ರಫೇಲಿನಲ್ಲಿರುವ ಬ್ರಹ್ಮಾಸ್ತ್ರ, ಪಾಶು ಪತಾಸ್ತ್ರಗಳೇನು: ಯುದ್ದ ವಿಮಾನಗಳ ಒಳನೋಟ ಬಿಚ್ಚಿಡುವ ವಿಂಗ್ ಕಮಾಂಡರ್ ಸುದರ್ಶನ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ರಫೇಲಿನಲ್ಲಿರುವ ಬ್ರಹ್ಮಾಸ್ತ್ರ, ಪಾಶು ಪತಾಸ್ತ್ರಗಳೇನು: ಯುದ್ದ ವಿಮಾನಗಳ ಒಳನೋಟ ಬಿಚ್ಚಿಡುವ ವಿಂಗ್ ಕಮಾಂಡರ್ ಸುದರ್ಶನ ಬರಹ

ರಫೇಲಿನಲ್ಲಿರುವ ಬ್ರಹ್ಮಾಸ್ತ್ರ, ಪಾಶು ಪತಾಸ್ತ್ರಗಳೇನು: ಯುದ್ದ ವಿಮಾನಗಳ ಒಳನೋಟ ಬಿಚ್ಚಿಡುವ ವಿಂಗ್ ಕಮಾಂಡರ್ ಸುದರ್ಶನ ಬರಹ

ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ದದ ವಾತಾವರಣ ನಿಧಾನವಾಗಿ ರೂಪುಗೊಳ್ಳುತ್ತಿದೆ. ಭಾರತ ಬಳಿ ಇರುವ ರಫೇಲ್‌ ಕ್ಷಿಪಣಿ ಕುರಿತು ವಿಂಗ್‌ ಕಮಾಂಡರ್‌ ಸುದರ್ಶನ್‌ ಬರಹ ಇಲ್ಲಿದೆ.

ಭಾರತದ ವಾಯುಪಡೆಗೆ ರಫೇಲ್‌ ಬಲವೇ ಹೆಚ್ಚಿದೆ.
ಭಾರತದ ವಾಯುಪಡೆಗೆ ರಫೇಲ್‌ ಬಲವೇ ಹೆಚ್ಚಿದೆ.

ಈ ಮೊದಲು ಸುಖೋಯ್-30 ವಿಮಾನಕ್ಕೆ ಅಳವಡಿಸಿರುವ ಬ್ರಹ್ಮೋಸ್ ಮತ್ತು ಇತರೆ ಕ್ಷಿಪಣಿಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದೆ. ಈಗ ರಫೇಲಿನಲ್ಲಿರುವ ಅಸ್ತ್ರಗಳ ಬಗ್ಗೆ ಒಂದಿಷ್ಟು ವಿಷಯಗಳನ್ನು ಹೇಳುತ್ತೇನೆ. ರಫೇಲ್ ವಿಮಾನದ ಹೊಟ್ಟೆಭಾಗದಲ್ಲಿ ಒಟ್ಟು ಹದಿನಾಲ್ಕು ಸ್ಟ್ರಾಂಗ್‌ ಪಾಯಿಂಟ್‌ಗಳಿರುತ್ತವೆ. ಈ ಪಾಯಿಂಟುಗಳನ್ನು ಕ್ಷಿಪಣಿಗಳನ್ನು ಅಥವಾ ಇಂಧನದ ಟ್ಯಾಂಕುಗಳನ್ನು ಅಳವಡಿಸಲು ಉಪಯೋಗಿಸಲಾಗುತ್ತದೆ. ಇದೊಂದು ಕ್ರಮಪಲ್ಲಟನೆಯ ಸಂಯೋಜನೆ, ಅಂದರೆ ಆಕ್ರಮಣದ ಉದ್ದೇಶದ ಅನುಸಾರವಾಗಿ ವಿವಿಧ ತರಹದ ಮಿಸೈಲುಗಳನ್ನು ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಸುಮಾರು 9500 ಕೇಜಿಯಷ್ಟು ಭಾರವನ್ನು ಸಲೀಸಾಗಿ ಹೇರಿಕೊಂಡು ಹೋಗುತ್ತದೆ.

ಬತ್ತಳಿಕೆಯಲ್ಲಿರುವ ಮೊಟ್ಟಮೊದಲ ಬ್ರಹ್ಮಾಸ್ತ್ರದ ಹೆಸರು 'ಮೀಟಿಯೋರ್'. ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ಶ್ರೇಣಿ ಮತ್ತು ಸಾಮರ್ಥ್ಯದ ಕ್ಷಿಪಣಿ ಇನ್ನೂ ಬಂದಿಲ್ಲ. ಇದು ರಫೇಲ್ ವಿಮಾನದಿಂದ ಇನ್ನೊಂದು ಯುದ್ಧವಿಮಾನದ ಮೇಲೆ ಪ್ರಯೋಗಿಸುವ ಕ್ಷಿಪಣಿ. ಇದರ ಕಾರ್ಯಪರಿಧಿ ಸುಮಾರು 120 ಕಿಮೀವರೆಗೂ ಇರುತ್ತದೆ. ಅಷ್ಟು ದೂರದವರೆಗೆ ಇದರ ಮಾರ್ಗದರ್ಶನ ಹೇಗೆ ನಡೆಯುತ್ತದೆ ಎನ್ನುವುದು ಬಹಳ ಕೌತುಕದ ಸಂಗತಿ. ಇದೊಂದು ಬಹಳ ಚಾಣಾಕ್ಷ ಕ್ಷಿಪಣಿ. ಶತ್ರು ವಿಮಾನವನ್ನು ರಡಾರಿನಲ್ಲಿ ಸೆರೆಹಿಡಿದು, ತಪ್ಪಿಸಿಕೊಳ್ಳದಂತೆ ಭದ್ರಪಡಿಸಿ ಈ ಕ್ಷಿಪಣಿಯನ್ನು ಫೈರ್ ಮಾಡಿದ ಕೂಡಲೇ ಅದು ಅತ್ಯಂತ ವೇಗದಲ್ಲಿ ಅಂದರೆ ವಿಮಾನಕ್ಕಿಂತ ದುಪ್ಪಟ್ಟು ವೇಗದಲ್ಲಿ ಶತ್ರು ವಿಮಾನದ ಕಡೆಗೆ ಹಾರಲಾರಂಭಿಸುತ್ತದೆ. ಇದರ ಮಾರ್ಗದರ್ಶನವನ್ನು ರಡಾರಿನಲ್ಲಿ ನಿಯಂತ್ರಿಸಲಾಗುತ್ತದೆ. ಅಕಸ್ಮಾತ್ತಾಗಿ ಪೈಲಟ್ ವಾಯು ಕದನದ ವಾತಾವರಣದಲ್ಲಿ ಬ್ಯುಸಿಯಾಗಿ ಬಿಟ್ಟರೆ ಈ ಕ್ಷಿಪಣಿಯ ನಿಯಂತ್ರಣವನ್ನು 'ನೇತ್ರಾ' ವಿಮಾನದಂತಹ ನಿಯಂತ್ರಣ ಕೇಂದ್ರಕ್ಕೆ ಹಸ್ತಾಂತರ ಮಾಡಬಹುದು.

ಇದಕ್ಕೆ ಒಂದು ಜೆಟ್ ಇಂಜಿನ್ ಅಳವಡಿಸಿದ್ದಾರೆ. ಘನ ಇಂಧನವೇ ಇದಕ್ಕೆ ಉರುವಲು. ಆ ಇಂಜಿನ್ನಿನ ಮೇಲೆ ಮತ್ತು ಕ್ಷಿಪಣಿಯ ವೇಗದ ಮೇಲೆ ಪೈಲಟ್ಟಿಗೆ ನಿಯಂತ್ರಣವಿರುತ್ತದೆ, ಹಾಗಾಗಿ ಕ್ಷಿಪಣಿಯ ವೇಗವನ್ನು 1 ಮಾಚ್ ನಿಂದ 4.5 ಮಾಚ್‌ವರೆಗೂ ನಿಯಂತ್ರಿಸಲು ಸಾಧ್ಯವಾಗುತ್ತದೆ. ಶತ್ರು ವಿಮಾನದ ದೂರ ಕಡಿಮೆಯಾಗುತ್ತಿದ್ದಂತೆ ಈ ಕ್ಷಿಪಣಿ 'ನೋ ಎಸ್ಕೇಪ್‌ ಜೋನ್‌' (NEZ) ಎನ್ನುವ ಕೋನವನ್ನು ಪ್ರವೇಶಿಸುತ್ತದೆ. ಇಲ್ಲಿಂದ ಆ ವಿಮಾನ ಧ್ವಂಸವಾಗುವವರೆಗೆ ಅವಶ್ಯಕತೆ ಇರುವ ಎಲ್ಲಾ ಕಸರತ್ತುಗಳನ್ನು ಮಾಡಿ ಅಂತಿಮ ಹಂತದಲ್ಲಿ ಸುಮಾರು 4500 ಕಿಮೀ ವೇಗದಲ್ಲಿ ಡಿಕ್ಕಿ ಹೊಡೆಯುತ್ತದೆ. ಈ ವೇಗಕ್ಕೇನೆ ಆ ವಿಮಾನ ಮತ್ತು ಆಸುಪಾಸಿನ ವಿಮಾನಗಳು ಛಿದ್ರಗೊಳ್ಳುತ್ತವೆ, ಇನ್ನು ಅದರ ಸಿಡಿತಲೆ ಸ್ಪೋಟಗೊಂಡಾಗ ಆಗುವ ಪರಿಣಾಮವನ್ನು ನೀವೇ ಊಹಿಸಿಕೊಳ್ಳಿ.

ಇನ್ನು ಈ ಮೀಟಿಯೋರ್ ಗಿಂತ ಸ್ವಲ್ಪ ಚಿಕ್ಕ, ಅದರ ತಮ್ಮನಂತಿರುವ ಕ್ಷಿಪಣಿ 'ಮಿಕಾ'. ಇದೂ ಸಹಾ ಶತ್ರು ವಿಮಾನಗಳ ಮೇಲೆ ಪ್ರಹಾರಿಸುವ, ಸುಮಾರು 80 ಕಿಮೀಗಳ ಪರಿಧಿಯಲ್ಲಿರುವ ವಿಮಾನಗಳನ್ನು ಬಹಳ ಸುಲಭವಾಗಿ ಧ್ವಂಸ ಮಾಡುವ ಸಾಮರ್ಥ್ಯವುಳ್ಳ ಕ್ಷಿಪಣಿ. ಇದನ್ನು ಫೈರ್‌ ಅಂಡ್‌ ಫರ್ಗೆಟ್‌ ಮಿಸೈಲ್ ಅಂತನೂ ಕರೀತಾರೆ. ಯಾಕೆಂದರೆ ಇದನ್ನು ಫೈರ್ ಮಾಡಿದ ಕೂಡಲೇ ಅಂತರಿಕ್ಷದಲ್ಲಿ ಇನ್ಫ್ರಾ ರೆಡ್‌ ಸಾಂದ್ರತೆಯ ವ್ಯತ್ಯಾಸವನ್ನು ಗಮನಿಸಿ ಯುದ್ಧವಿಮಾನದ ಸಾಂದ್ರತೆಯನ್ನು ಗುರುತಿಸಿ ಅಲ್ಲಿಗೆ ದೌಡಾಯಿಸುತ್ತದೆ. ಇದರ ಎಕ್ಸಾಸ್ಟ್‌ನಲ್ಲಿ ಅಳವಡಿಸಿರುವ ಥ್ರಸ್ಟ್‌ ವೆಕ್ಟರ್‌ ಗೈಡ್‌ ವನ್ಸ್‌ ಇವುಗಳ ಸಹಾಯದಿಂದ 4 ಮಾಚ್‌ ವೇಗದಲ್ಲಿಯೂ ಲೀಲಾಜಾಲವಾಗಿ ತಿರುಗಾಡಿ ಶತ್ರು ವಿಮಾನವನ್ನು ಗುರುತಿಸಿ ಹೊಡೆದು ಹಾಕುತ್ತದೆ.

ಇನ್ನು ನಮ್ಮ ನೆರೆಹೊರೆಯವರ ನಿದ್ದೆಗೆಡಿಸಿರುವ ಪಾಶುಪತಾಸ್ತ್ರಕ್ಕೆ ಬರೋಣ. ಹೆಸರು ಸ್ಕಾಲ್ಪ್‌ ಕ್ಷಿಪಣಿ, ಸ್ಟಾರ್ಮ್‌ ಶ್ಯಾಡೋ ಅಂತಾನೂ ಕರೀತಾರೆ. 1300 ಕೇಜಿ ತೂಕದ ದೈತ್ಯ 300 ಕಿಮೀ ದೂರದ ಶತ್ರುಗಳ ಸ್ಥಾವರಗಳ ಮೇಲೆ 450 ಕೇಜಿಯಷ್ಟು ಸ್ಪೋಟಕ ವಸ್ತುಗಳಿಂದ ನಿರ್ದಿಷ್ಟ ಗುರಿಯಿಂದ ದಾಳಿಮಾಡುತ್ತಿದ್ದರೆ ಅಲ್ಲಿಗೆ ಮುಗಿಯಿತು ಶತ್ರುಗಳ ಕಥೆ. ಇಸ್ಲಾಮಿಕ್ ಬಾಂಬುಗಳನ್ನು ಶೇಖರಿಸಿಟ್ಟಿರುವ ಕಹುಟಾ ಅಣುಸ್ಥಾವರವು ಸೇರಿದಂತೆ ಇಡೀ ಪಾಕಿಸ್ತಾನವೇ ಇದರ ಕಾರ್ಯಪರಿಧಿಯಲ್ಲಿ ಬರುತ್ತದೆ. ಸಿರಿಯಾದ ಐಸಿಸ್ ಪಡೆಗಳು ಹತವಾಗಿದ್ದೇ ಈ ಮಿಸೈಲುಗಳ ದಾಳಿಯಿಂದ.

ಇತ್ತೀಚಿನ ಗಲ್ವಾನ್ ಕಣಿವೆಯಲ್ಲಿ ಚೀನಾದ ದುಷ್ಕರ್ಮಿಗಳ ದುಸ್ಸಾಹಸಕ್ಕೆ ಪ್ರತಿಯಾಗಿ ಅವರಿಗೆಂದೇ ಭಾರತ ತುರ್ತಾಗಿ ಇನ್ನೊಂದು ಮಿಸೈಲ್ ಖರೀದಿಸಿದೆ, ಹೆಸರು ಹ್ಯಾಮರ್‌. ಪರ್ವತ ಶಿಖರಗಳಲ್ಲಿ brಕಟ್ಟಿರುವ ಬಂಕರುಗಳನ್ನು ಹುಡುಕಿಕೊಂಡು ಹೋಗಿ ಮಟಾಷ್ ಮಾಡುವ ಸಾಮರ್ಥ್ಯವುಳ್ಳದ್ದು. ಬಾಲಾಕೋಟಿನ ದಾಳಿಯಲ್ಲಿ ಪ್ರಯೋಗಿಸಿದ್ದ ಸ್ಪೈಸ್‌ ಮಿಸೈಲುಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆಯಂತೆ. ಇವುಗಳ ಕಾರ್ಯಪರಿಧಿ 60 ಕಿಮೀನಷ್ಟಿದೆ.

ಇನ್ನು ಹಿಂದೂ ಮಹಾಸಾಗರದಲ್ಲಿ ನಡೆಯಬಹುದಾದ ಕಾರ್ಯಾಚರಣೆಗೆ ರಫೇಲ್ ವಿಮಾನದಲ್ಲಿ ಎಎಂ 39 ಎಕ್ಸೋಸೆಟ್‌ ಕ್ಷಿಪಣಿಗಳನ್ನು ಅಳವಡಿಕೆ ಸಾಧ್ಯ. ಇವು ಚೀನಾದ ಹಡಗುಗಳ ಮೇಲೆ ದಾಳಿ ಮಾಡುವ ಸಮಯದಲ್ಲಿ ಕೆಲಸಕ್ಕೆ ಬರುತ್ತವೆ. ರಣನೀತಿಗೆ ತಕ್ಕಂತೆ ಲೇಸರ್ ಗೈಡೆಡ್ ಬಾಂಬುಗಳು, ನೆಕ್ಸ್ಟರ್‌ 30ಎಂ 79130 ಗನ್ನುಗಳನ್ನೂ ಅಳವಡಿಸಲಾಗಿದೆ.

ಅಂತರಿಕ್ಷದಲ್ಲೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವಿರುವುದರಿಂದ ರಫೇಲ್ ವಿಮಾನ ಸುಮಾರು ಹತ್ತು ಗಂಟೆಗಳ ಅವಧಿಯವರೆಗೂ ಇಷ್ಟೆಲ್ಲಾ ಕ್ಷಿಪಣಿಗಳನ್ನು ಹೊತ್ತುಕೊಂಡು ಹಾರಾಡುತ್ತಾ ಒಂದೊಂದೇ ಕ್ಷಿಪಣಿಗಳನ್ನು ಶತ್ರುಗಳ ಮೇಲೆ ಪ್ರಯೋಗಿಸುತ್ತಿದ್ದ ಜಲ್ವಂತ ನಿದರ್ಶನಗಳು ಈಗಾಗಲೇ ಸ್ಥಾಪಿತವಾಗಿವೆ. ಇದಕ್ಕೇ ಹೇಳೋದು ರಫೇಲಿನಿಂದ ರಣತಂತ್ರದ ದಿಕ್ಕು, ಆಯಾಮ ಊಹಿಸಲೂ ಸಾಧ್ಯವಿಲ್ಲದಷ್ಟು ಬದಲಾಗಿ ಹೋಗಲಿದೆ ಅಂತಾ.

ಬರಹ: ವಿಂಗ್ ಕಮಾಂಡರ್ ಸುದರ್ಶನ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.