ಕನ್ನಡ ಸುದ್ದಿ  /  Karnataka  /  Electricity Rate Hike In Karnataka From Today 1st October

electricity bill in karnataka: ನವರಾತ್ರಿಗೆ ಪವರ್ ಶಾಕ್; ಇಂದಿನಿಂದ ವಿದ್ಯುತ್ ದರ ಪ್ರತಿ ಯೂನಿಟ್ ಗೆ 43 ಪೈಸೆ ಏರಿಕೆ

ನವರಾತ್ರಿಯ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಸರ್ಕಾರ ವಿದ್ಯುತ್ ಏರಿಕೆ ಮೂಲಕ ಕರೆಂಟ್ ಶಾಕ್ ನೀಡಿದೆ. ಇಂದಿನಿಂದ ಅನ್ವಯ ಆಗುವಂತೆ ವಿದ್ಯುತ್ ದರವನ್ನು 23 ಪೈಸೆಯಿಂದ 43 ಪೈಸೆಗಳ ವರೆಗೆ ಏರಿಕೆ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮನ ನಿಯಮಿತ ಕಚೇರಿ, ಬೆಂಗಳೂರು
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮನ ನಿಯಮಿತ ಕಚೇರಿ, ಬೆಂಗಳೂರು

ಬೆಂಗಳೂರು: ನವರಾತ್ರಿಯ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಸರ್ಕಾರ ವಿದ್ಯುತ್ ಏರಿಕೆ ಮೂಲಕ ಕರೆಂಟ್ ಶಾಕ್ ನೀಡಿದೆ. ಇಂದಿನಿಂದ ಅನ್ವಯ ಆಗುವಂತೆ ವಿದ್ಯುತ್ ದರವನ್ನು 23 ಪೈಸೆಯಿಂದ 43 ಪೈಸೆಗಳ ವರೆಗೆ ಏರಿಕೆ ಮಾಡಲಾಗಿದೆ.

ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತದೆ. ಏಪ್ರಿಲ್ ಹಾಗೂ ಜುಲೈ ಬಳಿಕ ಅಕ್ಟೋಬರ್ 1 ರಿಂದ ಅಂದರೆ ಇಂದಿನಿಂದ ಎಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರು ಪ್ರತಿಯೂನಿಟ್ ಗೆ 23 ಪೈಸೆ, ಸೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯಲ್ಲಿ ಬರುವ ಗ್ರಾಹಕರು ಪ್ರತಿ ಯೂನಿಟ್ ತಲಾ 35 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ವಿದ್ಯುತ್ ಸರಬರಾಜು ಕಂಪನಿಗಳು ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆ ಮಾಡುವಂತೆ ಇಂಧನ ಇಲಾಖೆಗೆ ಮನವಿ ಮಾಡಿದ್ದವು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಮುಂದಿನ ಆರು ತಿಂಗಳ ಅವಧಿಯಲ್ಲಿ ಬೆಸ್ಕಾಂ ಪ್ರತಿ ಯೂನಿಟ್​ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚೆಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಅಕ್ಟೋಬರ್ 1 ರಿಂದ ವಿದ್ಯುತ್ ದರ ಏರಿಕೆ ಜಾರಿಗೆ ಬರಲಿದೆ.

ಸೆಪ್ಟೆಂಬರ್ 19ರಂದು ಕೆಇಆರ್​ಸಿ ಈ ಸಂಬಂಧ ಆದೇಶ ಹೊರಡಿಸಿದ್ದು, ಎಸ್ಕಾಂಗಳಿಗೆ ಇಂಧನ ವೆಚ್ಚ ಹೊಂದಾಣಿಕೆ (FAC) ಶುಲ್ಕವನ್ನು ಗ್ರಾಹರಿಂದ ವಸೂಲಿ ಮಾಡಲು ಅನುಮತಿ ನೀಡಿದೆ. ಅದರಂತೆ ಗ್ರಾಹಕರಿಂದ ಎಸ್ಕಾಂಗಳಿಗೆ ಇಂದಿನಿಂದ ಮಾರ್ಚ್ 31, 2023ರವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿದೆ.

2022ರ ಜುಲೈ 1ರಿಂದ ಡಿಸೆಂಬರ್ 31, 2022ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿತ್ತು. ಆಗ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 19 ರೂಪಾಯಿನಿಂದ 31 ರೂಪಾಯಿ ವರೆಗೆ ಏರಿಕೆಯಾಗಿತ್ತು.‌ ಇದೀಗ ಮತ್ತೆ ಬೆಲೆ ಏರಿಕೆ ಬರೆ ಬಿದ್ದಿದೆ.

ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ಜೆಡಿಎಸ್, ಎಎಪಿ, ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿವೆ. ವಿದ್ಯುತ್‌ ದರ ಏರಿಕೆ ಪ್ರಸ್ತಾಪ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ, ಕರೆಂಟ್‌ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಸಿದ್ದರು.

ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್‌ ದರ ಏರಿಸಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್‌ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ ಮಾಡಿದ್ದರು.

ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್, ಕಲ್ಲಿದ್ದಲು ಬೆಲೆಯಲ್ಲಿ ಸಣ್ಣ ಏರಿಕೆಯಾಗಿದ್ದನ್ನೇ ನೆಪ ಮಾಡಿಕೊಂಡು ಜನರಿಗೆ ವಿದ್ಯುತ್‌ ಶಾಕ್‌ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ.

ಕಲಿದ್ದಲು ಬೆಲೆ ಇಳಿಕೆಯಾದಾಗ ಸರ್ಕಾರವು ವಿದ್ಯುತ್‌ ದರವನ್ನು ಇಳಿಕೆ ಮಾಡುವುದಿಲ್ಲ. ಹೀಗಿರುವಾಗ ಕಲ್ಲಿದ್ದಲು ಬೆಲೆ ಏರಿಕೆಯಾದಾಗ ವಿದ್ಯುತ್‌ ದರ ಏರಿಕೆ ಮಾಡುವುದು ಎಷ್ಟು ಸರಿ? ಸರ್ಕಾರಿ ಕಚೇರಿಗಳು ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ರೂಪಾಯಿಯನ್ನು ವಸೂಲಿ ಮಾಡದ ಕಾರಣಕ್ಕೆ ವಿದ್ಯುತ್‌ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಆ ನಷ್ಟವನ್ನು ಜನರ ತಲೆಗೆ ಕಟ್ಟುವುದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಜನ ಸಾಮಾನ್ಯರು, ಹೋಟೆಲ್ ಮಾಲೀಕರು ಕೂಡ ವಿದ್ಯುತ್ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point