ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್; ಸಂದೇಹಗಳಿಗೆ ಕಾರಣವಾಗಿರುವ ಅವರ ಪತ್ನಿ ಪಲ್ಲವಿ ವಾಟ್ಸ್ಆ್ಯಪ್ ಸಂದೇಶ
ಕರ್ನಾಟಕದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಕೇಸ್ನಲ್ಲಿ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಆರೋಪಿಗಳಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಪಲ್ಲವಿ ಅವರ ವಾಟ್ಸ್ಆಪ್ ಸಂದೇಶ ಗಮನಸೆಳೆದಿದೆ. ಅದು ಅನೇಕ ಸಂದೇಹಗಳಿಗೂ ಕಾರಣವಾಗಿದೆ. ಆ ಸಂದೇಶದಲ್ಲಿರುವ ವಿವರ ಹೀಗಿದೆ-

ಬೆಂಗಳೂರು: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಹತ್ಯೆ ಕೇಸ್ನಲ್ಲಿ ಅವರ ಪತ್ನಿ ಪಲ್ಲವಿ (64) ಭಾಗಿಯಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟ ಕಾರಣ ಹಾಗೂ ಅವರ ಪುತ್ರ ಕಾರ್ತಿಕೇಶ್ ನೀಡಿದ ದೂರು ಆಧರಿಸಿ ಎಚ್.ಎಸ್.ಆರ್ ಲೇಔಟ್ ಠಾಣೆಯ ಪೊಲೀಸರು ಸೋಮವಾರ (ಏಪ್ರಿಲ್ 21) ರಾತ್ರಿ ಬಂಧಿಸಿದರು. ಆರೋಪಿ ಪಲ್ಲವಿ ಅವರನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಸೋಮವಾರ ತಡರಾತ್ರಿಯೇ ಹಾಜರುಪಡಿಸಿದ್ದು, ಮೇ 3ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಲ್ಲವಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಓಂ ಪ್ರಕಾಶ್ ಪುತ್ರಿ ಕೃತಿ ವಿರುದ್ಧವೂ ಎಫ್ಐಆರ್ ದಾಖಲಾಗಿದ್ದು, ಅವರಿಗೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ, ಪಲ್ಲವಿ ಅವರು ವಾಟ್ಸ್ಆಪ್ ಗ್ರೂಪ್ನಲ್ಲಿ ಹಾಕಿದ್ದ ಸಂದೇಶ ವೈರಲ್ ಆಗಿತ್ತು.
ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ವೈರಲ್ ಆಯಿತು ಪಲ್ಲವಿ ಹಾಕಿದ್ದ ಸಂದೇಶ
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಗೂ ಕೆಲವು ದಿನಗಳ ಮೊದಲು, ಐಪಿಎಸ್ ಅಧಿಕಾರಿಗಳು, ಅವರ ಪತ್ನಿಯರು ಹಾಗೂ ಸಂಬಂಧಿಕರಿದ್ದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಪಲ್ಲವಿ ಹಾಕಿದ್ದ ಸಂದೇಶ ವೈರಲ್ ಆಗಿತ್ತು. ಆ ಸಂದೇಶ ಹೀಗಿದೆ -
‘ಈ ವಾಟ್ಸ್ಆ್ಯಪ್ ಗ್ರೂಪ್ನಲ್ಲಿರುವ ಅಧಿಕಾರಿಗಳು ಹಾಗೂ ಇತರರ ಅವಗಾಹನೆಗೆ. ನೀವು ಈ ವಿಚಾರವಾಗಿ ತುರ್ತು ಕ್ರಮ ಕೈಗೊಳ್ಳಬೇಕು. ನಿಮಗೆ ಮಾನವೀಯ ಇದ್ದರೆ ಈ ಸಂದೇಶವನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸಿ. ಇದು ಕೌಟುಂಬಿಕ ವಿಚಾರ ಅಂತ ಅನಿಸಿಬಹುದು. ಆದರೆ, ಸತ್ಯ ಸಂಗತಿ ಏನು ಎಂದರೆ ನನ್ನ ಗಂಡನ ನಡವಳಿಕೆಯ ಬಗ್ಗೆ ಹೇಳಲೇಬೇಕು. ನನ್ನ ಪತಿ ಡಿಜಿ ಆಗಿದ್ದಾಗ ಪ್ರತಿ 15 ದಿನಕ್ಕೊಮ್ಮೆ ಒಬ್ಬ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಪ್ರಕರಣಗಳೆಲ್ಲವೂ ಮಾನಸಿಕ ಕಾಯಿಲೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಉಲ್ಲೇಖದೊಂದಿಗೆ ಕೊನೆಗಾಣುತ್ತಿತ್ತು. ಓಂ ಪ್ರಕಾಶ್ ಬಳಿ ರಿವಾಲ್ವರ್ ಇದ್ದು, ಅದನ್ನು ಕೂಡಲೇ ಜಪ್ತಿ ಮಾಡಬೇಕು. ಈ ಸಂದೇಶ ಅಳಿಸಿ ಹೋಗುವ ಮುನ್ನ ಅಥವಾ ನನ್ನ ಮೊಬೈಲ್ ಹ್ಯಾಕ್ ಮಾಡುವ ಮೊದಲು ಸೇವ್ ಮಾಡಿಟ್ಟುಕೊಳ್ಳಿ" ಎಂದು ಆರಂಭವಾಗಿರುವ ಸಂದೇಶದ ಮುಂದಿನ ಭಾಗದಲ್ಲಿ ಪಲ್ಲವಿ, ತನ್ನ ಪತಿ ಪಿಎಫ್ಐ ಸದಸ್ಯ ಎಂದು ಆರೋಪಿಸಿದ್ದರು.
‘ಅವನ ಸಾಮ್ರಾಜ್ಯ ದೊಡ್ಡದಿದೆ. ಆತ ಪಿಎಫ್ಐ ಸದಸ್ಯನೂ ಹೌದು. ಕನಿಷ್ಠ ಅಜಿತ್ ದೋವಲ್ ಅವರ ಗಮನಕ್ಕೆ ತನ್ನಿ. ಈತನಿಗೆ ಶಸ್ತ್ರಾಸ್ತ್ರ, ಹಣ ಎಲ್ಲಿಂದ ಬಂತು ಎಂಬುದು ಎಲ್ಲರಿಗೂ ಗೊತ್ತಾಗಲಿ. ಇದು ರನ್ಯಾ ರಾವ್ ಪ್ರಕರಣಕ್ಕಿಂತಲೂ ಗಂಭೀರವಾದದ್ದು ಎಂದು ಗಂಭೀರ ಆರೋಪ ಮಾಡಿರುವ ಪಲ್ಲವಿ, ತನ್ನ ಪ್ರಾಣ ಹಾಗೂ ಮಗಳ ಪ್ರಾಣಕ್ಕೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಪ್ರತ್ಯೇಕವಾಗಿ ಬದುಕುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಗಮನಕೊಡಲಿಲ್ಲ. ಬೇರೆ ಸ್ಥಳಕ್ಕೆ ಹೋದಾಗ ನನಗೆ ಕೊಡುವ ಆಹಾರ, ನೀರಿನಲ್ಲಿ ವಿಷ ಬೆರೆಸಲಾಗಿತ್ತು. ವಿಷ ಬೆರೆಸಲು ಕೆಲಸದವರನ್ನೂ ನೇಮಕ ಮಾಡಿಕೊಂಡಿದ್ದಾರೆ. ನನ್ನ ಮಗಳು ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಹೊರಗಿನಿಂದ ತರಿಸಿದ ಆಹಾರ ಪದಾರ್ಥದಲ್ಲೂ ವಿಷ ಬೆರೆಸುತ್ತಿದ್ದರು. ಮಗಳಿಗೆ ಆರೋಗ್ಯ ಸರಿಯಿಲ್ಲ. ನನ್ನ ಮಗಳು ಈ ಎಲ್ಲ ವಿಚಾರವಾಗಿ ಧ್ವನಿ ಎತ್ತಲು ಆರಂಭಿಸಿದಾಗ ಈ ರೀತಿಯ ಕಿರುಕುಳ ಆರಂಭವಾಗಿದೆ ಎಂದು ಪಲ್ಲವಿ ದೂರಿದ್ದಾರೆ.
ಹಿಂದೊಮ್ಮೆ ನಾನು ವಾಯುವಿಹಾರ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪೊಟ್ಟಣವೊಂದನ್ನು ನನ್ನ ಮೇಲೆ ಎಸೆದಿದ್ದ. ದೇಹದಲ್ಲಿ ಉರಿ ಕಾಣಿಸಿಕೊಳ್ಳುವವರೆಗೂ ನನಗದು ಗೊತ್ತೇ ಆಗಿರಲಿಲ್ಲ. ನಮಗೆ ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಚುಚ್ಚುಮದ್ದು ನೀಡಿದ್ದಾರೆ. ವಿಷಪ್ರಾಶನ ಮಾಡಿರವ ಕಾರಣ ಮೂತ್ರಪಿಂಡಕ್ಕೆ ಹಾನಿಯಾಗಿದೆ. ಆದ್ದರಿಂದ ಮನೆಯಲ್ಲೇ ತುಪ್ಪ ಹಾಗೂ ನಿಂಬೆಹಣ್ಣು ಸೇವಿಸಿ ವಿಷ ಹೊರಹಾಕುವ ಕೆಲಸ ಮಾಡುತ್ತಿದ್ದೇನೆ. ಬಹಳ ವರ್ಷದಿಂದ ಮಸ್ತಾನ್ ಎಂಬ ವ್ಯಕ್ತಿ ನನ್ನ ಮೇಲೆ ಪ್ರಯೋಗ ಮಾಡುತ್ತಿದ್ದ. ಸಾಧ್ಯವಾದರೆ ಅಶೋಕನಗರ ವಸತಿಗೃಹದಲ್ಲಿ ಡಿಜಿ ಅವರು ನನಗೆ ಮನೆ ಕೊಡಿಸಲಿ. ಅಲ್ಲಿ ನಾನು ಸುರಕ್ಷಿತವಾಗಿ ಇರಬಹುದು. ಪೊಲೀಸ್ ಕಾನ್ಸ್ಟೆಬಲ್ಗಳು ಸಹ ಸುಲಭವಾಗಿ ಲಂಚದ ಬಲೆಗೆ ಬೀಳುತ್ತಾರೆ. ನನ್ನನ್ನು ಮತ್ತು ಮಗಳನ್ನು ಕಾಪಾಡಿ ಎಂದು ವಾಟ್ಸ್ಆ್ಯಪ್ ಸಂದೇಶದಲ್ಲಿ ಹೇಳಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.