ಜಿಲೇಬಿ ಮತ್ತು ಶರಬತ್ ಮೇಲೆ ಬಿದ್ದ FSSAI ಕಣ್ಣು: ಮಾದರಿ ಸಂಗ್ರಹಿಸಲು ನಿರ್ಧಾರ; ಕೃತಕ ಬಣ್ಣ ಬಳಕೆಗೆ ಬೀಳಲಿದೆ ಕಡಿವಾಣ
ರಾಜ್ಯದಲ್ಲಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದ್ದು, ವಿವಿಧ ಕ್ರಮ ಕೈಗೊಂಡಿದೆ. ಈಗಾಗಲೇ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕಬಾಬ್, ಶವರ್ಮಾ ಮತ್ತು ಚಹಾದಲ್ಲಿ ಕೃತಕ ಬಣ್ಣ ಬೆರಕೆಯನ್ನು ಇಲಾಖೆ ನಿಷೇಧಿಸಿದೆ. (ವರದಿ: ಎಚ್.ಮಾರುತಿ )

ಬೆಂಗಳೂರು: ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕೆಬಾಬ್, ಶವರ್ಮಾ ಮತ್ತು ಚಹಾದಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇಧಿಸಿದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಕಣ್ಣು ಇದೀಗ ಜಿಲೇಬಿ ಮತ್ತು ಶರಬತ್ ಮೇಲೆ ಬಿದ್ದಿದೆ. ಜಿಲೇಬಿ ಮತ್ತು ಶರಬತ್ ಗುಣಮಟ್ವನ್ನು ಪರೀಕ್ಷಿಸಲು FSSAI ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲೇಬಿ ಮತ್ತು ಶರಬತ್ನ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಕನಿಷ್ಠ 250 ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಆಕರ್ಷಕವಾಗಿ ಕಾಣುವಂತೆ ಮಾಡಲು ಜಿಲೇಬಿ ತಯಾರಿಸುವಾಗ ಕೃತಕ ಬಣ್ಣಗಳನ್ನು ಬಳಸಲಾಗುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಪರೀಕ್ಷೆಗೊಳಪಡಿಸುವುದು ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಬತ್ಗೆ ಬೇಸಿಗೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಶರಬತ್ನಲ್ಲಿ ಸಂರಕ್ಷಕ ಪದಾರ್ಥಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದೀರ್ಘಾವಧಿಗೆ ಬಾಳಿಕೆ ಬರುವಂತೆ ಮಾಡಲು ಶರಬತ್ಗೆ ರಾಸಾಯನಿಕ, ಸಂರಕ್ಷಕ ರಾಸಾಯನಿಕಗಳು ಮತ್ತು ಬಣ್ಣವನ್ನು ಬಳಸಲಾಗುತ್ತಿದೆ. ಇದರಿಂದ ಶರಬತ್ನ ಗುಣಮಟ್ಟ ಕಲಬೆರಕೆಯಾಗಿರುತ್ತದೆ ಅಥವಾ ಗುಣಮಟ್ಟ ಕಳಪೆಯಾಗಿರುತ್ತದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ FSSAI ಅಧಿಕಾರಿಗಳ ಸೂಚನೆ ಮೇರೆಗೆ ಶರಬತ್ ಜಿಲೇಬಿ ಜತೆಗೆ ಆಮದು ಮಾಡಿಕೊಳ್ಳುವ ಚಾಕೊಲೇಟ್ನ ಮಾದರಿಗಳನ್ನೂ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಈ ಆಮದು ಚಾಕೊಲೇಟ್ಗಳಿಗೆ ಬೇಡಿಕೆ ಹೆಚ್ಚಾಗಿರುವ ನಗರ ಪ್ರದೇಶಗಳಿಂದ ಚಾಕೊಲೇಟ್ ಮಾದರಿಗಳನ್ನು ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡದಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಕರ್ನಾಟಕ ಸರ್ಕಾರ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕಬಾಬ್ ಮತ್ತು ಶವರ್ಮಾದಲ್ಲಿ ಕೃತಕ ಬಣ್ಣವನ್ನು ಬೆರೆಸುವುದನ್ನು ನಿಷೇಧಿಸಿತ್ತು. ನಂತರ ರಸ್ತೆಬದಿಯ ಅಂಗಡಿಗಳಲ್ಲಿ ಸಿಗುವ ಚಹಾವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪರೀಕ್ಷೆಗೊಳಪಡಿಸಿದ್ದು, ಚಹಾದಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಮತ್ತು ಬಣ್ಣವನ್ನು ಬಳಸುವುದನ್ನು ಪತ್ತೆ ಹಚ್ಚಿತ್ತು. ವಿಷಕಾರಕ ಎಂದು ಪರಿಗಣಿಸಲ್ಪಟ್ಟಿರುವ ರೋಡಮೈನ್-ಬಿ ಮತ್ತು ಕಾರ್ಮೋಸಿನ್ಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಪಾನಿಪೂರಿ, ಚಹಾ, ಕಬಾಬ್, ಗೋಬಿ ಶವರ್ಮಾ, ಚಹಾ ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳಲ್ಲಿ ರುಚಿ ಮತ್ತು ಬಣ್ಣ ಹೆಚ್ಚಿಸಲು ಕೀಟನಾಶಕ ಮತ್ತು ರಸಗೊಬ್ಬರಗಳಲ್ಲಿ ಬಳಸುವ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈ ಅಂಶಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ.
ಪಾನಿಪೂರಿಯಲ್ಲಿ ಬಳಸುವ ಸಾಸ್ನಲ್ಲಿ ಕಾರ್ಸಿನೊಗೆಜಿಕ್ ರಾಸಾಯನಿಕಗಳು ಪತ್ತೆಯಾಗಿವೆ. ಈ ರಾಸಾಯನಿಕಗಳನ್ನು ಬಳಸಿರುವ ಮೀಠಾ, ಕಾರ ಸೇವನೆ ಮಾಡಿದರೆ ಅಸಿಡಿಟಿ ಮತ್ತು ಬೇಧಿ ಹೆಚ್ಚಾಗುತ್ತದೆ. ಸತತವಾಗಿ 5-7 ವರ್ಷಗಳವರೆಗೆ ಪಾನಿಪೂರಿಯನ್ನು ತಿನ್ನುತ್ತಾ ಹೋದರೆ ಕ್ಯಾನ್ಸರ್ ಮತ್ತು ಅಲ್ಸರ್ ರೋಗ ತಗುಲುತ್ತದೆ ಎಂದು ತಿಳಿದು ಬಂದಿದೆ. ಒಂದು ವೇಳೆ ರಾಸಾಯನಿಕಗಳನ್ನು ಬಳಸುವುದನ್ನು ಮುಂದುವರೆಸಿದರೆ 7 ವರ್ಷಗಳ ಸೆರೆವಾಸ ಮತ್ತು 10 ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.