Heart Attack: ಕರ್ನಾಟಕದಲ್ಲಿ ಕೋವಿಡ್ ಲಸಿಕೆಯಿಂದ ಹೃದಯಾಘಾತ, ಹಠಾತ್ ಸಾವು; ತನಿಖೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Heart Attack: ಕರ್ನಾಟಕದಲ್ಲಿ ಕೋವಿಡ್ ಲಸಿಕೆಯಿಂದ ಹೃದಯಾಘಾತ, ಹಠಾತ್ ಸಾವು; ತನಿಖೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ

Heart Attack: ಕರ್ನಾಟಕದಲ್ಲಿ ಕೋವಿಡ್ ಲಸಿಕೆಯಿಂದ ಹೃದಯಾಘಾತ, ಹಠಾತ್ ಸಾವು; ತನಿಖೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ

Heart Attack: ಕೋವಿಡ್‌ ಬಳಿಕ ಕರ್ನಾಟಕದಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಹೃದಯಾಘಾತದಿಂದ ಕರ್ನಾಟಕದಲ್ಲಿ ಸಾವಿನ ಪ್ರಕರಣ ಹೆಚ್ಚಳ ಅಧ್ಯಯನಕ್ಕೆ ಸಮಿತಿ ರಚಿಸಲಾಗುತ್ತದೆ.
ಹೃದಯಾಘಾತದಿಂದ ಕರ್ನಾಟಕದಲ್ಲಿ ಸಾವಿನ ಪ್ರಕರಣ ಹೆಚ್ಚಳ ಅಧ್ಯಯನಕ್ಕೆ ಸಮಿತಿ ರಚಿಸಲಾಗುತ್ತದೆ.

Heart Attack: ಕೋವಿಡ್‌ ನಂತರ ಕರ್ನಾಟಕದಲ್ಲಿ ಎಲ್ಲಾ ವಯೋಮಾನದವರು ಹಠಾತ್‌ ಹೃದಯಾಘಾತಕ್ಕೆ ಸಿಲುಕಿ ಜೀವ ಕಳೆದುಕೊಳ್ಳುತ್ತಿರುವ ಕುರಿತು ಗಂಭೀರ ಸಲಹೆಗಳು ಕೇಳಿ ಬಂದ ಬೆನ್ನಲ್ಲೆ ಕರ್ನಾಟಕ ಸರ್ಕಾರವೂ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ. ಹಿರಿಯ ಪತ್ರಕರ್ತ ಹಾಗೂ ಚಿಂತಕ ರಾಜಾರಾಂ ತಲ್ಲೂರು ಅವರ ಬರೆದಿದ್ದ ಪತ್ರವನ್ನಾಧರಿಸಿ ಸಿಎಂ ಸಿದ್ದರಾಮಯ್ಯ ಅವರು ಸಮಿತಿ ರಚನೆಗೆ ಸೂಚಿಸಿದ್ದಾರೆ.ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ದಿನದಿಂದ ದಿನಕ್ಕೆ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರು ತಮ್ಮ ಇ- ಮೇಲ್ ಮೂಲಕ ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯ ಸ್ತಂಭನ, ಮೆದುಳು, ನರ ಸಂಬಂಧಿ ಕಾರಣಗಳಿಂದ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಆಗುತ್ತಿವೆ. ಇಂತಹ ಸಾವುಗಳು ಅಲವಂಬಿತ ಕುಟುಂಬವನ್ನು ಆರ್ಥಿಕ- ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿವೆ. ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಸಂಭಬಿಸುತ್ತಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹಠಾತ್ ಸಾವಿಗೀಡಾಗುತ್ತಿರುವ ಬಗ್ಗೆ ಅಧ್ಯಯನ ನಡೆಸಿ ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ಇಂತಹ ಹಠಾತ್ ಸಾವುಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚನೆ ಮಾಡಿ ವರದಿ ಪಡೆದು ಅಗತ್ಯ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದು ಇದರ ಪ್ರಕಾರ ಸಮಿತಿಯು ಚರ್ಚಿಸಿ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲು ಸೂಚಿಸಲಾಗಿದೆ.

ತಲ್ಲೂರು ಪತ್ರದಲ್ಲೇನಿದೆ

ಕಳೆದ ನಾಲ್ಕು ವರ್ಷಗಳಿಂದೀಚೆಗೆ ರಾಜ್ಯದಲ್ಲಿ ಎಲ್ಲೆಡೆ ಹಠಾತ್ ಕುಸಿದು ಬಿದ್ದು ಸಾವು, ಹೃದಯಾಘಾತ, ಮೆದುಳಿನ ಲಕ್ವಾ ಮತ್ತಿತರ ಕಾರಣಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನರು ಸಾವಿಗೀಡಾಗುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಉತ್ಪಾದಕ ಪ್ರಾಯ ವರ್ಗದವರಾಗಿದ್ದು ಪ್ರತೀ ಸಾವು ಹಲವಾರು ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ.

ದೇಶದಾದ್ಯಂತ ಈ ರೀತಿಯ ಅಸಹಜ ಸಾವುಗಳು ಸಂಭವಿಸುತ್ತಿದ್ದು, ಕರ್ನಾಟಕದಲ್ಲೂ ಇಂತಹ ಸಾವಿನ ಸಂಖ್ಯೆ ಗಮನಾರ್ಹವಾಗಿದ್ದು, ಪ್ರತಿದಿನ ಪತ್ರಿಕೆಗಳಲ್ಲಿ ಈ ಕುರಿತು ಸುದ್ದಿಗಳು ಕಾಣಿಸಿಕೊಳ್ಳುತ್ತಿವೆ. ಜನರು ಇದು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಭೀತರಾಗಿದ್ದಾರೆ. ಕೋವಿಡ್ ಮತ್ತು ಅದರ ಲಸಿಕೆಯ ಅಡ್ಡಪರಿಣಾಮಗಳ ಅಧಿಕೃತ ಪಟ್ಟಿಯಲ್ಲಿ ಕಾಣಿಸಲಾಗಿರುವ ಗಿಲ್ಲಾನ್ ಬಾರೆ ಸಿಂಡ್ರೋಂ (GBS) ಮತ್ತು ಟ್ರಾನ್ಸ್‌ವರ್ಸ್ ಮಯಲೈಟಿಸ್‌ನಂತಹ ಅಪರೂಪದ ನರಸಂಬಂಧಿ ಕಾಯಿಲೆಗಳು, ಅಪಾರ ಪ್ರಮಾಣದಲ್ಲಿ ಎಲ್ಲೆಡೆ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ.

ಈ ಬಗ್ಗೆ ಸಂಸತ್ತಿನಲ್ಲಿ ಕೇಳಿದರೆ ಸಾಂವಿಧಾನಿಕವಾಗಿ ಆರೋಗ್ಯವು ರಾಜ್ಯ ಪಟ್ಟಿಯ ಸಂಗತಿಯಾಗಿರುವುದರಿಂದ ಅದರಲ್ಲಿ ಕೇಂದ್ರ ಸರಕಾರದ ಪಾತ್ರ ಇಲ್ಲ ಎಂಬ ಉತ್ತರ ಬಂದಿರುವುದನ್ನು ಗಮನಿಸಿದ್ದೇನೆ.

ರಾಜ್ಯ ಸರ್ಕಾರವಾದರೂ ಈ ನಿಟ್ಟಿನಲ್ಲಿ ತುರ್ತಾಗಿ ಗಮನಹರಿಸಿ, ಈ ತೊಂದರೆಗಳಿಗೆ ಕಾರಣ ಏನೆಂದು ಪತ್ತೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಅಕಾರಣವಾಗಿ ಸಾಯುತ್ತಿರುವವರನ್ನು ಬದುಕಿಸಿಕೊಳ್ಳುವ ನಿಟ್ಟಿನಲ್ಲಿ ತುರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ರಾಜಾರಾಂ ತಲ್ಲೂರು ತಿಳಿಸಿದ್ದಾರೆ.

1. ಅಸಹಜವಾದ ಹಠಾತ್ ಕುಸಿದು ಸಾವು, ಎಳೆಯರ ಹೃದಯಾಘಾತದ ಸಾವಿನ ಪ್ರಕರಣಗಳನ್ನು ಅಂಕಿಸಂಖ್ಯೆ ಸಹಿತ ದಾಖಲಿಸಿಕೊಳ್ಳಲು ಮತ್ತು ಅವಕ್ಕೆ ಕಾರಣ ಪತ್ತೆಗಾಗಿ ಆವಶ್ಯಕ ವೈದ್ಯಕೀಯ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವಂತೆ ರಾಜ್ಯದ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಿಗೆ ತಾವು ಆದೇಶ ನೀಡಬೇಕು.

2. ಕೋವಿಡ್ ಅಥವಾ ಕೋವಿಡ್ ಲಸಿಕೆಯ ನಿರೀಕ್ಷಿತ ಅಡ್ಡಪರಿಣಾಮಗಳ ಪಟ್ಟಿಯಲ್ಲಿ ಇರುವ ಎಲ್ಲ ಸಂಭಾವ್ಯ ರೋಗಗಳಿಗೆ ತುತ್ತಾದವರು ಮತ್ತು ಬಲಿಯಾದವರ ಅಂಕಿಸಂಖ್ಯೆಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು ಮತ್ತು ಈ ನಿಟ್ಟಿನಲ್ಲಿ ತಮ್ಮ ತಮ್ಮ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗುವ ಅಂತಹ ಎಲ್ಲ ಕೇಸ್‌ಗಳನ್ನು ಸರ್ಕಾರಕ್ಕೆ ನಿಯಮಿತವಾಗಿ ವರದಿ ಮಾಡುವಂತೆ ಖಾಸಗಿ ವೈದ್ಯಕೀಯ ವ್ಯವಸ್ಥೆಗಳಿಗೂ ತಾವು ಆದೇಶ ನೀಡಬೇಕು.

3. ದುಬಾರಿ ಮತ್ತು ದೀರ್ಘಕಾಲಿಕ ಚಿಕಿತ್ಸೆ ಬೇಡುವ ಗಿಲ್ಲಾನ್ ಬಾರೆ ಸಿಂಡ್ರೋಮ್ (GBS) ಮತ್ತು ಟ್ರಾನ್ಸ್‌ವರ್ಸ್ ಮಯಲೈಟಿಸ್‌ನಂತಹ ನರಸಂಬಂಧಿ ತೊಂದರೆಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆಯ ಹೆಸರಲ್ಲಿ ಅಂದಾದುಂದು ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಸರ್ಕಾರ ಕಡಿವಾಣ ಹಾಕಬೇಕು.

4. ಸರ್ಕಾರ ತಕ್ಷಣ ಒಂದು ಉನ್ನತಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ಈ ಎಲ್ಲ ಅಸಹಜ ಸಾವುಗಳಿಂದ ಉತ್ಪಾದಕ ಪ್ರಾಯವರ್ಗದಲ್ಲಿರುವ ಅಮಾಯಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಯೋಜಿಸಲು ಮತ್ತು ಈಗಾಗಲೇ ಪೀಡಿತರಿಗೆ ಅಗತ್ಯವಿರುವ ಪರಿಹಾರ ಕ್ರಮಗಳನ್ನು ರೂಪಿಸಲು ಸೂಕ್ತಕ್ರಮಗಳನ್ನು ಸರ್ಕಾರದ ಕಡೆಯಿಂದ ಕೈಗೊಳ್ಳಬೇಕು.

Whats_app_banner