ಕರ್ನಾಟಕ-ಮಹಾರಾಷ್ಟ್ರದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ 24 ವರ್ಷದಲ್ಲೇ ಹುತಾತ್ಮರಾದ ವೀರ ಸಿಂಧೂರ ಲಕ್ಷ್ಮಣ ಗೊತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ-ಮಹಾರಾಷ್ಟ್ರದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ 24 ವರ್ಷದಲ್ಲೇ ಹುತಾತ್ಮರಾದ ವೀರ ಸಿಂಧೂರ ಲಕ್ಷ್ಮಣ ಗೊತ್ತೆ

ಕರ್ನಾಟಕ-ಮಹಾರಾಷ್ಟ್ರದಲ್ಲಿ ಬ್ರಿಟೀಷರ ವಿರುದ್ದ ಹೋರಾಡಿ 24 ವರ್ಷದಲ್ಲೇ ಹುತಾತ್ಮರಾದ ವೀರ ಸಿಂಧೂರ ಲಕ್ಷ್ಮಣ ಗೊತ್ತೆ

ಆಪರೇಷನ್‌ ಸಿಂಧೂರ ಎನ್ನುವ ಹೋರಾಟದ ವೇಳೆ ನೆನಪಾದೋರು ಶತಮಾನದ ಹಿಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಿಂಧೂರ ಲಕ್ಷ್ಮಣ. ಆ ಸಿಂಧೂರಕ್ಕೂ ಈ ಸಿಂಧೂರಕ್ಕೂ ಏನು ಹೋಲಿಕೆ ಇದೆ.

ಸಿಂಧೂರ ಲಕ್ಷ್ಮಣ ಹೆಸರು ಅಜರಾಮರ
ಸಿಂಧೂರ ಲಕ್ಷ್ಮಣ ಹೆಸರು ಅಜರಾಮರ

ವಿಜಯಪುರ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆಸಿದ ಉಗ್ರರ ದಾಳಿ ನಂತರ ಭಾರತವೂ ಆಪರೇಷನ್‌ ಸಿಂಧೂರ ಎನ್ನುವ ಹೆಸರಿನಲ್ಲಿ ಉತ್ತರವನ್ನೇ ಬುಧವಾರ ಬೆಳ್ಳಂಬೆಳಿಗ್ಗೆ ನೀಡಿದೆ. ಸಿಂಧೂರ ಎನ್ನುವ ಕುರಿತು ಎಲ್ಲೆಡೆ ವ್ಯಾಪರ ಚರ್ಚೆಯೂ ನಡೆದಿದೆ. ಅದರಲ್ಲೂ ಕುಟುಂಬದವರೇ ಇದ್ದ, ಪುರುಷರನ್ನೇ ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ದಾಳಿ ಅದಾಗಿತ್ತು. ಈ ಕಾರಣದಿಂದಲೇ ಈಗ ನಡೆಸಿದ ಉಗ್ರರ ಮೇಲಿನ ದಾಳಿಯ ಕಾರ್ಯಾಚರಣೆಗೆ ನೀಡಿದ್ದು ಆಪರೇಷನ್ ಸಿಂಧೂರ. ಅದರಲ್ಲೂ ಪತಿಯನ್ನು ಕಳೆದುಕೊಂಡ ಹೆಣ್ಮಕ್ಕಳ ಆತ್ಮಾಭಿಮಾನ ಹೆಚ್ಚಿಸುವ ದಾಳಿಯಿದು. ಆಪರೇಷನ್‌ ಸಿಂಧೂರ ಎಂದ ತಕ್ಷಣ ನೆನಪಾಗಿದ್ದು ಸಿಂಧೂರ ಲಕ್ಷ್ಮಣ ಎಂಬ ಕರ್ನಾಟಕ- ಮಹಾರಾಷ್ಟ್ರ ಭಾಗದ ಗಡಿ ಹೋರಾಟಗಾರ. ಸಿಂಧೂರ ಲಕ್ಷ್ಮಣ ಕುರಿತು ಕನ್ನಡದಲ್ಲಿ ಚಿತ್ರವೂ ಬಂದಿದೆ.ನಾಟಕಗಳೂ ಕೂಡ ಜನಪ್ರಿಯವಾಗಿವೆ.

ಲಕ್ಷ್ಮಣ ಎಂಬ ಅಪ್ರತಿಮ ಹೋರಾಟಗಾರನ ಹೆಸರಿನ ಹಿಂದೆ ಸೇರಿಕೊಂಡ ಸಿಂಧೂರ ಎನ್ನುವ ಮೂಲ ಯಾವುದು. ಈಗಿನ ಆಪರೇಷನ್‌ ಸಿಂಧೂರಕ್ಕೂ ಏನಾದರೂ ನಂಟು ಇರಬಹುದೇ ಎನ್ನುವ ಪ್ರಶ್ನೆ ಎದುರಾಗಬಹುದು. ಆದರೆ ಸಿಂಧೂರ ಎನ್ನುವುದು ಲಕ್ಷ್ಮಣ ಹುಟ್ಟಿದ ಊರಿನ ಹೆಸರು. ಅದು ಸದ್ಯ ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ ಜಿಲ್ಲೆಯ, ನಮ್ಮ ವಿಜಯಪುರಕ್ಕೆ ಹೊಂದಿಕೊಂಡಿರುವ ಜತ್‌ ತಾಲ್ಲೂಕಿನ ಒಂದು ಹಳ್ಳಿಯ ಹೆಸರು. ಇದು ಮಹಾರಾಷ್ಟ್ರ ಭಾಗವಾಗಿದ್ದರೂ ಸಿಂಧೂರ ಸಹಿತ ಹಲವು ಹಳ್ಳಿಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆಯೇ ಅಧಿಕ. ಈ ಗ್ರಾಮದಲ್ಲಿ ನಾಯಕ ಜನಾಂಗದ ಸಾಬಣ್ಣ ಮತ್ತು ನರಸವ್ವ ಎಂಬ ದಂಪತಿಗೆ ಜನಿಸಿದ ಸಿಂಧೂರ ಲಕ್ಷ್ಮಣ ಅಪ್ಪಟ ಹೋರಾಟಗಾರ. 1898ರಲ್ಲಿ ಸಿಂಧೂರ ಗ್ರಾಮದಲ್ಲಿ ಜನಿಸಿದ ಲಕ್ಷ್ಮಣ ಬ್ರಿಟೀಷರ ನೀತಿಯ ವಿರುದ್ದ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಹೋರಾಟ ಮಾಡಿಕೊಂಡು ಬಂದವರು. ಕ್ರಾಂತಿಗೆ ಹೆಸರುವಾಗಿದ್ದವರು.

ಮಹಾತ್ಮಗಾಂಧಿ ಅವರು ಆಗ ಅಸಹಕಾರ ಚಳವಳಿಗೆ ಗಟ್ಟಿ ದನಿಯಾಗದ್ದರು. ಎಲ್ಲೆಡೆ ಅಸಹಾಕಾರ ಚಳಿವಳಿ ಜೋರಾಗಿತ್ತು. ಖಜಾನೆಯಿಂದ ಹಣ ಲೂಟಿ ಮಾಡಿ ಜನರಿಗೆ ಹಂಚಿದ ಅದೆಷ್ಟೋ ಘಟನೆಗಳಿವೆ. ಆಗ ಸಿಂಧೂರ ಲಕ್ಷ್ಮಣ ಕೂಡ ಇದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ. ಸ್ಥಳೀಯವಾಗಿ ಗುಂಪುಗಳನ್ನು ಕಟ್ಟಿಕೊಂಡು ಹೋರಾಟ ನಡೆಸಿದ್ದ ಘಟನೆಗಳು ಇತಿಹಾಸ ಪುಟದಲ್ಲಿವೆ. 1922ಲ್ಲಿ ಭಾರತದಲ್ಲಿನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂಗ್ರಾಮ, ಬ್ರಿಟೀಷರ ವಿರುದ್ದ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದ ಲಕ್ಷ್ಮಣ ಮೇಲೆ ಕಣ್ಣಿಡಲಾಗಿತ್ತು. ಬ್ರಿಟೀಷರು ನಡಸಿದ ಕಾರ್ಯಾಚರಣೆ ವೇಳೆ ಲಕ್ಷ್ಮಣ ಜೀವ ಕಳೆದುಕೊಂಡಾಗ ಬರೀ 24 ವರ್ಷ. ಅದೂ ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಹತ್ತಿರದ ತೆಗ್ಗಿಯ ವೆಂಕಪ್ಪಗೌಡರಿಗೂ ಮತ್ತು ಲಕ್ಷ್ಮಣನಿಗೂ ಗೆಳೆತನವಿತ್ತು.ಲಕ್ಷ್ಮಣ ತೆಗ್ಗಿಗೆ ಬಂದಾಗ ಇಲ್ಲಿಯೇ ಬ್ರಿಟೀಷರ ಪಡೆ ಕೊಂದು ಹಾಕಿ ಬಡವರ ಬಂಧು ಎನ್ನಿಸಿದವರ ದನಿಯಲ್ಲೇ ನಿಲ್ಲಿಸಲಾಯತು. ಬಂಡಾಯದ ಬಿಸಿಯ ನಾಯಕನ ಹೋರಾಟವನ್ನು ಈಗಲೂ ಜನ ನೆನೆಯುತ್ತಾರೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಸಹಿತ ಹಲವು ಭಾಗಗಳಲ್ಲಿ ಈಗಲೂ ಸಿಂಧೂರ ಲಕ್ಷ್ಮಣರ ಪ್ರತಿಮೆಗಳು ಅಪ್ರತಿಮ ಹೋರಾಟಗಾರನನ್ನು ನೆನಪಿಸುತ್ತವೆ.

ಮುಂದೆ ಕರ್ನಾಟಕದಲ್ಲಿ ಸಿಂಧೂರ ಲಕ್ಷ್ಮಣ ಎನ್ನುವ ಹೆಸರಿನ ಚಿತ್ರವೂ ನಿರ್ಮಾಣವಾಗಿ ಹೆಸರು ಮಾಡಿತ್ತು.ವೀರ ಸಿಂಧೂರ ಲಕ್ಷ್ಮಣ ಎನ್ನುವ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದು ಗುಡಗೇರಿ ಬಸವರಾಜ.ಅಲ್ಲದೇ ಸಿಂಧೂರ ಭಾಗದ ಹಲವು ನಾಟಕ ತಂಡಗಳು ಈಗಲೂ ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶಿಸುತ್ತವೆ.ಕರ್ನಾಟಕದಲ್ಲಿ ನಟರಾಗಿದ್ದ ಸುಧೀರ್‌ ಈಗಲೂ ನೆನಪಾದಗೋದು ಸಿಂಧೂರ ಲಕ್ಷ್ಮಣನ ಪಾತ್ರದ ಮೂಲಕವೇ. ಸುಧೀರ್‌ ಅಭಿನಯಿಸಿದ ನಾಟಕ ನೂರಾರು ಪ್ರದರ್ಶನ ಕಂಡಿದೆ. ಈಗ ತರುಣ್‌ ಸುಧೀರ್‌ ಅವರು ದರ್ಶನ್‌ ನಾಯಕತ್ವದಲ್ಲಿ ಸಿಂಧೂರ ಲಕ್ಷ್ಮಣ ರೂಪಿಸಲು ಹೊರಟಿದ್ದು ಇನ್ನೂ ಚಿತ್ರ ಬಿಡುಗಡೆಯಾಗಿಲ್ಲ. ಶತಮಾನದ ಬಳಿಕವೂ ಸಿಂಧೂರ ಲಕ್ಷ್ಮಣ ಹೆಸರು ಅಜರಾಮರ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.