ಕನ್ನಡ ಸುದ್ದಿ  /  Karnataka  /  Field Trip For High School Students: An Educational Field Trip Focused On Rationality; Visit Of Girl Students To Dharwad Sdmcet

Field trip for high school students: ವೈಚಾರಿಕತೆಗೆ ಇಂಬುಕೊಟ್ಟ ಶೈಕ್ಷಣಿಕ ಕ್ಷೇತ್ರ ಪ್ರವಾಸ; ಧಾರವಾಡ SDMCETಗೆ ವಿದ್ಯಾರ್ಥಿನಿಯರ ಭೇಟಿ

Field trip for high school students: ಶಾಲಾ ಶಿಕ್ಷಣ ಕಾರ್ಯಕ್ರಮದ ನಿಮಿತ್ತ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ತಂಡ ಕಲಘಟಗಿ ತಾಲೂಕು ಮತ್ತು ಧಾರವಾಡ ತಾಲೂಕುಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡಿಸಿತು. ಇದರ ಸಚಿತ್ರ ವರದಿ ಇಲ್ಲಿದೆ.

ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ತಂಡ ಕಲಘಟಗಿ ತಾಲೂಕು ಮತ್ತು ಧಾರವಾಡ ತಾಲೂಕುಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡಿಸಿತು.
ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ತಂಡ ಕಲಘಟಗಿ ತಾಲೂಕು ಮತ್ತು ಧಾರವಾಡ ತಾಲೂಕುಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡಿಸಿತು.

ಧಾರವಾಡ: ಶಾಲಾ ಶಿಕ್ಷಣ ಕಾರ್ಯಕ್ರಮದ ನಿಮಿತ್ತ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ತಂಡ ಕಲಘಟಗಿ ತಾಲೂಕು ಮತ್ತು ಧಾರವಾಡ ತಾಲೂಕುಗಳ ಆಯ್ದ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡಿಸಿತು. ಕಳೆದ ಸೋಮವಾರ ಮತ್ತು ಮಂಗಳವಾರ ಈ ಕಿರು ಪ್ರವಾಸ ಆಯೋಜನೆಯಾಗಿತ್ತು.

ಗುರಿ ನಿರ್ಧರಿತ ಶಿಕ್ಷಣದ ಆಯ್ಕೆ , ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದು ಮತ್ತು ಗ್ರಾಮೀಣ ವಿಭಾಗದ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣದ ಆಯ್ಕೆಯಲ್ಲಿ ವಿಜ್ಞಾನವನ್ನು ಆಯ್ದುಕೊಳ್ಳುವಂತಾಗಲಿ ಎಂಬುದು ಈ ಕಿರು ಪ್ರವಾಸದ ಆಶಯ.

ಶಾಲಾ ಶಿಕ್ಷಣ ಕಾರ್ಯಕ್ರಮದ ಪ್ರಕಾರ, ಧಾರವಾಡದ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ಧಾರವಾಡ ಮತ್ತು ಕಲಘಟಗಿ ತಾಲೂಕಿನ ಆಯ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬೆಳಗಿನ ಅವಧಿಯಲ್ಲಿ ಧಾರವಾಡದ ಎಸ್.ಡಿ.ಎಮ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಾಹಾವಿದ್ಯಾಲಯಕ್ಕೆ ಭೇಟಿ ನೀಡಿ ಇಂಜಿನಿಯರಿಂಗ್ ಕುರಿತು ಹಲವಾರು ಮಾಹಿತಿಗಳನ್ನು ವಿದ್ಯಾರ್ಥಿನಿಯರು ಪಡೆದುಕೊಂಡರು.

ಧಾರವಾಡದ ಎಸ್.ಡಿ.ಎಮ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಾಹಾವಿದ್ಯಾಲಯ ಮತ್ತು ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಕ್ಕೆ ಭೇಟಿ ನೀಡಿದ ವಿದ್ಯಾರ್ಥಿನಿಯರ ಮತ್ತು ಎಸ್‌ವಿವೈಎಂ ತಂಡ
ಧಾರವಾಡದ ಎಸ್.ಡಿ.ಎಮ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಾಹಾವಿದ್ಯಾಲಯ ಮತ್ತು ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಕ್ಕೆ ಭೇಟಿ ನೀಡಿದ ವಿದ್ಯಾರ್ಥಿನಿಯರ ಮತ್ತು ಎಸ್‌ವಿವೈಎಂ ತಂಡ

ಇಂಜಿನಿಯರಿಂಗ್ ಶಿಕ್ಷಣದ ಒಂದು ಸ್ಟ್ರೀಮ್ ಆಗಿದ್ದು, ಯಂತ್ರಗಳು, ರಚನೆಗಳು, ಸಾಫ್ಟ್‌ವೇರ್, ಹಾರ್ಡ್‌ವೇರ್ ಮತ್ತು ಸಿಸ್ಟಮ್‌ಗಳು ಮತ್ತು ಪ್ರಕ್ರಿಯೆಗಳನ್ನು ನವೀನಗೊಳಿಸಲು, ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತದ ಅನ್ವಯವನ್ನು ಒಳಗೊಂಡಿರುತ್ತದೆ. ಈ ಕ್ಷೇತ್ರವು ಎಲ್ಲಾ ಕೈಗಾರಿಕೆಗಳಲ್ಲಿ ವೃತ್ತಿ ಅವಕಾಶಗಳ ಶ್ರೇಣಿಯನ್ನು ನೀಡುತ್ತದೆ, ಇದು 12 ನೇ ತರಗತಿಯ ನಂತರ, ವಿಶೇಷವಾಗಿ ವಿಜ್ಞಾನದ ಸ್ಟ್ರೀಮ್‌ನಿಂದ ವಿದ್ಯಾರ್ಥಿಗಳು ಅನುಸರಿಸುವ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಲ್ಲಿ ಒಂದಾಗಿದೆ.

ಕ್ಷೇತ್ರ ಪ್ರವಾಸದಲ್ಲಿ ಪರಿಣತರಿಂದ ವಿವರ ಪಡೆಯುತ್ತಿರುವ ವಿದ್ಯಾರ್ಥಿನಿಯರು
ಕ್ಷೇತ್ರ ಪ್ರವಾಸದಲ್ಲಿ ಪರಿಣತರಿಂದ ವಿವರ ಪಡೆಯುತ್ತಿರುವ ವಿದ್ಯಾರ್ಥಿನಿಯರು

ಇಂಜಿನಿಯರಿಂಗ್ ಎನ್ನುವುದು ಅಮೂರ್ತ ಆಲೋಚನೆಗೆ ಜೀವನೀಡಿ, ವಸ್ತುವಿನ ಗುಣಲಕ್ಷಣಗಳನ್ನು ಮತ್ತು ಪ್ರಕೃತಿಯಲ್ಲಿನ ಶಕ್ತಿಯ ಮೂಲಗಳನ್ನು ಮನುಕುಲಕ್ಕೆ ಪೂರಕವಾಗುವ ರೀತಿಯಲ್ಲಿ ಅಗತ್ಯಗಳನ್ನು ಪೂರೈಸಲು ಮತ್ತು ನಿರ್ಮಿಸಲು ವಿಜ್ಞಾನ ಮತ್ತು ಗಣಿತವನ್ನು ಅನ್ವಯಿಸುವ ಶಾಖೆಯಾಗಿದೆ. ವಿಜ್ಞಾನವು ಗಮನಿಸಿದ ಸಂಗತಿಗಳನ್ನು ತಂತ್ರಜ್ಞಾನದ ಸಹಾಯದಿಂದ ಒಂದು ನಿರ್ದಿಷ್ಟ ರೂಪವನ್ನು ನೀಡುವ ಕಾರ್ಯದಲ್ಲಿ ಎಂಜಿನಿಯರಿಂಗ್ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲಾಯಿತು. ಇದು ಹಲವಾರು ಶಾಖೆಗಳನ್ನು ಹೊಂದಿದ್ದು , ಏರೋಸ್ಪೇಸ್, ಅಗ್ರಿಕಲ್ಚರಲ್, ಕೆಮಿಕಲ್, ಸಿವಿಲ್ (ಜನರಲ್ ಮತ್ತು ಸ್ಟ್ರಕ್ಚರಲ್), ಕಂಪ್ಯೂಟರ್, ಕಂಟ್ರೋಲ್ ಸಿಸ್ಟಮ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಇಂಡಸ್ಟ್ರಿಯಲ್, ಮ್ಯಾನುಫ್ಯಾಕ್ಚರಿಂಗ್, ಮೆಕ್ಯಾನಿಕಲ್, ಮೈನಿಂಗ್, ನ್ಯೂಕ್ಲಿಯರ್ ಮತ್ತು ಪೆಟ್ರೋಲಿಯಂನಂತಹ ವಿವಿಧ ರೀತಿಯ ಎಂಜಿನಿಯರಿಂಗ್ ಸ್ಟ್ರೀಮ್‌ಗಳಿವೆ ಎಂಬದನ್ನು ಮಕ್ಕಳು ತಿಳಿದುಕೊಳ್ಳಲು ಸಾಧ್ಯವಾಯಿತು. ಇಲ್ಲಿ ಆಯ್ದ ಕೆಲವು ವಿಭಾಗಗಳಿಗೆ ಭೇಟಿ ನೀಡುವ ಮೂಲಕ ಉಪಯುಕ್ತ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲಾಯಿತು. ಎಸ್‌ವಿವೈಎಂನ ಹೆಮ್ಮೆಯ ಯೋಜನೆ ವಿವೇಕ ಸ್ಕಾಲರ್ ಪ್ರೋಗ್ರಾಂನ ಫಲಾನುಭವಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿನಿಯೋರ್ವಳು ಈ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಳೆ.

ಅಪರಾಹ್ನದ ಅವಧಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಧೀನದಲ್ಲಿರುವ ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗಕ್ಕೆ ಭೇಟಿ ನೀಡಲಾಯಿತು. ಕರ್ನಾಟಕದ ಅತಿ ದೊಡ್ಡ ಪ್ರಾಣಿಶಾಸ್ತ್ರ ಸಂಗ್ರಹಾಲಯ ಎಂದೇ ಹೆಸರು ಪಡೆದಿರುವ ಈ ಸಂಗ್ರಹಾಲಯದಲ್ಲಿ ಶ್ರೀಯುತ ನವೀನ ಪ್ಯಾಟಿಮನಿ ಇವರಿಂದ ಹಲವಾರು ರೋಚಕವಾದ ವಿಷಯಾಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಕಳೆದ 50 ವರ್ಷಗಳಿಂದ ಇಲ್ಲಿಯವರೆಗೆ ಸರಿಸುಮಾರು 2500 ವಿಭಿನ್ನ ಪ್ರಭೇದದ ಪಕ್ಷಿಗಳು, ಕಪ್ಪೆಗಳು, ಮೀನುಗಳು, ಹಾವುಗಳು, ಸಮುದ್ರ ಜೀವಿಗಳು ಹೀಗೆ ವಿವಿಧ ಪ್ರಾಣಿಗಳ ವಿಶೇಷತೆಯನ್ನು ತಿಳಿಯಲು ಸಾಧ್ಯವಾಯಿತು.

ಕ್ಷೇತ್ರ ಪ್ರವಾಸದಲ್ಲಿ ಪರಿಣತರಿಂದ ವಿವಿಧ ವಿಚಾರಗಳ ಪ್ರಾಥಮಿಕ ಮಾಹಿತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು
ಕ್ಷೇತ್ರ ಪ್ರವಾಸದಲ್ಲಿ ಪರಿಣತರಿಂದ ವಿವಿಧ ವಿಚಾರಗಳ ಪ್ರಾಥಮಿಕ ಮಾಹಿತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು

ಸಾವೇ ಇಲ್ಲದ ಅಂಬಲಿ ಮೀನು ಮತ್ತು ಅದು ಸ್ರವಿಸುವ ವಿಷ, 35 ಮೆದುಳು 10 ಹೊಟ್ಟೆಗಳನ್ನು ಹೊಂದಿದ ಜಿಗಣಿ, ಕತ್ತರಿಸಿದ ಪ್ರತಿಯೊಂದು ತುಂಡು ಸಹಿತ ಹೊಸ ಪ್ರಾಣಿಯಾಗಿ ರೂಪುಗೊಳ್ಳುವ ವಿಶೇಷತೆಯನ್ನು ಹೊಂದಿರುವ ರೈತನ ಮಿತ್ರ ಎರೆಹುಳು, ಅತಿ ವಿಷಕಾರಿ ಕಾಡುಜೇಡ, ಪರಾಗಸ್ಪರ್ಶದ ರಾಯಭಾರಿಗಳಾದ ಕೀಟಗಳು, ತನ್ನ ಜೊಲ್ಲಿನಿಂದ ರೇಷ್ಮೆ ಉತ್ಪಾದಿಸುವ ರೇಷ್ಮೆ ಹುಳು, ಆದರ್ಶ ದಂಪತಿಗಳೆಂದು ಕರೆಸಿಕೊಳ್ಳುವ ದೊಡ್ಡ ಕೊಕ್ಕಿನ ಹಾರ್ನ್ ಬಿಲ್, ಗಂಡು ಪ್ರಾಣಿಯೇ ಗರ್ಭ ಧರಿಸುವ ಸಮುದ್ರ ಕುದುರೆ, ರಸಗೊಬ್ಬರ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೀರುಂಡೆ, ಜಗತ್ತಿನಲ್ಲೇ ಅತಿ ಹೆಚ್ಚು ಬೇಟೆಗೆ ಗುರಿಯಾಗಿರುವ ಪುನುಗುಬೆಕ್ಕು, ಹಕ್ಕಿಗಳಂತೆ ತಾನೂ ಹಾರಬಲ್ಲೆ ಎನ್ನುವ ಹಾರುವ ಮೀನು, ಅತ್ಯಂತ ವಿಷಕಾರಿ ಕಪ್ಪೆಯಾದ ಗೋಲ್ಡನ್ ಡಾರ್ಕ್, ಜಗತ್ತಿನಲ್ಲಿಯೇ ನಶಿಸಿ ಹೋಗಿರುವ ಕಪ್ಪೆ ಫಿಲೋಟಸ್, ಕರ್ವಾಲೋ ಕಾದಂಬರಿಯಲ್ಲಿ ಉಲ್ಲೇಖಿತ ಹಾರುವ ಹಲ್ಲಿ, ಕ್ಷಣ ಕ್ಷಣಕ್ಕೆ ಬಣ್ಣ ಬದಲಾಯಿಸುವ ಗೋಸುಂಬೆ ಅಥವಾ ಊಸರವಳ್ಳಿ, ಮರುಭೂಮಿಯ ಹಡಗು ಒಂಟೆಯು ತನ್ನ ಶರೀರದಲ್ಲಿ ಯಾವುದೇ ಕಾರಣಕ್ಕೂ ನೀರನ್ನು ಸಂಗ್ರಹಿಸುವುದಿಲ್ಲ ಎಂಬುದು, ಇನ್ನುಳಿದಂತೆ ಹಾರು ಅಳಿಲು, ನೀರು ನಾಯಿ, ಚಿಪ್ಪು ಹಂದಿ, ಕಾಳಿಂಗ ಸರ್ಪ, ಹೆಬ್ಬಾವು, ರತ್ನಪಕ್ಷಿ ಮತ್ತು ಶಿವನ ಕುದುರೆಗಳ ಬಗ್ಗೆ ಅನೇಕ ಮಾಹಿತಿಯನ್ನು ತಿಳಿಯಲು ಸಾಧ್ಯವಾಯಿತು. ಪಾಲ್ಗೊಂಡ ಮಕ್ಕಳು ಮತ್ತು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಈ ಕ್ಷೇತ್ರ ಬೇಟಿ ಹೊಸ ಅನುಭವ ನೀಡಿತು.

IPL_Entry_Point