Rohini Sindhuri Vs D Roopa: ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ಗೆ ವರ್ಗಾವಣೆ ಶಿಕ್ಷೆ ನೀಡಿದ ರಾಜ್ಯ ಸರಕಾರ, ಎಲ್ಲಿಗೆ ಟ್ರಾನ್ಸ್ಫಾರ್?
Rohini Sindhuri and D Roopa Transferred: ರೋಹಿಣಿ ಸಿಂಧೂರಿ, ಡಿ.ರೂಪಾ ಮೌದ್ಗಿಲ್ ಹಾಗೂ ಡಿ.ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಐಎಎಸ್ ವರ್ಸಸ್ ಐಪಿಎಸ್ ಎಂದೇ ಕುಖ್ಯಾತಿ ಪಡೆದಿದ್ದ ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ ಅವರ ಸಂಘರ್ಷವು ಇಂದು ಮಹತ್ವದ ತಿರುವು ಪಡೆದಿದೆ. ಈ ವಿಷಯದ ಕುರಿತು ಸರಕಾರ ಸೈಲೆಂಟ್ ಆಗಿರುವುದೇಕೆ ಎಂಬ ಪ್ರಶ್ನೆಗಳು ಏಳುತ್ತಿರುವ ನಡುವೆಯೇ ಇವರಿಬ್ಬರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ.
ರೋಹಿಣಿ ಸಿಂಧೂರಿ, ಡಿ.ರೂಪಾ ಮೌದ್ಗಿಲ್ ಹಾಗೂ ಡಿ.ರೂಪಾ ಅವರ ಪತಿ ಮನೀಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಮನೀಶ್ ಮೌದ್ಗಿಲ್ ಅವರು ಬೆಂಗಳೂರಿನ ಸರ್ವೇ ಸೆಟಲ್ಮೆಂಟ್ ಆಂಡ್ ಲ್ಯಾಂಡ್ ರೆಕಾರ್ಡ್ಸ್ ವಿಭಾಗದಲ್ಲಿ ಕಮಿಷನರ್ ಆಗಿದ್ದರು. ಅವರನ್ನು ತಕ್ಷಣದಿಂದ ಅನ್ವಯವಾಗುವಂತೆ, ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಮನೀಶ್ ಮೌದ್ಗೀಲ್ ಅವರು ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರಿನ ಸರ್ವೇ ಸೆಟಲ್ಮೆಂಟ್ ಆಂಡ್ ಲ್ಯಾಂಡ್ ರೆಕಾರ್ಡ್ಸ್ ವಿಭಾಗಕ್ಕೆ 2012ನೇ ಬ್ಯಾಚ್ನ ಐಎಎಸ್ ಅಧಿಕಾರಿ ಸಿಎನ್ ಶ್ರೀಧರ ಅವರನ್ನು ನೇಮಕ ಮಾಡಲಾಗಿದೆ.
ರೂಪಾ ಡಿ. ಐಪಿಎಸ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ಸ್ಟೇಟ್ ಹ್ಯಾಂಡಿಕ್ರಾಫ್ಟ್ ಡೆವಲಪ್ಮೆಂಟ್ ಕಾರ್ಪೋರೇಷನ್ಗೆ 2013ನೇ ಬ್ಯಾಚ್ನ ಐಎಎಸ್ ಅಧಿಕಾರಿ ಭಾರತಿ ಡಿ ಅವರನ್ನು ನೇಮಕ ಮಾಡಲಾಗಿದೆ.
2016ನೇ ಬ್ಯಾಚ್ನ ಐಎಎಸ್ ಅಧಿಕಾರಿ ದರ್ಶನ್ ಎಚ್ವಿ ಅವರನ್ನು ತುಮಕೂರು ಮುನ್ಸಿಪಾಲ್ ಕಾರ್ಪೊರೇಷನ್ಗೆ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಗಾನಂದ ಅವರನ್ನು ವರ್ಗಾವಣೆ ಮಾಡಲಾಗಿದೆ.
ರೋಹಿಣಿ ಸಿಂಧೂರಿ ಮತ್ತು ಡಿ. ರೂಪಾ ಮೌದ್ದಿಲ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಅವರನ್ನು ಸದ್ಯ ಯಾವುದೇ ವಿಭಾಗಕ್ಕೂ ನಿಯೋಜಿಸಲಾಗಿಲ್ಲ.
ರೋಹಿಣಿ ಸಿಂಧೂರಿ ಅವರು ಕೆಲವು ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ ಎನ್ನಲಾದ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಇತ್ತೀಚೆಗೆ ರೂಪಾ ಡಿ ಮೌದ್ಗಿಲ್ ಪ್ರಕಟಿಸಿದ್ದರು. "ಐಎಎಸ್ ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ದೇಶದ ಇತಿಹಾಸದಲ್ಲಿ ಮೊದಲ ಬಾರಿ ಐಎಎಸ್ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ. ರಾಜಕಾರಣಿ ಬಳಿ ಐಎಎಸ್ ಅಧಿಕಾರಿ ಹೋಗಿರುವುದು ಖೇದ ಅನಿಸುತ್ತಿದೆ ಎಂದು ಫೇಸ್ಬುಕ್ನಲ್ಲಿ ರೂಪಾ ಅವರು ಬರೆದಿದ್ದರು.
ಈ ಕುರಿತು ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ನಿನ್ನೆ ಇವರಿಬ್ಬರಿಗೂ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ನೋಟಿಸ್ ನೀಡಿದ್ದರು.