Bengaluru Rain: ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ ಆರಂಭ; ಉದ್ಯಾನ ನಗರಿ ಜನರೇ ಹುಷಾರಾಗಿ ಮನೆ ಸೇರಿಕೊಳ್ಳಿ
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಜೋರು ಮಳೆಯಾಗುತ್ತಿದ್ದು, ವರುಣನ ಆರ್ಭಟದಿಂದ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು (ಮೇ 30, ಮಂಗಳವಾರ) ಧಾರಾಕಾರ ಮಳೆಯಾಗುತ್ತಿದ್ದು, (Bangalore Rain) ವಾಹನ ಸವಾರರು ಪರದಾಡುವಂತಾಗಿದೆ.
ಮಧ್ಯಾಹ್ನ ಸುಮಾರು 1.45ಕ್ಕೆ ಆರಂಭವಾಗಿರುವ ಗುಡುಗು ಸಹಿತ ಭಾರಿ ಮಳೆ ಜನ ಸಾಮಾನ್ಯರ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟು ಮಾಡಿದೆ. ಹೆಬ್ಬಾಳ, ಆರ್ಟಿ ನಗರ, ಎಂಜಿ ರಸ್ತೆ, ಜಯಮಹಲ್, ಶಿವಾಜಿನಗರ, ಕೆಆರ್ ಸರ್ಕಲ್, ವಿಧಾನಸೌಧ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ಸೇರಿದಂತೆ ಹಲವೆಡೆ ಮುಂದುವರೆದಿದೆ.
ಮುಂಗಾರು ಆರಂಭಕ್ಕೂ ಮುನ್ನವೇ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಬೆಂಗಳೂರು ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವ ಇದೆ ಅಂತ ಎಚ್ಚರಿಕೆ ನೀಡಿತ್ತು. ನಗರದಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋ ಮೀಟರ್ ಇರುವ ಸಾಧ್ಯತೆ ಅಂತಲೂ ಹೇಳಿದೆ.
ಇನ್ನ ಕಳೆದ ಕೆಲವು ದಿನಗಳಿಂದ ಸುರಿದ ಮಳೆ ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಅವಾಂತರವನ್ನು ಸೃಷ್ಟಿ ಮಾಡಿತ್ತು. ಬೆಂಗಳೂರಿನಲ್ಲಿ ಮರಗಳು ಧರೆಗುರುಳಿದರೆ, ರಸ್ತೆಗಳ ಮೇಳೆ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿತ್ತು. ಕೆಲ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಅಬ್ಬರಿಂದ ಬೆಳೆ ಹಾನಿಯಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗೂರು ಗ್ರಾಮಾಂತರ, ರಾಮನಗರ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿನ್ನೆ (ಮೇ 29, ಸೋಮವಾರ) ರಾಜ್ಯದಲ್ಲೇ ಅತ್ಯಧಿಕ ಮಳೆ ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನಲ್ಲಿ ಆಗಿದೆ. ಇಲ್ಲಿ 5 ಸೆಂಟಿ ಮೀಟರ್ ಮಳೆಯ ವರದಿಯಾಗಿದೆ. ಉಳಿದಂತೆ ಬೆಳಗಾವಿ ಜಿಲ್ಲೆಯ ಕಣಬರ್ಗಿ, ಹಾವೇರಿ ಜಿಲ್ಲೆಯ ಸವಣೂರರು, ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ಶ್ರೀಮಂಗಲದಲ್ಲಿ ತಲಾ 2 ಸೆಂಟಿ ಮೀಟರ್, ಹಾವೇರಿಯ ಎಂಪಿಎಂಸಿ, ಬೆಳಗಾವಿ ನಗರ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಮೂಡಿಗೆರೆಯಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಬೇಲೂರಿನಲ್ಲಿ ರಾತ್ರಿ ಗುಡುಗು, ಮಿಂಚು ಹಾಗೂ ಸಿಡಿಲು ಸಹಿತ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ಬಿರುಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಬೃಹತ್ ಗಾತ್ರದ ಮರಗಳು ನೆಲಕ್ಕುರಳಿವೆ. ಕೆಲವೆಡೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ.
ಬೇಲೂರು ತಾಲ್ಲೂಕಿನ ಹಲವೆಡೆ ಅಪಾರ ಬೆಳ ಹಾನಿಯಾಗಿದೆ. ಬೇಲೂರು-ಚೀಕನಹಳ್ಳಿ,-ಮೂಡಿಗೆರೆ ರಸ್ತೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ. 17 ವಿದ್ಯುತ್ ಕಂಬಗಳು, ಮೂರು ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿದೆ.