ಕನ್ನಡ ಸುದ್ದಿ  /  Karnataka  /  Fact Check Bjp President Nalin Kumar Kateel Statement On Farmers False Flags Facebook Karnataka Assebly Elections Uks

Fact Check: ರೈತರ ಅಕೌಂಟ್‌ಗೆ ಎಲ್ಲಿ ಬಂತು 3 ಲಕ್ಷ; ಬಿಜೆಪಿ ನಾಯಕ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ಅನುಮಾನದ ಮಾಸ್ಕ್ ತೊಡಿಸಿದ ಫೇಸ್‌ಬುಕ್

Fact Check: ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನ ಸ್ಥಾನ ಎಂಬುದು ಬಹಳ ಹೊಣೆಗಾರಿಕೆಯದ್ದು. ಅವರ ಹೊಣೆಗೇಡಿತನ ಪಕ್ಷಕ್ಕೆ, ಪಕ್ಷದ ಕಾರ್ಯಕರ್ತರಿಗೆ ಮುಜುಗರ ತರುವಂಥದ್ದು. ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡರು ಎಂಬಂತೆ ನಳಿನ್‌ ಕುಮಾರ್‌ ಕಟೀಲು (Nalin Kumar Kateel) ಮಾತು ವೈರಲ್‌ ಆಗಿದೆ. ಫ್ಯಾಕ್ಟ್‌ಚೆಕ್‌ನಲ್ಲಿ ಇದು ಸುಳ್ಳು ಎಂದು ಸಾಬೀತಾಗಿದೆ.

ಬಿಜೆಪಿ ನಾಯಕ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ಅನುಮಾನದ ಮಾಸ್ಕ್ ತೊಡಿಸಿದ ಫೇಸ್‌ಬುಕ್
ಬಿಜೆಪಿ ನಾಯಕ ನಳಿನ್‌ ಕುಮಾರ್ ಕಟೀಲ್ ಹೇಳಿಕೆಗೆ ಅನುಮಾನದ ಮಾಸ್ಕ್ ತೊಡಿಸಿದ ಫೇಸ್‌ಬುಕ್

ಬಿಜೆಪಿ (BJP) ರಾಜ್ಯ ಅಧ್ಯಕ್ಷರು ನೀಡಿದ ಸುಳ್ಳು ಹೇಳಿಕೆಗೆ ಸೋಷಿಯಲ್‌ ಮೀಡಿಯಾ ʻಫಾಲ್ಸ್‌ ಇನ್‌ಫಾರ್ಮೇಶನ್‌ʼ (False information) ಎಂದು ಷರಾ ಬರೆದು ವಿಡಿಯೋ ಫ್ಲಾಗ್‌ ಮಾಡಿದೆ.

"ವಾರ್ತಾ ಭಾರತಿ" ಪ್ರಕಟಿಸಿದ್ದ ವಿಡಿಯೊ ತುಣುಕನ್ನು ಶ್ರೀನಿವಾಸ ಗುಪ್ತ ಎನ್ನುವವರು ತಮ್ಮ ಫೇಸ್‌ಬುಕ್ (FaceBook) ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೇ ವಿಡಿಯೊವನ್ನು ವಿಶ್ಲೇಷಿಸಿ 'ನ್ಯೂಸ್‌ ಮೀಟರ್' (News Meter) ಜಾಲತಾಣ ಫ್ಯಾಕ್ಟ್‌ಚೆಕ್ ವರದಿ ಪ್ರಕಟಿಸಿತ್ತು. ಈ ವರದಿಗೆ ಮಾನ್ಯತೆ ನೀಡಿರುವ ಫೇಸ್‌ಬುಕ್, ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಹೇಳಿಕೆ ಇರುವ ವಿಡಿಯೊದಲ್ಲಿ "ಸುಳ್ಳು ಮಾಹಿತಿ ಇದೆ" ಎಂದು ಬಗ್ಗೆ ಜನರನ್ನು ಎಚ್ಚರಿಸಿದೆ.

ಈ ವಿಡಿಯೋದಲ್ಲಿ ಕಟೀಲು ಅವರ ಹೇಳಿಕೆಯಲ್ಲಿ ಸುಳ್ಳು ಇರುವುದು ಸಾಬೀತಾದ ಕಾರಣ, ಫೇಸ್‌ಬುಕ್‌ ನಳಿನ್‌ ಕುಮಾರ್‌ ಕಟೀಲ್‌ ಅವರ ವಿಡಿಯೋದ ಮೇಲೆ “False information” ಎಂಬ ಷರಾ ಬರೆದಿದೆ!

ನಳಿನ್‌ ಕುಮಾರ್‌ ಕಟೀಲು ಅವರು ತಮ್ಮ ಬೇಜವಾಬ್ದಾರಿ ನಡೆ ಮತ್ತು ನುಡಿಯಿಂದಾಗಿ ವ್ಯಾಪಕ ಟೀಕೆಗೆ ಒಳಗಾಗಿರುವಾಗಲೇ ಫೇಸ್‌ಬುಕ್‌ನ ಈ ವಿದ್ಯಮಾನ ಗಮನಸೆಳೆದಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ವಿರೋಧ ಎದುರಿಸುತ್ತಿರುವ ನಳಿನ್‌ ಕುಮಾರ್‌ ಕಟೀಲು ಮತ್ತು ಬಳಗಕ್ಕೆ ಇದರಿಂದ ಭಾರಿ ಹಿನ್ನಡೆ ಆದಂತಾಗಿದೆ. ಇಷ್ಟಕ್ಕೂ ಅವರು ವಿಡಿಯೋದಲ್ಲಿ ಹೇಳಿರುವುದೇನು? ಇಲ್ಲಿದೆ ಗಮನಿಸಿ.

ಮೇಲಿನ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ 17ಸೆಕೆಂಡ್‌ ವಿಡಿಯೋದಲ್ಲಿ ನಳಿನ್‌ ಕುಮಾರ್‌ ಕಟೀಲು ಅವರ ಮಾತಿನ ವರಸೆ ಹೀಗಿದೆ ನೋಡಿ -"ನಾನು ಮೊನ್ನೆ ಹೋದಾಗ ತಾಯಿ ಹೇಳಿದ್ರು ನನ್ನ ಅಕೌಂಟ್‌ನಲ್ಲಿ ಒಂದು ಲಕ್ಷ ಇದೆ ಎಂದರು. ಹೇಗಮ್ಮಾ ಅಂತ ಕೇಳಿದೆ. ನನಗೆ ಗೊತ್ತಿಲ್ಲ. ಸರ್ಕಾರದಿಂದ ಬಂದಿದೆ ಅಂತ ಹೇಳಿದ್ರು. ಪ್ರತಿಯೊಬ್ಬ ರೈತನ ಅಕೌಂಟಿಗೆ ಇವತ್ತು ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಬಂದಿದೆ. ಯಾರೂ ಅರ್ಜಿ ಹಾಕದೆ ನೇರವಾಗಿ ಬಂದಿದ್ರೆ ಅದು ನರೇಂದ್ರ ಮೋದಿ ಸರ್ಕಾರದ ಕೊಡುಗೆ".

ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದ ಸುಳ್ಳು ಏನು?

“ಪ್ರತಿಯೊಬ್ಬ ರೈತನ ಅಕೌಂಟಿಗೆ ಇವತ್ತು ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ ರೂಪಾಯಿ ಬಂದಿದೆ. ಯಾರೂ ಅರ್ಜಿ ಹಾಕದೆ ನೇರವಾಗಿ ಬಂದಿದ್ರೆ ಅದು ನರೇಂದ್ರ ಮೋದಿ ಸರ್ಕಾರದ ಕೊಡುಗೆ”

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅರ್ಜಿ ಹಾಕದೇ ರೈತರ ಅಕೌಂಟಿಗೆ ಹಣ ಜಮೆ ಮಾಡುವಂತಹ ಯಾವುದೇ ಯೋಜನೆಯನ್ನು ಇದುವರೆಗೆ ಜಾರಿಗೊಳಿಸಿಲ್ಲ ಎಂಬುದು ಜನಸಾಮಾನ್ಯರಿಗೂ ತಿಳಿದ ವಿಚಾರ.

ಸೋಷಿಯಲ್‌ ಮೀಡಿಯಾದಲ್ಲಿ ನಳಿನ್‌ ಕುಮಾರ್‌ ವಿಡಿಯೋ ಟ್ರೋಲ್‌ ಆಗಿದೆ. ಅಕ್ಷರ ಮೀಡಿಯಾ ಶ್ರೀನಿವಾಸ್‌ ಅವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದು, ಫೇಸ್‌ಬುಕ್‌ ವಿಡಿಯೋವನ್ನು ಮಾಸ್ಕ್‌ ಮಾಡಿದೆ.

ಸುಳ್ಳು ಹೇಳಿ ಸಿಕ್ಕಿ ಬಿದ್ದ ನಳಿನ್‌ ಕುಮಾರ್‌ ಕಟೀಲು
ಸುಳ್ಳು ಹೇಳಿ ಸಿಕ್ಕಿ ಬಿದ್ದ ನಳಿನ್‌ ಕುಮಾರ್‌ ಕಟೀಲು

ವಾಸ್ತವದಲ್ಲಿ ಇರುವ ಯೋಜನೆ - ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ಈ ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರವು ಸಣ್ಣ ರೈತರಿಗೆ 1 ವರ್ಷದಲ್ಲಿ 3 ಕಂತುಗಳಲ್ಲಿ 6000 ರೂಪಾಯಿ ನೀಡುತ್ತಿದೆ. ಪ್ರತಿ ಕಂತಿನಲ್ಲಿ 2000 ರೂಪಾಯಿಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯ ಲಾಭವನ್ನು 2 ಹೆಕ್ಟೇರ್ ವರೆಗಿನ ಭೂಮಿ ಹೊಂದಿರುವ ಸಣ್ಣ ರೈತ ಕುಟುಂಬ ಪಡೆಯಬಹುದಾಗಿದೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ: ನೈಸರ್ಗಿಕ ವಿಕೋಪಗಳಲ್ಲಿ ಬೆಳೆಗಳಿಗೆ ಉಂಟಾದ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದಕ್ಕಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. ಈ ಯೋಜನೆಯು ಬಿತ್ತನೆ ಪೂರ್ವದಿಂದ ಕಟಾವಿನ ನಂತರದ ಸಂಪೂರ್ಣ ಬೆಳೆ ಚಕ್ರವನ್ನು ಒಳಗೊಂಡಿದೆ.

ಇದೇ ರೀತಿ ಇನ್ನು ಕೆಲವು ರೈತ ಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆದರೆ, ಇವೆಲ್ಲದರ ಫಲಾನುಭವಿ ಆಗಬೇಕಾದರೆ ಅರ್ಜಿ ಸಲ್ಲಿಸಬೇಕಾದ್ದು ಕಡ್ಡಾಯ. ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದಂತೆ ಅರ್ಜಿ ಸಲ್ಲಿಸದೆಯೇ ನರೇಂದ್ರ ಮೋದಿ ಸರ್ಕಾರ ರೈತರ ಖಾತೆಗೆ ಹಣ ಜಮೆ ಮಾಡುವುದಿಲ್ಲ.

IPL_Entry_Point