ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಸೋಷಿಯಲ್ ಮೀಡಿಯಾದಲ್ಲಿ ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸುವುದನ್ನು ಸ್ವಾಗತಿಸೋಣ; ಪತ್ರಕರ್ತ ದೇವು ಪತ್ತಾರ
ಕನ್ನಡ ಸುದ್ದಿ  /  ಕರ್ನಾಟಕ  /  ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಸೋಷಿಯಲ್ ಮೀಡಿಯಾದಲ್ಲಿ ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸುವುದನ್ನು ಸ್ವಾಗತಿಸೋಣ; ಪತ್ರಕರ್ತ ದೇವು ಪತ್ತಾರ

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಸೋಷಿಯಲ್ ಮೀಡಿಯಾದಲ್ಲಿ ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸುವುದನ್ನು ಸ್ವಾಗತಿಸೋಣ; ಪತ್ರಕರ್ತ ದೇವು ಪತ್ತಾರ

ಸೋಷಿಯಲ್ ಮೀಡಿಯಾಗಳಲ್ಲಿ ಫೇಸ್‌ ಇಲ್ಲದವರಾಗಬೇಡಿ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸಿ, ಸ್ವಾಗತಿಸೋಣ ಎನ್ನುತ್ತಾರೆ ಬುಕ್‌ಬ್ರಹ್ಮ ಡಿಜಿಟಲ್ ಮೀಡಿಯಾ ಪ್ರಧಾನ ಸಂಪಾದಕ ದೇವು ಪತ್ತಾರ. ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ “ಗಮನಕ್ಕೆ ನೋಟಿಸ್” ಪೋಸ್ಟ್‌ ಕುರಿತು ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡ ಜತೆಗೆ ಮಾತನಾಡಿದರು.

ಬುಕ್‌ಬ್ರಹ್ಮ ಡಿಜಿಟಲ್‌ ಮೀಡಿಯಾದ ಪ್ರಧಾನ ಸಂಪಾದಕ ದೇವು ಪತ್ತಾರ (ಎಡ ಚಿತ್ರ) ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಸೋಷಿಯಲ್ ಮೀಡಿಯಾದಲ್ಲಿ ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸುವುದನ್ನು ಸ್ವಾಗತಿಸೋಣ ಎಂದು ಹೆಳಿದ್ದಾರೆ. ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿರುವ ಗಮನಕ್ಕೆ ನೋಟಿಸ್ (ಬಲ ಚಿತ್ರ)
ಬುಕ್‌ಬ್ರಹ್ಮ ಡಿಜಿಟಲ್‌ ಮೀಡಿಯಾದ ಪ್ರಧಾನ ಸಂಪಾದಕ ದೇವು ಪತ್ತಾರ (ಎಡ ಚಿತ್ರ) ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಸೋಷಿಯಲ್ ಮೀಡಿಯಾದಲ್ಲಿ ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸುವುದನ್ನು ಸ್ವಾಗತಿಸೋಣ ಎಂದು ಹೆಳಿದ್ದಾರೆ. ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿರುವ ಗಮನಕ್ಕೆ ನೋಟಿಸ್ (ಬಲ ಚಿತ್ರ)

ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ಕವಿತೆಗಳು, ಕವಯಿತ್ರಿಯರು ಹಾಗೂ ಅವರ ಕವಿತೆ ವಾಚನಗಳ ಕುರಿತಾದ ಚರ್ಚೆ ಮುಗಿಲು ಮುಟ್ಟಿದೆ. ವಿಷಯಾಧಾರಿತವಾದ ಪರ - ವಿರೋಧ ಪ್ರತಿಕ್ರಿಯೆಗಳು ಒಂದೆಡೆ, ಅನಾಮಿಕರಾಗಿ, ಯಾವ್ಯಾವುದೇ ನಕಲಿ ಖಾತೆ ಮೂಲಕ ಬೇಕಾಬಿಟ್ಟಿ ಕಾಮೆಂಟ್ ಮಾಡುವವರು ಮತ್ತೊಂದು ಕಡೆ. ಪ್ರತಿಕ್ರಿಯೆಗಳಿಗೂ ಅವಾಚ್ಯ ಪ್ರತಿಕ್ರಿಯೆಗಳನ್ನು ನೀಡುತ್ತ ಸಾಗುವ ಪ್ರವೃತ್ತಿಯವರು ಮಗದೊಂದು ಕಡೆ. ಇವೆಲ್ಲದರ ಕೇಂದ್ರ ಬಿಂದುವಾಗಿ ಕಂಡುಬಂದ ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ “ಗಮನಕ್ಕೆ..!” ಎಂಬ ಕೆಂಪು ಅಕ್ಷರಗಳ ನೋಟಿಸ್ ಗಮನಸೆಳೆಯಿತು. ಅದಕ್ಕೆ ಬಂದಿರುವ ಕಾಮೆಂಟ್‌ಗಳು ಕೂಡ ಮೇಲೆ ಹೇಳಿದ ಅದೇ ಮಾದರಿಯಲ್ಲಿ ಕಂಡುಬಂದಿವೆ. ಬುಕ್‌ಬ್ರಹ್ಮ ಫೇಸ್‌ಬುಕ್‌ ಪುಟದಲ್ಲಿ ಇಂತಹದೊಂದು “ಗಮನಕ್ಕೆ..!” ಎಂಬ ಕೆಂಪು ಅಕ್ಷರಗಳ ನೋಟಿಸ್ ಹಾಕಬೇಕಾದ ಸನ್ನಿವೇಶ ಏಕೆ ಬಂತು? ಇದನ್ನು ಓದುಗರು, ನೋಡುಗರು ಅರ್ಥ ಮಾಡಿಕೊಳ್ಳುತ್ತಾರಾ? ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗುವಂತೆ ಒಂದಷ್ಟು ವಿಚಾರಗಳನ್ನು ಬುಕ್‌ಬ್ರಹ್ಮ ಡಿಜಿಟಲ್‌ ಮೀಡಿಯಾದ ಪ್ರಧಾನ ಸಂಪಾದಕ ದೇವು ಪತ್ತಾರ ಅವರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಹಂಚಿಕೊಂಡಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ಮುಖೇಡಿತನ ಬಿಟ್ಟು ಪ್ರತಿಕ್ರಿಯಿಸಿ ಸ್ವಾಗತಿಸೋಣ; ದೇವು ಪತ್ತಾರ

ಬುಕ್‌ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ “ಗಮನಕ್ಕೆ..!” ಎಂಬ ಕೆಂಪು ಅಕ್ಷರಗಳ ನೋಟಿಸ್ ಇದೇ ಮೊದಲ ಸಲ ಹಾಕಿದ್ದಲ್ಲ. ಹಿಂದೆಯೂ ಒಂದೆರಡು ಬಾರಿ ಹಾಕಿದ್ದು ಇದೆ. ಕಾರಣ ಇಷ್ಟೆ - ಸೋಷಿಯಲ್ ಮೀಡಿಯಾ ಹೇಗಾಗಿದೆ ಎಂದರೆ ಮುಖೇಡಿತನವೇ ಹೆಚ್ಚು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಿಮಗೆ ನನ್ನ ಪರಿಚಯ, ನನಗೆ ನಿಮ್ಮ ಪರಿಚಯ ಇದ್ದೇ ಇದೆ. ನಾವೇನೇ ಹೇಳಿದರೂ, ಪ್ರತಿಕ್ರಿಯಿಸಿದರೂ ಅದು ಸೌಜನ್ಯದ ಎಲ್ಲೆ ಮೀರುವುದಿಲ್ಲ. ಅದು ಬೈಗುಳವಾದರೂ ಪರಸ್ಪರ ಪರಿಚಿತರಾಗಿರುವ ಕಾರಣ ಅಲ್ಲೂ ಒಂದು ಗಡಿ ಇದ್ದೇ ಇರುತ್ತದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಹೇಳುತ್ತ ಮುಖೇಡಿತನ ಅಂದರೆ ಫೇಸ್‌ಬುಕ್‌, ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಬಾಯಿಗೆ ಬಂದಂತೆ, ಮನಸೋ ಇಚ್ಛೆ ಪ್ರತಿಕ್ರಿಯಿಸುವವರ ಸಂಖ್ಯೆ ಹೆಚ್ಚಾಗಿದೆ. ಇದು ಕಡಿಮೆ ಆಗಬೇಕಾಗಿದೆ.

ಟೀಕೆ, ಟಿಪ್ಪಣಿ ಸ್ವಾಗತಿಸೋಣ. ಆದರೆ ಫೇಸ್‌ ಇಲ್ಲದೆ ನಕಲಿ ಐಡಿಗಳ ಮೂಲಕ ಘಾಸಿ ಉಂಟುಮಾಡುವ ಪ್ರವೃತ್ತಿ ತಡೆಯಬೇಕು. ಫೇಸ್‌ಬುಕ್ ಹಾಗೂ ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತಿಯ ದೃಢೀಕರಣ ಇಲ್ಲದೇ ಖಾತೆ ತೆರೆಯಲು ಅವಕಾಶ ಮಾಡಿರುವ ಕಾರಣ ಅದರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವ್ಯಕ್ತಿನಿಂದನೆ, ಜಾತಿ ನಿಂದನೆ, ಲಿಂಗಾಧಾರಿತ ಅವಹೇಳನ, ಬಾಡಿ ಶೇಮಿಂಗ್‌ ಇತ್ಯಾದಿ ಮಾಡುವುದನ್ನು ಸಹಿಸಲಾಗದು. ಇಂತಹ ಕೃತ್ಯವನ್ನು ಪರಸ್ಪರ ಪರಿಚಿತರು ನೇರಾ ನೇರ ಮಾಡುವುದಿಲ್ಲ.

ಇದೇ ನೋಟಿಸ್ ಪೋಸ್ಟ್‌ನ ಕೆಳಗಿನ ಪ್ರತಿಕ್ರಿಯೆಗಳನ್ನು ಗಮನಿಸಿ ನೋಡಿ. ಬುಕ್‌ ಬ್ರಹ್ಮ ಸಂಸ್ಥೆಯನ್ನೂ ಟಾರ್ಗೆಟ್ ಮಾಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವಂತೂ ಅವಾಚ್ಯ ಪದಬಳಕೆಯೊಂದಿಗೆ ಇದೆ. ಬಹುತೇಕ ಕಾಮೆಂಟ್‌ ಮಾಡಿರುವ ಪ್ರೊಫೈಲ್‌ಗಳನ್ನು ಗಮನಿಸಿ, ಸರಿಯಾದ ಗುರುತು ಇಲ್ಲ. ಎಲ್ಲವೂ ನಕಲಿ ಐಡಿಗಳದ್ದೇ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಪ್ರವೃತ್ತಿ ಸಲ್ಲದು ಎಂದು ದೇವು ಪತ್ತಾರ ಹೇಳಿದರು.

ಮಮತಾ ಸಾಗರ ಕವಿತಾ ವಾಚನದ ರೀಲ್ಸ್‌ ವಿಚಾರ

ಕರ್ನಾಟಕ ಲೇಖಕಿಯ ಸಂಘ ಆಯೋಜಿಸಿದ್ದ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಕವಯಿತ್ರಿ ಮಮತಾ ಸಾಗರ ನಾನು ಎಂದರೆ ಕವಿತೆ ವಾಚಿಸಿದ್ದರು. ಅಂದು ಅಲ್ಲಿ ನಾನೂ ಇದ್ದೆ. ಅದು ನಾಲ್ಕು ಸಾಲಿನ ಕವಿತೆ. ಬುಕ್‌ ಬ್ರಹ್ಮ ಫೇಸ್‌ಬುಕ್ ಪುಟದಲ್ಲಿ ಅವರ ಕವಿತೆ ವಾಚನದ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಕತ್ತರಿಸಿ ಆಯ್ದ ಭಾಗವನ್ನು ಅಪ್ಲೋಡ್ ಮಾಡಿದ್ದು ಎಂದು ಕೆಲವು ಪರಿಭಾವಿಸಿದ್ದಾರೆ. ಅದು ಪೂರ್ಣ ಇದೆ. ಅಂದು ಸಮ್ಮೇಳನದಲ್ಲಿ ಈ ಕವಿತೆ ಎಲ್ಲ ಕವಿತೆಗಳಂತೆ ನೋಡುಗ, ಕೇಳುಗ ಸಮುದಾಯವನ್ನು ದಾಟಿ ಹೋಗಿದೆ. ಇಷ್ಟು ಸದ್ದು ಮಾಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆದ ಬಳಿಕ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ. ಕೆಟ್ಟ ಕಾಮೆಂಟ್‌ಗಳು ಬಂದಿವೆ. ಬಾಡಿ ಶೇಮಿಂಗ್, ವ್ಯಕ್ತಿ ನಿಂದನೆಗಳೂ ಕಂಡುಬಂದಿವೆ ಎಂದು ದೇವು ಪತ್ತಾರ ಹೇಳಿದರು.

ಕವಿತೆ ವಾಚನ ಗಮನಿಸಿದರೆ ಕವಯಿತ್ರಿಯ ಆಕ್ರೋಶದ, ಅಸಮಾಧಾನದ ಭಾವ ಕವಿತೆಯಲ್ಲಿ ವ್ಯಕ್ತವಾಗುತ್ತದೆ. ಇನ್ನು ಪ್ರತಿಕ್ರಿಯೆಗಳಲ್ಲಿ ಬಾಡಿ ಶೇಮಿಂಗ್‌, ವ್ಯಕ್ತಿ ನಿಂದೆಗಳನ್ನು ಗಮನಿಸಿದರೆ ಸಮುದಾಯದಲ್ಲಿ ಅನೇಕರು ಲಿಂಗ ಸಂವೇದನೆ ಅರ್ಥಮಾಡಿಕೊಂಡಿಲ್ಲ ಎಂಬುದು ಗೊತ್ತಾಗುತ್ತದೆ. ಪ್ರತಿಕ್ರಿಯೆ ನೀಡಿದವರು ಎಲ್ಲರೂ ಕವಿತೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿದುಕೊಂಡವರಲ್ಲ. ಅನೇಕರು ಪ್ರತಿಕ್ರಿಯೆಗೆ ಪ್ರತಿಕ್ರಿಯೆ ಕೊಡುತ್ತ ವ್ಯಕ್ತಿನಿಂದೆಗೆ ಇಳಿದುಬಿಟ್ಟಿದ್ದಾರೆ. ವ್ಯಕ್ತಿಯ ಹಿನ್ನೆಲೆ, ಅವರು ಯಾವ ಸಿದ್ಧಾಂತದವರು ಎಂಬುದನ್ನು ಜೋಡಿಸಿಕೊಂಡು ನಿಂದೆ ಮುಂದುವರಿಸಿರುವುದು ಕಂಡುಬರುತ್ತಿದೆ. ವಿಷಯಾಧಾರಿತವಾದ ಚರ್ಚೆ ಅಲ್ಲ ಇದು.

ಸಮ್ಮೇಳನದಲ್ಲಿ ಈ ರೀತಿ ಆಗಿಲ್ಲ. ಅಲ್ಲಿ ಸಭಿಕರು ಮತ್ತು ಕವಯಿತ್ರಿಯರು ಮುಖಾಮುಖಿ ಇದ್ದರು. ಇದೆಲ್ಲ ಹೇಗೆ ಎಂದರೆ ಎಲ್ಲರೂ ಇಷ್ಟಪಡಬೇಕು ಎಂದೇನೂ ಇಲ್ಲ. ಅದನ್ನು ಇಷ್ಟಪಡುವವರ ವರ್ಗ ಇದ್ದ ಹಾಗೆ ಇಷ್ಟಪಡದ ವರ್ಗವೂ ಇರುತ್ತದೆ. ಇಷ್ಟಪಡದ ವರ್ಗದವರು ನಿರ್ಲಕ್ಷಿಸಿ ಮುಂದೆ ಸಾಗುತ್ತಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹಾಗಲ್ಲ. ಮುಖೇಡಿಗಳೆ ಹೆಚ್ಚು. ಅವರು ಆ ಕವಿತೆಯ ಸಾಹಿತ್ಯವನ್ನು ಕವಿತಾ ವಾಚನವನ್ನು ಸ್ವೀಕರಿಸುವ ಕ್ರಮದಲ್ಲಿ ಲೋಪವಾಗಿದೆ. ಗ್ರಹಿಕೆಯಲ್ಲಿ ಲೋಪವಾಗಿದೆ. ಮಹಿಳೆ ತಾನು ಎದುರಿಸಿದ ಶೋಷಣೆ, ಕ್ರೌರ್ಯದ ವಿರುದ್ಧ ತೋರುವ ಅಸಮಾಧಾನ, ಆಕ್ರೋಶಕ್ಕೆ ಸ್ತನ ಇತ್ಯಾದಿ ಪದಗಳನ್ನು ರೂಪಕವಾಗಿ ಬಳಸುತ್ತಾರೆ. ಅದು ಕಾವ್ಯದ ಭಾಷೆ. ಕಮಲಮುಖಿ ಇತ್ಯಾದಿ ಪದಗಳಂತೆ ಇದನ್ನೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಾಹಿತ್ಯ ಕಟ್ಟುವ ಕೆಲಸದಲ್ಲಿ ಒಬ್ಬೊಬ್ಬರದ್ದು ಒಂದೊಂದು ಶೈಲಿ. ಗೆರೆ ಎಳೆದಂತೆ ಇರಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿ ಓದುವ ಕ್ರಮ ಬೆಳೆಯುತ್ತಿದೆ. ಒಂದು ಸಂವಹನದಲ್ಲಿ ಸಂವಹನಕಾರ ಸಭಿಕರಿಗೆ ಅರ್ಥವಾಗುವಂತೆ ಹೇಳುವುದು ಒಂದು ಕಡೆ, ಸಭಿಕರು ಸಂವಹನವನ್ನು ಗ್ರಹಿಸುವುದು ಇನ್ನೊಂದು ಕಡೆ. ಈಗಿನ ಸನ್ನಿವೇಶ ಸಂವಹನದಲ್ಲಿ ಕಂಡುಬರುವ ಅಡ್ಡಿಆತಂಕಗಳಂತೆ ಭಾಸವಾಗುವುದು ಸಹಜ. ಮುಖೇಡಿಗಳನ್ನು ಎಚ್ಚರಿಸುವ ದೃಷ್ಟಿಯಿಂದ ಇಂತಹ ನೋಟಿಸ್ ಕೆಲವೊಮ್ಮ ಅಗತ್ಯವೆನಿಸುತ್ತದೆ ಎಂದು ದೇವು ಪತ್ತಾರ ಹೇಳಿದರು.

ಮಮತಾ ಸಾಗರ ಕವಿತೆ ವಾಚಿಸಿದ್ದು 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ

ಅಂದ ಹಾಗೆ, ಕವಯಿತ್ರಿ ಮಮತಾ ಸಾಗರ ಅವರು ಕವಿತೆ ವಾಚಿಸಿದ್ದು ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಆಯೋಜಿಸಿದ್ದ 'ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ. ಬುಕ್‌ಬ್ರಹ್ಮ ಸಮ್ಮೇಳನವನ್ನು ನೇರ ಪ್ರಸಾರ ಮಾಡಿದ್ದಲ್ಲದೆ, ಕವಯಿತ್ರಿಯರ ಕವನ ವಾಚನವನ್ನು ರೀಲ್ಸ್‌ಗೆ ಬಳಸಿಕೊಂಡಿತ್ತು. ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಿದ್ದು, ಅದರ ಲಿಂಕ್ ಇಲ್ಲಿದೆ.

ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯಾದರೂ ಅದು, ವ್ಯಕ್ತಿನಿಂದೆ, ಜಾತಿ ನಿಂದೆ, ಲಿಂಗ ದೂಷಣೆಗೆ ತಿರುಗಬಾರದು. ವ್ಯಕ್ತಿಯ ಹಿನ್ನೆಲೆ, ಅವರ ಸೈದ್ಧಾಂತಿಕ ನಿಲುವುಗಳನ್ನು ವ್ಯಕ್ತಿ ನಿಂದೆಗೆ ಬಳಸಿಕೊಳ್ಳುವುದು ಸರಿಯಲ್ಲ. ಯಾವುದೇ ಟೀಕೆ, ಟಿಪ್ಪಣಿಗಳಿದ್ದರೂ ಮುಖೇಡಿತನ ಪ್ರದರ್ಶನ ಮಾಡದೇ ಸಾದಾ ಸೀದ ತಮ್ಮ ಗುರುತುಪರಿಚಯ ಬಹಿರಂಗಪಡಿಸಿಕೊಂಡು ಮಾಡಿದರೇ ಅದಕ್ಕೆ ಬೆಲೆ ಎಂದು ಬುಕ್‌ ಬ್ರಹ್ಮ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ದೇವುಪತ್ತಾರ ಹೇಳಿದರು.

ನಿರೂಪಣೆ: ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದೂಸ್ತಾನ್ ಟೈಮ್ಸ್ ಕನ್ನಡ

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.