಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಟಾಸ್ಕ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಪಕ್ಷದ ಅಜೆಂಡಾ, ಅವರು ಏನಾದರೂ ಮಾಡಿಕೊಳ್ಳಲಿ. ಅವರ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನಾನು ಬಿಜೆಪಿ ಅವರಂತೆ ಗೊಂದಲದಲ್ಲಿ ಇಲ್ಲ. ಕಳೆದ ಬಾರಿ ಅವರು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು.

ಈಗ ಅವರ ನಾಯಕತ್ವ ಹೋಗಿದೆ, ಮೋದಿ ಅವರ ನಾಯಕತ್ವ ಬಂದಿದೆ. ಉಳಿದ ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರು ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಂದರೆ ನಮ್ಮನ್ನು ಸೋಲಿಸಲು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಸಾಧ್ಯವಾಗದೆ ಕೇಂದ್ರ ತಂಡ ಆಗಮಿಸುತ್ತಿದೆ. ಬರಲಿ ತೊಂದರೆ ಇಲ್ಲ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿಯವರ ಆಚಾರ-ವಿಚಾರ, ದುರಾಡಳಿತವನ್ನು ಜನ ನೋಡಿದ್ದಾರೆ' ಎಂದು ತಿಳಿಸಿದರು.

ಅವರು ಭಾವನೆ ಮೇಲೆ ಹೋದರೆ, ನಾವು ಬದುಕಿನ ಮೇಲೆ ಹೋಗುತ್ತೇವೆ

ಬಿಜೆಪಿ ಹಿಂದೂ ಅಜೆಂಡಾ ಪ್ರಯೋಗಿಸಲಿದೆ ಎಂಬ ಪ್ರಶ್ನೆಗೆ, ಅವರು ಭಾವನೆ ಮೇಲೆ ಹೋದರೆ ನಾವು ಬದುಕಿನ ಮೇಲೆ ಹೋಗುತ್ತೇವೆ. ಭಾವನೆ ಮತ್ತು ಬದುಕಿನ ನಡುವೆ ವ್ಯತ್ಯಾಸವಿದೆ ಎಂದು ತಿಳಿಸಿದರು.

ರಾಜ್ಯದ ಜನತೆಗೆ ತುಂಬು ಹೃದಯದಿಂದ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಬಂದಿರುವ ಕಳಂಕವನ್ನು 2023 ರಲ್ಲಿ ತೆಗೆದುಹಾಕುವ ಕೆಲಸ ಮಾಡಬೇಕು. ಈ ರಾಜ್ಯದ ಜನರು ಬದಲಾವಣೆ ತರುತ್ತಾರೆಂದು ನಾನು ನಂಬಿದ್ದೇನೆ ಎಂದರು.

IPL_Entry_Point