ಗಾಲಿ ಜನಾರ್ದನ ರೆಡ್ಡಿ ಶಾಸಕತ್ವ ರದ್ದು, ಗಂಗಾವತಿ ಕ್ಷೇತ್ರ ಈಗ ಖಾಲಿ; ವಿಧಾನಸಭೆ ಕಾರ್ಯದರ್ಶಿಯಿಂದ ಆದೇಶ
ಓಬಳಾಪುರಂ ಗಣಿ ಪ್ರಕರಣದಲ್ಲಿ ಸಿಲುಕಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನ ರದ್ದಾಗಿದೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಆದೇಶ ಜಾರಿ ಮಾಡಿದ್ದಾರೆ.

ಬೆಂಗಳೂರು: ಒಂದೂವರೆ ದಶಕದ ಹಿಂದೆ ಓಬಳಾಪುರಂ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿ ಸದ್ಯ ಏಳು ವರ್ಷದ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಸದಸ್ಯರು ಆಗಿರುವ ಮಾಜ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಶಾಸಕತ್ವ ರದ್ದಾಗಿದೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯಾಗಿರುವ ಎಂ.ಕೆ.ವಿಶಾಲಾಕ್ಷಿ ಅವರು ಗುರುವಾರ ಹೊರಡಿಸಿರುವ ಆದೇಶದಂತೆ ಜನಾರ್ದನ ರೆಡ್ಡಿ ಅವರ ಶಾಸಕತ್ವವನ್ನು ರದ್ದು ಮಾಡಲಾಗಿದೆ. ಅಲ್ಲದೇ ಗಂಗಾವತಿ ವಿಧಾನಸಭಾ ಕ್ಷೇತ್ರವು ಖಾಲಿ ಉಳಿದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ಸಿಕ್ಕರೆ ಮಾತ್ರ ಜನಾರ್ದನ ರೆಡ್ಡಿ ಅವರ ಶಾಸಕತ್ವ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಅವರು ಗಣಿ ಪ್ರಕರಣದಲ್ಲಿ ಹೈದ್ರಾಬಾದ್ನ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದಾರೆ. ಜನಪ್ರತಿನಿಧಿಗಳ ಕಾಯಿದೆಯ ಪ್ರಕಾರ ಯಾವುದೇ ಜನಪ್ರತಿನಿಧಿ ಶಿಕ್ಷೆಗೆ ಒಳಗಾದರೆ ಅವರ ಸದಸ್ಯತ್ವ ರದ್ಧಾಗಲಿದೆ. ಸದ್ಯಕ್ಕೆ ಜನಾರ್ದನ ರೆಡ್ಡಿ ವಿರುದ್ದ ಶಿಕ್ಷೆ ಪ್ರಕಟವಾಗಿರುವುದರಿಂದ ಆರು ವರ್ಷಗಳ ಕಾಲ ಅವರ ಸದಸ್ಯತ್ವ ರದ್ದಾಗಲಿದೆ. ಏನಾದರೂ ಉನ್ನತ ನ್ಯಾಯಾಲಯ ಈ ಪ್ರಕರಣಕ್ಕೆ ತಡೆ ನೀಡಿದರೆ ಮಾತ್ರ ಸದಸ್ಯತ್ವ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದು ಭಾರೀ ಸದ್ದು ಮಾಡಿತ್ತು. ಆಗ ಸುಮಾರು 29 ಲಕ್ಷ ಟನ್ನಷ್ಟು ಬೃಹತ್ ಪ್ರಮಾಣದ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆದಾಯವನ್ನು ಜನಾರ್ದನರೆಡ್ಡಿ ಹಾಗೂ ಇತರರು ಗಳಿಸಿದ್ದರು ಎಂದು ಆರೋಪ ಕೇಳಿ ಬಂದಿತ್ತು.. ಈ ಪ್ರಕರಣದ ತನಿಖೆಗಾಗಿ 2009ರಲ್ಲಿ ಅಂದಿನ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಂತರ ತನಿಖೆ ಶುರುವಾಗಿತ್ತು. ಇದಾದ ಬಳಿಕ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿತ್ತು. ಕೆಲ ವರ್ಷ ಜೈಲಿನಲ್ಲಿಯೇ ರೆಡ್ಡಿ ಇದ್ದರು. ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.ಹೊಸ ಪಕ್ಷ ಕಟ್ಟಿ ಚುನಾವಣೆ ಎದುರಿಸಿ ಗಂಗಾವತಿ ಕ್ಷೇತ್ರದಿಂದ ಶಾಸಕರಾಗಿದ್ದರು.
ವಿಭಾಗ