ಕನ್ನಡ ಸುದ್ದಿ  /  Karnataka  /  Doddaballapura News Child Dies Due To Suspected Heart Attack In Village Fair Karnataka News In Kannada

Doddaballapura News: ಜಾತ್ರೆಗೆ ಬಂದಿದ್ದ ಏರ್‌ ಬಲೂನ್‌ನಲ್ಲಿ ಜಿಗಿದಾಡುತ್ತಿದ್ದ 9 ವರ್ಷದ ಬಾಲಕ ನಿತ್ರಾಣಗೊಂಡು ಸಾವು, ಹೃದಯಾಘಾತ ಶಂಕೆ

ಜಾತ್ರೆಯಲ್ಲಿ ಏರ್‌ ಬಲೂನ್‌ನಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕಳೆದ ರಾತ್ರಿ ನಗರದಲ್ಲಿ ನಡೆದ ಮುತ್ಯಾಲಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಲೋ ಬಿಪಿ ಕಾರಣದಿಂದ ಹೃದಯಾಘಾತವಾಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ದೊಡ್ಡ ಬಳ್ಳಾಪುರ ಜಾತ್ರೆಯ ದ್ರಶ್ಯ (ಎಡಚಿತ್ರ) ಮೃತ ಬಾಲಕ ಶ್ರೇಯಸ್‌ (ಬಲಚಿತ್ರ)
ದೊಡ್ಡ ಬಳ್ಳಾಪುರ ಜಾತ್ರೆಯ ದ್ರಶ್ಯ (ಎಡಚಿತ್ರ) ಮೃತ ಬಾಲಕ ಶ್ರೇಯಸ್‌ (ಬಲಚಿತ್ರ)

ದೊಡ್ಡಬಳ್ಳಾಪುರ: ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಖ್ಯಾತ ನೇತ್ರತಜ್ಞ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ಮರಣ ಹೊಂದಿದ್ದರು. ಹೃದಯಾಘಾತ ಮಕ್ಕಳನ್ನೂ ಬಿಟ್ಟಿಲ್ಲ.

ಬೌನ್ಸಿ ಬಲೂನ್‌ನಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ನಿನ್ನೆ ನಡೆದ ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸಿದ್ದ ಬಾಲಕ, ಮನೋರಂಜನಾ ಕ್ರೀಡೆಗಳಲ್ಲಿ ಭಾಗವಹಿಸಿದ್ದ. ಈ ಹುಡುಗನ ಸಾವು ಮನೆಯವರು ಮಾತ್ರವಲ್ಲ ಜಾತ್ರೆಯಲ್ಲಿ ನೆನೆದವರನ್ನೂ ಆತಂಕಕ್ಕೆ ದೂಡಿತ್ತು. ಅಲ್ಲದೆ ಜಾತ್ರೆಯಲ್ಲಿ ಸೂತಕದ ಕಳೆ ಆವರಿಸಿತ್ತು.

ದೊಡ್ಡಬಳ್ಳಾಪುರ ಶಾಂತಿನಗರ ನಿವಾಸಿ ಮಂಜುನಾಥ್‌ ಅವರ ಪುತ್ರ ಶ್ರೇಯಸ್‌ ಮೃತ ಬಾಲಕ. ಈತ ನಗರದ ಸರಸ್ವತಿ ಶಾಲೆಯಲ್ಲಿ 6 ತರಗತಿ ಓದುತ್ತಿದ್ದಾನೆ. ಮನೆಯವರೊಂದಿಗೆ ಸಂತಸದಿಂದಲೇ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಶ್ರೇಯಸ್‌. ಜಾತ್ರೆಯಲ್ಲಿ ರೋಲರ್‌, ಜೈಂಟ್‌ ವೀಲ್‌ ಸೇರಿದಂತೆ ಸಾಕಷ್ಟು ಮನೋರಂಜನಾ ಕ್ರೀಡೆಗಳಿದ್ದವು. ಮೊದಲು ಇದರಲ್ಲಿ ಆಟವಾಡಿದ್ದ ಶ್ರೇಯಸ್‌ ನಂತರ ಬೌನ್ಸಿ ಬಲೂನ್‌ನಲ್ಲಿ ಆಟವಾಡಲು ಹೋಗಿದ್ದ. ಮಕ್ಕಳೊಂದಿಗೆ ಸೇರಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದ ಶ್ರೇಯಸ್‌ ಇದ್ದಕ್ಕಿದ್ದಂತೆ ನಿತ್ರಾಣಗೊಂಡು, ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. ತಕ್ಷಣಕ್ಕೆ ಅವನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಅವನು ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದ.

ಹೃದಯಾಘಾತ ಶಂಕೆ

ಶ್ರೇಯಸ್‌ ಸಾವಿಗೆ ಕಾರಣ ಎನು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಬಿಪಿ ಲೋ ಆಗಿ ಹೃದಯಾಘಾತದಿಂದ ಮರಣ ಹೊಂದಿರಬಹುದು ಎಂದು ಶಂಕಿಸಲಾಗಿದೆ.

ಮಾಧ್ಯಮದವರ ಮೇಲೆ ಶ್ರೇಯಸ್‌ ತಂದೆ ಆಕ್ರೋಶ

ʼನನ್ನ ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನು ಆಟವಾಡಿ, ಕುಣಿಯುವಾಗ ಲೋ ಬಿಪಿಯಾಗಿ ನಿತ್ರಾಣಗೊಂಡಿದ್ದ. ನನ್ನ ಗೆಳೆಯರು ಅವನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆದರೆ ಕೆಲ ಮಾಧ್ಯಮಗಳು ಮನೆಗೆ ಬಂದ ಮೇಲೆ ಮೃತಪಟ್ಟಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಬಿತ್ತರಿಸಿವೆʼ ಎಂದು ಆರೋಪಿಸಿ, ಆಕ್ರೋಶ ಹೊರ ಹಾಕಿದ್ದಾರೆ.

ಸಾವಿರಾರು ಜನ ಸೇರುವ ಜಾತ್ರೆಯಲ್ಲಿ ಯಾವುದೇ ಮುಂಜಾಗತ್ರ ಕ್ರಮ ವಹಿಸಿದೇ ಇರುವ ಕಾರಣದಿಂದ ದೇವಸ್ಥಾನದ ಸೇವಾಸಮಿತಿ ಹಾಗೂ ಆಟಗಳ ಆಯೋಜಕರ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ಕೊಡಲು ಬಾಲಕನ ಪೋಷಕರು ನಿರಾಕರಿಸಿದ್ದಾರೆ.