ಒಂದೆರಡು ಗಂಟೆ ಓದಿದರೂ ಗಮನವಿಟ್ಟು ಓದಿ, ಮನರಂಜನೆಗೆ ನಿರ್ಬಂಧ ಬೇಡ; ಎಸ್‌ಎಸ್‌ಎಲ್‌ಸಿ ಟಾಪರ್‌ ಹಾಸನದ ಉತ್ಸವ್‌ ಪಟೇಲ್‌ ಕಿವಿಮಾತು
ಕನ್ನಡ ಸುದ್ದಿ  /  ಕರ್ನಾಟಕ  /  ಒಂದೆರಡು ಗಂಟೆ ಓದಿದರೂ ಗಮನವಿಟ್ಟು ಓದಿ, ಮನರಂಜನೆಗೆ ನಿರ್ಬಂಧ ಬೇಡ; ಎಸ್‌ಎಸ್‌ಎಲ್‌ಸಿ ಟಾಪರ್‌ ಹಾಸನದ ಉತ್ಸವ್‌ ಪಟೇಲ್‌ ಕಿವಿಮಾತು

ಒಂದೆರಡು ಗಂಟೆ ಓದಿದರೂ ಗಮನವಿಟ್ಟು ಓದಿ, ಮನರಂಜನೆಗೆ ನಿರ್ಬಂಧ ಬೇಡ; ಎಸ್‌ಎಸ್‌ಎಲ್‌ಸಿ ಟಾಪರ್‌ ಹಾಸನದ ಉತ್ಸವ್‌ ಪಟೇಲ್‌ ಕಿವಿಮಾತು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಾಸನದ ಉತ್ಸವ್‌ ಪಟೇಲ್‌, ಎಚ್‌ಟಿ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಓದು, ಪರೀಕ್ಷೆ ಸಿದ್ದತೆಯ ಜೊತೆಗೆ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಒಂದೆರಡು ಗಂಟೆ ಓದಿದರೂ ಗಮನವಿಟ್ಟು ಓದಿ; ಹಾಸನದ ಉತ್ಸವ್‌ ಪಟೇಲ್‌ ಕಿವಿಮಾತು
ಒಂದೆರಡು ಗಂಟೆ ಓದಿದರೂ ಗಮನವಿಟ್ಟು ಓದಿ; ಹಾಸನದ ಉತ್ಸವ್‌ ಪಟೇಲ್‌ ಕಿವಿಮಾತು

“625ಕ್ಕೆ 625 ಅಂಕಗಳು ಬರುತ್ತೆ ಎನ್ನುವ ಆತ್ಮವಿಶ್ವಾಸ ಇತ್ತು. ಹಾಗಂತಾ ಟಾಪರ್‌ ಆಗಬೇಕು ಅನ್ನೋ ನಿರೀಕ್ಷೆಯಲ್ಲಿ ಓದಿಲ್ಲ. ದಿನವಿಡೀ ಕುಳಿತು ಓದಬೇಕು ಅನ್ನೋದು ಏನೂ ಇಲ್ಲ. ಓದುವ ಸಮಯದಲ್ಲಿ ಸರಿಯಾಗಿ ಆಸಕ್ತಿಯಿಂದ ಕುಳಿತು ನಿತ್ಯ ಎರಡು-ಮೂರು ಗಂಟೆ ಓದುತ್ತಿದ್ದೆ ಅಷ್ಟೇ.” ಇದು ಈ ಬಾರಿಯ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಟಾಪರ್‌ ಆಗಿರುವ ಹಾಸನದ ವಿದ್ಯಾರ್ಥಿ ಉತ್ಸವ್‌ ಪಟೇಲ್‌ ಮಾತು. ಹಾಸನ ಜಿಲ್ಲೆಯ ಚಿಕ್ಕಹೊನ್ನೇನಹಳ್ಳಿಯ ವಿಜಯಾ ಸ್ಕೂಲ್‌ನಲ್ಲಿ ಓದಿರುವ ಉತ್ಸವ್‌, ತಮ್ಮ ತಂದೆ-ತಾಯಿ ಮಾತ್ರವಲ್ಲದೆ ರಾಜ್ಯವೇ ಖುಷಿಪಡುವ ಸಾಧನೆ ಮಾಡಿದ್ದಾರೆ. ಇವರು ತಮ್ಮ ಓದು, ಪರೀಕ್ಷೆ ಸಿದ್ಧತೆ ಹಾಗೂ ಮುಂದಿನ ಯೋಜನೆ ಕುರಿತು ಎಚ್‌ಟಿ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಎಲ್ಲಾ ವಿಷಯಗಳನ್ನು ಸಮನಾಗಿ ಓದುತ್ತಿದ್ದೆ. ಕನ್ನಡ, ಇಂಗ್ಲೀಷ್‌, ಹಿಂದಿ… ಹೀಗೆ ಭಾಷಾ ವಿಷಯಗಳನ್ನು ರಾತ್ರಿ ಓದುತ್ತಿದ್ದೆ. ಉಳಿದಂತೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಹಗಲು ಹೊತ್ತಿನಲ್ಲಿ ಓದುತ್ತಿದ್ದೆ. ದಿನವಿಡೀ ಓದುತ್ತಿರಲಿಲ್ಲ. ಓದುವಾಗ 2-3 ಗಂಟೆ ಕುಳಿತು ಕ್ರಮಬದ್ಧವಾಗಿ ಗಮನವಿಟ್ಟು ಓದುತ್ತಿದ್ದೆ. 625 ಅಂಕ ಬರುವ ಆತ್ಮವಿಶ್ವಾಸ ಇತ್ತು. ಆದರೆ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎನ್ನುತ್ತಾರೆ ಉತ್ಸವ್.

ಶಾಲೆಯಲ್ಲಿ ಸಿಲೆಬಸ್‌ (ಪಠ್ಯಕ್ರಮ) ಬೇಗನೆ ಮುಗಿದಿತ್ತು. ಹೀಗಾಗಿ ಬೇಗನೆ ರಿವಿಷನ್‌ (ಪುನರ್ಮನನ) ಮಾಡಲು ಸಾಧ್ಯವಾಯ್ತು. ಜನವರಿ ವೇಳೆಗೆ ಪ್ರಿಪರೇಟರಿ (ಪೂರ್ವಸಿದ್ದತಾ) ಪರೀಕ್ಷೆಗಳನ್ನು ಶಾಲೆಯಲ್ಲಿ ಆರಂಭಿಸಿದರು. ರಾಜ್ಯಮಟ್ಟದ ಪೂರ್ವಸಿದ್ಧತಾ ಪರೀಕ್ಷೆ ಹೊರತುಪಡಿಸಿ ಶಾಲೆಯಲ್ಲಿ ನಾಲ್ಕು ಪ್ರಿಪರೇಟರಿ ಪರೀಕ್ಷೆ ಮಾಡಿದ್ರು. ಪರೀಕ್ಷೆ ಬರೆಯಲು ಸಮಯ ನಿರ್ವಹಣೆ ಎಲ್ಲ ಆಗಲೇ ಅಭ್ಯಾಸವಾಯ್ತು. ಸಮಯದೊಳಗೆ ಪರೀಕ್ಷೆ ಬರೆಯುವುದು ನನಗೆ ಎಂದಿಗೂ ಸವಾಲಾಗಲಿಲ್ಲ. ಎಲ್ಲಾ ಪ್ರಿಪರೇಟರಿ ಪರೀಕ್ಷೆಗಳಲ್ಲಿ 95 ಶೇಕಡಕ್ಕಿಂತ ಹೆಚ್ಚು ಅಂಕಗಳು ಬಂದಿದ್ದವು. ಹೀಗಾಗಿ ಅಂತಿಮ ಪರೀಕ್ಷೆ ಬರೆಯಲು ಸುಲಭವಾಯ್ತು ಎಂದು ಉತ್ಸವ್ ಹೇಳುತ್ತಾರೆ.

ಮನೆಯಲ್ಲಿ ಯಾವುದೇ ನಿರ್ಬಂಧ ಇರಲಿಲ್ಲ

ಮನೆಯಲ್ಲಿ ಅಪ್ಪ-ಅಮ್ಮನ ಬೆಂಬಲ ಚೆನ್ನಾಗಿತ್ತು. ಯಾವುದಕ್ಕೂ ಅವರು ನಿರ್ಬಂಧ ಹಾಕಿರಲಿಲ್ಲ. ನನ್ನ ಆಯ್ಕೆಯಂತೆ ಮಾಡಬೇಕು ಎನಿಸಿದ ಎಲ್ಲವನ್ನೂ ಮಾಡುತ್ತಿದ್ದೆ. ಓದುವಾಗ ಯಾರೂ ತೊಂದರೆ ಕೊಡುತ್ತಿರಲಿಲ್ಲ. ಟಿವಿ ನೋಡ್ಬಾರ್ದು, ಮೊಬೈಲ್‌ ನೋಡ್ಬಾರ್ದು ಅಂತ ಯಾರೂ ಹೇಳುತ್ತಿರಲಿಲ್ಲ. ಕೆಲವೊಂದು ಕಾರ್ಯಕ್ರಮಗಳಿಗೂ ಹೋಗುತ್ತಿದ್ದೆ. ಸ್ನೇಹಿತರೊಂದಿಗೆ ಆಡುತ್ತಿದ್ದೆ.

ಸೌಮ್ಯ ಟೀಚರ್‌ ನನ್ನ ಫೇವರೆಟ್

ಕಲಿಕೆಗೆ ಸಂಬಂಧಿಸಿದಂತೆ ಶಿಕ್ಷಕರ ಸಹಕಾರ ಚೆನ್ನಾಗಿತ್ತು. ಏನೇ ಗೊಂದಲಗಳಿದ್ದರೂ ಬಗೆಹರಿಸುತ್ತಿದ್ದರು. ಯಾವುದೇ ಸಮಯದಲ್ಲಿಯೂ ಗೊಂದಲ ಕೇಳಬಹುದಾದ ಸ್ವಾತಂತ್ರ್ಯ ಕೊಟ್ಟಿದ್ದರು. ಆಗಾಗ ಕರೆ ಮಾಡಿ ಸಿದ್ದತೆ ಬಗ್ಗೆ ಕೇಳುತ್ತಿದ್ದರು. ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ಬಿಡಿಸಲು ಹೇಳುತ್ತಿದ್ದರು. ನನ್ನ ನೆಚ್ಚಿನ ಟೀಚರ್‌ ಹೆಸರು ಸೌಮ್ಯ. ಅವರು ಸಮಾಜ ವಿಜ್ಞಾನ ಟೀಚರ್.‌ ಓದಲು ಬೆಂಬಲ ಜೊತೆಗೆ ಅವರೂ ಆಸಕ್ತಿಯಿಂದ ಹೇಳಿಕೊಡುತ್ತಿದ್ರು.

ಜಂಕ್‌ ಫುಡ್‌ ಹೆಚ್ಚು ತಿನ್ನುತ್ತಿರಲಿಲ್ಲ. ಆರೋಗ್ಯಕರ ಆಹಾರ ಜಾಸ್ತಿ ಸೇವಿಸುತ್ತಿದ್ದೆ. ಮನೆಯಿಂದ ಹೊರಗೆ ಹೋದಾಗ ಹೆಚ್ಚು ಸಮಸ್ಯೆ ಆಗಬಾರದು ಎಂದು ಆಹಾರದ ಬಗ್ಗೆ ಗಮನ ಕೊಡುತ್ತಿದ್ದೆ ಎಂದು ತಮ್ಮ ಆರೋಗ್ಯದ ಬಗೆಗಿನ ಕಾಳಜಿ ಕುರಿತು ಉತ್ಸವ್‌ ಹೇಳಿದ್ದಾರೆ.

ಅಂಕಗಳ ಬೆನ್ನೇರಿ ಓದಲಿಲ್ಲ

ಶಾಲೆಯಲ್ಲಿ ನಾನು ಟಾಪರ್‌ ಆಗಿದ್ರೆ, ಇಬ್ಬರಿಗೆ 624 ಅಂಕಗಳು ಬಂದಿವೆ. ನಮ್ಮ ನಡುವೆ ಅಂಕಗಳ ಬಗ್ಗೆ ಯಾವುದೇ ಪೈಪೋಟಿ ಇರುತ್ತಿರಲಿಲ್ಲ. ಅಂಕಗಳ ಬೆನ್ನೇರಿ ಅದೇ ಯೋಚನೆಯಲ್ಲಿ ಯಾರೂ ಓದುತ್ತಿರಲಿಲ್ಲ. ಅಂಕಗಳು ನಮಗೆ ವಿಷಯವೇ ಆಗಿರಲಿಲ್ಲ. ಎಲ್ಲರೂ ಅವರ ಪಾಡಿಗೆ ಓದುತ್ತಿದ್ದರು.

ಒತ್ತಡ ಮಾಡಿಕೊಳ್ಳಬಾರದು: ಉತ್ಸವ್‌ ಕಿವಿಮಾತು

ಪರೀಕ್ಷೆಯ ಒತ್ತಡ ಮಾಡಿಕೊಳ್ಳಬಾರದು. ಸಿಗುವ ಅಂಕಗಳಿಗೆ ಖುಷಿ ಪಡಬೇಕು. ಪರೀಕ್ಷೆಯಲ್ಲಿ ಏನು ಬರುತ್ತೆ ಎಂಬುದು ನಮಗೆ ಮೊದಲೇ ಗೊತ್ತಿರುತ್ತದೆ. ಯಾಕೆಂದರೆ, ಸಿಲೆಬಸ್‌ ಅಲ್ಲಿ ಇರುವುದೇ ಪರೀಕ್ಷೆಯಲ್ಲೂ ಬರುತ್ತದೆ. ಶಾಲೆಯಲ್ಲಿ ಕೊಡುವ ವೇಳಾಪಟ್ಟಿ ಅನುಸರಿಸಬೇಕು. ನಿತ್ಯದ ಪಾಠಗಳನ್ನು ಅಂದೇ ಓದಬೇಕು. ಆಗ ಕೊನೆಯ ಕ್ಷಣದಲ್ಲಿ ಒತ್ತಡ ಇರುವುದಿಲ್ಲ. ಯಾವುದನ್ನೂ ನಿರ್ಲಕ್ಷ್ಯ ಮಾಡದೆ ಓದಬೇಕು ಎಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ಸವ್‌ ಕಿವಿಮಾತು ಹೇಳಿದ್ದಾರೆ.

ಪಿಸಿಎಂಬಿ (ವಿಜ್ಞಾನ) ಓದಲು ಕಾರ್ಕಳ ಕಾಲೇಜಿಗೆ ಅಡ್ಮಿಷನ್

ನಾನು ಮುಂದೆ ವಿಜ್ಞಾನ ಓದುವ ನಿರ್ಧಾರ ಮಾಡಿದ್ದೇನೆ. ಹೀಗಾಗಿ ಕಾರ್ಕಳದ ಜ್ಞಾನಸುಧಾ ಕಾಲೇಜಿನಲ್ಲಿ ಪಿಸಿಎಂಬಿ ಆಯ್ಕೆ ಮಾಡಿಕೊಂಡಿದ್ದೇನೆ. ಕರಾವಳಿ ಭಾಗದಲ್ಲಿ ಶಿಕ್ಷಣ ಗುಣಮಟ್ಟ ಚೆನ್ನಾಗಿದೆ. ನನ್ನ ಅಕ್ಕ ಕೂಡಾ ಮಂಗಳೂರಿನಲ್ಲಿ ಓದಿದ್ದಾರೆ. ಹೀಗಾಗಿ ನಾನು ಕೂಡಾ ಕರಾವಳಿಯ ಕಾಲೇಜು ಆಯ್ಕೆ ಮಾಡಿ ಹಾಸ್ಟೆಲ್‌ನಲ್ಲಿ ಉಳಿಯುವ ನಿರ್ಧಾರ ಮಾಡಿದ್ದೇನೆ ಎಂದು ತಮ್ಮ ಮುಂದಿನ ವಿದ್ಯಾಭ್ಯಾಸದ ಕುರಿತು ಹೇಳಿಕೊಂಡಿದ್ದಾರೆ.

ಮಗನ ಕುರಿತು ಅಪ್ಪನ ಹೆಮ್ಮೆಯ ಮಾತು

ನನ್ನ ಮಗ ಚೆನ್ನಾಗಿ ಆಸಕ್ತಿಯಿಂದ ಓದುತ್ತಿದ್ದ. ದಿನಿವಿಡೀ ಕುಳಿತು ಪುಸ್ತಕ ಹಿಡಿದು ಓದುತ್ತಿರಲಿಲ್ಲ. ಓದುವಾಗ ಆಸಕ್ತಿಯಿಂದ ಚೆನ್ನಾಗಿ ಓದುತ್ತಿದ್ದ. ನಾನು ಯಾವುದೇ ರೀತಿಯ ನಿರ್ಬಂಧ ಹಾಕಿರಲಿಲ್ಲ. ನನ್ನ ಮಗ ಚೆನ್ನಾಗಿ ಓದಿ ಸಿವಿಲ್‌ ಸರ್ವಿಸ್‌ ಮಾಡಬೇಕು ಎಂಬ ಕನಸಿದೆ. ಅದಕ್ಕಾಗಿ ಅವನು ಏನೆಲ್ಲಾ ಕೇಳ್ತಾನೋ ಎಲ್ಲವನ್ನೂ ಮಾಡುತ್ತೇನೆ. ಈಗಾಗಲೇ ಕಾರ್ಕಳದ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ಪಾಸಾಗಿ ಸೀಟ್‌ ಸಿಕ್ಕಿದೆ. ಅಡ್ಮಿಶನ್‌ ಕೂಡಾ ಆಗಿದೆ. ಅದರಂತೆ ಮುಂದಿನ ಶಿಕ್ಷಣ ಪಡೆಯುತ್ತಾನೆ ಎಂದು ಉತ್ಸವ್‌ ಅವರ ತಂದೆ ಪ್ರಕಾಶ್‌ ಖುಷಿಯಿಂದ ಹೇಳಿಕೊಂಡಿದ್ದಾರೆ.

ಪಠ್ಯಪುಸ್ತಕದ ಜೊತೆಗೆ ಉತ್ಸವ್‌ ಪಟೇಲ್ ಕನ್ನಡ ಹಾಗೂ ಇಂಗ್ಲಿಷ್‌ ದಿನಪತ್ರಿಕೆಗಳನ್ನು, ಸ್ಥಳೀಯ ಪತ್ರಿಕೆಗಳನ್ನು ಓದುತ್ತಿದ್ದರಂತೆ. ಮನರಂಜನೆಗಾಗಿ ಸ್ನೇಹಿತರ ಜೊತೆಗೆ ಆಟ ಆಡುವುದು, ಈವೆಂಟ್‌ಗಳಲ್ಲಿ ಭಾಗವಹಿಸುವುದು ಮಾಡುತ್ತಿದ್ದರು. ಉತ್ಸವ್‌ ಅವರ ತಂದೆ ಡಿಟಿ ಪ್ರಕಾಶ್‌ ಅವರು ಸಣ್ಣ ವ್ಯವಹಾರ ನಡೆಸುತ್ತಿದ್ದಾರೆ. ಹಾಸನದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಮನೆಯಲ್ಲಿ ಉತ್ಸವ್‌ ಪಟೇಲ್‌ ತಾಯಿ ಆಶಾರಾಣಿ, ಅಜ್ಜಿ ಹಾಗೂ ಅಕ್ಕನೊಂದಿಗೆ ವಾಸವಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.