ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ಕಳವು; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು
Gold Theft on KSRTC Bus: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3,000 ರೂಪಾಯಿ ನಗದು ಕಳುವಾಗಿದೆ. ಕುಣಿಗಲ್ ಸಮೀಪ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Gold Theft on KSRTC Bus: ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3,000 ರೂಪಾಯಿ ನಗದು ಕಳುವಾಗಿದೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕುಣಿಗಲ್ ಸಮೀಪ ಪ್ರಯಾಣಿಕರಿಗೆ ಅಲ್ಪ ವಿರಾಮಕ್ಕೆ, ಉಪಾಹಾರ ಸೇವನೆಗೆ ನಿಲ್ಲಿಸಿದ್ದ ವೇಳೆ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ಕಳವು
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಾಜಗೋಪಾಲ ಕಾರಂತ ಎಂಬುವವರು ನೀಡಿದ ದೂರಿನಲ್ಲಿ ತಿಳಿಸಿರುವುದಿಷ್ಟು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಫೆ 1 ರಂದು ರಾತ್ರಿ ದೂರುದಾರ ರಾಜಗೋಪಾಲ ಕಾರಂತ, ಅವರ ಪತ್ನಿ ಮತ್ತು ಅಳಿಯ ಬೆಂಗಳೂರಿನ ಮೆಜೆಸ್ಟಿಕ್ ಬಸ್ನಿಲ್ದಾಣದಿಂದ ಬಂಟ್ವಾಳಕ್ಕೆ ಹೋಗುವ ಕೆಎಸ್ಆರ್ಟಿಸಿ ಬಸ್ ಏರಿದ್ದರು. ರಾಜಗೋಪಾಲ ಅವರ ಪತ್ನಿಯ ತವರು ಮೂಲ್ಕಜೆ ಮಾಡ, ಮಣಿನಾಲ್ಕೂರು ಗ್ರಾಮದಲ್ಲಿದ್ದು ಅಲ್ಲಿ ಹೊರಟಿದ್ದರು. ರಾಜಗೋಪಾಲ ಅವರ ಪತ್ನಿ 3,000 ರೂಪಾಯಿ ನಗದು ಹಾಗೂ ಚಿನ್ನಭಾರಣ ಇದ್ದ ಜುವೆಲ್ಲರಿ ಬಾಕ್ಸ್ ಅನ್ನು ತನ್ನ ಬ್ಯಾಗ್ನಲ್ಲಿ ಇಟ್ಟಿದ್ದರು.
ಪ್ರಯಾಣದ ನಡುವೆ, ಕುಣಿಗಲ್ ಸಮೀಪ ಬಸ್ ಅನ್ನು ಅಲ್ಪ ವಿರಾಮಕ್ಕೆ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ, ಬೆಂಗಳೂರಿನ ಯಲಹಂಕ ನಿವಾಸಿ ರಾಜಗೋಪಾಲ್ ಮತ್ತು ಅವರ ಪತ್ನಿ, ಅಳಿಯ ಬಸ್ನಿಂದ ಕೆಳಕ್ಕೆ ಇಳಿದಿದ್ದರು. ವಾಷ್ರೂಮ್ಗೆ ಹೋಗಿ ಬಂದಿದ್ದರು. ಪ್ರಯಾಣ ಮುಂದುವರಿದಿತ್ತು. ಕಾರಿಂಜ ಕ್ರಾಸ್ ತಲುಪಿದಾಗ ಅವರಿಗೆ ಚಿನ್ನಾಭರಣ ಇದ್ದ ಬಾಕ್ಸ್ ನೆನಪಾಗಿದೆ. ಬ್ಯಾಗ್ ಪರಿಶೀಲಿಸಿದಾಗ 3,000 ರೂಪಾಯಿ ನಗದು ಹಾಗೂ ಚಿನ್ನಭಾರಣ ಇದ್ದ ಜುವೆಲ್ಲರಿ ಬಾಕ್ಸ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ಈ ಕೃತ್ಯ ಬಹುಶಃ ಕುಣಿಗಲ್ನಲ್ಲಿ ಬಸ್ ನಿಲ್ಲಿಸಿದ್ದ ವೇಳೆ ಸಂಭವಿಸಿರಬೇಕು ಎಂದು ಅವರು ಶಂಕಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು
ರಾಜಗೋಪಾಲ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುವ ವೇಳೆ ಚಿನ್ನಾಭರಣ ಮತ್ತು ನಗದು ಕಳವು ಸಂಭವಿಸಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ನ ಸೆಕ್ಷನ್ 303 (2) ಮತ್ತು 305 (ಬಿ) ಪ್ರಕಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
