ಭಾಷಾ ವಿಷಯಗಳಲ್ಲಿ ಪೂರ್ಣ ಅಂಕ ಗಳಿಸುವುದು ಹೇಗೆ; ಎಸ್ಎಸ್ಎಲ್ಸಿ ಟಾಪರ್ ಯಶ್ವಿತಾ ರೆಡ್ಡಿ ಸಲಹೆ ಹೀಗಿದೆ
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100 ಶೇ. ಅಂಕ ಗಳಿಸಿದ ತುಮಕೂರಿನ ವಿದ್ಯಾರ್ಥಿನಿಯಾದ ಯಶ್ವಿತಾ ರೆಡ್ಡಿ ಕೆಬಿ, ಎಚ್ಟಿ ಕನ್ನಡ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಪರೀಕ್ಷಾ ಸಿದ್ಧತೆ, ಮುಂದಿನ ಓದು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಹಲವು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವರಾದ ಯಶ್ವಿತಾ ರೆಡ್ಡಿ ಕೆಬಿ, ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಮಧುಗಿರಿಯ ಚಿರೆಗ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ಇವರು, ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ತಮ್ಮ ಶೈಕ್ಷಣಿಕ ಸಾಧನೆಯ ಕುರಿತು ಎಚ್ಟಿ ಕನ್ನಡದೊಂದಿಗೆ ಮುಕ್ತವಾಗಿ ಮಾತನಾಡಿರುವ ಅವರು, ಓದಿನ ಕುರಿತಾಗಿಯೂ ಸಲಹೆ ಹಂಚಿಕೊಂಡಿದ್ದಾರೆ.
ನಿದ್ದೆಗೆ ಯಾವುದೇ ಸಮಸ್ಯೆಯಾಗದಂತೆ, ಸುಲಭವಾಗಿ ನಿಭಾಯಿಸುವಂತೆ ಓದಿನ ವೇಳಾಪಟ್ಟಿ ಹಾಕಿಕೊಂಡಿದ್ದೆ. ನನಗೆ ಭಾಷಾ ವಿಷಯಗಳು ಸ್ವಲ್ಪ ಸುಲಭವಾಗುತ್ತಿತ್ತು. ದಿನದ ಓದಿಗೆ ಹೋಲಿಸಿದ್ರೆ ರಾತ್ರಿಯ ಓದು ಇಷ್ಟವಾಗುತ್ತಿತ್ತು. ಹೀಗಾಗಿ ರಾತ್ರಿ ಗಣಿತ, ವಿಜ್ಞಾನದಂಥ ವಿಷಯ ಓದುತ್ತಿದ್ದೆ. ಬೆಳಗ್ಗಿನ ಸಮಯದಲ್ಲಿ ಭಾಷಾ ವಿಷಯಗಳನ್ನು ಓದುತ್ತಿದ್ದೆ. ಏಕೆಂದರೆ ಅದು ನನಗೆ ಸುಲಭವಾಗುತ್ತಿತ್ತು ಎನ್ನುತ್ತಾರೆ ಯಶ್ವಿತಾ.
ಯಾವುದೇ ವಿಷಯಕ್ಕೂ ಟ್ಯೂಷನ್ ತೆಗೆದುಕೊಳ್ಳುತ್ತಿರಲಿಲ್ಲ. ನನಗೆ ಅದರ ಅಗತ್ಯವೇ ಬರಲಿಲ್ಲ. ಮನೆಯಲ್ಲೇ ಎಲ್ಲಾ ವಿಷಯಗಳನ್ನು ಓದುತ್ತಿದ್ದೆ. ಶಾಲೆಯಲ್ಲೇ ಆಗಾಗ ಯುನಿಟ್ ಟೆಸ್ಟ್ ಮಾಡುತ್ತಿದ್ದರು. ಆಗಲೇ ರಿವಿಷನ್ ಆಗುತ್ತಿತ್ತು. ಇದರಿಂದ ಟರ್ಮ್ ಟೆಸ್ಟ್ ಸುಲಭವಾಗುತ್ತಿತ್ತು. ಮೊದಲ ಪೂರ್ವಸಿದ್ದತಾ ಪರೀಕ್ಷೆ ಸಮಯದಲ್ಲೇ ಒಂದು ಬಾರಿಯ ರಿವಿಷನ್ (ಪುನರ್ಮನನ) ಆಗಿತ್ತು. ಒಟ್ಟು ಮೂರು ಪ್ರಿಪರೇಟರಿ ಪರೀಕ್ಷೆ ಬರೆದಿದ್ದೆ. ಪರೀಕ್ಷೆ ಸಮಯದಲ್ಲಿ ಸಮಯ ನಿರ್ವಹಣೆ ನನಗೆ ಸಮಸ್ಯೆಯೇ ಆಗಲಿಲ್ಲ. ಬರೆದು ಅಭ್ಯಾಸ ಮಾಡುತ್ತಿದ್ದರಿಂದ ಸುಲಭ ಆಗುತ್ತಿತ್ತು. ಕನ್ನಡ ವಿಷಯಕ್ಕೂ ನಿಗದಿತ ಸಮಯಕ್ಕೂ ಮುಂಚೆ ಬರೆದು ಮುಗಿಸುತ್ತಿದ್ದೆ. ಹಳೆಯ ಪ್ರಶ್ನೆ ಪತ್ರಿಕೆ ಓದಿ, ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡುತ್ತಿದ್ದೆ ಎಂದಿದ್ದಾರೆ ಯಶ್ವಿತಾ.
ಪರೀಕ್ಷೆ ಬಗ್ಗೆ ಭಯ ಇರಲಿಲ್ಲ. ಎಲ್ಲಾ ವಿಷಯ ಪಠ್ಯಪುಸ್ತಕದ್ದೇ ಬರುವ ಧೈರ್ಯ ಇತ್ತು. ಒಂದು ವೇಳೆ ಬೇರೆ ಪ್ರಶ್ನೆ ಬಂದರೂ ಪಠ್ಯಪುಸ್ತಕದ ಅಂಶವೇ ಅದರಲ್ಲಿ ಇರುತ್ತೆ ಎಂಬ ವಿಶ್ವಾಸ ಇತ್ತು. ಕಳೆದ ವರ್ಷದ ಪರೀಕ್ಷೆಗಳಿಗೆ ಹೋಲಿಸಿದರೆ ಈ ಬಾರಿಯ ಪ್ರಶ್ನೆ ಪತ್ರಿಕೆ ಸುಲಭ ಇತ್ತು ಎಂದು ಸಿಲೆಬಸ್ ಕುರಿತು ಅವರು ಹೇಳಿದ್ದಾರೆ.
ಭಾಷಾ ವಿಷಯಗಳಲ್ಲಿ ನೂರಕ್ಕೆ ನೂರು ತೆಗೆಯುವುದು ಸುಲಭ
ಭಾಷಾ ವಿಷಯಗಳು ನಿಜವಾಗಿಯೂ ಕಷ್ಟವಲ್ಲ. ಅದು ತುಂಬಾ ಸುಲಭ. ಆದರೆ ಅದಕ್ಕೆ ನಿರಂತರ ಓದು, ಸಿದ್ಧತೆ ಬೇಕು. ಪ್ರತಿ ವಿಷಯದ ಮೇಲೆ ಹಿಡಿತ ಇದ್ದರೆ ಅಂಕ ಗಳಿಸುವುದು ಸುಲಭ. ಕಂಠಪಾಠ ಮಾಡುವುದಕ್ಕಿಂತ ವಿಷಯವನ್ನು ಅರ್ಥಮಾಡಿಕೊಂಡು ಓದಬೇಕು. ನಾನು ಎಲ್ಲಾ ವಿಷಯಗಳಲ್ಲಿ ಔಟ್ ಆಫ್ ಔಟ್ ತೆಗೆಯಲು ಅನುಸರಿಸಿದ್ದು ಇದೇ ತಂತ್ರ ಎನ್ನುತ್ತಾರೆ ಯಶ್ವಿತಾ.
ಆಹಾರಕ್ರಮ ಹೇಗೆ
ಪರೀಕ್ಷೆ ದಿನ ಹೆಚ್ಚು ಓದಿ ಗೊಂದಲ ಮಾಡಿಕೊಳ್ಳುತ್ತಿರಲಿಲ್ಲ. ಸರಿಯಾಗಿ ನಿದ್ದೆ ಮಾಡುತ್ತಿದ್ದೆ. ಬೆಳಗ್ಗೆ ಎದ್ದು ಮೇಲಿಂದ ಮೇಲೆ ನೋಡಿ ರಿವೈಸ್ ಮಾಡುತ್ತಿದ್ದೆ. ಹೊಸದಾಗಿ ಏನೂ ಓದಿ ಗೊಂದಲ ಮಾಡಿಕೊಳ್ಳುತ್ತಿರಲಿಲ್ಲ. ಪರೀಕ್ಷೆ ದಿನ ನಾನು ಬ್ರೇಕ್ಫಾಸ್ಟ್ ಮಾಡುತ್ತಿರಲಿಲ್ಲ. ಎಳನೀರು ಕುಡಿದುಕೊಂಡು ಹೋಗಿ ಪರೀಕ್ಷೆ ಬರೆಯುತ್ತಿದ್ದೆ. ನನಗೆ ಅದೇ ಸರಿ ಅನಿಸ್ತಿತ್ತು. ಆರೋಗ್ಯ ತುಂಬಾ ಮುಖ್ಯ. ಹೀಗಾಗಿ ಜಂಕ್ ಫುಡ್ ಕಡಿಮೆ ಮಾಡುತ್ತಿದ್ದೆ. ತಣ್ಣೀರು ಕುಡಿಯುತ್ತಿರಲಿಲ್ಲ. ಆಹಾರಕ್ರಮ ಏನೂ ಅನುಸರಿಸುತ್ತಿರಲಿಲ್ಲ. 624 ಅಂಕ ಬರುವ ನಿರೀಕ್ಷೆ ಇತ್ತು. ಎಲ್ಲೋ ಸಣ್ಣ ತಪ್ಪುಗಳಾಗಿ ಒಂದು ಅಂಕ ಹೋಗಬಹುದು ಅಂದುಕೊಂಡಿದ್ದೆ. ಆದರೆ ಔಟ್ ಆಫ್ ಔಟ್ ಬಂದು ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಯ್ತು.
ಯಶ್ವಿತಾ ಹವ್ಯಾಸಗಳು
ಪುಸ್ತಕ ಓದುವುದು, ಡೂಡಲಿಂಗ್ ಮಾಡುವುದು ನನ್ನ ಇಷ್ಟದ ಹವ್ಯಾಸ. ಸ್ನೇಹಿತರ ಜೊತೆಗೆ ಆಗಾಗ ಬೆರೆಯುತ್ತಿದ್ದೆ. ಮನೆಯಲ್ಲಿ ಯಾವುದೇ ಒತ್ತಡ, ನಿರ್ಬಂಧಗಳೇ ಇರಲಿಲ್ಲ. ರಾಬಿನ್ ಶರ್ಮಾ ಅವರ 'Who will cry when you die' ಪುಸ್ತಕ, ಪ್ರೀತಿ ಶೆಣೈ ಅವರ 'life's what you make it book' ಪುಸ್ತಕ ನನಗೆ ಇಷ್ಟ ಎನ್ನುತ್ತಾರೆ ಯಶ್ವಿತಾ.
ಎಂಬಿಬಿಎಸ್ ಓದಿ ಯುಪಿಎಸ್ಸಿ ಬರೆಯುವ ಗುರಿ
ಮುಂದೆ ಎಂಬಿಬಿಎಸ್ ಓದು ಮುಗಿಸಿ ಯುಪಿಎಸ್ಸಿ ಬರೆಯಬೇಕು ಎನ್ನುವ ಗುರಿ ಇದೆ. ಮುಂದಿನ ಶಿಕ್ಷಣಕ್ಕೆ ಮಂಗಳೂರಿನ ಎಕ್ಸೆಲ್ ಕಾಲೇಜಿನಲ್ಲಿ ಅಡ್ಮಿಷನ್ ಆಗಿದೆ. ಮಂಗಳೂರಿನಲ್ಲಿ ಮುಂದಿನ ಓದು ಮಾಡಲಿದ್ದೇನೆ ಎಂದು ತಮ್ಮ ಮುಂದಿನ ಓದಿನ ಬಗ್ಗೆ ಯಶ್ವಿತಾ ಹೇಳಿಕೊಂಡಿದ್ದಾರೆ.
ಮನೆಯಲ್ಲಿ ನನ್ನ ಶಿಕ್ಷಣಕ್ಕೆ ತುಂಬಾ ಸಹಕಾರ ಸಿಕ್ಕಿದೆ. ಮನೆಯಿಂದ ನನ್ನ ಶಾಲೆಗೆ 40 ಕಿ.ಮೀ. ದೂರವಿದೆ. ನನ್ನ ಶಿಕ್ಷಣಕ್ಕಾಗಿ ಕಳೆದ 14 ವರ್ಷದಿಂದ ಅಪ್ಪ ಅಮ್ಮ ತುಂಬಾ ತ್ಯಾಗ ಮಾಡಿದ್ದಾರೆ. ಮನೆ ಬಿಟ್ಟು ಮಧುಗಿರಿಯಲ್ಲಿ ನಾವೆಲ್ಲರೂ ನೆಲೆಸಿದ್ದೇವೆ ಎಂದು ಯಶ್ವಿತಾ ಹೇಳಿದ್ದಾರೆ.
ಅಪ್ಪ ಅಮ್ಮನ ನಿರಂತರ ಬೆಂಬಲ
ಯಶ್ವಿತಾ ಅವರ ತಂದೆ ಕೆವಿ ಬಾಬು ರೆಡ್ಡಿ ಕಾಂಟ್ರ್ಯಾಕ್ಟರ್ ಆಗಿದ್ದು, ಅಮ್ಮ ಸಂಧ್ಯಾ ರೆಡ್ಡಿ ಗೃಹಿಣಿಯಾಗಿದ್ದಾರೆ. ಇವರಿಬ್ಬರೂ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಮನೆಯನ್ನು ತೊರೆದು ಮಗಳ ಶಾಲೆಗೆ ಹತ್ತಿರವೇ ಮನೆ ಮಾಡಿಕೊಂಡಿದ್ದರು. "ನಾವೇನೇ ಮಾಡಿದರೂ ಅದು ನಮ್ಮ ಮಗಳಿಗಾಗಿ" ಎನ್ನುವ ಸಂಧ್ಯಾ, ಯಶ್ವಿತಾ ಮೇಲೆ ಅಪಾರ ಕನಸುಗಳನ್ನು ಇಟ್ಟುಕೊಂಡಿದ್ದಾರೆ. "ನಮ್ಮ ಮಗಳು ಈಗಾಗಲೇ ಕನಸು ನನಸಾಗಿದ್ದಾಳೆ. ಮುಂದೆ ಅವಳು ಅಂದುಕೊಂಡಿದ್ದೆಲ್ಲ ಆಗಬೇಕು ಎನ್ನುವುದೇ ನಮ್ಮ ಬಯಕೆ. ಕಷ್ಟ ಪಟ್ಟಿದ್ದಕ್ಕೆ ಫಲ ಸಿಕ್ಕಿದೆ. ಶಿಕ್ಷಣ ತುಂಬಾ ಮುಖ್ಯ. ನಾವಿದ್ದಿದ್ದು ಗಡಿ ಭಾಗದಲ್ಲಿ. ಅಲ್ಲಿ ಅಷ್ಟೊಂದು ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮಕ್ಕಳ ಶಿಕ್ಷಣಕ್ಕಾಗಿ ಪ್ರಮುಖ ನಿರ್ಧಾರ ತೆಗೆಕೊಳ್ಳಬೇಕಾಯ್ತು" ಎಂದು ಯಶ್ವಿತಾ ಅವರ ತಾಯಿ ಸಂಧ್ಯಾ ಹೆಮ್ಮೆಯಿಂದ ಹೇಳಿದ್ದಾರೆ.