ಕರ್ನಾಟಕದಲ್ಲಿ ಒಟ್ಟು ಎಷ್ಟು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿವೆ? ಮಾರ್ಗ, ಟಿಕೆಟ್ ದರ ಹಾಗೂ ನಿಲ್ದಾಣಗಳ ವಿವರ
ಕರ್ನಾಟಕದಲ್ಲಿರುವ ಪ್ರಮುಖ ನಗರಗಳನ್ನು ರಾಜ್ಯದೊಳಗಿನ ಹಾಗೂ ಹೊರರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಸಲುವಾಗಿ ವಂದೇ ಭಾರತ್ ರೈಲುಗಳು ಓಡಾಡುತ್ತವೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಕಲಬುರಗಿ, ನಗರಗಳಿಗೆ ವಂದೇ ಭಾರತ್ ರೈಲು ಸಂಪರ್ಕಗಳಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇವುಗಳಲ್ಲಿ ಕೆಲವು ರೈಲುಗಳು ರಾಜ್ಯದೊಳಗೆ ಹಾಗೂ ಇನ್ನೂ ಕೆಲವು ರೈಲುಗಳು ರಾಜ್ಯದ ಪ್ರಮುಖ ನಗರಗಳನ್ನು ಇತರ ರಾಜ್ಯಗಳೊಂದಿಗೆ ಸಂಪರ್ಕಿಸುತ್ತವೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಕಲಬುರಗಿ, ಮಂಗಳೂರು ನಗರಗಳಿಗೆ ವಂದೇ ಭಾರತ್ ರೈಲು ಸಂಪರ್ಕಗಳಿವೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಗರವನ್ನು ಹೆಚ್ಚು ರೈಲುಗಳು ಸಂಪರ್ಕಿಸುತ್ತವೆ. ರಾಜ್ಯದಲ್ಲಿ ಓಡಾಡುವ ಪ್ರಮುಖ ವಂದೇ ಭಾರತ್ ರೈಲುಗಳು, ನಿಲ್ದಾಣಗಳು, ಟಿಕೆಟ್ ದರ ಹಾಗೂ ಪ್ರಯಾಣಿಸುವ ದಿನಗಳು ಸೇರಿದಂತೆ ವಿವಿಧ ವಿವರಗಳು ಇಲ್ಲಿವೆ.
ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ (22231)
ಕಲಬುರಗಿಯಿಂದ ಹೊರಡುವ ಈ ವಂದೇ ಭಾರತ್ ರೈಲು ರಾಯಚೂರು ಜಂಕ್ಷನ್, ಮಂತ್ರಾಲಯ ರಸ್ತೆ, ಗುಂಟಕಲ್ ಜಂಕ್ಷನ್, ಅನಂತಪುರ ಮತ್ತು ಯಲಹಂಕ ಸೇರಿದಂತೆ ಐದು ನಿಲ್ದಾಣಗಳ ಮೂಲಕ ಬೆಂಗಳೂರು ಬರುತ್ತದೆ. 8 ಗಂಟೆ 45 ನಿಮಿಷಗಳಲ್ಲಿ 548 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಕಲಬುರಗಿಯಿಂದ ಶುಕ್ರವಾರ ಹೊರತುಪಡಿಸಿ ವಾರದ ಆರು ದಿನ ಈ ರೈಲು ಓಡುತ್ತದೆ. ಬೆಳಿಗ್ಗೆ 5.15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ತಲುತ್ತದೆ. ಬೆಂಗಳೂರಿನಿಂದ (ಗುರುವಾರ ಹೊರತುಪಡಿಸಿ ) ಮಧ್ಯಾಹ್ನ 2.40ಕ್ಕೆ ಹೊರಟು ರಾತ್ರಿ 11.30ಕ್ಕೆ ಕಲಬುರಗಿ ತಲುಪುತ್ತದೆ. ಟಿಕೆಟ್ ಬೆಲೆ: 1,500ರಿಂದ 2,500 ರೂ.ವರೆಗೆ ಇರುತ್ತದೆ.
ಕೆಎಸ್ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ (20661/20662)
ಈ ರೈಲು ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಜೂನ್ 27ರಂದು. ಈ ರೈಲು ಕೆಎಸ್ಆರ್ ಬೆಂಗಳೂರು ಜಂಕ್ಷನ್ನಿಂದ ಆರಂಭಗೊಂಡು, ಯಶವಂತಪುರ ಜಂಕ್ಷನ್, ದಾವಣಗೆರೆ, ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್ ಮತ್ತು ಧಾರವಾಡದ ಮೂಲಕ ಬೆಳಗಾವಿ ತಲುಪುತ್ತದೆ. ಒಟ್ಟು 6 ಗಂಟೆ 25 ನಿಮಿಷಗಳಲ್ಲಿ 489 ಕಿ.ಮೀ. ಕ್ರಮಿಸುತ್ತದೆ. ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ರೈಲು ರೈಲು ಚಲಿಸುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಟು ಮಧ್ಯಾಹ್ನ 12:10ಕ್ಕೆ ಬೆಳಗಾವಿ ತಲುಪುತ್ತದೆ. ಬೆಳಗಾವಿಯಿಂದ ಮಧ್ಯಾಹ್ನ 1:15ಕ್ಕೆ ಹೊರಟು ಸಂಜೆ 7:45ಕ್ಕೆ ಕೆಎಸ್ಆರ್ ಬೆಂಗಳೂರು ಜಂಕ್ಷನ್ ತಲುಪುತ್ತದೆ. ಟಿಕೆಟ್ ಬೆಲೆಯು 1,185ರಿಂದ 2,265 ರೂ.ವರೆಗೆ ಇರುತ್ತದೆ.
ಮೈಸೂರು - ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 20607/ 20608)
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದು 2022ರ ನವೆಂಬರ್ 11ರಂದು. ಮೈಸೂರು ಹಾಗೂ ತಮಿಳುನಾಡು ರಾಜಧಾನಿ ನಡುವೆ ಇದು ಪ್ರಯಾಣಿಸುತ್ತದೆ. ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ಇದು ಕಾರ್ಯನಿರ್ವಹಿಸುತ್ತದೆ. ಇದು ಚೆನ್ನೈನಿಂದ ಸಂಜೆ 5.00 ಗಂಟೆಗೆ ಹೊರಟು ರಾತ್ರಿ 11:20ಕ್ಕೆ ಮೈಸೂರು ಜಂಕ್ಷನ್ ತಲುಪುತ್ತದೆ. ಮೈಸೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಸಂಜೆ 7.20ಕ್ಕೆ ಚೆನ್ನೈ ತಲುಪುತ್ತದೆ. ಆರು ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಟಿಕೆಟ್ ಬೆಲೆ: 1,365ರಿಂದ 2,485 ರೂ.ವರೆಗೆ ಇರುತ್ತದೆ.
ಮಂಗಳೂರು ಸೆಂಟ್ರಲ್ - ತಿರುವನಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ (20631/20632)
ಕರ್ನಾಟಕನ ಕರಾವಳಿ ನಗರಿಯನ್ನು ಕೇರಳದ ರಾಜಧಾನಿಯೊಂದಿಗೆ ಸಂಪರ್ಕಿಸುವ ರೈಲು ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಸೆಪ್ಟೆಂಬರ್ 24ರಂದು. ಆರಂಭದಲ್ಲಿ ಕಾಸರಗೋಡುವರೆಗೆ ಇದ್ದ ರೈಲನ್ನು ಮಂಗಳೂರಿಗೆ ವಿಸ್ತರಿಸಲಾಗಿದೆ. ತಿರುವನಂತಪುರ ಸೆಂಟ್ರಲ್ನಿಂದ ಹೊರಡುವ ಈ ರೈಲು ಕೊಲ್ಲಂ ಜಂಕ್ಷನ್, ಅಲೆಪ್ಪಿ, ಎರ್ನಾಕುಲಂ ಜಂಕ್ಷನ್, ತ್ರಿಶೂರ್, ಶೋರನೂರ್ ಜಂಕ್ಷನ್, ತಿರೂರ್, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ಒಂಬತ್ತು ನಿಲ್ದಾಣಗಳ ಮೂಲಕ ಮಂಗಳೂರಿನ ಕೊನೆಯ ನಿಲ್ದಾಣ ಸೆಂಟ್ರಲ್ಗೆ ಬರುತ್ತದೆ. 8 ಗಂಟೆ 35 ನಿಮಿಷಗಳಲ್ಲಿ 619 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಬುಧವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳು ರೈಲು ಚಲಿಸುತ್ತದೆ. ತಿರುವನಂತಪುರ ಸೆಂಟ್ರಲ್ನಿಂದ ಸಂಜೆ 4:05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ಸೆಂಟ್ರಲ್ಗೆ ಆಗಮಿಸುತ್ತದೆ. ಮಂಗಳೂರು ಸೆಂಟ್ರಲ್ನಿಂದ ಬೆಳಿಗ್ಗೆ 06:25ಕ್ಕೆ ಹೊರಟು ಮಧ್ಯಾಹ್ನ 3:05ಕ್ಕೆ ತಿರುವನಂತಪುರ ಸೆಂಟ್ರಲ್ಗೆ ಆಗಮಿಸುತ್ತದೆ. ಟಿಕೆಟ್ ಬೆಲೆ 1,252ರಿಂದ 3051 ರೂ.ವರೆಗೆ ಇರುತ್ತದೆ
ಬೆಂಗಳೂರು -ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ (06002/06001)
ಎರ್ನಾಕುಲಂ (ಕೊಚ್ಚಿ) ಜಂಕ್ಷನ್ನಿಂದ ಬೆಂಗಳೂರು ಕಂಟೋನ್ಮೆಂಟ್ಗೆ ಹೋಗುವ ರೈಲು 2024ರ ಜುಲೈ 31ರಂದು ಆರಂಭವಾಗಿದೆ. ಕರ್ನಾಟಕದ ರಾಜಧಾನಿಯನ್ನು ಕೇರಳದ ದೊಡ್ಡ ನಗರ ಕೊಚ್ಚಿಗೆ ಸಂಪರ್ಕಿಸುತ್ತದೆ. ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ಈರೋಡ್ ಮತ್ತು ಸೇಲಂ ನಿಲ್ದಾಣಗಳ ಮೂಲಕ ರೈಲು ಹಾದುಹೋಗುತ್ತದೆ. ಸರಿಸುಮಾರು 9 ಗಂಟೆಗಳಲ್ಲಿ 608 ಕಿ.ಮೀ.ಗಳನ್ನು ಕ್ರಮಿಸುತ್ತದೆ. ರೈಲು ವಾರಕ್ಕೆ ಮೂರು ಬಾರಿ ಮಾತ್ರ ಓಡುತ್ತದೆ. ರೈಲು ಸಂಖ್ಯೆ 06001 ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಮಧ್ಯಾಹ್ನ 12:50ಕ್ಕೆ ಕೊಚ್ಚಿಯಿಂದ ಹೊರಟು ಅದೇ ದಿನ ರಾತ್ರಿ 10 ಗಂಟೆಗೆ ಬೆಂಗಳೂರನ್ನು ತಲುಪುತ್ತದೆ. ರೈಲು ಸಂಖ್ಯೆ 06002 ಸೋಮವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 5:30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 2:20ಕ್ಕೆ ಎರ್ನಾಕುಲಂ ತಲುಪುತ್ತದೆ. ಟಿಕೆಟ್ ಬೆಲೆ 1,465ರಿಂದ ಆರಂಭವಾಗಿ 2,945 ರೂ.ವರೆಗೆ ಇರುತ್ತದೆ.
ಬೆಂಗಳೂರು ಕಂಟೋನ್ಮೆಂಟ್ - ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ( 20642/20641)
ಈ ರೈಲು ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30 ರಂದು. ತಮಿಳುನಾಡಿನ ಎರಡನೇ ದೊಡ್ಡ ನಗರ ಕೊಯಮತ್ತೂರಿನಿಂದ-ಬೆಂಗಳೂರು ನಗರ ಸಂಪರ್ಕಿಸುತ್ತದೆ. ಕೊಯಮತ್ತೂರು ಜಂಕ್ಷನ್ (CBE) ನಿಂದ ಬೆಳಿಗ್ಗೆ 7:25ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ಕಂಟೋನ್ಮೆಂಟ್ (BNC) ತಲುಪುತ್ತದೆ. ಸುಮಾರು 6 ಗಂಟೆ 25 ನಿಮಿಷಗಳಲ್ಲಿ 377 ಕಿಮೀ ದೂರ ಕ್ರಮಿಸುತ್ತದೆ. ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ರೈಲು ಓಡುತ್ತವೆ. ತಿರುಪ್ಪೂರ್, ಈರೋಡ್ ಜೆಎನ್, ಸೇಲಂ ಜಂಕ್ಷನ್, ಧರ್ಮಪುರಿ, ಹೊಸೂರು ಮಾರ್ಗವಾಗಿ ರೈಲು ಬೆಂಗಳೂರು ಬರುತ್ತದೆ. ಟಿಕೆಟ್ ಬೆಲೆ 940ರಿಂದ 1,860 ರೂವರೆಗೆ ಇರುತ್ತದೆ.
ಮಂಗಳೂರು ಸೆಂಟ್ರಲ್ - ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ (20646/20645)
ಈ ರೈಲು ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಡಿಸೆಂಬರ್ 30ರಂದು. ಕರ್ನಾಟಕ ಕರಾವಳಿಯನ್ನು ಗೋವಾದೊಂದಿಗೆ ಸಂಪರ್ಕಿಸುತ್ತದೆ. ವಾರದಲ್ಲಿ 6 ದಿನ ರೈಲು ಕಾರ್ಯನಿರ್ವಹಿಸುತ್ತದೆ. 4 ಗಂಟೆ 35 ನಿಮಿಷಗಳಲ್ಲಿ 319 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಮಂಗಳೂರು, ಉಡುಪಿ ಮತ್ತು ಕಾರವಾರ ನಗರಗಳನ್ನು ಕೂಡಾ ಸಂಪರ್ಕಿಸುತ್ತದೆ. ಟಿಕೆಟ್ ಬೆಲೆಯು 966ರಿಂದ 1931 ರೂ,ವರೆಗೆ ಇದೆ.
ಬೆಂಗಳೂರು (ಯಶವಂತಪುರ) -ಕಾಚೆಗುಡ - ವಂದೇ ಭಾರತ್ ಎಕ್ಸ್ಪ್ರೆಸ್ (20703 / 20704)
ಹೈದರಾಬಾದ್ ನಗರವನ್ನು ಸಂಪರ್ಕಿಸುವ ಈ ರೈಲು ವಾರಕ್ಕೆ ಆರು ದಿನ ಓಡುತ್ತದೆ. ಕಾಚೆಗುಡದಿಂದ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪುತ್ತದೆ. ಯಶವಂತಪುರದಿಂದ 2.45ಕ್ಕೆ ಹೊರಟು 11 ಗಂಟೆಗೆ ಕಾಚೆಗುಡ ತಲುಪುತ್ತದೆ. ಟಿಕೆಟ್ ಬೆಲೆಯು 1,540ರಿಂದ 2,915 ರೂಪಾಯಿವರೆಗೆ ಇರುತ್ತದೆ.
ಬೆಂಗಳೂರು ಕಂಟೋನ್ಮೆಂಟ್-ಮಧುರೈ ವಂದೇ ಭಾರತ್ ಎಕ್ಸ್ಪ್ರೆಸ್ (20672)
ಈ ರೈಲು ಬೆಂಗಳೂರು ಕಂಟೋನ್ಮೆಂಟ್ (ಬಿಎನ್ಸಿ)ನಿಂದ ಮಧ್ಯಾಹ್ನ 1:30ಕ್ಕೆ ಹೊರಟು 8 ಗಂಟೆ 10 ನಿಮಿಷಗಳಲ್ಲಿ 586 ಕಿಮೀ ಕ್ರಮಿಸಿ ರಾತ್ರಿ 21:40ಕ್ಕೆ ಮಧುರೈ ಜಂಕ್ಷನ್ಗೆ ತಲುಪುತ್ತದೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ರೈಲು ಕಾರ್ಯನಿರ್ವಹಿಸುತ್ತದೆ. ಟಿಕೆಟ್ ಬೆಲೆಯು 290ರೂಗಳಿಂದ ಹಿಡಿದು 1705 ರೂ.ವರೆಗೆ ಇದೆ.
ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ (20669)
2024ರ ಸೆಪ್ಟೆಂಬರ್ 16ರಂದು ಈ ರೈಲು ಸಂಚಾರ ಆರಂಭವಾಯ್ತು. ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್ (ಯುಬಿಎಲ್)ನಿಂದ ಬೆಳಗ್ಗೆ 05:00ಕ್ಕೆ ಹೊರಡುವ ರೈಲು ಮಹಾರಾಷ್ಟ್ರದ ಪುಣೆ ಜಂಕ್ಷನ್ಗೆ ಮಧ್ಯಾಹ್ನ 1:30ಕ್ಕೆ ಆಗಮಿಸುತ್ತದೆ. ಒಟ್ಟು 559 ಕಿಮೀ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ಈ ರೈಲು ಪ್ರಸ್ತುತ ವಾರದಲ್ಲಿ ಮೂರು ದಿನ (ಭಾನುವಾರ, ಬುಧವಾರ ಮತ್ತು ಶುಕ್ರವಾರಗ) ಕಾರ್ಯನಿರ್ವಹಿಸುತ್ತದೆ. ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ ಮತ್ತು ಸತಾರಾದಲ್ಲಿ ರೈಲು ನಿಲುಗಡೆ ಇದೆ. ಟಿಕೆಟ್ ಬೆಲೆಯು 1,530ರಿಂದ 2,780 ರೂವರೆಗೆ ಇದೆ.