ನೀವಿನ್ನೂ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಿದ್ದರೆ ಇಂದಿನಿಂದ ಸಾಮೂಹಿಕ ವಿದ್ಯುತ್ ಸಂಪರ್ಕ ಕಡಿತ ಶುರು ಪರಿಣಾಮ ಎದುರಿಸಿ
ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವವರು ಡಿಸೆಂಬರ್ 9 ಒಳಗಾಗಿ ಪಾವತಿ ಮಾಡಿಬಿಡಿ. ಇಲ್ಲದೇ ಇದ್ದರೆ ಸಾಮೂಹಿಕ ವಿದ್ಯುತ್ ಕಡಿತ ಶುರುವಾಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಒಂದೂವರೆ ವರ್ಷದ ಹಿಂದೆ ಗೃಹಜ್ಯೋತಿ ಯೋಜನೆ ಜಾರಿಗೊಂಡ ನಂತರ ಬಹುತೇಕರಿಗೆ ಶೂನ್ಯ ದರ ಬರುತ್ತಿದ್ದರೆ, ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಬಿಲ್ ಬರುತ್ತಿದೆ. ಕೆಲವರು ಗೃಹಜ್ಯೋತಿ ಯೋಜನೆ ಬಳಸಿಕೊಂಡಿಲ್ಲ. ಅಂತವರೂ ಸೇರಿದಂತೆ ವಿದ್ಯುತ್ ಬಾಕಿ ಉಳಿಸಿಕೊಂಡವರಿಗೆ ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು ಪಾವತಿಸುವಂತೆ ಸೋಮವಾರದ ಗಡುವು ನೀಡಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ, ಹುಬ್ಬಳ್ಳಿ, ಮಂಗಳೂರು, ಕಲಬುರಗಿ ವಿದ್ಯುತ್ ಸರಬರಾಜು ಕಂಪೆನಿ,ಮೈಸೂರು ಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಬಿಗಿ ಕ್ರಮಕ್ಕೆ ಮುಂದಾಗಿವೆ. ಡಿಸೆಂಬರ್ 9ರೊಳಗೆ ಬಾಕಿ ಪಾವತಿಸಲು ಸೂಚಿಸಿವೆ. ಅದರಲ್ಲೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಡಿ.9ರ ಸೋಮವಾರದೊಳಗೆ ಬಿಲ್ ಪಾವತಿಸದೇ ಇದ್ದರೆ ಸಾಮೂಹಿಕ ವಿದ್ಯುತ್ ಕಡಿತ ಶುರು ಮಾಡಲು ಸೆಸ್ಕ್ ಮುಂದಾಗಿದೆ.
ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮುಂದಾಗಿದೆ. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿ ಮಾಡದಿದ್ದಲ್ಲಿ, ಅಂತಹ ಸ್ಥಾವರಗಳಿಗೆ ವಿದ್ಯುತ್ ಕಡಿತಗೊಳಿಸಲು ತೀರ್ಮಾನಿಸಿದೆ. ಕೆಲವು ಗ್ರಾಹಕರು, ಗ್ರಾಮ ಪಂಚಾಯತಿ ಕುಡಿಯುವ ನೀರು, ಬೀದಿ ದೀಪ ಸ್ಥಾವರಗಳನ್ನು ಒಳಗೊಂಡಂತೆ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಹಾಗೂ ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಈ ರೀತಿಯಾಗಿ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಕಡಿತಗೊಳಿಸಲು ಸೆಸ್ಕ್ ನಿರ್ಧರಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್ದಾರರ ಷರತ್ತುಗಳು 2004 ಅನುಬಂಧ-04ರ ನಿಯಮ 4.18(ಜೆ) ಪ್ರಕಾರ “ಗ್ರಾಹಕರು ಬಿಲ್ ಪಾವತಿಗೆ ನೀಡಿರುವ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸದ ಗ್ರಾಹಕರಿಗೆ 15 ದಿನಗಳ ಸ್ಪಷ್ಟ ನೋಟೀಸ್ ನೀಡಿ, ಬಾಕಿ ಪಾವತಿಸದ ಕಾರಣಕ್ಕೆ ವಿದ್ಯುತ್ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್ದಾರರು ಹೊಂದಿರುತ್ತಾರೆ”. ಅಲ್ಲದೇ ನಿಯಮ 2.11ರ ಪ್ರಕಾರ “ಬಿಲ್ ವಿತರಿಸಿದ ಬಳಿಕ 15 ದಿನಗಳ ಅವಧಿ ಬಿಲ್ ಪಾವತಿಗೆ ಅಂತಿಮ ಗಡುವಾಗಿರುತ್ತದೆ.” “ಗ್ರಾಹಕರಿಗೆ ನೀಡುವ ಬಿಲ್ನ ಹಿಂಬದಿಯ ಸೂಚನೆ 1ರಲ್ಲಿ ನಿಗದಿತ ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಈ ಬಿಲ್ ಅನ್ನೇ ವಿದ್ಯುತ್ ಸರಬರಾಜು ನಿಲ್ಲಿಸುವ 15 ದಿನಗಳ ನೋಟೀಸ್ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಕುಡಿಯುವ ನೀರು, ಬೀದಿ ದೀಪಗಳ ಸೇವೆಗಳನ್ನು ಹೊರತುಪಡಿಸಿ ಎಲ್ಲ ಪ್ರವರ್ಗದ ವಿದ್ಯುತ್ ಗ್ರಾಹಕರು, ಸರ್ಕಾರಿ ಇಲಾಖೆ ಒಳಗೊಂಡಂತೆ ತಮ್ಮ ಸ್ಥಾವರಗಳ ವಿದ್ಯುತ್ ಶುಲ್ಕ ಬಾಕಿಯನ್ನು 3 ದಿನದೊಳಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧಿಕೃತ ನಗದು ಕೌಂಟರ್, ಆನ್ ಲೈನ್ ಮೂಲಕ ಪಾವತಿಸುವಂತೆ ಕೋರಲಾಗಿತ್ತು. ಅಲ್ಲದೇ ನಿಗದಿತ ದಿನದೊಳಗೆ ವಿದ್ಯುತ್ ಶುಲ್ಕ ಬಾಕಿ ಪಾವತಿಸದಿದ್ದಲ್ಲಿ ಡಿಸೆಂಬರ್ 9, 2024ರ ಸೋಮವಾರ ಸಾಮೂಹಿಕವಾಗಿ ವಿದ್ಯುತ್ ಕಡಿತಗೊಳಿಸುವ ಅಭಿಯಾನದ ಮೂಲಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗದಿತ ಅವಧಿಯೊಳಗೆ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಸ್ಥಾವರಗಳಿಗೆ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು, ಸರ್ಕಾರಿ ಇಲಾಖೆಗಳು ತುರ್ತಾಗಿ ತಮ್ಮ ವಿದ್ಯುತ್ ಸ್ಥಾವರದ ಬಾಕಿ ಪಾವತಿಸಿ ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎನ್ನುವುದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರ ಅಭಿಪ್ರಾಯ.