Kannada News  /  Karnataka  /  Government Has Not Asked To Link Aadhaar To Ration Card And Register Name For Griha Lakshmi Yojana Fact Check Rmy
ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಕೆಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Fact Check: ಗೃಹ ಲಕ್ಷ್ಮಿ ಯೋಜನೆಗಾಗಿ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿ ಹೆಸರು ನೋಂದಾಯಿಸುವಂತೆ ಸರ್ಕಾರ ಹೇಳಿಲ್ಲ; ಫ್ಯಾಕ್ಟ್ ಚೆಕ್

26 May 2023, 8:55 ISTHT Kannada Desk
26 May 2023, 8:55 IST

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಪೈಕಿ ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ (Congress Govt) ಬಂದರೆ ಗೃಹ ಲಕ್ಷ್ಮಿ ಯೋಜನೆಯಲ್ಲಿ (Griha Lakshmi Scheme) ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದಾಗಿದೆ. ಅಂದಿನಿಂದ ಮಹಿಳೆಯರು ಸರ್ಕಾರ ಈ ಯೋಜನೆಯನ್ನು ಯಾವಾಗ ಅಧಿಕೃತವಾಗಿ ಜಾರಿಗೆ ತಂದು ಹಣ ನೀಡುತ್ತಾರೋ ಅಂತ ಕಾದು ಕುಳಿತಿದ್ದಾರೆ.

ಇದರ ನಡುಯೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮೇ 31ರ ಒಳಗೆ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಅಗತ್ಯವಿರುವ ದಾಖಲೆಗಳೆಂದರೆ ಬಿಪಿಎಲ್ ಕಾರ್ಡ್ ಇರಬೇಕು ಅದರಲ್ಲಿ ಮನೆಯ ಮುಖ್ಯಸ್ಥರಾಗಿ ಮಹಿಳೆಯೇ ಇರಬೇಕು. ಆಧಾರ್ ಕಾರ್ಡ್ ಬ್ಯಾಂಕ್‌ ಖಾತೆಗೆ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು ಎಂಬ ಪೋಸ್ಟರ್ ಹರಿದಾಡುತ್ತಿದೆ.

ಇದನ್ನು ಗಮನಿಸಿದ್ದ ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ವ್ಯಾಪ್ತಿಯಲ್ಲಿನ ಮಹಿಳೆಯರು ಪಟ್ಟಣದ ಸೈಬರ್ ಕೇಂದ್ರಗಳಿಗೆ ಮುಗಿಬಿದ್ದಾರೆ. ನಿನ್ನೆ (ಮೇ 25, ಗುರುವಾರ) ಬೆಳ್ಳಿಗ್ಗೆಯಿಂದ ಈ ಕೇಂದ್ರಗಳ ಮುಂದೆ ಜಮಾಯಿಸಿದ್ದ ಮಹಿಳೆಯರು ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿ ಹೆಸರು ನೋಂದಾಯಿಸಿಕೊಂಡರೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರಲಿದಂತೆಯಂತೆ. ಹೀಗಾಗಿ ತಮ್ಮಲ್ಲಿರುವ ದಾಖಲೆಗಳ ಸಹಿತ ಸೈಬರ್ ಕೇಂದ್ರಕ್ಕೆ ಬಂದಿರುವುದಾಗಿ ವಿವರಿಸಿದ್ದಾರೆ.

ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಸೆಂಟರ್‌ನವರು ಪ್ರತಿ ಲಿಂಕ್‌ಗೆ 250 ರೂಪಾಯಿ ಚಾರ್ಜ್ ಮಾಡುವ ಮೂಲಕ ಒಳ್ಳೆ ಸಂಪಾದನೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಆಧಾರ್ ಲಿಂಗ್ ಮಾಡಲು 40 ರಿಂದ 50 ರೂಪಾಯಿ ಶುಲ್ಕ ಪಡೆಯುವ ಇವರು. ಇಂತಹ ಸಂದರ್ಭದಲ್ಲಿ 250 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ಈವರೆಗೆ ಯಾವುದೇ ಮಾರ್ಗ ಸೂಚಿಗಳನ್ನು ಹೊರಡಿಸಿಲ್ಲ. ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೊದಲ ಸಚಿವ ಸಂಪುಟ ಸಭೆಯ ಬಳಿಕ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಸುಳ್ಳಾಗಿದ್ದು, ಇಂತಹ ಸುದ್ದಿಗಳನ್ನು ನಂಬಿ ಮಹಿಳೆಯರು ಮೋಸಹೋಗಬಾರದು. ಸರ್ಕಾರ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತಂದ ಕೂಡಲೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು

  • ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ
  • ಗೃಹ ಲಕ್ಷಿಯೋಜನೆಯಡಿ ಪ್ರತಿ ಗೃಹಿಣಿಗೆ ತಿಂಗಳಿಗೆ 2000 ರೂ. ಸಹಾಯಧನ
  • ಅನ್ನಭಾಗ್ಯ ಯೊಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ
  • ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ. ಡಿಪ್ಲೊಮಾ ಮುಗಿಸಿದ ನಿರುದ್ಯೋಗಿಗಳಿಗೆ 1500 ರೂ. ನೆರವು.
  • ಶಕ್ತಿ ಯೋಜನೆಯಡಿ ರಾಜ್ಯದ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಗೂ ಮುನ್ನ ಈ ಐದು ಗ್ಯಾರಂಟಿ ಯೋಜನಗಳನ್ನು ಘೋಷಣೆ ಮಾಡಿತ್ತು. ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಕೆಲವೆಡೆ ಜನರು ತಾವು ವಿದ್ಯುತ್ ಬಿಲ್ ಕಟ್ಟೋದಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಕೆಲ ಮಹಿಳೆಯರು ಬಸ್‌ ಪ್ರಯಾಣಿಸುವಾಗ ತಾವು ಹಣ ನೀಡೋದಿಲ್ಲ ಅಂತ ಹೇಳುವ ಮೂಲಕ ನಿರ್ವಾಹಕರೊಂದಿಗೆ ಕಿರಿಕ್ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ವಿಭಾಗ