ಭಾರತೀಯ ಅಂಚೆ ಇಲಾಖೆ: ಮೇ 1ರಿಂದ ಪಠ್ಯಪುಸ್ತಕ, ಸಾಹಿತ್ಯ ಪುಸ್ತಕ ಕಳುಹಿಸಲು ಜ್ಞಾನ ಅಂಚೆ ಆರಂಭ
ಪಠ್ಯಪುಸ್ತಕ ಹಾಗೂ ಸಾಹಿತ್ಯ ಪುಸ್ತಕಗಳನ್ನು ಕಳುಹಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ‘ಜ್ಞಾನ ಅಂಚೆ‘ ಸೇವೆಯನ್ನು ಆರಂಭಿಸುತ್ತಿದೆ. ಇದು ಮೇ 1 ರಿಂದ ಕಾರ್ಯಾರಂಭವಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು: ಪಠ್ಯಪುಸ್ತಕ, ಸಾಹಿತ್ಯ ಪುಸ್ತಕಗಳು, ಗೈಡ್ಗಳನ್ನು ಕಳುಹಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಆರಂಭಿಸಿದ್ದ ‘ಜ್ಞಾನ ಅಂಚೆ‘ ಸೇವೆ ಮೇ 1 ರಿಂದ ಪ್ರಾರಂಭವಾಗಲಿದೆ.
ಮೊದಲೆಲ್ಲಾ ಈ ಪುಸ್ತಕಗಳನ್ನು ಭಾರತೀಯ ಅಂಚೆ ಇಲಾಖೆಯ ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ಮೂಲಕ ಕಳುಹಿಸಬೇಕಿತ್ತು. 2023ರಲ್ಲಿ ಭಾರತೀಯ ಅಂಚೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 2024ರಲ್ಲಿ ಬುಕ್ ಪ್ಯಾಕೆಟ್ ಸೇವೆಯನ್ನು ರದ್ದು ಮಾಡಲಾಗಿತ್ತು. ಬುಕ್ ಪೋಸ್ಟ್ ಸೇವೆಯ ಹೆಸರು ಬದಲಾವಣೆಯೊಂದಿಗೆ ದರವನ್ನು ಕೂಡ ಹೆಚ್ಚಳ ಮಾಡಲಾಗಿತ್ತು.
ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ಧತಿಯಿಂದ ಸಾಹಿತ್ಯ ಪುಸ್ತಕಗಳನ್ನು ಕಳುಹಿಸಲು ಕಷ್ಟಸಾಧ್ಯವಾಗಿತ್ತು. ಇದರ ಬಗ್ಗೆ ಪುಸ್ತಕ ಪ್ರಕಾಶಕರು ಹಾಗೂ ಪ್ರಕಾಶಕ ಸಂಘದವರು ಅಸಮಾಧಾನ ಹೊರ ಹಾಕಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಂಚೆ ಇಲಾಖೆಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈಗ ಪುನಃ ಭಾರತೀಯ ಅಂಚೆ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು ಕೇಂದ್ರ ಸರ್ಕಾರ.
ಈ ಹಿನ್ನೆಲೆಯಲ್ಲಿ ಜ್ಞಾನ ಅಂಚೆ ಸೇವೆಯ ಆರಂಭಕ್ಕೆ ಮುಂದಾಗಿದೆ. ಈ ಸೇವೆಯು ಕೇವಲ ಪಠ್ಯಪುಸ್ತಕ ಹಾಗೂ ಸಾಹಿತ್ಯ ಪುಸ್ತಕಗಳನ್ನು ಕಳುಹಿಸುವ ಸಲುವಾಗಿ ಮಾತ್ರ ಮೀಸಲಿರಿಸಲಾಗಿದೆ. ಈ ಸೇವೆಯ ಅಡಿ ಪುಸ್ತಕಗಳನ್ನು ಕಳುಹಿಸುವವರು ತಾವು ಕಳುಹಿಸುವ ಬಾಕ್ಸ್ ಅಥವಾ ಪಾರ್ಸೆಲ್ ಮೇಲೆ ಜ್ಞಾನ ಅಂಚೆ ಎಂಬುದನ್ನು ತಪ್ಪದೇ ನಮೂದಿಸಿ ಇರಬೇಕು. ಇದರೊಂದಿಗೆ ಯಾರು ಕಳುಹಿಸುತ್ತಿದ್ದಾರೆ, ಯಾರಿಗೆ ಕಳುಹಿಸುತ್ತಿದ್ದಾರೆ, ಪ್ರಕಾಶಕರು ಯಾರು ಎಂಬುದನ್ನೆಲ್ಲಾ ಕಡ್ಡಾಯವಾಗಿ ಬರೆಯಬೇಕು. ಜೊತೆಗೆ ಸಂಪೂರ್ಣ ವಿಳಾಸವನ್ನೂ ಸ್ವಷ್ಟವಾಗಿ ನಮೂದಿಸಬೇಕು. ಅಂಚೆ ಇಲಾಖೆಯು ಜ್ಞಾನ ಅಂಚೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಅದರ ಪ್ರಕಾರ ಈ ಸೇವೆಯ ಅಡಿಯಲ್ಲಿ ಕನಿಷ್ಠ 300 ಗ್ರಾಂನಿಂದ ಗರಿಷ್ಠ 5 ಕೆಜಿವರೆಗೆ ಮಾತ್ರ ಕಳುಹಿಸಬಹುದಾಗಿದೆ.
ಈ ಷರತ್ತುಗಳನ್ನು ಉಲ್ಲಂಘಿಸಿದರೆ ಅಂತಹವುಗಳನ್ನು ಭಾರತೀಯ ಅಂಚೆ ಪಾರ್ಸೆಲ್ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಅಂತಹವುಗಳಿಗೆ ದಂಡ ಕೂಡ ವಿಧಿಸಲಾಗುತ್ತದೆ.
ವಿಭಾಗ