ಮೈಸೂರು: ಬೇರ್ಪಟ್ಟಿದ್ದ ಮೂರು ಮರಿಗಳನ್ನು ತಾಯಿ ಚಿರತೆ ಮಡಿಲು ಸೇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ
ಮೈಸೂರಿನಲ್ಲಿ ತಾಯಿ ಚಿರತೆಯಿಂದ ದೂರವಾಗಿದ್ದ ಮರಿ ಚಿರತೆಗಳು ಈಗ ಒಂದಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿಯ ಮಡಿಲಿಗೆ ಮರಿಗಳನ್ನು ಸೇರಿಸಿದ್ದಾರೆ.

ಮೈಸೂರು: ಚಿರತೆ ಮತ್ತು ಅದರ ಮರಿಗಳನ್ನು ಒಂದಾಗಿಸುವಲ್ಲಿ ಚಿರತೆ ಕಾರ್ಯಪಡೆ ಯಶಸ್ವಿಯಾಗಿದೆ. ಆರು ದಿನಗಳ ನಿರಂತರ ಪ್ರಯತ್ನದ ನಂತರ ತಾಯಿ ಮತ್ತು ಪುಟ್ಟ ಮರಿಗಳು ಒಂದಾಗಿದೆ. ಫೆಬ್ರುವರಿ 7ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮೈಸೂರು ತಾಲ್ಲೂಕು ವರುಣ ಹೋಬಳಿಯ ಭುಗತಹಳ್ಳಿ ಗ್ರಾಮದ ಎಸ್. ಎಂ. ಪಿ ಲೇಔಟ್ನ ಪೈಪ್ ಕಲ್ವೆರ್ಟ್ನಲ್ಲಿ 2 ಚಿರತೆ ಮರಿಗಳು ಇರುವುದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಮೇರೆಗೆ ಮೈಸೂರಿನ ಚಿರತೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆ ಮರಿಗಳನ್ನು ರಕ್ಷಿಸಿದ್ದಾರೆ.
ಯಾರೂ ಯಾವುದೇ ರೀತಿಯಲ್ಲಿಯೂ ಭಯ ಪಡುವ ಅಗತ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಅಲ್ಲದೆ ಮುಂದೆ ಸ್ಥಳೀಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಫೆಬ್ರುವರಿ 9ರಂದು ಇನ್ನೊಂದು ಚಿರತೆ ಮರಿಯನ್ನು ರಕ್ಷಿಸಲಾಗಿತ್ತು. ಆ ಬಳಿಕ ನಿರಂತರವಾಗಿ ತಾಯಿ ಚಿರತೆಯನ್ನು ಹುಡುಕುವ ಕಾರ್ಯಾಚರಣೆ ನಡೆಸುತ್ತಾ ಬರಲಾಗಿತ್ತು. ಇದೀಗ 6 ದಿನಗಳ ನಿರಂತರ ಪ್ರಯತ್ನದಿಂದ ಹಾಗೂ ಲೇಔಟ್ನ ನಿವಾಸಿಗಳ ಸಹಕಾರದಿಂದ ಫೆ. 13ರಂದು ತಾಯಿ ಚಿರತೆಯನ್ನು ಅದೇ ಜಾಗದಲ್ಲಿ ಪೈಪ್ ಕಲ್ವರ್ಟ್ನಲ್ಲಿ ಹುಡುಕಿ ಸೆರೆ ಹಿಡಿಯಲಾಗಿದೆ.
ಆರೋಗ್ಯ ತಪಾಸಣೆ ಹಾಗೂ ಪುನರ್ಮಿಲನ ಪ್ರಕ್ರಿಯೆ
ಆರು ದಿನಗಳ ನಿರಂತರ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಬೇರ್ಪಟ್ಟಿದ್ದ ಮೂರು ಮರಿಗಳನ್ನು ತಾಯಿ ಚಿರತೆಯ ಮಡಿಲಿಗೆ ಸೇರಿಸುವಲ್ಲಿ ಚಿರತೆ ಕಾರ್ಯಪಡೆ ಯಶಸ್ವಿಯಾಗಿದೆ. ಸದ್ಯ ತಾಯಿ ಹಾಗೂ ಮರಿಗಳ ಆರೋಗ್ಯ ತಪಾಸಣೆ ಹಾಗೂ ಪುನರ್ಮಿಲನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಚಿರತೆ ಕಾರ್ಯಪಡೆಯ ಉಪ ಅರಣ್ಯ ಸಂಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಮನುಷ್ಯರಷ್ಟೇ ಮಮತೆ ಪ್ರಾಣಿಗಳಲ್ಲೂ ಇರುತ್ತದೆ. ಪುಟ್ಟ ಮರಿಗಳಿಗೆ ತಾಯಿಯ ಬೆಚ್ಚನೆಯ ಮಡಿಲಿನ ಆರೈಕೆ ಅಗತ್ಯವಿರುತ್ತದೆ. ಇದನ್ನು ಅರಿತಿರುವ ಚಿರತೆ ಕಾರ್ಯಪಡೆ ಸಿಬ್ಬಂದಿ, ಪುಟ್ಟ ಮರಿಗಳನ್ನು ತಾಯಿಯ ಮಡಿಲಿಗೆ ಮರಳಿಸಿದ್ದಾರೆ.
ಮೈಸೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
