Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ್‌ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ( IPS Officer) ತಲೆದಂಡವಾಗಿದೆ. ಹುಬ್ಬಳ್ಳಿ ಧಾರವಾಡ( Hubli Dharwad) ಡಿಸಿಪಿ ಎಂ.ರಾಜೀವ್‌ ಅವರನ್ನು ಅಮಾನತುಪಡಿಸಲಾಗಿದೆ.

ಹುಬ್ಬಳ್ಳಿ ಡಿಸಿಪಿ ರಾಜೀವ್‌ ಅಮಾನತುಪಡಿಸಲಾಗಿದೆ.
ಹುಬ್ಬಳ್ಳಿ ಡಿಸಿಪಿ ರಾಜೀವ್‌ ಅಮಾನತುಪಡಿಸಲಾಗಿದೆ.

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ವಿದ್ಯಾರ್ಥಿನಿ ಅಂಜಲಿ ಅಂಬಿಗೇರ್‌ ಹತ್ಯೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯ ತಲೆದಂಡವಾಗಿದೆ. ಹುಬ್ಬಳ್ಳಿ ಧಾರವಾಡ ನಗರದ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್‌ ಆಯುಕ್ತರಾಗಿರುವ ಐಪಿಎಸ್‌ ಅಧಿಕಾರಿ ಎಂ.ರಾಜೀವ್‌ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಇದೇ ಪ್ರಕರಣದಲ್ಲಿ ಇಬ್ಬರನ್ನು ಅಮಾನತುಪಡಿಸಲಾಗಿದೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ ಒಂದೇ ತಿಂಗಳ ಅವಧಿಯೊಳಗೆ ಇಬ್ಬರು ಯುವತಿಯರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇದೇ ಪ್ರಕರಣದಲ್ಲಿ ಹಾಲಿ ಪೊಲೀಸ್‌ ಆಯುಕ್ತರಾಗಿರುವ ರೇಣುಕಾ ಸುಕುಮಾರ್‌ ಅವರನ್ನು ಎತ್ತಂಗಡಿ ಮಾಡಿ ಹೊಸ ಆಯುಕ್ತರನ್ನು ನೇಮಿಸುವ ಸಾಧ್ಯತೆಯಿದೆ.

ನಾಲ್ಕು ದಿನದ ಹಿಂದೆ ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ್‌ ಳನ್ನು ಮನೆಯಲ್ಲಿ ಭೀಕರವಾಗಿ ಗಿರೀಶ್‌ ಎಂಬಾತ ಕೊಲೆ ಮಾಡಿ ಪರಾರಿಯಾಗಿದ್ದ. ಈ ಘಟನೆ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ನಂತರ ಮತ್ತೊಂದು ಘಟನೆ ತಲ್ಲಣ ಸೃಷ್ಟಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಿಫಲವಾಗಿರುವ ಆರೋಪದ ಮೇಲೆ ಡಿಸಿಪಿ ರಾಜೀವ್‌ ಅವರನ್ನು ಅಮಾನತು ಮಾಡಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದು ಇದರ ಮೊದಲೇ ಈ ಆದೇಶ ಜಾರಿಯಾಗಿದೆ.

ಗಿರೀಶ್‌ ಜೀವ ಬೆದರಿಕೆ ಹಾಕಿದ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ ಗಂಭೀರ ಆರೋಪ ಪೊಲೀಸರ ವಿರುದ್ದ ಕೇಳಿ ಬಂದಿತ್ತು. ಆಗಲೇ ಗಿರೀಶನ ವಿರುದ್ದ ಕ್ರಮ ಆಗಿದ್ದರೆ ಯುವತಿ ಬದುಕುಳಿಯುತ್ತಿದ್ದಳು ಎನ್ನುವುದು ಕುಟುಂಬದವರ ಹೇಳಿಕೆಯಾಗಿತ್ತು.

ಇದೇ ಪ್ರಕರಣದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಚಂದ್ರಶೇಖರಚಿಕ್ಕೋಡಿ ಹಾಗೂ ಸಿಬ್ಬಂದಿಯೊಬ್ಬರ ಅಮಾನತು ಕೂಡ ಮಾಡಲಾಗಿದೆ. ಈಗ ಐಪಿಎಸ್‌ ಅಧಿಕಾರಿಯ ತಲೆದಂಡವೂ ಆಗಿದೆ.

ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪೊಲೀಸ್‌ ಆಯುಕ್ತರ ವಿರುದ್ದವೂ ಅಸಮಾಧಾನ ಕೇಳಿ ಬಂದಿದ್ದು, ಅವರನ್ನು ಬದಲಿಸಿ ಡಿಐಜಿಯಾಗಿರುವ ಸುಧೀರ್‌ ರೆಡ್ಡಿ ಅವರನ್ನು ಹುಬ್ಬಳ್ಳಿ ಧಾರವಾರ ಪೊಲೀಸ್‌ ಆಯುಕ್ತರಾಗಿ ನೇಮಿಸುವ ಸಾಧ್ಯತೆಯಿದೆ. ಒಂದೆರಡು ದಿನದಲ್ಲಿ ಆದೇಶ ಆಗಬಹುದು ಎನ್ನಲಾಗುತ್ತಿದೆ.

ಇತರೆ ಬೆಳವಣಿಗೆಗಳು

  • ಇದೇ ಪ್ರಕರಣದಲ್ಲಿ ಸಹೋದರಿ ಹತ್ಯೆಯಿಂದ ಮನನೊಂದ ಅಂಜಲಿ ಅಕ್ಕ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಶನಿವಾರ ಮನೆಯಲ್ಲಿ ಫಿನಾಯಿಲ್‌ ಅನ್ನು ಸೇವಿಸಿದ್ದ ಯಶೋಧಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  • ಪ್ರಕರಣದ ಆರೋಪಿ ಗಿರೀಶ್‌ ವಿರುದ್ದ ಮತ್ತೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ದಾಖಲಾಗಿದೆ. ಆತ ಹತ್ಯೆಯಾದ ಯುವತಿ ಅಂಜಲಿಯಿಂದ ಹಿಂದೆಯೇ ಹಣ ಪಡೆದಿದ್ದ. ಆನಂತರ ಚಿನ್ನಾಭರಣಗಳನ್ನೂ ಪಡೆದುಕೊಂಡಿದ್ದ. ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಯುವತಿ ಕುಟುಂಬಸ್ಥರು ದೂರು ನೀಡಿದ್ದಾರೆ.

ಇದನ್ನೂ ಓದಿರಿ: RCB vs CSK highlights IPL 2024: ಸಿಎಸ್‌ಕೆ ಹೊರದಬ್ಬಿ ಭರ್ಜರಿಯಾಗಿ ಪ್ಲೇಆಫ್‌ ಲಗ್ಗೆ ಹಾಕಿದ ಆರ್‌ಸಿಬಿ

  • ಅಂಜಲಿಯನ್ನು ಕೊಂದು ಪರಾರಿಯಾಗಿ ರೈಲಿನಲ್ಲಿ ಹೋಗುವಾಗ ಹಾರಿ ಬಿದ್ದು ಗಾಯ ಮಾಡಿಕೊಂಡು ಸೆರೆ ಸಿಕ್ಕಿರುವ ಗಿರೀಶನಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಸುಧಾರಿಸದ ನಂತರ ವಿಚಾರಣೆ ನಡೆಸಲಾಗುತ್ತಿದೆ ಎಂದ ಪೊಲೀಸ್‌ ಮೂಲಗಳು ತಿಳಿಸಿವೆ.
  • ಅಂಜಲಿ ನಿವಾಸಕ್ಕೆ ಧಾರವಾಡ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹಾಗೂ ಶಾಸಕ ಪ್ರಸಾದ್‌ ಅಬ್ಬಯ್ಯ ಭೇಟಿ ನೀಡಿದ್ದರು. ಕುಟುಂಬದವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರವನ್ನೂ ನೀಡಿದರು.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.