VS Ugrappa on PM Modi: 'ಆಗಾಗ ಮೋದಿ ಅವರನ್ನು ಆಧುನಿಕ ಭಸ್ಮಾಸುರರೆಂದು ಕರೆಯುತ್ತಿರುತ್ತೇನೆ' ಕಾರಣ ನೀಡಿದ ವಿಎಸ್ ಉಗ್ರಪ್ಪ
ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ಆಗಾಗ ಆಧುನಿಕ ಭಸ್ಮಾಸುರರು ಎಂದು ಕರೆಯುತ್ತಿರುತ್ತೇನೆ ಎಂದು ವಿ ಎಸ್ ಉಗ್ರಪ್ಪ ಹೇಳಿದ್ದಾರೆ. ಏನು ಆ ಕಾರಣ ಅನ್ನೋದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿದ್ಯಾರ್ಥಿ ವೇತನ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ಶೇಕಡ 75ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡ 25 ರಷ್ಟು ನೀಡುತ್ತಿತ್ತು. ಈಗ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ನಂತರ ಈ ಅನುಪಾತ 60:40 ರಷ್ಟು ಆಗಿದೆ ಎಂಬ ಮಾಹಿತಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿಎಸ್ ಉಗ್ರಪ್ಪ ಹೇಳಿದ್ದಾರೆ.
ನಿನ್ನೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆದರೆ ಇಲ್ಲಿ ಆಘಾತಕಾರಿ ವಿಚಾರ ಏನೆಂದರೆ, ಒಂದರಿಂದ ಎಂಟನೇ ತರಗತಿಯವರೆಗಿನ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿಯವರು ಸರ್ಕಾರ ನಿಲ್ಲಿಸಿದ್ದಾರೆ. ಮೋದಿ ಅವರ ಸರ್ಕಾರ ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ಹಾಗಾಗ ಆಧುನಿಕ ಭಸ್ಮಾಸುರರು ಎಂದು ಕರೆಯುತ್ತಿರುತ್ತೇನೆ ಎಂದು ವಿ ಎಸ್ ಉಗ್ರಪ್ಪ ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ
ರಾಜ್ಯ ಹಾಗೂ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದ್ದು ಪ್ರಧಾನಿ ಮೋದಿಯವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರ ನಡೆಸುತ್ತಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ. ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವರಿಂದ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಥಮಿಕ ಹಾಗೂ ಮಧ್ಯಮ ಶಾಲೆಗಳಲ್ಲಿ 22.56 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 14.89 ಲಕ್ಷ ಶಾಲೆಗಳಲ್ಲಿ ಈ ಮಕ್ಕಳು ಕಲಿಯುತ್ತಿದ್ದಾರೆ. ಅದರಲ್ಲಿ 10.22 ಲಕ್ಷ ಸರ್ಕಾರಿ ಶಾಲೆಗಳು ಆಗಿವೆ. ಈ ಶಾಲೆಗಳಲ್ಲಿ ಗ್ರಾಮೀಣ ಭಾಗದ ಹಾಗೂ ಎಲ್ಲಾ ವರ್ಗದ ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿತ್ತು.
ಕಾಂಗ್ರೆಸ್ ಅವಧಿಯಲ್ಲಿ ಸಂವಿಧಾನಕ್ಕೆ ಆರ್ಟಿಕಲ್ 21ಎ ಮೂಲಕ ಶಿಕ್ಷಣ ಹಕ್ಕು ತರುವ ಮೂಲಕ ಸಮಾಜದ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತೆ ಮಾಡಲಾಗಿತ್ತು. ದೇಶದ ಮುಂದಿನ ಶಿಲ್ಪಿಗಳ ಆಗುವಂತಹ ಮಕ್ಕಳ ಭವಿಷ್ಯ ಹಾಗೂ ಬದುಕಿನ ಜೊತೆ ಬಿಜೆಪಿ ನಾಯಕರು ಚೆಲ್ಲಾಟವಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇವೆ ಎಂದು ಉಗ್ರಪ್ಪ ಹೇಳಿದ್ದಾರೆ.
ಶ್ರೀಮಂತರ ಸಾವಿರಾರು ಕೋಟಿ ಸಾಲ ಮನ್ನಾ
ಮೋದಿ ಅವರ ಸರ್ಕಾರ 2015 ರಿಂದ 2021 ರವರೆಗೆ ಸಂಸತ್ತಿನಲ್ಲಿ ನೀಡಲಾಗಿರುವ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಶ್ರೀಮಂತರ ಸುಮಾರು 10 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲಾ ಶ್ರೀಮಂತರ ಪರವಾಗಿ ಇದೆ ಎಂಬುದಕ್ಕೆ ಇದೇ ಸಾಕ್ಷಿ.
2017-18ರಲ್ಲಿ 1.61 ಲಕ್ಷ ಕೋಟಿಯಷ್ಟು, 2018-19 ರಲ್ಲಿ 2.36 ಲಕ್ಷ ಕೋಟಿ, 2019-20 ರಲ್ಲಿ 2.34 ಲಕ್ಷ ಕೋಟಿ, 2020-21ರಲ್ಲಿ 2.02 ಲಕ್ಷ ಕೋಟಿ, 2021-22 ರಲ್ಲಿ 1.57 ಲಕ್ಷ ಕೋಟಿ ಶ್ರೀಮಂತ ಉದ್ಯಮಿಗಳ ಸಾಲ ಮನ್ನ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಹಿಂದೂ ಪ್ರಾಜೆಕ್ಟ್ ಲಿಮಿಟೆಡ್ ಎಂಬ ಕಂಪನಿ 835 ಕೋಟಿ ಸಾಲ ಮಾಡಿದ್ದು, ಅದರಲ್ಲಿ 830 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಕಿಂಗ್ ಫಿಶರ್ ಏರ್ಲೈನ್ಸ್ ವಿವಿಧ ಬ್ಯಾಂಕುಗಳಲ್ಲಿ 1,335 ಕೋಟಿ ಸಾಲ ಮಾಡಿದೆ. ಇದರಲ್ಲಿ 1,335 ಕೋಟಿಯನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ಟ್ರಾನ್ಸ್ಪರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,217 ಕೋಟಿ ಸಾಲ ಮಾಡಿದ್ದು, ಸಂಪೂರ್ಣವಾಗಿ ಈ ಮೊತ್ತವನ್ನು ಮನ್ನಾ ಮಾಡಿದೆ. ಕೆಎಸ್ಐ ಲಿಮಿಟೆಡ್ ಕಂಪನಿಯ 859 ಕೋಟಿ, ಜೂಮ್ ಡೆವಲಪರ್ಸ್ ಕಂಪನಿಯ 1,968 ಕೋಟಿ, ರೋಡ್ ಮ್ಯಾಕ್ ಗ್ಲೋಬಲ್ ಕಂಪನಿಯ 1,302 ಕೋಟಿ ರೂ. ಮನ್ನಾ ಆಗಿದೆ. ಹೀಗೆ ಹಲವು ಕಂಪನಿಗಳ ಸಾಲ ಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಕೇವಲ 400 ಕೋಟಿ ಮಾತ್ರ. ಇದನ್ನು ನೀಡಲು ಸಾಧ್ಯವಿಲ್ಲ ಎಂದರೆ ಇವರ ಆದ್ಯತೆ ಕೇವಲ ಹಣವಂತರು ಶ್ರೀಮಂತರು ಮಾತ್ರವೇ ಹೊರತು ಬಡವರು, ಪರಿಶಿಷ್ಟರು ಅಲ್ಲ ಎಂದಿದ್ದಾರೆ.
ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಸಾಧ್ಯವಾಗದ ಸರ್ಕಾರ, ಅದಾನಿ ಅಂಬಾನಿ ಸೇರಿದಂತೆ ಕೆಲವೇ ಕೆಲವು ಮಂದಿಯ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿದ್ದಾರೆ. ಇವರು ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಈ ಸಮುದಾಯಗಳ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ ಎಲ್ಲಾ ಇಲಾಖೆಗಳಲ್ಲಿ ಹಣವನ್ನು ಮೀಸಲಿಡುವ ಕಾನೂನನ್ನು ಜಾರಿಗೆ ತರಲಾಯಿತು. ಇಂತಹ ಕಾನೂನು ಇರುವುದು ದೇಶದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಾತ್ರ.
ಅದರ ಪರಿಣಾಮವಾಗಿ ಶೇಕಡ 17ರಷ್ಟು ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸುಮಾರು 30 ಸಾವಿರ ಕೋಟಿಗಿಂತ ಹೆಚ್ಚು ಅನುದಾನವನ್ನು ಪ್ರತಿ ವರ್ಷ ನೀಡಲಾಗುವುದು. ಈ ಅನುದಾನವನ್ನು ಆಯಾ ವರ್ಷ ಬಳಕೆ ಮಾಡಿಕೊಳ್ಳಬೇಕು. ಹಾಗೂ ಈ ಹಣವನ್ನು ಬೇರೆ ವಿಚಾರಗಳಿಗೆ ವರ್ಗಾವಣೆ ಮಾಡಬಾರದು ಎಂದು ಕಾನೂನಿನಲ್ಲಿ ತಿಳಿಸಿದೆ. ಒಂದು ವೇಳೆ ಈ ಅನುದಾನ ಬಳಕೆ ಆಗದಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಕಾನೂನನ್ನು ತರಲಾಗಿದೆ ಎಂದು ಹೇಳಿದರು.