HD Kumaraswamy on farmers: ನಾನಿದ್ದೇನೆ, ನಾನಿನ್ನೂ ಬದುಕಿದ್ದೇನೆ; ಸಾಲಕ್ಕೆ ಹೆದರಿ ರೈತರು ಸಾವಿಗೆ ಶರಣಾಗಬೇಡಿ: ಮಾಜಿ ಸಿಎಂ
ನಾನಿದ್ದೇನೆ, ನಾನಿನ್ನೂ ಬದುಕಿದ್ದೇನೆ. ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
ಸೇಡಂ/ಕಲಬುರಗಿ: ಬಿಜೆಪಿ ಸರ್ಕಾರದಿಂದ 2 ಲಕ್ಷ ರೈತ ಕುಟುಂಬಗಳಿಗೆ ಅನ್ಯಾಯವಾಗಿದೆ. ಸಾಲ ಮನ್ನಾದ 7,000 ಕೋಟಿ ರೂ. ಬೇರೆಡೆಗೆ ವರ್ಗ ಮಾಡಲಾಗಿದೆ. ಇವರ ಸಾಲವನ್ನು ನಾನು ಮನ್ನಾ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಸೇಡಂನಲ್ಲಿಂದು ಮಾತನಾಡಿರುವ ಹೆಚ್ಡಿಕೆ, ನಾನಿದ್ದೇನೆ, ನಾನಿನ್ನೂ ಬದುಕಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಸೇರಿ ಯಾರೊಬ್ಬರ ಪ್ರಾಣವೂ ಹೋಗಬಾರದು. ಚುನಾವಣೆ ನಂತರ ಜಾತ್ಯತೀತ ಜನದಾಳ ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ಅನ್ನದಾತರ ನೆರವಿಗೆ ಧಾವಿಸಿ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.
2018ರಲ್ಲಿ ನಾನು 25,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೆ. ಆದರೆ, ನನ್ನ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಮೊತ್ತದಲ್ಲಿ ಸುಮಾರು 7000 ಕೋಟಿ ರೂಪಾಯಿ ಸಾಲ ಮನ್ನಾ ಹಣವನ್ನು ರಾಷ್ಟ್ರೀಯ ಬ್ಯಾಂಕುಗಳಿಗೆ ಜಮೆ ಮಾಡದೆ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡಿತು. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಸಾಲ ಮನ್ನಾ ಫಲಾನುಭವಿಗಳಿಗೆ ಅನ್ಯಾಯ ಆಯಿತು ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕುಮಾರಣ್ಣ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮನ್ನಾ ಮಾಡುತ್ತಾರೆ
ರಾಮನಗರದಲ್ಲಿ ನಡೆಯಿದ್ದ ಪಂಚರತ್ನ ರಥಯಾತ್ರೆ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ರೈತರು ಎಷ್ಟು ಬೇಕಾದರೂ ಸಾಲ ತೆಗೆದುಕೊಳ್ಳಿ. ನಿಮ್ಮ ಕುಮಾರಣ್ಣ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಮನ್ನಾ ಮಾಡುತ್ತಾರೆ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
2022ರ ಡಿಸೆಂಬರ್ 20 ರಂದು ರಾಮನಗರದಲ್ಲಿ ನಡೆದಿರುವ ಪಂಚರತ್ನ ರಥಯಾತ್ರೆ ವೇಳೆ ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ ಈ ರೀತಿ ರೈತರಿಗೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಈಗ ಎಷ್ಟು ಬೇಕಾದರೂ ಸಾಲ ತೆಗೆದುಕೊಳ್ಳಿ ನೀವು ವೋಟ್ ಹಾಕಿ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಆ ಸಾಲವನ್ನು ಕುಮಾರಸ್ವಾಮಿ ಅವರು ಮನ್ನಾ ಮಾಡುತ್ತಾರೆ ಎಂದಿದ್ದರು.
ಅನಿತಾ ಕುಮಾರಸ್ವಾಮಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕರು ವಿಡಿಯೋವನ್ನು ಷೇರ್ ಮಾಡಿ ಹೇಳಿಕೆಯನ್ನು ಟೀಕಿಸಿದ್ದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಮತ್ತೆ ರೈತ ಆತ್ಮಹತ್ಯೆಗಳು ಕಳವಳಕಾರಿ
ಡಬಲ್ ಇಂಜಿನ್ ಸರ್ಕಾರ ಕಾಲದಲ್ಲಿ ಮತ್ತೆ ರೈತ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಅನ್ನದಾತ ಸದಾ ಆತಂಕದಲ್ಲೇ ಇದ್ದಾರೆ. ಇದಕ್ಕೆ ಕಾರಣವಾದ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನಡೆ ಅತ್ಯಂತ ಅಕ್ಷಮ್ಯ ಎಂದು ಹೆಚ್ ಡಿ ಕುಮಾರಸ್ವಾಮಿ ಇವತ್ತು ಕಿಡಿ ಕಾರಿದ್ದರು. ಇಧೀಗ ಸೇಡಂನಲ್ಲಿ ಮಾತನಾಡಿರುವ ಹೆಚ್ಡಿಕೆ, ನಾನಿದ್ದೇನೆ, ನಾನಿನ್ನೂ ಬದುಕಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಸೇರಿ ಯಾರೊಬ್ಬರ ಆತ್ಮಹತ್ಯೆ ಮಾಡಿಕೂಳ್ಳಬಾರದು ಎಂದಿದ್ದಾರೆ.