Indian Railways: ಬಸವ, ಗೋಲಗುಂಬಜ್ ಎಕ್ಸ್ಪ್ರೆಸ್ ಲಚ್ಯಾಣದಲ್ಲಿ, ಹೊಸಪೇಟೆ ಪ್ಯಾಸೆಂಜರ್ ಹೊಳಲ್ಕೆರೆಯಲ್ಲಿ ನಿಲುಗಡೆ
ಭಾರತೀಯ ರೈಲ್ವೆಯ ನೈರುತ್ಯ ವಲಯವು ಕರ್ನಾಟಕದ ವಿವಿಧೆಡೆ ಪ್ರಮುಖ ರೈಲುಗಳ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಿ ಆದೇಶವನ್ನು ಹೊರಡಿಸಿದೆ. ಆ ರೈಲುಗಳ ಪಟ್ಟಿ ಇಲ್ಲಿದೆ.

ಬೆಂಗಳೂರು: ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ಬೆಂಗಳೂರು ಹಾಗೂ ಮೈಸೂರು ವಿಭಾಗದಿಂದ ಹೊರಡುವ ಮೂರು ರೈಲುಗಳನ್ನು ಸೀಮಿತ ಅವಧಿಗೆ ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಮಾಡಿಕೊಟ್ಟಿದ್ದರೆ, ವಿಜಯಪುರ ಜಿಲ್ಲೆಯ ಲಚ್ಯಾಣ ನಿಲ್ದಾಣದಲ್ಲಿ ಬಸವ ಮತ್ತು ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲುಗಳ ತಾತ್ಕಾಲಿಕ ನಿಲುಗಡೆ ಅವಕಾಶ ಕೊಡಲಾಗಿದೆ. ಪ್ರಯಾಣಿಕರು ಈ ತಾತ್ಕಾಲಿಕ ನಿಲುಗಡೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ
ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ
ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ರೈಲು ಸಂಖ್ಯೆ 56519/56520 ಕೆಎಸ್ಆರ್ ಬೆಂಗಳೂರು – ಹೊಸಪೇಟೆ – ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲಿಗೆ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಒಂದು ನಿಮಿಷದ ನಿಲುಗಡೆಯನ್ನು ಕಲ್ಪಿಸಲು ನಿರ್ಧರಿಸಿದೆ. ಈ ಸೌಲಭ್ಯವು ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಗೆ ಅಂದರೆ 2025ರ ಏಪ್ರಿಲ್ 18 ರಿಂದ ಜುಲೈ 17 ರವರೆಗೆ ಲಭ್ಯವಿರುತ್ತದೆ. ಈ ರೈಲುಗಳ ಆಗಮನ/ನಿರ್ಗಮನ ಸಮಯವು ಈ ಕೆಳಗಿನಂತಿರುತ್ತದೆ:
ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು – ಹೊಸಪೇಟೆ ದೈನಂದಿನ ಪ್ಯಾಸೆಂಜರ್ ರೈಲು ಹೊಳಲ್ಕೆರೆಗೆ ಬೆಳಿಗ್ಗೆ 09:57 ಗಂಟೆಗೆ ಆಗಮಿಸಿ 09:58 ಗಂಟೆಗೆ ನಿರ್ಗಮಿಸಲಿದೆ. ನಂತರ ಅಮೃತಾಪುರಕ್ಕೆ ಬೆಳಿಗ್ಗೆ 10:30 ಗಂಟೆಗೆ ಆಗಮಿಸಿ 10:31 ಗಂಟೆಗೆ ನಿರ್ಗಮಿಸಲಿದೆ.
ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 56520 ಹೊಸಪೇಟೆ – ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು ಅಮೃತಾಪುರಕ್ಕೆ ಸಂಜೆ 04:45 ಗಂಟೆಗೆ ಆಗಮಿಸಿ 04:46 ಗಂಟೆಗೆ ನಿರ್ಗಮಿಸಲಿದೆ. ನಂತರ ಹೊಳಲ್ಕೆರೆಗೆ ಸಂಜೆ 05:22 ಗಂಟೆಗೆ ಆಗಮಿಸಿ 05:23 ಗಂಟೆಗೆ ನಿರ್ಗಮಿಸಲಿದೆ.
ಲಚ್ಯಾಣ ನಿಲ್ದಾಣದಲ್ಲಿ ಬಸವ ಮತ್ತು ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲುಗಳ ತಾತ್ಕಾಲಿಕ ನಿಲುಗಡೆ
ವಿಜಯಪುರ ಜಿಲ್ಲೆಯ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ದೊಡ್ಡ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಅದರಂತೆ, ಬಸವ ಮತ್ತು ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲುಗಳಿಗೆ ಲಚ್ಯಾಣ ನಿಲ್ದಾಣದಲ್ಲಿ ಮೂರು ದಿನಗಳ ಕಾಲ, ಅಂದರೆ ಏಪ್ರಿಲ್ 18 ರಿಂದ ಏಪ್ರಿಲ್ 20, 2025ರವರೆಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ನೀಡಲಾಗಿದೆ. ಶ್ರೀ ಸಿದ್ಧಲಿಂಗ ಮಹಾರಾಜರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಪ್ರಯಾಣಿಕರು ಈ ತಾತ್ಕಾಲಿಕ ನಿಲುಗಡೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಕೆಳಗಿನಂತೆ ರೈಲುಗಳ ಆಗಮನ ಮತ್ತು ನಿರ್ಗಮನ ಸಮಯಗಳು ಇರಲಿವೆ:
1. ರೈಲು ಸಂಖ್ಯೆ 17307 ಮೈಸೂರು–ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ಲಚ್ಯಾಣಕ್ಕೆ ಬೆಳಿಗ್ಗೆ 07:29 ಗಂಟೆಗೆ ಆಗಮಿಸಿ 07:30 ಗಂಟೆಗೆ ನಿರ್ಗಮಿಸಲಿದೆ.
2. ರೈಲು ಸಂಖ್ಯೆ 17308 ಬಾಗಲಕೋಟೆ–ಮೈಸೂರು ಬಸವ ಎಕ್ಸ್ ಪ್ರೆಸ್ ಲಚ್ಯಾಣಕ್ಕೆ ಸಂಜೆ 05:19 ಗಂಟೆಗೆ ಆಗಮಿಸಿ 05:20 ಗಂಟೆಗೆ ನಿರ್ಗಮಿಸಲಿದೆ.
3. ರೈಲು ಸಂಖ್ಯೆ 16535 ಮೈಸೂರು–ಪಂಢರಪುರ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ಲಚ್ಯಾಣಕ್ಕೆ ಬೆಳಿಗ್ಗೆ 08:39 ಗಂಟೆಗೆ ಆಗಮಿಸಿ 08:40 ಗಂಟೆಗೆ ನಿರ್ಗಮಿಸಲಿದೆ.
4. ರೈಲು ಸಂಖ್ಯೆ 16536 ಪಂಢರಪುರ–ಮೈಸೂರು ಗೋಲ್ ಗುಂಬಜ್ ಎಕ್ಸ್ ಪ್ರೆಸ್ ಲಚ್ಯಾಣಕ್ಕೆ ಬೆಳಿಗ್ಗೆ 06:19 ಗಂಟೆಗೆ ಆಗಮಿಸಿ 06:20 ಗಂಟೆಗೆ ನಿರ್ಗಮಿಸಲಿದೆ.