ಕನ್ನಡ ಸುದ್ದಿ  /  Karnataka  /  Fact Check Assault On Gescom Employee Is Not Related Congress Assurance Of Free Power In Karnataka News In Kannada Dmg

Fact Check: ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿಯ ಮೇಲೆ ನಡೆದ ಹಲ್ಲೆಗೂ ಕಾಂಗ್ರೆಸ್ ಸರ್ಕಾರದ ವಿದ್ಯುತ್ ಗ್ಯಾರಂಟಿ ಭರವಸೆಗೂ ಸಂಬಂಧವಿಲ್ಲ

GESCOM: ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ನೀಡಿರುವ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ಈ ಗಲಾಟೆಗೆ ಕಾರಣ ಎಂದು ಹಲವರು ಹಲ್ಲೆಯ ವಿಡಿಯೊ ಜೊತೆಗೆ ಒಕ್ಕಣೆ ಬರೆದುಕೊಂಡಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದುದು.

ವೈರಲ್ ಆಗಿರುವ ತಪ್ಪು ಪ್ರತಿಪಾದನೆಯ ವಿಡಿಯೊ ಕ್ಲಿಪ್
ವೈರಲ್ ಆಗಿರುವ ತಪ್ಪು ಪ್ರತಿಪಾದನೆಯ ವಿಡಿಯೊ ಕ್ಲಿಪ್

ಬೆಂಗಳೂರು: ವಿದ್ಯುತ್ ಬಿಲ್ ವಸೂಲಿಗೆಂದು ಮನೆಯ ಬಳಿಗೆ ಬಂದ ಜೆಸ್ಕಾಂ (Gulbarga Electricity Supply Company Limited - GESCOM) ಸಿಬ್ಬಂದಿಯ ಮೇಲೆ ಗ್ರಾಹಕರೊಬ್ಬರು ಹಲ್ಲೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ನೀಡಿರುವ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ಈ ಗಲಾಟೆಗೆ ಕಾರಣ ಎಂದು ಹಲವರು ಹಲ್ಲೆಯ ವಿಡಿಯೊ ಜೊತೆಗೆ ಒಕ್ಕಣೆ ಬರೆದುಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರದ ವಿದ್ಯುತ್ ಗ್ಯಾರಂಟಿ ಭರವಸೆಗೂ ಕೊಪ್ಪಳ ಜಿಲ್ಲೆಯಲ್ಲಿ ನಡೆದಿರುವ ಗಲಾಟೆಗೂ ಯಾವುದೇ ಸಂಬಂಧವಿಲ್ಲ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ವಿದ್ಯುತ್ ಬಿಲ್ ಬಾಕಿ ವಸೂಲಿಗೆಂದು ಜೆಸ್ಕಾಂ ಸಿಬ್ಬಂದಿ ಮಂಜುನಾಥ ಎನ್ನುವವರು ಗ್ರಾಹಕ ಚಂದ್ರಶೇಖರ್ ಈರಯ್ಯ ಹಿರೇಮಠ ಅವರ ಮನೆ ಸಮೀಪಕ್ಕೆ ಹೋಗಿದ್ದರು. ಈ ವೇಳೆ ಬಾಕಿದಾರರು ಜೆಸ್ಕಾಂ ಸಿಬ್ಬಂದಿಯ ಕಪಾಳಕ್ಕೆ ಕೈಯಿಂದ ಹೊಡೆದದ್ದಲ್ಲದೆ, ಚಪ್ಪಲಿಯಿಂದಲೂ ಥಳಿಸಿದರು. ಈ ಹಲ್ಲೆಯನ್ನು ಮಂಜುನಾಥ್ ಜೊತೆಗಿದ್ದವರು ವಿಡಿಯೊ ಮಾಡಿಕೊಂಡಿದ್ದರು. ನಂತರ ಘಟನೆ ಕುರಿತು ಮುನಿರಾಬಾದ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿತ್ತು.

'ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಚಂದ್ರಶೇಖರ್ ಅವರ ಮನೆಯ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಅವರು ಮತ್ತೆ ಅನಧಿಕೃತವಾಗಿ ಸಂಪರ್ಕ ಕೊಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಯನ್ನು ಥಳಿಸಿದ್ದಾರೆ' ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.

ಈ ಕುರಿತು ವಿವರ ನೀಡಿರುವ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಈ ಘಟನೆಯನ್ನು ಸರ್ಕಾರದ ಭರವಸೆಗೆ ಹೋಲಿಸುವುದು ತಪ್ಪು ಎಂದು ಹೇಳಿದ್ದರು. ಮಾತ್ರವಲ್ಲ, ಆ ವಿಡಿಯೊ ಹಂಚಿಕೊಂಡಿದ್ದ 'ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್' ರಿಶಿ ಬಾಗ್ರಿ ಅವರ ಹೇಳಿಕೆಯನ್ನು ಹಂಚಿಕೊಂಡಿರುವ ಪತ್ರಕರ್ತೆ ಅನುಶಾ ರವಿ ಸೂದ್ 'ಫಾಲ್ಸ್ ಕ್ಲೇಮ್' (ಸುಳ್ಳು ಪ್ರತಿಪಾದನೆ) ಎಂದು ಆಧಾರ ಸಹಿತ ತಳ್ಳಿಹಾಕಿದ್ದಾರೆ.

ತಪ್ಪು ಪ್ರತಿಪಾದನೆಯ ವಿಡಿಯೊ ಆಧರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ ಜನರ ಬಗ್ಗೆ ವ್ಯಂಗ್ಯದ ಮಾತು ಆಡಲಾಗಿದೆ.
ತಪ್ಪು ಪ್ರತಿಪಾದನೆಯ ವಿಡಿಯೊ ಆಧರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದ ಜನರ ಬಗ್ಗೆ ವ್ಯಂಗ್ಯದ ಮಾತು ಆಡಲಾಗಿದೆ.

ಆದರೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಹಲವರು ಹಲ್ಲೆಯ ವಿಡಿಯೊ ಹಂಚಿಕೊಂಡಿದ್ದು, ಇದು ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರೆಂಟಿ ಪ್ರಭಾವ ಎಂದು ಟೀಕಿಸಿದ್ದಾರೆ. ಕೆಲವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟ ಮತದಾರರ ನಿರ್ಧಾರವನ್ನು ವ್ಯಂಗ್ಯವಾಡಿದ್ದಾರೆ. ‘ಇದು ಕರ್ನಾಟಕದ ಅಚ್ಛೇ ದಿನ್’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಕರ್ನಾಟಕದ ವಿವಿಧೆಡೆ ಜನಸಾಮಾನ್ಯರು ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸುತ್ತಿರುವುದು ನಿಜವೇ ಆಗಿದ್ದರೂ, ಈ ನಿರ್ದಿಷ್ಟ ಹಲ್ಲೆಯ ಪ್ರಕರಣಕ್ಕೂ ಸರ್ಕಾರದ ತೀರ್ಮಾನಕ್ಕೂ ಸಂಬಂಧವಿಲ್ಲ.

ಆದರೆ ಈ ಸುಳ್ಳು ಪ್ರತಿಪಾದನೆಯನ್ನೇ ಆಧರಿಸಿ ಹಲವರು ತಮ್ಮ ಮನಸ್ಸಿಗೆ ಬಂದಂತೆ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಕೆಲವರಂತೂ 'ಉಚಿತ ಕೊಡುಗೆಗಳು ದೇಶದ ಆರ್ಥಿಕತೆಯನ್ನು ಹಾಳು ಮಾಡುತ್ತಿವೆ' ಎಂದು ಹೇಳಿದ್ದಾರೆ. ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಕುರಿತು ಕನ್ನಡದ ಫ್ಯಾಕ್ಟ್‌ಚೆಕ್ ಜಾಲತಾಣ ‘ನ್ಯೂಸ್‌ಮೀಟರ್’ ಸಹ ವಿಸ್ತೃತ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

IPL_Entry_Point

ವಿಭಾಗ