ಕೇಂದ್ರದ ರೈಲ್ವೆ ಪರೀಕ್ಷೆ ಬರೀಬೇಕಾದ್ರೆ, ತಾಳಿ, ಜನಿವಾರ ತೆಗೀಬೇಕು: ವಿಹಿಂಪ ಕೆಂಗಣ್ಣು
ಕನ್ನಡ ಸುದ್ದಿ  /  ಕರ್ನಾಟಕ  /  ಕೇಂದ್ರದ ರೈಲ್ವೆ ಪರೀಕ್ಷೆ ಬರೀಬೇಕಾದ್ರೆ, ತಾಳಿ, ಜನಿವಾರ ತೆಗೀಬೇಕು: ವಿಹಿಂಪ ಕೆಂಗಣ್ಣು

ಕೇಂದ್ರದ ರೈಲ್ವೆ ಪರೀಕ್ಷೆ ಬರೀಬೇಕಾದ್ರೆ, ತಾಳಿ, ಜನಿವಾರ ತೆಗೀಬೇಕು: ವಿಹಿಂಪ ಕೆಂಗಣ್ಣು

ಕರ್ನಾಟಕ ರಾಜ್ಯ ಸರಕಾರ ನಡೆಸುವ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ ಪ್ರಕರಣ ಹಸಿರಾಗಿರುವಂತೆಯೇ ಕೇಂದ್ರ ಸರಕಾರ ನಡೆಸುವ ರೈಲ್ವೆ ಪರೀಕ್ಷೆಯಲ್ಲೂ ಇಂಥದ್ದೊಂದು ಪ್ರಕರಣ ನಡೆಯುತ್ತಿರುವ ಕಾರಣ ಇದೀಗ ಕಾಂಗ್ರೆಸ್ ಮತ್ತಿತರ ಪಕ್ಷದ ಬೆಂಬಲಿಗರು, ಈಗ ಮೋದಿಯನ್ನೇ ಕೇಳಿ ಎಂದು ಹಿಂದು ಸಂಘಟನೆಗಳನ್ನು ಛೇಡಿಸುತ್ತಿದ್ದಾರೆ. (ವರದಿ: ಹರೀಶ್‌ ಮುಂಬಾಡಿ, ಮಂಗಳೂರು)

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PC: HT File Photo)

ಮಂಗಳೂರು: ರೈಲ್ವೆ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಇಂದಿನಿಂದ ಏಪ್ರಿಲ್‌ 28, ಏಪ್ರಿಲ್‌ 29 ಹಾಗೂ ಏಪ್ರಿಲ್‌ 30 ರಂದು ಮಂಗಳೂರು ಬೋಂದೆಲ್‌ನ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ. ಮಾನ್ಯ ಜಿಲ್ಲಾಧಿಕಾರಿಗಳೇ, ಮಾನ್ಯ ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಆಗ್ರಹಿಸುತ್ತೇನೆ ಎಂದು ವಿಶ್ವ ಹಿಂದು ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ನಡೆಸುವ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ ಪ್ರಕರಣ ಹಸಿರಾಗಿರುವಂತೆಯೇ ಕೇಂದ್ರ ಸರಕಾರ ನಡೆಸುವ ರೈಲ್ವೆ ಪರೀಕ್ಷೆಯಲ್ಲೂ ಇಂಥದ್ದೊಂದು ಪ್ರಕರಣ ನಡೆಯುತ್ತಿರುವ ಕಾರಣ ಇದೀಗ ಕಾಂಗ್ರೆಸ್ ಮತ್ತಿತರ ಪಕ್ಷದ ಬೆಂಬಲಿಗರು, ಈಗ ಮೋದಿಯನ್ನೇ ಕೇಳಿ ಎಂದು ಹಿಂದು ಸಂಘಟನೆಗಳನ್ನು ಛೇಡಿಸುತ್ತಿದ್ದಾರೆ. ತಾಳಿ ತೆಗೆಯಿರಿ ಎಂದು ಹೇಳಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದಡಿ ಬರುವ ರೈಲ್ವೆ ಇಲಾಖೆಯಾಗಿದೆ. ಪಹಲ್ಗಾಮ್ ನರಮೇಧ ನಡೆಸಿದ ಪಾಕಿಸ್ತಾನ ದ ವಿರುದ್ಧ ಯುದ್ದ ಮಾಡಿ. ಆದರೆ ಅದಕ್ಕಿಂತ ಮೊದಲು ದೇಶದ ಒಳಗೆ ಪ್ರತಿ ದಿನವೂ ಸರಕಾರಿ ನಿಯಮಗಳ ಅಡಿಯಲ್ಲಿ ಇಂಚು ಇಂಚಾಗಿ ಕೊಲ್ಲುವ ಧಾರ್ಮಿಕ, ಸಾಂಸ್ಕೃತಿಕ ದಬ್ಬಾಳಿಕೆ, ದೌರ್ಜನ್ಯ ವಿರುದ್ಧ ಯುದ್ಧ ಸಾರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗುತ್ತಿದೆ.

ಸಹಸ್ರ ಸಹಸ್ರ ವರ್ಷಗಳಿಂದ ನಡೆದು ಬರುತ್ತಿರುವ ಸಂಪ್ರದಾಯ, ಪರಂಪರೆ, ಧಾರ್ಮಿಕ ಚಿಹ್ನೆ, ಧಾರ್ಮಿಕ ನಂಬಿಕೆಗಳನ್ನು ಕಿತ್ತೊಗೆಯುವ ಇಂತಹ ಷಡ್ಯಂತ್ರಗಳ ವಿರುದ್ದ ಯುದ್ಧ ಸಾರಬೇಕಾಗಿದೆ. ಈ ಹಿಂದೆಯೂ ಹಲವಾರು ಬಾರಿ ಕೇಂದ್ರ ಸರಕಾರದಡಿ ಬರುವ ಇಲಾಖೆಗಳ ಪರೀಕ್ಷೆಗಳಲ್ಲಿ ತಾಳಿ ತೆಗೆಯಲಾಗಿದೆ. ಆದರೆ ಈ ಕುರಿತು ಸೊಲ್ಲೆತ್ತುವವರಿರಲಿಲ್ಲ. ಆಶ್ಚರ್ಯ ಎಂಬಂತೆ ಜನಿವಾರ ತೆಗೆದ ಪ್ರಕರಣ ಮೊತ್ತ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆದಾಗ ಕಾಂಗ್ರೆಸ್ ಸರಕಾರ ಪ್ರತಿಕ್ರಿಯಿಸಿದ್ದು ಅಭಿನಂದನಾರ್ಹ ಎಂದು ನೆಟ್ಟಿಗರು ಅಭಿನಂದಿಸಿದ್ದಾರೆ.

ಜನಿವಾರ ಕಿತ್ತೆಸೆದ ಪ್ರಕರಣ ಖಂಡಿಸಿದ್ದು ಮಾತ್ರವಲ್ಲದೆ, ವಿದ್ಯಾರ್ಥಿಗೆ ಬೆಂಬಲಕ್ಕೆ, ಶೈಕ್ಷಣಿಕ ಬೆಂಬಲಕ್ಕೆ ಕಾಂಗ್ರೆಸ್ ಸರಕಾರವೇ ಟೊಂಕ ಕಟ್ಟಿ ನಿಂತಿದೆ. ಹಿಂದುಗಳ ನಂಬಿಕೆ, ಭರವಸೆ, ಆಶಾಕಿರಣ ಎಂಬ ಭರವಸೆಯಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಆಡಳಿತ ನಡೆಸುವ ಕೇಂದ್ರ ಸರಕಾರ ಯಾವುದೇ ಕನಿಕರ ಇಲ್ಲದೆ ಕಟುಕರಂತೆ ತಾಳಿ ಕಿತ್ತೆಸೆಯಲು ಹೇಳಿರುವುದು ಧಾರ್ಮಿಕ ನಂಬಿಕೆ ಕಳಚಿ ಬರುವಂತೆ ಹೇಳಿದರೆ ಪ್ರತಿಭಟನೆ ಯಾರು ಮಾಡಬೇಕು? ಕಾಂಗ್ರೆಸಿಗರಾ? ಇದೇನು ಮೊದಲ ಬಾರಿಯಲ್ಲ. ಮೊನ್ನೆಯೂ ಸಿದರ್ಜೆ ಪ್ರರೀಕ್ಷೆಯಲ್ಲಿ ತಾಳಿ ತೆಗೆಸಿದ್ದರು. ಆದರೂ ಕೇಂದ್ರ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬ್ರಾಹ್ಮಣರು ಒಮ್ಮೆ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯೂ ಇದೇ ರೀತಿ ಮಾಡಿದರೆ ಬ್ರಾಹ್ಮಣರು ಮತ್ತೆ ಪ್ರತಿಭಟನೆ ನಡೆಸುತ್ತಾರೆಯೇ? ತಾಳಿ, ಬಳೆ ಬೇಕು ಎಂದು ಹೆಣ್ಣು ಮಕ್ಕಳು ಪ್ರತಿಭಟನೆ ನಡೆಸಲು ಬರುತ್ತಾರೆಯೇ? ಬಹುತೇಕರ ಮದುವೆಯಾಗಿರುವುದಿಲ್ಲ, ಇನ್ನು ಕೆಲವರು ಮದುವೆಯಾದರೂ ತಾಳಿ ಹಾಕುವ ಉಮೇದಿಲ್ಲ. ಈ ರೀತಿ ಬಂದರೆ ತಾಳಿ ಸಂಪ್ರದಾಯ ಕಾಣೆಯೂ ಆಗಬಹುದು. ಹೀಗಾಗಿ ಮಹಿಳೆಯರೂ ಪ್ರತಿಭಟಿಸುವ ಸಾಧ್ಯತೆಗಳು ಕಡಿಮೆ. ಹಾಗಾದರೆ ಹಿಂದೂ ಸಂಸ್ಕೃತಿ, ಪರಂಪರೆಗಳನ್ನು ಕಿತ್ತು ಹಾಕುವುದೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಹುನ್ನಾರವೇ? ಎಂದು ಪ್ರಶ್ನಿಸಿದ್ದಾರೆ.

ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣವೇ, ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಈ ವಿಚಾರವನ್ನು ರೈಲ್ವೆ ಇಲಾಖೆ ಸಚಿವರ ಗಮನಕ್ಕೆ ತಂದಿದ್ದರು.

ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ

ಭಾರತೀಯ ರೈಲ್ವೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ಬರೆಯುವವರು ಮಂಗಳಸೂತ್ರ, ಜನಿವಾರದಂತಹ ಧಾರ್ಮಿಕ ಸಂಕೇತಗಳು ಮತ್ತು ಆಭರಣಗಳನ್ನು ತೆಗೆಯುವಂತೆ ಮಾಡಬಾರದು. ಜನಿವಾರ, ಮಂಗಳಸೂತ್ರ ತೆಗೆಸದಂತೆ ಅಧಿಕಾರಿಗಳಿಗೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಸೂಚನೆ ನೀಡಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ.

ಮಂಗಳಸೂತ್ರ ಹಾಗೂ ಧಾರ್ಮಿಕ ಸಂಕೇತಗಳನ್ನು ತೆಗೆಯಬೇಕೆಂದು ಹಾಲ್ಟಿಕೆಟ್ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಬಗ್ಗೆ ನಾವು ಅವರ ಗಮನಕ್ಕೆ ತಂದಿದ್ದೆವು. ಅವರು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಎಕ್ಸ್ ಸಂದೇಶದ ಮೂಲಕ ಬ್ರಿಜೇಶ್ ಚೌಟ ಸ್ಪಷ್ಟಪಡಿಸಿದ್ದಾರೆ.

ವರದಿ: ಹರೀಶ್‌ ಮುಂಬಾಡಿ, ಮಂಗಳೂರು

HT Kannada Desk